Friday, December 28, 2018

ಶುಭರಾತ್ರಿ!

ನಭದಿ ಹೊಳೆವ ಶಶಿಯು ತಾನು
ಮುದದಿ ನೂರು ಕನಸ ತಂದು
ಯಾಕೆ ಗೊಡವೆ ನಿನಗೆ ಇನ್ನು
ಮಲಗಿಬಿಡು ಹೊದಿಕೆ ಹೊದ್ದು
ಎನುತ ನನ್ನ ಕಾಡುತಿರಲು
ನಾನು ವಿದಾಯ ಹೇಳುವೆ
ದಣಿದ ಮನಕೆ ಸುಖವ ನೀಡಿ
ನೀವು ಕಣ್ಣ ತುಂಬ ನಿದ್ರೆ ಮಾಡಿ
ಕನಸ ನನಸು ಮಾಡುವತ್ತ

ದಿನದ ಬೆಳಗು ದಾರಿ ತೋರಲಿ

Friday, September 14, 2018

ಅಡೆತಡೆಗಳಿಲ್ಲದೆಡೆಗೆ


ಮಾತಿನಂಗಡಿಯಲ್ಲಿ ಪದಗಳೆಲ್ಲಾ ಚೆಲ್ಲಾಪಿಲ್ಲಿ
ಮನದಾಳದಲ್ಲಿ ಭಾವಗಳ ಬಣ್ಣದೋಕುಳಿ
ಪದಗಳು ಬೆಸೆದು ಕಾವ್ಯ ಅರಳಲಿ
ಬಣ್ಣಗಳು ಬೆರೆತು ಚಿತ್ತಾರ ಬೆಳಗಲಿ

Wednesday, July 4, 2018

ಮೂಕ ಮೌನ ತೂಕ ಮೀರಿದಾಗ

ಕಳೆದು ಹೋಗುತಿರುವೆ ನಾನು ಮೌನದರಮನೆಯೊಳಗೆ
ಹುಡುಕುತ ದನಿಯ ನನ್ನಂತರಾಳದ ಭಾವಗಳಿಗೆ
ಭಾವಕೂ ಮಾತಿಗೂ ಎಲ್ಲಿಗೆಲ್ಲಿಯ ಬಂಧ
ಮಾತಿಲ್ಲದ ಭಾವಕೆ ಈ ಭಾವಗೀತೆಯ ಛಂದ

Wednesday, May 2, 2018

ಕಾಲನ ಅಪ್ಪುಗೆ

ನಿರಾಕರಿಸಿದೆ. ಹತ್ತಿರ ಬಂದ.
ದೂರ ನಡೆದೆ. ಬರಸೆಳೆದು ಅಪ್ಪಿದ.
ಬಿಡಿಸಿಕೊಳ್ಳಲು ಒದ್ದಾಡಿದೆ.
ತನ್ನಲ್ಲೇ ಒಂದಾಗಿಸಿಕೊಂಡುಬಿಟ್ಟ.

ಇತ್ತೀಚೆಗೆ ನೋಡಿದ ಸಿನಿಮಾವೊಂದರಲ್ಲಿ ಸಾವನ್ನು ಎದುರಿಸಿ, ಅದರ ವಿರುದ್ಧ ಸೆಣಸಾಡಿ ಕೊನೆಗೂ ಕಾಲದ ನಿರ್ಣಯಕ್ಕೆ ತಲೆಬಾಗಿದ ಪಾತ್ರವೊಂದರಿಂದ ಪ್ರೇರಿತ

Wednesday, February 21, 2018

ಯಶೋದೆಯ ಸ್ವಗತ

ಕರುಳ ಬಳ್ಳಿಗಿಂತ ಮಿಗಿಲಾದ
ಸಂಬಂಧವೊಂದು ಬಂಧಿಸಿತ್ತು
ನಮ್ಮಿಬ್ಬರನ್ನು ಪ್ರೀತಿ ಒಲುಮೆ  
ಮಮಕಾರಗಳೆಂಬ ಸರಪಳಿಯಿಂದ..

ನಾನು ಅವನನ್ನೆಷ್ಟೇ ಬೈದರು
ಮನದೊಳಗೆಲ್ಲ ಅವನೊಬ್ಬನಷ್ಟೇ..
ಊರ ಮುಂದೆಲ್ಲ ಅವನನ್ನು ಹಂಗಿಸಿದರು
ಮನದೊಳಗಿನ ಪ್ರೀತಿಗೆ ಕೊನೆಯುಂಟೆ?

ಎಂದಿದ್ದರು ಎಂತಾದರು ಅವನೆಂದು ನನ್ನವನೇ
ನಾ ಇರದೇ ಅವನು ಬದುಕುವುದು ಸಾಧ್ಯವೇ?
ಎಂದು ನಾ ತಿಳಿದದ್ದು ಭ್ರಮೆಯೇ  
ಅಥವಾ ನಾ ಇಷ್ಟು ದಿನ ಕಂಡದ್ದು ಕನಸೇ

ಕನಸೋ ನನಸೋ ನಾ ಕಾಣೆ
ನಾ ಇರದೇ ಅವ ಬದುಕಬಲ್ಲನಾದರು
ಅವನಿರದೆ ನಾ ಇರಲಾರೆ

ನಾ ಎಂದೂ ಎಣಿಸದ ದಿನ ಬರುವುದು ನಾಳೆ
ನನ್ನವನು ನನ್ನಿಂದ ದೂರ ಹೋಗುವನಂತೆ

ಅಲ್ಲಿಗೆ ಹೋದ ಮೇಲೆ ನನ್ನ ನೆನಪು
ಅವನ ಕಾಡದೇ ಇರುವುದೇ?
ನಿನ್ನ ಬಿಟ್ಟು ನಾನಿರಲಾರೆ
ಎಂದು ಮತ್ತೆ ನನ್ನ ಮಡಿಲ ಸೇರನೆ?  

ಆದರು ಅವನನ್ನು ನನ್ನವನು  
ಎಂದು ಹೇಳಲು ನನಗೆ ಹಕ್ಕಿದೆಯೇ?
ಮಾತನ್ನು ನನ್ನ ಹೃದಯ ಒಪ್ಪುತಿಲ್ಲವೇಕೆ..  

ಇದು ಮೋಹವೇ ಅಥವಾ ಮಮಕಾರವೇ?
ಇಷ್ಟೆಲ್ಲಾ ಆಗುವುದಾದರೂ ಏಕೆ
 ನನ್ನವನು ನನ್ನ ಬಳಿಯೇ ಉಳಿಯ ಬಾರದೇಕೆ…..
ಹೇ ಪ್ರಭು ನನ್ನವನು ನನ್ನ ಬಿಟ್ಟು ಹೋಗದಂತೆ ನೀ ತಡೆಯಬಾರದೇಕೆ?

Tuesday, January 23, 2018

ಕರುಳ ಬಳ್ಳಿ


ನೂರಾರು ನಿರೀಕ್ಷೆಗಳ ನಿಕ್ಷೇಪ
ನನ್ನೆಲ್ಲಾ ನಲಿವುಗಳ ನಿಧಿ
ನನ್ನೊಲುಮೆಯ ನಕ್ಷತ್ರ ‘ನೀತಿ’
P.S. : ಇದೆ ಜನವರಿ ೧೨,೨೦೧೮ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಆ ಪರಮಗುರುವಿನ ಕೃಪೆಯಿಂದ ನಮ್ಮ ಮನೆಯಂಗಳದಲ್ಲೊಂದು ನಕ್ಷತ್ರ ಉದಯಿಸಿದೆ. ಆ ಪುಟ್ಟ ಕಂದಮ್ಮನಿಗೆ ನಾವಿಟ್ಟಿರುವ ಹೆಸರು "ನೀತಿ". 

Thursday, December 14, 2017

ಲಾಲಿಹಾಡು

ಜೋ‌ ಜೋ‌ ಜೋ ಲಾಲಿ
ಜೋ‌ ಜೋ‌ ಜೋ ಲಾಲಿ
ಲಾಲಿ ಜೋ‌ ಜೋ‌ ಲಾಲಿಯೇ...
ಜೋ‌ ಜೋ‌ ಜೋ ಲಾಲಿ
ಜೋ‌ ಜೋ‌ ಜೋ ಲಾಲಿ
ಲಾಲಿ ಜೋ‌ ಜೋ‌ ಲಾಲಿಯೇ...

ಜೋ ಜೋ ಪುಟ್ಟಮ್ಮ
ಜೋ ಮುದ್ದು ಕಂದಮ್ಮ
ಲಾಲಿಯ ನಾ ಹಾಡುವೆ‌|
ತಾರೆಗಳ ಲೋಕದಲಿ
ತಿಂಗಳಿನ ತೊಟ್ಟಿಲಲಿ
ಮಲಗಿಸಿ ನಾ ತೂಗುವೆ ||ಜೋ‌ ಜೋ‌ ||

ಚೆಲುವಿನ ಖನಿ ನೀನು
ನಗುವಿನ ಗಣಿ ನೀನು
ಮುದ್ದಿನ ಕಣ್ಮಣಿಯೇ|
ತಾಯಿಯ ಖುಷಿ ನೀನು
ತಂದೆಯ ಸಿರಿ ನೀನು
ಈ ಮನೆಯ ಸಂಭ್ರಮವೇ||ಜೋ‌ ಜೋ‌ ||

ಪಿಳಪಿಳನೆ ಬಡಿಬಡಿದು
ಕಣ್ರೆಪ್ಪೆ ಸುಸ್ತಾಯ್ತು
ಯಾಕಿನ್ನು ಚೆಲ್ಲಾಟವು?
ಘಲಘಲನೆ ದನಿಗೈದು
ಗೆಜ್ಜೆಗೂ ದಣಿವಾಯ್ತು
ಸಾಕಿನ್ನು ತುಂಟಾಟವು||ಜೋ‌ ಜೋ‌ ||

ನಿದಿರೆಯು ಬಳಿ ಬಂದು
ನಿನ್ನನ್ನಾವರಿಸುವಳು
ನಿದ್ರಿಸು ಬಂಗಾರಿಯೇ|
ಸ್ವಪ್ನಲೋಕದಿ ಈಗ
ನಿನ್ನದೇ ಆಳ್ವಿಕೆಯು
ಸುಖಿಸಿನ್ನು ಸಿಂಗಾರಿಯೇ||ಜೋ‌ ಜೋ‌ ||

- ಇನ್ನೊಂದು ತಿಂಗಳಲ್ಲಿ ಹುಟ್ಟಲಿರುವ ಮುದ್ದು ಕಂದಮ್ಮನಿಗೆ ಲಾಲಿ ಹಾಡು

Wednesday, September 6, 2017

ಸೋಷಿಯಲ್ ನೆಟ್ ವರ್ಕ್

ಓ ಏನಿದು ವಿಜಯ್ ಇಂದ ಫೇಸ್ ಬುಕ್ಕಲ್ಲಿ ಫ್ರೆಂಡ್ ರಿಕ್ವೆಸ್ಟ್. ಎಷ್ಟು ತರ್ಲೆ ಮಾಡ್ತಿದ್ದ ಇವನು. ಈಗ್ಲೂ ಹಾಗೆ ಇದ್ದಾನಾ ಕೇಳ್ಬೇಕು.ನಮ್ ಸ್ಕೂಲ್ ವಿಜಯ್ ನ ಅಕೌಂಟೇ ಇದು. ಅವನೂ ಆನ್ ಲೈನ್ ಇದ್ದಾನೆ.
"ಹಾಯ್ ವಿಜಯ್ ಹೇಗಿದ್ದೀಯೋ? ಯಾವ ಕಾಲೇಜ್ ಸೇರಿಕೊಂಡೆ?”
"ಏನೇ ಚೈತ್ರ....ಕೊನೆಗೂ ಫೇಸ್ ಬುಕ್ ಅಕೌಂಟ್ ಒಪನ್ ಮಾಡಿದ್ಯಲ್ಲ.... ಇನ್ನು ಎಷ್ಟು ವರ್ಷಾನೇ ಕಾಲೇಜಿಗೆ ಹೋಗ್ಲಿ? ನಿನ್ ಜೊತೇನೇ ಎಂ.ಬಿ.ಎ. ಮುಗಿಸಿದ್ನಲ್ಲೇ. ನೀನಿನ್ನು ಕಾಲೇಜಿಗೆ ಹೋಗ್ತಾ ಇದ್ದೀಯಾ?".
"ಸಾರಿ ಮಿಸ್ಟರ್ ವಿಜಯ್ ನಾನು ನೀವೆಣಿಸಿದ ಚೈತ್ರ ಅಲ್ಲ. ನಾವಿಬ್ಬರೂ ಒಂದೇ ಸ್ಕೂಲಿನವರಾದ್ದರಿಂದ ಈ ರೀತಿ ಗೊಂದಲವಾಗಿದೆ. ಕ್ಷಮಿಸಿ”
"ಪರವಾಗಿಲ್ಲ ಬಿಡ್ರೀ. ಇಬ್ರೂ ಒಂದೇ ಸ್ಕೂಲ್ ಅಂದ ಮೇಲೆ ಒಬ್ಬರನೊಬ್ಬರು ನೋಡಿರ್ತೀವಿ. ನೀವು ಸ್ಟೇಟ್ ಲೆವೆಲ್ ಅಲ್ಲಿ ಹಾಡಿ ಬಹುಮಾನ ಪಡೆದಿದ್ದ ಚೈತ್ರಾನಾ?"
"ಹೌದು"
"ನಿಮ್ಮಂಥವರ ಪರಿಚಯ ಆಗಿದ್ದು ಒಳ್ಳೇದಾಯ್ತು ಬಿಡಿ.ನಾನು ಸ್ಕೂಲಲ್ಲೇ ನಿಮ್ಮ ಅಭಿಮಾನಿ. ನಿಮಗಿಂತ ೫ ವರ್ಷ ಸೀನಿಯರ್. ಈಗ ಒಂದು ಎಂ.ಎನ್.ಸಿ ಯಲ್ಲಿ ಕೆಲ್ಸ ಮಾಡ್ತಿದ್ದೀನಿ. ಏನ್ರೀ ಯಾವುದೇ ರಿಯಾಲಿಟಿ ಶೋನಲ್ಲೂ ನಿಮ್ಮ ಮುಖ ಕಾಣಿಸ್ತಿಲ್ಲ"
"ಇಲ್ಲ ನಮ್ಮ ಮನೆಯಲ್ಲಿ ಅದಕ್ಕೆಲ್ಲಾ ಒಪ್ಪೊಲ್ಲ."
"ಹೋ ಹಾಗಾ? ಏನು ಓದ್ತಾ ಇದ್ದೀರಾ ಈಗ?"
"ನಾನು ಇಂಜಿನಿಯರಿಂಗ್ ೫ನೇ ಸೆಮಿಸ್ಟರ್.ಎಂ.ಎಸ್. ರಾಮಯ್ಯ. ಐ.ಎಸ್."
"ಹೋ ನಮ್ ಕಾಲೇಜೇ.ಆದ್ರೆ ನಂದು ಕಂಪ್ಯೂಟರ್ ಸೈನ್ಸ್."
"ಹೌದಾ.."
"ಸರೀ ರೀ ನಾನು ಹೊರಡೋ ಹೊತ್ತಾಯ್ತು. ಇನ್ನೊಮ್ಮೆ ಸಿಗ್ತೀನಿ. ಕೆಲವೊಮ್ಮೆ ಫೇಸ್ ಬುಕ್ ನಲ್ಲಿ ಈ ಥರದ ಗೊಂದಲದಿಂದ ಒಳ್ಳೆ ಫ್ರೆಂಡ್ಸೇ ಸಿಗ್ತಾರೆ. ಬೈ"

ಅಲ್ಲಾ ಗುರುತು ಪರಿಚಯ ಇಲ್ಲದವನ ಜೊತೆ ಅದು ಹೇಗೆ ಮಾತಾಡಲಿ? ನನ್ನ ಫ್ರೆಂಡ್ಸ್ ಲಿಸ್ಟ್ ಇಂದ ಅವನ ಹೆಸರನ್ನ ತೆಗೆದುಬಿಡ್ಲಾ ? ಅಯ್ಯೋ ಕರೆಂಟ್ ಬೇರೆ ಈಗ್ಲೇ ಹೋಗ್ಬೇಕಾ? ನಾಳೆ ನೋಡೋಣ.
*******
"ನಮಸ್ಕಾರ್ರೀ"
"ನಮಸ್ತೆ"
"ಏನ್ರೀ ಇಷ್ಟು ದಿನ ಕಾಣಲೇ ಇಲ್ಲ"
"ಇಂಟರ್ನಲ್ಸ್ ಇತ್ತು. ಓದ್ತಿದ್ದೆ."
"ಓಹ್... ಹೆಂಗ್ ಮಾಡಿದ್ರಿ?"
"ಚೆನ್ನಾಗಿ ಮಾಡಿದೆ."
"ನನ್ನ ಬ್ಲಾಗ್ ನೋಡಿದ್ರಾ?"
"ಇಲ್ಲ"
"ಲಿಂಕ್ ಕಳಿಸ್ತೀನಿ. ನೋಡಿ ಹೇಳಿ ಹೇಗಿದೆ ಅಂತ."
"ಚೆನ್ನಾಗಿದೆ ನಿಮ್ಮ ಬ್ಲಾಗ್"
"ಥ್ಯಾಂಕ್ಸ್... ನೀವು ಬರೀತೀರಾ?"
"ಸ್ಕೂಲಲ್ಲಿ ಬರೀತಿದ್ದೆ. ಈಗ ಬರೀತಿಲ್ಲ"
"ಯಾಕ್ರೀ ಬಿಟ್ರೀ? ನೀವು ಒಂದು ಬ್ಲಾಗ್ ಶುರು ಮಾಡಿ. ಗೊತ್ತಿರೋದನ್ನ ಹಂಚಿಕೊಂಡ್ರೆ ಹೆಚ್ಚು ಖುಷಿ"
"ಸರಿ ಪ್ರಯತ್ನ ಪಡ್ತೀನಿ."
"ಪ್ರಯತ್ನ ಪಡ್ತೀನಿ ಅಂತ ಅಲ್ಲಾ ಬ್ಲಾಗ್ ಶುರು ಮಾಡ್ತೀನಿ ಅಂತ ಹೇಳ್ರೀ"
":) ಸರಿ ಶುರು ಮಾಡ್ತೀನಿ"
"thats like a good girl. ನಿಮ್ಮ ಬ್ಲಾಗ್ ಓದೋದಕ್ಕೆ ಕಾಯ್ತಾ ಇರ್ತೀನಿ"
":)"
ಅಲ್ಲ ಪರಿಚಯ ಆಗಿ ಇನ್ನೂ ಒಂದು ವಾರಾನೂ ಆಗಿಲ್ಲ ಆಗ್ಲೇ ಇಷ್ಟು ಸಲುಗೆಯಿಂದ ಮಾತಾಡ್ತಾನಲ್ಲ ಇವನ ಜೊತೆ ಫ್ರೆಂಡ್ ಶಿಪ್ ಮುಂದುವರೆಸಲಾ ಬೇಡ್ವಾ? ಸ್ವಲ್ಪ ತಲೆ ತಿಂತಾನೆ ಅನ್ನೋದನ್ನ ಬಿಟ್ರೆ ಅವನಿಂದ ನನಗೇನು ತೊಂದ್ರೆಯಾಗಿಲ್ಲವಲ್ಲ. ನೋಡೋಣ ನಮ್ ಕಾಲೇಜಲ್ಲೇ ಸೀನಿಯರ್ ಬೇರೆ. ಏನಾದ್ರೂ ತಿಳಿದುಕೊಳ್ಳಬೇಕು ಅಂದ್ರೆ ಹೆಲ್ಪ್ ಆಗುತ್ತೆ.
*******
"ನೀವು ಇಷ್ಟು ಚೆನ್ನಾಗಿ ಕವನ ಬರೀತೀರ ಅಂತ ಗೊತ್ತೇ ಇರ್ಲಿಲ್ಲ"
"ಕವಯಿತ್ರಿ ಅಂತ ಹೇಳಿಕೊಂಡು ನಾನು ಬರೆಯೋದೆಲ್ಲಾ ಕವನ ಅಂತ ಹೇಳಿಕೊಳ್ಳೋ ಅಷ್ಟೇನು ನಾನು ಚೆನ್ನಾಗಿ ಬರೆಯೊಲ್ಲ ಅಂತ ನಂಗೆ ಗೊತ್ತು. ಏನೋ ನನಗೆ ಹೊಳೆದ ನಾಲ್ಕು ಸಾಲು ಬರೀತೀನಿ ಅಷ್ಟೇ"
"ಏನೇ ಹೇಳ್ರಿ ನನಗಿಂತ ಚೆನ್ನಾಗಿ ಬರೀತೀರಾ.ಬರೆಯೋದನ್ನಂತೂ ಬಿಡ್ಬೇಡ್ರೀ... ಅಂದ ಹಾಗೆ ಯಾಕೆ ಈ ಸ್ಟೇಟಸ್ ':(' ? "
"ಅದಾ... ನಾನು ನನ್ನ ರೆಸ್ಯುಮೆ ತಯಾರು ಮಾಡ್ಬೇಕು. ಏನು ಬರೀಬೇಕು ಏನು ಬರೀಬಾರ್ದು ಒಂದು ಗೊತ್ತಾಗ್ತಿಲ್ಲ. ಕಂಫ್ಯೂಸ್ ಆಗಿದ್ದೀನಿ"
"ಅಷ್ಟೇನಾ ಅದಕ್ಯಾಕೆ ಅಷ್ಟೊಂದು ಯೋಚ್ನೆ ಮಾಡ್ತೀರಾ...ಒಂದೆರಡು ಸ್ಯಾಂಪಲ್ ರೆಸ್ಯುಮೆ ಕಳಿಸ್ತೀನಿ. ಅವನ್ನ ನೋಡಿ ನಿಮಗೊಂದು ಐಡಿಯಾ ಬರಬಹುದು"
"ತುಂಬಾ ಥ್ಯಾಂಕ್ಸ್"
"ಥ್ಯಾಂಕ್ಸ್ ಎಲ್ಲಾ ಯಾಕ್ರೀ...ನಿಮ್ ಸೀನಿಯರ್ ಆಗಿ ನಿಮ್ಮನ್ನ ಗೈಡ್ ಮಾಡೋದ್ ನನ್ ಡ್ಯುಟಿ"
":)"
ಒಳ್ಳೆ ಹುಡುಗ ಅನಿಸುತ್ತೆ. ನಾನೇ ಸುಮ್ನೆ ಏನೇನೋ ಯೋಚ್ನೆ ಮಾಡ್ತಿದ್ದೆ. ನನ್ನ ಬಗ್ಗೆ ಎಷ್ಟು ಕೇರ್ ತಗೊಳ್ತಾನೆ. ಬಹುಶಃ ನಾವಿಬ್ರೂ ಈ ರೀತಿ ಮೀಟ್ ಮಾಡ್ಬೇಕು ಅನ್ನೋದು ದೇವರ ಆಸೆ ಅನಿಸುತ್ತೆ. ಯಾರು ಏನು ಅಂತ ಗೊತ್ತಿಲ್ದೆ ಅವನ ಜೊತೆ ಇಂಥ ಫ್ರೆಂಡ್ ಶಿಪ್ ಮುಂದುವರೀತಾ ಇದೆ.Hope this friendship continues forever...
*******
"ರಿಸಲ್ಟ್ ಏನಾಯ್ತ್ರೀ?"
"ನಂಗೆ ೯.೨೫ ಬಂತು"
"ಹೋ ಕಂಗ್ರಾಟ್ಸ್ ರೀ... ಇಷ್ಟೊಂದು ಮಾರ್ಕ್ಸ್ ತಗೊಂಡು ನೀವು ನನಗಿಂತ ಜಾಸ್ತಿ ಮಾರ್ಕ್ಸ್ ತಗೊಂಡಿರೋನೇ ಬೇಕು ಅಂದ್ರೆ ನಿಮ್ಮಪ್ಪ ಅಮ್ಮಂಗೆ ಹುಡುಕೋಕೆ ಕಷ್ಟ ಆಗುತ್ತೆ"
"ಅದು ಬಿಡ್ರೀ...ಅದು ಅವರ ತಲೆ ನೋವು...ನನಗಿನ್ನೂ ಟೈಮಿದೆ... ಮದ್ವೆ ಆಗೋ ಸಮಯಕ್ಕೆ ಯೋಚ್ನೆ ಮಾಡಿದ್ರೆ ಆಯ್ತು"
"ಒಂದು ಮಾತಂತೂ ನಿಜ ಕಣ್ರೀ. ನಿಮ್ ಕೈ  ಹಿಡಿಯೋ ಹುಡುಗ ಅದೃಷ್ಟ ಮಾಡಿರ್ತಾನೆ"
"ತುಂಬಾ ಏರಿಸ್ತಾ ಇದ್ದೀರಾ ಆಮೇಲೆ ನನ್ನ ಕೆಳಗಿಳಿಸೋಕೆ ಏಣಿ ತರ್ಬೇಕಾಗುತ್ತೆ ಅಷ್ಟೇ"
"ತರೋಣ ಬಿಡಿ....ಅಲ್ಲಾ..ನಾವು ಫೇಸ್ ಬುಕ್ ಮೂಲಕ ಪರಿಚಯ ಆಗಿ ಹತ್ ಹತ್ರ ೬ ತಿಂಗಳಾಯ್ತು. ನೀವು ನಂಗೆ ತುಂಬಾ ಇಷ್ಟ ಆಗ್ಬಿಟ್ಟಿದ್ದೀರಾ.. ನಿಮ್ಮ ಮುಗ್ಧತೆ, ಮಗುವಿನಂಥಾ ಮನಸು, ನಿಮ್ಮ ಕವನ ಎಲ್ಲಾ ತುಂಬಾ ಇಷ್ಟ ಆಗಿದೆ."
"ನಂಗೂ ಅಷ್ಟೇ... ನಮ್ಮಿಬ್ಬರ ಆಲೋಚನಾ ಶೈಲಿ ಬೇರೆ ಇದ್ರೂ ಇಬ್ಬರೂ ನಮ್ಮ ನಮ್ಮ ವಿಷಯವನ್ನು ಪ್ರಸ್ತಾಪಿಸಿದಾಗ ಡಿಸ್ಕಸ್ ಮಾಡಿ ಸರಿ ಯಾವುದು ತಪ್ಪು ಯಾವುದು ಅಂತ ನಿರ್ಧರಿಸೋದು ನನಗೆ ತುಂಬಾ ಇಷ್ಟ ಆಗುತ್ತೆ."
"ಹೌದ್ರೀ...ಸರಿಯಾಗಿ ಹೇಳಿದ್ರಿ.You are more than a friend to me"
" :) "
ಅವನು ನನ್ನ ಇಷ್ಟ ಪಡ್ತಾ ಇದ್ದಾನಾ? ಒಳ್ಳೆ ಹುಡುಗ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಇಲ್ಲ ಅಂದ್ರೆ ಪರಿಚಯ ಆಗಿ ಇಷ್ಟು ದಿನ ಆದ್ರೂ ಒಂದು ದಿನ ಕೂಡ ಮಿಸ್ ಬಿಹೇವ್ ಮಾಡಿಲ್ಲ. ಅವನು ನನ್ನ ಇಷ್ಟ ಪಡ್ತಾ ಇದ್ರೆ ನಾನು ಖಂಡಿತ ಅವನನ್ನ ಒಪ್ಪಿಕೊಳ್ತೀನಿ... ಮನೇಲೂ ನನ್ನಿಷ್ಟಕ್ಕೆ ಒಪ್ತಾರೆ. ಆದ್ರೆ ನಾನಿನ್ನು ಚಿಕ್ಕವಳು. ಈಗ್ಲೇ ಇದರ ಬಗ್ಗೆ ಎಲ್ಲಾ ಯೋಚ್ನೆ ಬೇಡ. ಈಗ ಓದೋ ವಯಸ್ಸು. ನಾನು ಓದ್ಬೇಕು ಅಷ್ಟೇ.
*******
"ವಿಜಯ್, ನಿಮಗೊಂದು ಗುಡ್ ನ್ಯೂಸ್"
"ನಿಮಗೂ ಒಂದು ಗುಡ್ ನ್ಯೂಸ್"
"ಏನದು ಗುಡ್ ನ್ಯೂಸ್?"
"ಮೊದಲು ನೀವು ಹೇಳಿ"
"ನಾನು ಪ್ಲೇಸ್ ಆದೆ. ಡೆಲಾಯ್ಟ್ ನಲ್ಲಿ"
"ಹೋ ಕಂಗ್ರಾಟ್ಸ್. ಟ್ರೀಟ್ ಯಾವಾಗ?"
"ನೀವು ಸಿಕ್ಕಾಗ"
"ಸರಿ ಈ ಸಂಡೆ ಚಂದ್ರಾ ಲೇ ಔಟಲ್ಲಿರೋ ಪೋಲಾರ್ ಬೇರ್ ಅಲ್ಲಿ ಮೀಟ್ ಮಾಡೋಣ. ಟ್ರೀಟ್ ಕೊಡಿಸುವಿರಂತೆ"
"ನಿಮ್ ಗುಡ್ ನ್ಯೂಸ್ ಏನು ಅಂತ ಹೇಳಲೇ ಇಲ್ಲ"
"ಸಂಡೇ ಮೀಟ್ ಮಾಡ್ತೀವಲ್ಲಾ ಆಗ ಹೇಳ್ತೀನಿ"

ಮೊದಲ ಸಲ ಮೀಟ್ ಮಾಡ್ತಾ ಇದ್ದೀವಿ. ಹೇಳಿ ಬಿಡ್ಲಾ ನೀವು ಅಂದ್ರೆ ನನಗೆ ತುಂಬಾ ಇಷ್ಟ  ಅಂತ. ಛೆ ಛೆ ಬೇಡ.. ಮೊದಲ ಸಲಾನೇ ಈ ಹುಡ್ಗಿ ಏನು ಹೀಗೆ ಮಾತಾಡ್ತಾ ಇದ್ದಾಳೆ ಅಂತ ನನ್ನ ಜೊತೆ ಮಾತಾಡೋದನ್ನೇ ನಿಲ್ಲಿಸಿಬಿಟ್ರೆ. ಬೇಡ ಅವರೂ ನನ್ನ ಇಷ್ಟ ಪಡ್ತಾರಾ ಅಂತ ತಿಳಿದುಕೊಂಡು ಆಮೇಲೆ ಹೇಳಿದ್ರಾಯ್ತು.
*******
"ಚೈತ್ರ ಅಂದ್ರೆ ನೀವೇನಾ?"
"ಹೌದು...ನೀವು ವಿಜಯ್?"
"ಹೌದು"
"ನಿಮ್ಮನ್ನ ನೋಡಿ ತುಂಬಾ ಖುಷಿಯಾಯ್ತು"
"ನಂಗೂ ಅಷ್ಟೇ"
"ಅಲ್ರೀ ನಿಮ್ಮನ್ನ ಮೊದಲ ಸಲ ಭೇಟಿಯಾಗ್ತಿರೋದು ಅಂತ ಅನ್ನಿಸ್ತಾನೇ ಇಲ್ಲ."
"ಸುಮಾರು ಒಂದುವರೆ ವರ್ಷದಿಂದ ಪರಿಚಿತರಲ್ವಾ ಅದಕ್ಕೆ"
"ಅದು ನಿಜ ಬಿಡಿ. ಅದೂ ಬೇರೆ ಸ್ಕೂಲ್ ಫಂಕ್ಷನ್ ಅಲ್ಲೆಲ್ಲಾ ನಿಮ್ಮನ್ನ ನೋಡಿದ್ನಲ್ಲಾ... ಈಗ್ಲೂ ಹಾಗೇ ಇದ್ದೀರಾ"
"ಹೌದು ಎಲ್ರೂ ಹಾಗೇ ಹೇಳ್ತಾರೆ ಸ್ವಲ್ಪಾನೂ ಬದಲಾಗಿಲ್ಲ ನೀನು ಅಂತ. ಆಮೇಲೆ ಗುಡ್ ನ್ಯೂಸ್ ಅಂತ ಹೇಳಿದ್ರಲ್ಲ ಏನದು?"
"ನಾವಿವತ್ತು ಮೀಟ್ ಮಾಡದೇ ಇದ್ರೂ ಇನ್ನೊಂದು ವಾರದಲ್ಲಿ ಖಂಡಿತ ಮೀಟ್ ಮಾಡ್ತಿದ್ವಿ. ಯಾಕಂದ್ರೆ ನಿಮ್ಮ ಫ್ರೆಂಡ್ ಮದ್ವೆ ಅಂತ ಕರೆದ್ರೆ ನೀವು ಬರ್ದೇ ಇರ್ತಿರ್ಲಿಲ್ಲ ಅಲ್ವಾ"
"ಹೋ.. ನಿಮ್ಮ ಮದ್ವೆನಾ?? ಯಾರು ಆ ಅದೃಷ್ಟವಂತೆ?"
"ಚೈತ್ರ"
"???"
"ನನ್ನ ಕ್ಲಾಸ್ ಮೇಟ್. ಇಬ್ರೂ ಒಂದೇ ಸ್ಕೂಲ್. ಒಟ್ಟಿಗೆ ಎಂ.ಬಿ.ಎ. ಮಾಡಿದ್ವಿ, ಇನ್ ಫಾಕ್ಟ್ ಅವಳಿಗೆ ಕಳಿಸಬೇಕಿದ್ದ ರಿಕ್ವೆಸ್ಟ್ ನಿಮಗೆ ಬಂದಿದ್ದು. "
"ಹೋ ಹೌದಲ್ಲಾ... "
"ನೀವು ಖಂಡಿತಾ ಬರಬೇಕು. ನಾನು ಚೈತ್ರಳಿಗೆ ನಿಮ್ಮ ಬಗ್ಗೆ ತುಂಬಾ ಹೇಳಿದ್ದೀನಿ. ಅವಳು ನಿಮ್ಮನ್ನ ಮೀಟ್ ಮಾಡ್ಬೇಕು ಅಂತ ತುಂಬಾ ಇಷ್ಟ ಪಡ್ತಿದ್ದಾಳೆ."
"ನನಗೆ ನಿಮ್ಮಂಥ ಒಳ್ಳೆ ಫ್ರೆಂಡ್ ಸಿಗೋದಕ್ಕೆ ಕಾರಣರಾದ ಚೈತ್ರಳನ್ನು ನಾನೂ ಮೀಟ್ ಮಾಡ್ಬೇಕು"
"ಸರೀ ರಿ ಇನ್ನೊಮ್ಮೆ ಫ್ರೀಯಿದ್ದಾಗ ಸಿಗ್ತೀನಿ.ಇದು ನನ್ನ ಮದ್ವೆ ಕಾರ್ಡು.. ತಪ್ಪದೇ ‌ಮದುವೆಗೆ ಬರಬೇಕು.... "
"ಸರಿ. ಸಂಡೇ ಅಲ್ಲ ಖಂಡಿತಾ ಬರ್ತೀನಿ.. It was a pleasure meeting u"
"same here"
ಅಲ್ಲಾ ಅವನ ಮನಸಲ್ಲೇನಿದೆ ಅಂತ ತಿಳಿದುಕೊಳ್ದೇ ಏನೇನೋ ಯೋಚ್ನೆ ಮಾಡಿದ್ದು ನನ್ನ ತಪ್ಪು.ವಿಜಯ್ ಚೈತ್ರ ಖುಷಿಯಾಗಿರ್ಲಿ. ಏನೇ ಆಗ್ಲಿ ಚೈತ್ರ ನಿಜವಾಗ್ಲೂ ಅದೃಷ್ಟವಂತೆ. ನಾನೂ ಅದೃಷ್ಟವಂತೇನೇ ಇಲ್ಲಾ ಅಂದ್ರೆ ವಿಜಯ್ ನಂಥ ಒಳ್ಳೆ ಫ್ರೆಂಡ್ ನಂಗೆ ಸಿಗ್ತಿದ್ನಾ??

*******

Saturday, August 12, 2017

ದೌರ್ಬಲ್ಯ

ಈ ಜಗತ್ತಲ್ಲಿರೋ ಎಲ್ಲರಲ್ಲೂ ಆ ದೇವರು ಒಂದಿಲ್ಲೊಂದು ವಿಶೇಷತೆ ಇಟ್ಟಿರುತ್ತಾನೆ. ಆ ವಿಶೇಷತೆಯಿಂದ ನಾವು ಅವರನ್ನು ಗುರುತಿಸುತ್ತೇವೆ……ಹಾಗೆಯೇ ಪ್ರತಿಯೊಬ್ಬರಲ್ಲೂ ಒಂದು ದೌರ್ಬಲ್ಯವನ್ನು ಇಟ್ಟಿರ್ತಾನೆ….. ಆದ್ರೆ ಈ ದೌರ್ಬಲ್ಯಗಳು ಎಲ್ಲ ಕಾಲದಲ್ಲೂ ನಮಗೆ ಗೋಚರವಾಗದಿದ್ದರೂ ಅದು ಗುಪ್ತಗಾಮಿನಿಯಾಗಿ ನಮ್ಮೊಳಗೆ ಸುಳಿದಾಡುತಿರುತ್ತವೆ……

ಯಾವುದೋ ಒಂದು ಸಂದರ್ಭ….. ಎಲ್ಲ ನಾವೆನಿಸಿರುವಂತೆಯೇ ನಡೆಯುತ್ತಿರುತ್ತೆ…… ಕೊನೆಗೆ ಇನ್ನೇನು ಮುಗೀತು ಅನ್ನೋ ಹೊತ್ತಿಗೆ ಅಂದುಕೊಂಡಿದ್ದೆಲ್ಲ ತಲೆ ಕೆಳಗಾಗಿರುತ್ತೆ……. ಯಾಕೆ ಹೀಗಾಯ್ತು ಅಂತ ಸ್ವಲ್ಪ…ಸ್ವಲ್ಪ ಯೋಚಿಸಿದರೆ ಅದಕ್ಕೆ ನಮ್ಮ ಈ ದೌರ್ಬಲ್ಯಗಲೇ ಕಾರಣ ಅಂತ ಅನ್ನಿಸೋಕೆ ಶುರು ಆಗುತ್ತೆ…. ಇನ್ನು ಸ್ವಲ್ಪ ಜಾಸ್ತಿ ಯೋಚಿಸಿದರೆ ಆ ಸೋಲು ನಮ್ಮ ದೌರ್ಬಲ್ಯಗಳ ಸಾಕಾರ ರೂಪ ಅನ್ನೋದು ಮನದಟ್ಟಾಗುತ್ತೆ……. ಹೌದಲ್ವಾ… ಈ ದೌರ್ಬಲ್ಯಗಳು ನಮ್ಮನ್ನು ಸರಿಯಾದ ಸಮಯಕ್ಕೆ ಕೆಳಗೆಳೆದು ಜಗತ್ತೇ ಶೂನ್ಯ ಎನುವಂತೆ ಮಾಡಿಬಿಡುತ್ತವೆ……

ಈ ದೌರ್ಬಲ್ಯಗಳು ಏನೇ ಇರಬಹುದು….. ಮಾನಸಿಕ ಅಥವಾ ದೈಹಿಕವಾದವು … ಎಲ್ಲ ತೀರ ಅಗತ್ಯವೆನಿಸಿದಾಗಲೇ ಕೈ ಕೊಟ್ಟು ಬಿಡುತ್ತವೆ ಅಲ್ವ…... ಮುಂಗೋಪ, ಮಾತು ಜಾಸ್ತಿ , ಹೊಟ್ಟೆ ಕಿಚ್ಚು, ಅಥವಾ ದೈಹಿಕ ಅಸಮರ್ಥತೆ…… ಯಾವುದೇ ಆಗ್ಲಿ ಅದರ ಬಗ್ಗೆ ನಾವು ಯೋಚಿಸೋದು ಅದರಿಂದ ನಮಗೇನಾದರೂ ತೊಂದರೆಯಾದಾಗ ಮಾತ್ರ…. ಅಲ್ಲಿವರೆಗೂ ನಮಗೆ ಆ ದೌರ್ಬಲ್ಯ ಇದೆ ಅನ್ನೋದೇ ಗೊತ್ತಿರೋಲ್ಲ…..

ಅದೇ ಅದರ ಬಗ್ಗೆನೇ ಜಾಸ್ತಿ ಯೋಚನೆ ಮಾಡಿದ್ರು ನಮಗೆ ಒಂಥರಾ inferiority complex ಬೆಳೆದುಬಿಡುತ್ತೆ…….ಅದರಲ್ಲೇ ಮುಳುಗಿದರೆ ನನ್ನಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎನ್ನುವಂಥ ಭಾವನೆ ಉಂಟು ಮಾಡುತ್ತವೆ…. ಇನ್ನು ದೌರ್ಬಲ್ಯಗಳ ಬಗ್ಗೆ ಗಮನವನ್ನೇ ಕೊಡದಿದ್ದರೆ ಅವು ನಮ್ಮೊಳಗೆ ಬೆಳೆದು ಅಟ್ಟಹಾಸದಿಂದ ನರ್ತಿಸುವಷ್ಟು ಹೆಚ್ಚಾಗಿಬಿಡುತ್ತವೆ…..ಅಲ್ವ….

ಆದ್ರೆ ಸರಿಯಾದ ಸಮಯಕ್ಕೆ ಅವುಗಳನ್ನು ಗುರುತಿಸಿ ಅವುಗಳನ್ನು ಎದುರಿಸಿ ನಿಲ್ಲುವಂಥ ಶಕ್ತಿ ಬೇಕಾದ್ರೆ ಅಷ್ಟೇ ಹೆಚ್ಚು ಮನೋಸ್ಥೈರ್ಯ ಬೇಕು. ನಮ್ಮೊಳಗೆ ದೌರ್ಬಲ್ಯಗಳಿವೆ ಎಂದು ತಿಳಿದು ಎದೆಗುಂದುವವರೇ ಹೆಚ್ಚು ಆದ್ರೆ ಅವುಗಳ ವಿರುದ್ಧ ನಿಂತು ಯುದ್ಧ ಸಾರುವುದಕೆ ನಮ್ಮ ಮನಸ್ಸನ್ನು ಸಿದ್ಧ ಪಡಿಸಬೇಕು ಅಲ್ವ….

ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಇವುಗಳೆಲ್ಲವೂ ನಮ್ಮೊಳಗಿರುವ ದೌರ್ಬಲ್ಯಗಳು….. ಅವುಗಳನ್ನು ಮೆಟ್ಟಿ ನಿಂತು ಮುಂದೆ ಹಜ್ಜೆ ಹಾಕಬೇಕೆಂಬ ದೃಢ ಸಂಕಲ್ಪ ನಮ್ಮದಾಗಿದ್ದರೆ ನಮ್ಮನ್ನು ತಡೆಯಲು ಯಾರಿಗೆ ಸಾಧ್ಯ ನೀವೇ ಹೇಳಿ…..

ಅದಕ್ಕೆ ನಮ್ಮ ದೌರ್ಬಲ್ಯಗಳನ್ನು ಬೇರೆಯವರು ಬೆರಳು ಮಾಡಿ ತೋರುವ ಮೊದಲೇ ಅವನ್ನು ಗುರುತಿಸಿ ಅವುಗಳನ್ನು ನಾಶ ಮಾಡಿ ಅಥವಾ ಆದಷ್ಟು ಕಡಿಮೆ ಮಾಡಿ ನಮ್ಮ ಜೀವನ ಸಾಗಿಸುವುದರಲ್ಲೇ ಸಾರ್ಥಕ್ಯ ಪಡೆಯಬೇಕು……ಅಲ್ವ.....

Friday, August 5, 2016

ಮಳೆ

ಈ ಪ್ರಕೃತಿ ತನ್ನಲ್ಲಿ ಏನೇನೆಲ್ಲ ಅದ್ಭುತಗಳನ್ನ ಹುದುಗಿಸಿಟ್ಟುಕೊಂಡಿದೆ…..ಈ ಅದ್ಭುತಗಳು ಒಂದು ಸಣ್ಣ ಕಲ್ಲಿರಬಹುದು ಅಥವಾ ಬೃಹತ್ ಪರ್ವತವಿರಬಹುದು…. ಪ್ರತಿಯೊಂದನ್ನು ಆಸ್ವಾದಿಸುವ ಮನಸಿದ್ದರೆ ಪ್ರಕೃತಿಯ ಪ್ರತಿ ವಸ್ತುವಿನಲ್ಲು ಒಂದು ಅದ್ಭುತ ವಿಷಯ ಅಡಗಿರುತ್ತೆ ಅಲ್ವ…..ಅಂಥ ಅದ್ಬುಥಗಳಲ್ಲಿ ಒಂದು ಈ ಮಳೆ….

ಮಳೆ ತುಂತುರು ಹನಿಯಾಗಿರಬಹುದು…..ಧೋ ಎಂದು ಸುರಿಯುವ ಸುರಿಮಳೆಯಾಗಿರಬಹುದು….. ಒಂದೇ ಸಲ ಅಚಾನಕ್ಕಾಗಿ ಬಂದು ಅಷ್ಟೆ ಬೇಗ ನಿಂತು ಹೋಗುವ ಜಲವರ್ಷವಾಗಿರಬಹುದು……ಎಲ್ಲ ಒಂದು ರೀತಿಯ ಅದ್ಭುತಗಳೇ…..

ಸೋನೆ ಮಳೆಯಲ್ಲಿ ಛತ್ರಿಯಿಲ್ಲದೆ ಆ ಚಿಟಪಟ ಹನಿಗಳಿಗೆ ಮುಖ ಒಡ್ಡಿ ನಡೆಯುವಾಗ…..ಆ ತುಂತುರು ಹನಿಗಳ ನಡುವೆಯೇ ಸ್ಕೂಟಿ ಓಡಿಸುವಾಗ ನಮಗೆ ತಾಗುವ ಪ್ರತಿಯೊಂದು ಹನಿಯು ಒಂಥರಾ ಆನಂದವನ್ನುಂಟು ಮಾಡುತ್ತೆ…..ಹಾಗೆ ಜೋರಾಗಿ ಮಳೆ ಸುರಿಯುವಾಗ ಛತ್ರಿ ಹಿಡಿದು ಕಾಲಲ್ಲಿ ನೀರನ್ನು ಚಿಮ್ಮುತ್ತ ನಡೆಯುವುದು……ಆಹಾ ಏನು ಮಜಾ ಅಲ್ವ…….

ಈ ಮಳೆಗಾಲ ಬಂತು ಅಂದ್ರೆ ನಮ್ಮ ನಾಲಿಗೆ ಚಪಲನು ಜಾಸ್ತಿಯಾಗುತ್ತೆ…… ಹೊರಗೆ ಮಳೆ ಸುರಿಯುತ್ತ ಇದ್ರೆ ಒಳಗೆ ಬೆಚ್ಚಗೆ ಕುಳಿತು ಬಿಸಿಯಾದ ತಿಂಡಿ ತಿನ್ನಬೇಕೆನ್ನುವ ಆಸೆ……. ಹುರಿದ ಕಡಲೆಬೀಜ, ಮುಸುಕಿನ ಜೋಳ…..ಆಹಾ ಏನು ಮಸ್ತಾಗಿರುತ್ತೆ …

ಈ ಮಳೆ ನೋಡಿದರೆ ಒಬ್ಬಬ್ಬರಿಗೆ ಒಂದೊಂದು ನೆನಪಾಗುತ್ತೆ…. ಮಳೆಯಲ್ಲಿ ನೆನೆದು ಜ್ವರ ಬಂದದ್ದು, ಸ್ಕೂಲಿಂದ ಮನೆಗೆ ಬರುವಾಗ ಮಳೆ ಬಂದು ಮನೆಗೆ ಓಡಿ ಬಂದದ್ದು, ಮಳೆಯಿಂದ ಒದ್ದೆಯಾಗಿರುವ ನೆಲದ ಮೇಲೆ ನಡೆಯುವಾಗ ಕಾಲು ಜಾರಿ ಬಿದಿದ್ದು, ಮಳೆ ನಿಂತ ಮೇಲೆ ದಾರಿಯಲ್ಲಿ ಹೋಗುವಾಗ ಯಾರೋ ನೀರು ಸಿಡಿಸಿದ್ದು, ಒಂದೇ ಛತ್ರಿಯನ್ನು ಮೂವರು ಹಿಡಿದುಕೊಂಡು ಮೂವರು ನೆನೆದರು ಛತ್ರಿ ಹಿಡಿದೆ ಮನೆಗೆ ಹೋಗಿದ್ದು, ಮಳೆಯಲ್ಲಿ ನಿಂತು ಐಸ್ ಕ್ರೀಮ್ ತಿಂದಿದ್ದು, ದಾರಿಯಲ್ಲಿ ಹೋಗುವಾಗ ಮಳೆ ಬಂದು ಮರದ ಕೆಳಗೆ ನಿಂತಿದ್ದು …..

ಭೂಮಿ ಮೇಲೆ ತನಗಿರೋ ಪ್ರೀತಿಯನ್ನು ವ್ಯಕ್ತ ಪಡಿಸೋಕೆ ಅಂತ ಆ ಆಗಸ ಕಳಿಸುವ ಪ್ರೇಮ ಸಂದೇಶ ಹೊತ್ತು ಬರುವ ಆ ನೀರ ಹನಿಗಳು ಭೂಮಿಗೆ ಚುಂಬಿಸಿ ಸಾರ್ಥಕವಾಗುತ್ತವೆ….ಭೂಮಿಯ ಅಂತರಾಳವನ್ನು ಸೇರಿ ಅದರೊಳಗೆ ಕೆಲ ಹೊತ್ತು ಕಳೆದು ನಂತರ ಆವಿಯಾಗಿ ಆಗಸಕ್ಕೆ ಭೂಮಿಯ ಪ್ರತಿನುಡಿಯನ್ನು ತಿಳಿಸುವ ಸಲುವಾಗಿ ತಮ್ಮ ಪಯಣ ಮುಂದುವರೆಸುತ್ತವೆ……ಈ ಪ್ರಕೃತಿಯಲ್ಲಿ ಇದಕ್ಕಿಂತ ಒಳ್ಳೆಯ ಪ್ರೇಮ ಸಂದೇಶ ರವಾನೆ ವ್ಯವಸ್ಥೆ ಇದೆಯಾ?

ಒಂದೊಂದು ಸಲ ನನಗನಿಸುತ್ತೆ ಈ ಮಳೆಗೂ ಪ್ರೀತಿಗೂ ಎಷ್ಟು ಸಾಮ್ಯತೆ ಇದೆ ಅಲ್ವ…… ಮೋಡ ತುಂಬಿದ ಆಗಸ ನೋಡಿ ಮಳೆ ಬರಬಹುದು ಎಂದು ಆಶಿಸುವಂತೆ ನಾವು ಪ್ರೀತಿಸುವವರು ನಮ್ಮ ಕಣ್ಣೆದುರಿಗೆ ಬಂದರೆ ಅವರ ಮಾತುಗಳನ್ನು ಕೇಳಲು ಮನಸು ಹಾತೊರೆಯುತ್ತೆ….. ಮಳೆ ಬಂದರೆ ಮಾತ್ರ ಭೂಮಿ ತಂಪಾಗುವುದು ಹಾಗೆ ಪ್ರೀತಿ ವ್ಯಕ್ತ ಪಡಿಸಿದಾಗ ಮಾತ್ರ ಅದು ಮನಸಿಗೆ ಸಂತೋಷ ಉಂಟು ಮಾಡುವುದು……ನನ್ನ ಪ್ರಕಾರ ಪ್ರೀತಿ ಅನ್ನೋದು ಕಪ್ಪೆಚಿಪ್ಪಿನಲ್ಲಿಟ್ಟು ಕಾಪಾಡುವಂಥದಲ್ಲ ಮಳೆಯಂತೆ ಎಲ್ಲ ಕಡೆ ಸುರಿದು ಎಲ್ಲರಿಗು ಸಂತೋಷ ನೀಡುವಂಥದ್ದು…ಮಳೆ ಅತಿಯಾದರೆ ಹೇಗೆ ಪ್ರವಾಹ ಉಂಟಾಗಿ ಕಷ್ಟ ನಷ್ಟ ಸಂಭವಿಸುತ್ತೋ ಹಾಗೆ ಪ್ರೀತಿ ಹೆಚ್ಚಾದರೆ ಅದು ನಮ್ಮ ಜೀವನಕ್ಕೆ ಅಡ್ಡಿ ಉಂಟು ಮಾಡುವಂಥದ್ದು…..ಅದಕ್ಕೆ ಪ್ರೀತಿ ಕೂಡ ಮಳೆಯಂತೆ ಹಿತ ಮಿತವಾಗಿರಬೇಕು……

ಏನೇ ಆಗ್ಲಿ ಮಳೆಯಿಂದ ಎಲ್ಲರಿಗೂ ಸಂತೋಷ ಸಿಗುತ್ತೆ…….ಚಿಟ ಪಟ ಮಳೆ ಹನಿಗಳಿಗೆ ಕೈ ಒಡ್ಡಿ ಆ ಹನಿಗಳ ಕಚಗುಳಿ ಅನುಭವಿಸುವುದಕ್ಕೆ ಈ ಕಾಲ ಸುಸಮಯ….ಅಂಥ ಅನುಭವವನ್ನು ಮಿಸ್ ಮಾಡಿಕೊಳ್ಳಬಾರದು ಅಲ್ವ……..

Monday, August 1, 2016

ಸ್ನೇಹದ ಕಡಲಲ್ಲಿ

ಇವತ್ತು ಸ್ನೇಹಿತರ ದಿನಾಚರಣೆ ಅಲ್ವಾ ಅದಕ್ಕೆ ಮೊದಲು ನನ್ನೆಲ್ಲ ಸ್ನೇಹಿತರಿಗೂ ಶುಭಾಶಯಗಳು……ಅವರೆಲ್ಲರಿಗೂ ಉಡುಗೊರೆಯಾಗಿ ಇವತ್ತಿನ ಪೋಸ್ಟ್ ಅವರಿಗೆ ಸಮರ್ಪಿತ…….. ನಮ್ಮ ಜೀವನದಲ್ಲಿ ಯಾವಾಗಿನಿಂದ ಸ್ನೇಹಿತರಿದ್ದಾರೆ ಅಂತ ಯೋಚನೆ ಮಾಡಿದ್ರೆ ನಾವು ಮನುಷ್ಯರನ್ನ ಗುರುತಿಸೋಕೆ ಗೊತ್ತಾದಾಗಿನಿಂದ ಅಂತಾನೆ ಹೇಳಬಹುದು. ಮಾತೆ ಬರದಿದ್ದರು ಸನ್ನೆಗಳ ಮೂಲಕಾನೆ ನಮಗೆ ಬೇಕಾದವರ ಜೊತೆ ಮಾತಾಡ್ತೀವಿ…….ಒಂದೇ ವಯಸ್ಸಿನವರು ಸಿಕ್ಕಿದರಂತು ಅವರ ಭಾಷೆ ಯಾರಿಗೂ ಅರ್ಥ ಆಗದಿದ್ರೂ ಅವರಿಬ್ಬರಿಗೂ ಅರ್ಥ ಆಗುತ್ತೆ…..ಯಾಕಂದ್ರೆ ಅವರಿಬ್ಬರ ನಡುವಿರುವ ಸ್ನೇಹ ಅಂಥದ್ದಾಗಿರುತ್ತೆ….

ನಾವೆಲ್ಲ ಸ್ಕೂಲಿಗೆ ಹೋಗೋಕೆ ಶುರು ಮಾಡಿದ ಮೇಲೆ ಮನೇಲೆ ಆಗ್ಲಿ ಸಂಬಂಧಿಕರೆ ಆಗ್ಲಿ ನೀನು ಯಾವ ಸ್ಕೂಲು ನಿನ್ನ ಟೀಚರ್ ಯಾರು ಅಂತ ಕೇಳಿದ ಮೇಲೆ ನಿನ್ನ ಫ್ರೆಂಡ್ ಯಾರು ಅಂತಾನೆ ಕೇಳೋದು….ಅದಕ್ಕೆ ಈ ಸ್ಕೂಲೇನಿದೆಯಲ್ಲ ಅದು ಒಂಥರಾ ನಮಗೆ ಜೀವನ ಪೂರ ನೆನೆಪಲ್ಲುಳಿಯೋ ಸ್ನೇಹಿತರನ್ನು ಜೊತೆಯಾಗಿಸುವ ತಾಣ ಅಂತಾನೆ ಕರೆಯಬಹುದು……ನನ್ನ ವಯಸ್ಸಿನ ಹುಡುಗ ಹುಡುಗಿಯರಿಗಂತೂ ಸ್ಕೂಲ್ ಫ್ರೆಂಡ್ಸೇ ಜಾಸ್ತಿ ಯಾಕಂದ್ರೆ ನಾವಿನ್ನು ಹೊರ ಜಗತ್ತಿಗೆ ಕಾಲಿಟ್ಟಿಲ್ಲ ನೋಡಿ…..ಈ ಸ್ಕೂಲಲ್ಲಿ ಏನೇನೋ ತರ್ಲೆ ಮಾಡಿ ಸಿಕ್ಕಿ ಹಾಕಿಕೊಂಡಾಗ ಮನೇಲಿ ಹೇಳಬೇಡ ಅಂತ ಸ್ನೇಹಿತರಿಗೆ ಮಸ್ಕಾ ಹೊಡೆಯೋದು….ನಾವು ಸ್ನೇಹಿತರೇ ಸೇರಿ ತಿಂಡಿಗಳಿಗಿಟ್ಟ ಇಂಗ್ಲಿಷ್ ಹೆಸರು….ನಮ್ಮ ತಪ್ಪನ್ನು ಹೇಳದೆ ಇರೋಕೆ ನಮ್ಮ ನಮ್ಮ ನಡುವೇನೆ ಮಾಡಿಕೊಳ್ಳೋ ಆ ಒಳ ಒಪ್ಪಂದ…. ನೆನಪಿಸಿಕೊಂಡರೆ ಈಗಲೂ ನಗು ಬರುತ್ತೆ……

ಸ್ಕೂಲ್ ಅಂದ ತಕ್ಷಣ ಮೊದಲು ನೆನಪಿಗೆ ಬರೋದೇ ಸ್ನೇಹಿತರು ಅಷ್ಟರ ಮಟ್ಟಿಗೆ ನಮ್ಮನ್ನವರು ಆವರಿಸಿಕೊಂಡುಬಿಟ್ಟಿರ್ತಾರೆ ಅಲ್ವ…..ಆ ಹೊಸ ಜೀವನಕ್ಕೆ ಜೊತೆಗಾರರಾಗಿ ಜೊತೆಜೊತೆಯಲ್ಲೇ ಸಾಗಿ ಗೆದ್ದಾಗ ಸಂತೋಷ ಪಟ್ಟು, ಸೋತಾಗ ಸಂತೈಸಿ, ತಪ್ಪಿದಾಗ ಎಚ್ಚರಿಸಿ, ನಮ್ಮ ಜೊತೆ ಸ್ವಲ್ಪ ಹೊತ್ತು ಕಳೆಯಲೆಂದು ಹಾತೊರೆದು ಆ ಒಂದು ಘಳಿಗೆಯಲ್ಲೇ ಎಲ್ಲ ನೋವನ್ನು ಮರೆಸುವಂಥ ಸ್ನೇಹಿತರು ಒಬ್ಬರಾದರು ನಮ್ಮ ಜೀವನದಲ್ಲಿದ್ದೆ ಇರ್ತಾರೆ ಅಲ್ವ…..ಆ ವಿಷಯದಲ್ಲಿ ನಾನಂತೂ ಅದೃಷ್ಟವಂತೆ ಯಾಕಂದ್ರೆ ನನಗೆ ಅಂಥ ಎಷ್ಟೋ ಜನ ಸ್ನೇಹಿತರಿದ್ದಾರೆ…….

ಸ್ಕೂಳಲ್ಲಷ್ಟೇ ಅಲ್ಲ ಕಾಲೇಜಲ್ಲಾಗಿರಬಹುದು ಅಥವಾ ಬೇರೆ ಎಲ್ಲೇ ಆಗಿರಬಹುದು….. ನಾವು ಎಲ್ಲಿಗೆ ಹೋದರು….ಅಲ್ಲಿ ಕೆಲವು ಸಮಯವಷ್ಟೇ ಕಳೆದರೂ ಅಲ್ಲಿಯೂ ನಮ್ಮ ಮನಸು ಸ್ನೇಹಿತರನ್ನು ಹುಡುಕಾಡುತ್ತೆ…..ಅವರ ಜೊತೆ ಒಂದು ಅವರ್ಣನೀಯ ಬಂಧವನ್ನು ನಿರ್ಮಿಸಿ ಅವರಿಂದ ನನ್ನ ಜೀವನಕ್ಕೆ ಹೊಸದೊಂದು ಚಿಗುರು ಮೂಡಿದೆ ಅನ್ನೋ ಭಾವನೆ ಹುಟ್ಟು ಹಾಕುತ್ತೆ…..ಸ್ನೇಹಕ್ಕೆ ಇರೋ ಶಕ್ತಿನೇ ಅಂಥದ್ದು…… ಒಂದು ಸ್ನೇಹ ಹುಟ್ಟೋಕೆ ಎಷ್ಟೋ ವರ್ಷಗಳೇ ಬೇಕಿಲ್ಲ…..ಮನಸಿಗೆ ಹತ್ತಿರವಾಗುವ ಕೆಲವು ನಿಮಿಷಗಳೇ ಸಾಕು…….ಅಲ್ವ….

ಈ ಸ್ನೇಹಕ್ಕೆ ವಯಸ್ಸಿನ ಅಂತರ ಇಲ್ಲದಿದ್ದರೂ ನಮ್ಮ ಬಹುಪಾಲು ಸ್ನೇಹಿತರು ಸಮವಯಸ್ಕರಾಗಿರುತ್ತಾರೆ…..ಅವರ ಜೊತೆ ನಾವು ಮನ ಬಿಚ್ಚಿ ಮಾತಾಡುವಷ್ಟು ನಮ್ಮ ತಂದೆ ತಾಯಿಯ ಜೊತೆ ಕೂಡ ಮಾತಾಡಿರುವುದಿಲ್ಲ……ಅಂಥ ಗೆಳೆಯರ ಜೊತೆ ಮಾತಾಡಿದಾಗ ಮನಸಿಗೆ ನಿರಾಳ ಅನ್ಸುತ್ತೆ…..ಅಲ್ವ……

ನಮಗೆ ತುಂಬಾನೆ ಅಗತ್ಯವಿರೋ ಸಮಯದಲ್ಲಿ ಜೊತೆಗಿದ್ದು ನಮ್ಮನ್ನು ಯಾವತ್ತು ಬಿಟ್ಟು ಕೊಡದೆ, ನಮ್ಮಿಂದ ಸ್ನೇಹವನ್ನಲ್ಲದೆ ಬೇರೇನನ್ನು ಬಯಸದ ಸ್ನೇಹಿತರಿಗೆ ಈ ದಿನವಷ್ಟೇ ಅಲ್ಲ ಪ್ರತಿದಿನ ಒಂದಲ್ಲ ಸಾವಿರ ಸಾವಿರ ಧನ್ಯವಾದಗಳನ್ನು ಹೇಳಬೇಕು ಅಲ್ವ……..

Sunday, August 9, 2015

ಪ್ರಕೃತಿಯ Love failure case ಗಳು

-->
-೧-
ರವಿಯ ಸ್ವಾಗತಕ್ಕೆ
ಭೂರಮೆಯು ಸಂಭ್ರಮದಿ
ಇಬ್ಬನಿಯ ಹಾರ ತೊಟ್ಟಿಹಳು
ಪಾಪ! ಈ ಪ್ರೀತಿಯ ತಿಳಿಯದ
ಆ ಸೂರ್ಯನು ಸುಡುಸುಡು ತಾಪದಿ
ಆ ಹಾರವನ್ನೇ ನಾಶ ಮಾಡಿದನು..

-೨-
ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು
ಸುತ್ತೆಲ್ಲ ಸುಗಂಧ ಸೂಸಿ
ಪ್ರಿಯಕರನಿಗಾಗಿ ಅರಳಿ ನಿಂತಳು ಪಾರಿಜಾತ
ಎಷ್ಟೋ ಹೊತ್ತಾದ ಮೇಲೆ
ಹಿಂದಿರುಗಿದ ದಿನಕರನಿಗೆ
ಸುಮಬಾಲೆಯ ಸ್ಥಿತಿ ತಂದಿತ್ತು ಆಘಾತ

-೩-
ಹೂವಿಂದ ಹೂವಿಗೆ ಹಾರುತ
ತನ್ನ ಮನದರಸಿಯ ಅರಸುತ
ಸುಮರಾಣಿಯಲ್ಲಿಗೆ ದುಂಬಿಯು ಬಂದಿತು
ಆದರೆ ಅನೇಕ ಹೂಗಳೊಡನೆ
ದುಂಬಿಯ ಕಂಡಿದ್ದ ಸುಮವು
ಪ್ರೇಮದ್ರೋಹಿ ನೀನೆನುತ ದುಂಬಿಯ ತಿರಸ್ಕರಿಸಿತು

Saturday, July 25, 2015

ಸಿಟ್ಟ್ಯಾಕೋ ಸಿಡುಕ್ಯಾಕೋ……

ಹೌದಲ್ವಾ ಕೆಲವೊಂದು ಸಲ ನಮಗೆ ಯಾರೋ ಒಬ್ಬರ ಮೇಲೆ ವಿಪರೀತ ಅನ್ನೋ ಅಷ್ಟು ಪ್ರೀತಿ ಉಕ್ಕಿ ಹರಿಯುತ್ತೆ. ಆ ಪ್ರೀತಿ ಇನ್ನು ಹಾಗೆ ಇರೋವಾಗಲೇ ಅವರ ಮೇಲೆ ಎಲ್ಲಿಲ್ಲದ ಕೋಪ ಬಂದು ಬಿಡುತ್ತೆ. ಅವರ ಮೇಲಿದ್ದ ಪ್ರೀತಿ ಕಡಿಮೆ ಆಗ್ಲಿಲ್ಲ ಅಂದ್ರು ಅವ್ರನ್ನ ಕಂಡರೇ ಆಗೊಲ್ಲವೇನೋ ಅನ್ನೋ ರೀತಿ ಮುಖ ತಿರುಗಿಸಿಕೊಂಡು ಹೋಗ್ತೀವಿ. ಆಗ ಇಬ್ಬರ ಮಧ್ಯೆ ಒಂದು ಸಣ್ಣ ಬಿರುಕು ಮೂಡುತ್ತೆ....... ಅಲ್ಲ ಯಾವ್ದೇ ಕಾರಣ ಇಲ್ಲದೇನೆ ನಮ್ಮ ಮನಸು ಅವರ ಮೇಲೆ ಕೋಪ ಮಾಡಿಕೊಂಡು ಇಬ್ಬರ ನಡುವಿದ್ದ ಸಂಬಂಧಾನೇ ಹಾಳು ಮಾಡಿಬಿಡುತ್ತೆ…..

ಕೋಪ ಮಾಡಿಕೊಂಡಿರೋ ಮನಸಿಗೆ ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಗೊತ್ತಾಗೋದೆ ಇಲ್ಲ. ಆ ಸಮಯದಲ್ಲಿ ಅದಕ್ಕೆ ಹೊಳೆದಿದ್ದೇ ಸರಿ. ಯಾರಾದ್ರು ಅಷ್ಟೆ…. ನಮ್ಮ ಮನಸು ಯಾರ ಮೇಲೆ ಕೋಪ ಮಾಡಿಕೊಂಡಿರುತ್ತೋ ಅವರ ಮುಂದೆ ತಲೆ ತಗ್ಗಿಸೋಕೆ ಇಷ್ಟ ಪಡೊಲ್ಲ….ಮಾತು ಬಿಟ್ಟರಂತೂ ಅವರೇ ಮೊದಲು ಮಾತಾಡಿಸಲಿ ಅಂತ ಹಠ ಹಿಡಿದರೆ ಸೋಲೋದೇ ಇಲ್ಲ……ನಮ್ಮ ಮನಸಲ್ಲಿರೋ ಆ ಒಣ ಹಮ್ಮು ಏನಿದೆಯಲ್ಲ ಅದು ಆಗ ನಮ್ಮನ್ನು ಇಷ್ಟ ಬಂದಂತೆ ಆಡಿಸುತ್ತೆ….

ಈ ಬಿರುಕು ಒಂದು ಸಲ ಮೂಡಿದರೆ ಅದನ್ನ ಮುಚ್ಚೋದು ತುಂಬಾ ಕಷ್ಟ. ಕೆಲವೊಂದು ಸಲ ಅಂತು ಬಿರುಕು ಮುಚ್ಚೋಕೆ ಅಂತ ಮಾಡೋ ಕೆಲಸದಿಂದ ಬಿರುಕು ಹೋಗಿ ಕಂದಕಾನೇ ಆಗಿಬಿಡುತ್ತೆ. ನಮ್ಮಿಬ್ಬರ ಮಧ್ಯೆ ಬಿರುಕು ಮೂಡ್ತಾ ಇದೆ ಅನ್ನೋ ಸುಳಿವು ಇಬ್ಬರಲ್ಲಿ ಒಬ್ಬರಿಗೆ ದೊರೆತರು ನಾವು ಆ ಬಿರುಕನ್ನು ಆದಷ್ಟು ಬೇಗ ಮುಚ್ಚಿಬಿಡಬೇಕು. ಇಲ್ಲ ಅಂದ್ರೆ ಒಂದು ಸಣ್ಣ ಕಾರಣದಿಂದ ಎಷ್ಟೋ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಸಂಬಂಧ ಸುಳಿವೇ ಇಲ್ಲದಂತೆ ಮಾಯ ಆಗಿಹೋಗುತ್ತೆ.

ನಾನು ಇದರಲ್ಲೂ ಒಂಥರಾ ವಿಚಿತ್ರವಾದ ಹುಡುಗಿ…. ನಾನು ತುಂಬಾ ಪ್ರೀತಿಸುವವರ ಮೇಲಷ್ಟೇ ಕೋಪ ಮಾಡಿಕೊಳ್ಳೋದು… ಯಾರ ಮೇಲಾದ್ರು ಕೋಪ ಬಂದಿದೆ ಅಂದ್ರೆ ಅವರನ್ನು ತುಂಬಾ ಇಷ್ಟ ಪಡ್ತೀನಿ ಅಂತಾನೆ ಅರ್ಥ…..ಈ ಕೋಪ ಮಿತಿ ಮೀರಿದರೆ ಅವರ ಮುಂದೆ ಏನೋ ದೊಡ್ಡದಾಗಿ ಕೂಗಾಡಿ…. ಕಿರುಚಾಡಿ....... ರೂಮಿಗೆ ಬಂದು ಅಳುತ್ತ ಮಲಗಿಬಿಡ್ತೀನಿ……ನಾನು ಯಾಕೆ ಹಾಗೆ ಮಾಡ್ತೀನೋ ನನಗೆ ಗೊತ್ತಿಲ್ಲ……. ಈ ರೀತಿ ಅಳುತ್ತ ಮಲಗಿದರೆ ನಾನು ಯಾರ ಮೇಲೆ ಕೋಪ ಮಾಡಿಕೊಂಡಿರ್ತೀನೋ ಅವರು ಅಥವಾ ನಮ್ಮಪ್ಪ ಬಂದು ಕರೆಯೋವರೆಗೂ ಈಚೆ ಬರೋಲ್ಲ ಅಲ್ಲೇ ಮಲಗಿರ್ತೀನಿ…….

ಅಲ್ಲ ನಮ್ಮ ಮನಸಿಗೆ ಸಿಟ್ಟು ಬಂದಾಗ ಅದು ಆಡೋ ಮಾತಿಗೆ ತಲೆ ಬುಡ ಇರೋದಿಲ್ಲ…. ಯಾವ್ದೋ ಸಂದರ್ಭದಲ್ಲಿ ಅವರು ಹೇಳಿದ ಮಾತಿಗೆ ನಮ್ಮದೇ ಅರ್ಥ ಕೊಟ್ಟು ಅವರ ಮನಸಿಗೂ ನೋವಾಗೋ ಹಾಗೆ ಮಾತಾಡಿಬಿಡ್ತೀವಿ……ಕೋಪದಲ್ಲಿ ಆಡಿದ ಮಾತಿಗೆ ಹುರುಳಿಲ್ಲ ಅಂತ ಗೊತ್ತಿದ್ರು ಅವರು ನಮ್ಮನ್ನ ಹಾಗೆ ಅಂದುಬಿಟ್ಟರಲ್ಲ ಅಂತ ದುಃಖ ಪಡ್ತೀವಿ….. ಅವರು ಹೊಗಳಿದ್ದಾಗ ಖುಷಿ ಪಡದೆ ಇರೋ ನಾವು ಕೋಪದಲ್ಲಿ ಆಡಿದ ಮಾತೇ ನಿಜ ಅಂತ ನಂಬಿ ಅವರನ್ನ ದ್ವೇಷಿಸೋಕೆ ಶುರು ಮಾಡ್ತೀವಿ……. ಇದೆಲ್ಲ ಸರೀನಾ ನೀವೇ ಹೇಳ್ರಿ……..

ಈ ಹುಸಿಮುನಿಸು ಅಂತ ಏನು ಹೇಳ್ತೀವಲ್ಲ…. ಆ ಮುನಿಸು ಇನ್ನೊಂಥರ… ನಾವು ಯಾರನ್ನು ಪ್ರೀತಿಸುತ್ತೇವೋ ಅವರು ನಮ್ಮನ್ನು ಸ್ವಲ್ಪ ತಿರಸ್ಕಾರ ಮಾಡ್ತಾ ಇದ್ದಾರೆ ಅಂತ ಅನಿಸಿದಾಗ ನಮ್ಮ ಮನಸು ಅವರ ಮೇಲೆ ಈ ಥರದ ಕೋಪ ಮಾಡಿಕೊಳ್ಳುತ್ತೆ…….ಇದಕ್ಕೆ ಯಾವುದೇ ಥರದ ಗಂಭೀರ ಕಾರಣ ಇರೋಲ್ಲ….ಸಣ್ಣ ಸಣ್ಣ ವಿಷಯಗಳಿಗೇ ಸೀಮಿತವಾಗಿರುತ್ತೆ…... ಅವರು ಬಂದು ನಮ್ಮನ್ನು ಮಾತಾಡಿಸಿದರೆ ಅಷ್ಟೆ ಬೇಗ ಆ ಕೋಪ ತೂತಾದ ಬಲೂನಿನ ಥರ ಠುಸ್ಸಂತ ಇಳಿದುಹೋಗುತ್ತೆ…… ನನ್ನದು ೯೯.೯% ಇಂಥ ಹುಸಿಮುನಿಸೇ…..

ಆದ್ರೂ ಈ ಸಿಟ್ಟಿಗೆ ಎರಡು ಮನಸುಗಳನ್ನು ಒಡೆಯುವಷ್ಟು ಶಕ್ತಿಯಿರುತ್ತೆ. ಚಿಕ್ಕ ಮನಸ್ತಾಪ ಮುಂದೆ ಒಂದು ದೊಡ್ಡ ಕದನಾನೆ ಏರ್ಪಡಿಸಿಬಿಡುತ್ತೆ. ಈ ಸಿಟ್ಟೇ ಮುಂದೆ ದ್ವೇಷಕ್ಕೆ ತಿರುಗಿ ಅನಾಹುತಗಳನ್ನ ಮಾಡಿಬಿಡುತ್ತೆ….ಅಂಥ ಸಿಟ್ಟು ನಮಗ್ಯಾಕೆ ಅಲ್ವ…… ನಮ್ಮ ನಡುವಿನ ಪ್ರೀತಿ ಹೆಚ್ಚಿಸುವ ಹುಸಿಮುನಿಸೇ ಸಾಕು ಅಲ್ವ…….

Friday, July 24, 2015

ಪ್ರಕೃತಿ

ನಾ ಬೇಡಿದೆ

ಜೀವನದಾ ಬಳ್ಳಿಯು ಸೊರಗುತಿರುವಾಗ
ನೀರಿಲ್ಲದೆ ತಾ ಒಣಗುತಿರುವಾಗ
ಆಸೆಗಳ ಕಾಮನ ಬಿಲ್ಲನ್ನು ಕಟ್ಟಿ
ಚಿಗುರುವ ಚೈತನ್ಯ ತುಂಬುವ
ಸುಧೆಯಾಗು ನೀನು, ಮಳೆಯಾಗು ನೀನು ……

ನಿರಾಸೆಯ ಗವಿಯ ನಾ ಹೊಕ್ಕಿರುವಾಗ
ಕತ್ತಲ ಭೀತಿಯಿಂದ ತತ್ತರಿಸಿರುವಾಗ
ಭಯಾನಕ ಕಗ್ಗತ್ತಲ ಕೊಂದು
ಬಾಳ ದಾರಿಯ ತೋರುವ
ಆಶಾಕಿರಣವಾಗು ನೀನು, ಬೆಳಕಾಗು ನೀನು…….

ಕಷ್ಟಗಳ ಚಳಿಯಲ್ಲಿ ನಾ ನಡುಗಿರುವಾಗ
ದುಷ್ಟರ ಅಟ್ಟಹಾಸದೆದುರು ಕಂಗೆಟ್ಟಿರುವಾಗ
ಚಳಿಯ ಮಾರುತಗಳ ಎದುರಿಸಿ
ದುಷ್ಟರ ಹಾದಿಯನು ದುರ್ಗಮಗೊಳಿಸುವ
ತಡೆಯಾಗು ನೀನು, ಹೆಬ್ಬಂಡೆಯಾಗು ನೀನು…….

ಭವದ ಬೇಗೆಯಲಿ ನಾನು ಬೇಯುತಿರುವಾಗ
ನೋವುಗಳ ತಾಪದಿ ಪರಿತಪಿಸಿರುವಾಗ
ಬಿಸಿಲ ಬೇಗೆಯ ತಣಿಸಿ
ಜೀವಕ್ಕೆ ತಂಪನ್ನೀಯುವ
ವರವಾಗು ನೀನು, ತಂಗಾಳಿಯಾಗು ನೀನು……

ಅಶರೀರ ವಾಣಿಯೊಂದು ನುಡಿಯಿತು

ಹೀಗೇಕೆ ಬೇಡುತಿರುವೆ ನೀ ನನನ್ನು
ಗುರುತಿಸಿಲ್ಲವೇ ನೀನು ನಿನ್ನ ಶಕ್ತಿಯನ್ನು?

ನಿನಗಿರುವ ಗುರಿ ನಿನ್ನಾಕಾಂಕ್ಷೆಯ ಕಾಮನಬಿಲ್ಲು
ನಿನ್ನ ಶ್ರಮವೇ ಅದಕೆ ನೀರೆರೆವ ಮಳೆ
ನಿನ್ನ ಛಲವೇ ನಿನಗೆ ದಾರಿ ತೋರುವ ಬೆಳಕು
ನಿನ್ನ ಧೈರ್ಯವೇ ಹೆಬ್ಬಂಡೆ
ನಿನ್ನ ಜೀವನದಲ್ಲಿರುವ ಪ್ರೀತಿ ವಿಶ್ವಾಸಗಳೇ ತಂಗಾಳಿ

ಈ ಶಕ್ತಿಗಳಿದ್ದು ಈ ದೈನ್ಯತೆ ನಿನಗೇಕೆ?
ನೀ ಸಮರ್ಥನಾಗಿರುವಾಗ ನನ್ನ ಹಂಗೇಕೆ?
ಇವೆಲ್ಲವುಗಳ ಸದ್ವಿನಿಯೋಗ ನೀ ಮಾಡು
ಸಿಗುವುದು ಕೀರ್ತಿ- ಯಶಸ್ಸು ನೀ ನೋಡು…..


ಹೌದಲ್ವೆನ್ರಿ ನಾವೇನೇನನ್ನು ಬಯಸುತ್ತೇವೋ ಅದೆಲ್ಲ ನಮ್ಮಲ್ಲೇ ಇದೆ…..ಹಾಗಾಗಿ ನಾವು ಈಗ ಇರೋ ಪರಿಸ್ಥಿತಿಗೆ ನಾವೇ ಜವಾಬ್ದಾರರು….ಒಳ್ಳೆಯದಗಿರಲಿ ಅಥವಾ ಕೆಟ್ಟದ್ದಾಗಿರಲಿ ಅದು ನಮ್ಮಿಂದಲೇ ಆಗಿರುತ್ತೆ. ನಮಗಿರುವ ಎಲ್ಲ ಸದ್ಗುಣಗಳ ಉಪಯೋಗದಿಂದ ಈ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದವರು ನಾವೇ ಅಲ್ವ…… ನಮ್ಮ ಜೀವನವನ್ನು ಬೇರೆ ಯಾರೋ ಬಂದು ಸುಧಾರಿಸಲಿ ಅನ್ನೋದು ಮೂರ್ಖತನ ಅಲ್ವ……..ನೀವೇ ಯೋಚನೆ ಮಾಡಿ………

Friday, June 12, 2015

ವಾಗರ್ಥ

ಈ ಮಾತುಗಳೇಕೆ ಹೀಗೆ?
ಹೇಳಿದರೂ ಹೇಳದಂತೆ,
ಕೇಳಿದರೂ ಕೇಳದಂತೆ,
ಅರಿತರೂ ಅರಿಯದಂತೆ!

ಪದಗಳನ್ನು ಪೋಣಿಸಿದ
ಮಾತುಗಾರನ ಆಂತರ್ಯದಲ್ಲಿ
ಹೇಳಲೇ, ಹೇಳದೇ ಉಳಿದುಬಿಡಲೇ
ಎಂಬ ಗೊಂದಲದ ನೆರಳು!

ಕಿವಿಗೆ ಬಿದ್ದ ಸ್ವರವ ಆಯ್ದ
ಕೇಳುಗನ ಅಂತರಾಳದಲ್ಲಿ
ಕೇಳಿದ ಮಾತು ಸತ್ಯವೇ ಅಥವಾ
ಕೇಳಿದ್ದೇ ಸುಳ್ಳೇ ಎಂಬ ಗೋಜಲು

ಪುನರಚಿತ ಶಬ್ದ ಮಾಲೆಗೆ
ಅರ್ಥ ತುಂಬುವ ಕೇಳುಗನಿಗೆ
ಕಹಿ ಸತ್ಯದ ದರ್ಶನವಾದರೆ,
ತಿಳಿದದ್ದೂ ತಿಳಿಯದಂಥ ಕತ್ತಲು!

ಹೇಳುಗನು ಹೇಳಬಯಸುವ ಮಾತು
ಕೇಳುಗನು ಕೇಳಬಯಸುವ ಮಾತಿನ
ಅರ್ಥ ವ್ಯತ್ಯಾಸದಲಿ ಕಳೆದುಹೋದರೆ,
ಈ ಮಾತಿನರ್ಥ ಯಾರ ಸ್ವತ್ತು?

Saturday, January 31, 2015

ಕನಸೇ….

-->
ಈ ಜಗತ್ತಲ್ಲಿ ಯಾರಿಗೆ ತಾನೆ ಕನಸುಗಳು ಬೀಳೋದಿಲ್ಲ ಹೇಳ್ರಿ… ಕೆಲವರು ಮಲಗಿದ್ದಾಗಷ್ಟೇ ಕನಸು ಕಂಡರೆ ಕೆಲವರು ಜಾಗೃತರಾಗಿದ್ದಾಗಲೇ ಕನಸು ಕಾಣುತ್ತಾರೆ… ಕೆಲವರು ಕಂಡ ಕನಸನ್ನು ನನಸಾಗಿಸಿದರೆ ಕೆಲವರು ಆ ಕನಸು ನನಸಾಗಿಸುವ ಪ್ರಯತ್ನವನ್ನೇ ಮಾಡುವುದಿಲ್ಲ… ನಾವು ಅದಕ್ಕೆ ಗಮನ ಕೊಡಲಿ ಕೊಡದೆ ಇರಲಿ ಕನಸುಗಳನ್ನಂತು ಕಾಣುತ್ತಲೇ ಇರುತ್ತೇವೆ… ಅಲ್ವ..
ರಾತ್ರಿ ಮಲಗಿದ್ದಾಗ ಕಾಣೋ ಕನಸುಗಳು ಕೆಲವೊಮ್ಮೆ ನಗು ತರುವಂಥವಾಗಿರುತ್ತವೆ… ಇಂಥ ಸಂದರ್ಭಗಳು ನಮ್ಮ ಜೀವನದಲ್ಲಿ ಬರಲು ಸಾಧ್ಯವೇ ಇಲ್ಲ ಅಂತ ಅನ್ನಿಸೋದು ಅಷ್ಟೆ ನಿಜ…. ಕಾಣದ ಎಷ್ಟೋ ಸುಂದರ ತಾಣಗಳಲ್ಲಿ ವಿಹರಿಸಿದ್ದೇನೆ… ಕಲ್ಪನೆಗೆ ನಿಲುಕದ ಮನೋಹರ ದೃಶ್ಯಗಳನ್ನು ಕಂಡಿದ್ದೇನೆ …. ಕೆಲವು ಕನಸುಗಳಂತೂ ನಿಜವಾದರೆ ಎಷ್ಟು ಚಂದ ಅಂತ ಯೋಚನೆ ಮಾಡಿದ್ದೀನಿ…. ಒಂದು ಸುಂದರಲೋಕ ತನ್ನಷ್ಟಕ್ಕೆ ತಾನೆ ತೆರೆದುಕೊಳ್ಳುತ್ತಾ ಹೋದಂತೆ ಅದರಲ್ಲೇ ಲೀನವಾಗಿ ಅಂಥ ಮೋಹಕತೆಗೆ ಮರುಳಾಗಿ ಮತ್ತೆ ವಾಸ್ತವ ಸ್ತಿತಿಗೆ ಮರಳಿದಾಗ ಇನ್ನೊಂದಿಷ್ಟು ಹೊತ್ತು ಹಾಗೆ ಇರಬಾರದಾಗಿತ್ತ ಅಂತ ಬೇಸರಾನು ಪಟ್ಟಿದ್ದೀನಿ…..
ಕೆಲವೊಮ್ಮೆ ಅಷ್ಟೆ ಭಯಾನಕ ಕನಸುಗಳನ್ನು ಕಂಡು ಬೆಚ್ಚಿ ಬಿದ್ದದ್ದು ಇದೆ… ಆದ್ರೆ ಅದೇನಿದ್ದರು ಚಿಕ್ಕ ವಯಸ್ಸಿಗೆ ಸೀಮಿತವಾಗಿತ್ತು….. ಈಗ ಅಂತ ಭಯ ಹುಟ್ಟಿಸುವ ಕನಸುಗಳನ್ನು ಕಂಡದ್ದೇ ಇಲ್ಲ… ನಾನು ಚಿಕ್ಕವಳಿದ್ದಾಗ ಒಂದು ಸಿನಿಮ ನೋಡಿ ಎಷ್ಟು ಭಯ ಪಟ್ಟಿದ್ದೆ ಅಂದ್ರೆ… ಕಣ್ಣು ಮುಚ್ಚಿಇನ್ನೇನು ನಿದ್ದೆ ಬಂತು ಅಂದ್ರೆ ಅದೇ ಚಿತ್ರಗಳು…. ಸುಮಾರು ೧೫ ದಿನ ಸರಿಯಾಗಿ ನಿದ್ದೆ ಮಾಡಿರಲಿಲ್ಲ… ಆದ್ರೆ ಈಗ ಅದನ್ನು ನೆನೆಸಿಕೊಂಡರೆ ನಗು ಬರುತ್ತೆ…. ಅದರಲ್ಲಿ ಅಷ್ಟು ಹೆದರಿಕೊಳ್ಳುವಂಥದ್ದು ಏನು ಇರಲಿಲ್ಲ ಅಲ್ವ ಅಂತ ನಕ್ಕು ಸುಮ್ಮನಾಗ್ತೀನಿ ಅಷ್ಟೆ…
ಬರಿ ಇದಷ್ಟೇ ಕನಸಲ್ಲ ಅಲ್ವ…. ನಾವು ಜಾಗೃತರಾಗಿದ್ದಾಗ ನಮ್ಮ ಮುಂದಿನ ಜೀವನ ಹೀಗೆ ಇರಬೇಕು ಅಂತ ನಾವು ಹಾಕೋ ಯೋಜನೆಗಳನ್ನು ನಾವು ಕನಸುಗಳು ಅಂತಾನೆ ಕರೆಯೋದು ಅಲ್ವ…. ಈ ಮುಂಚೆ ಹೇಳಿದ ಕನಸುಗಳು ನಿದ್ದೆಯಲ್ಲಿ ಗೋಚರಿಸಿದರೆ ಈ ಕನಸುಗಳು ನಮಗೆ ನಿದ್ದೆಮಾಡಲು ಬಿಡುವುದಿಲ್ಲ…. ಕಂಡ ಕನಸು ಬರಿ ಕನಸಾಗಿಯೇ ಮಣ್ಣಾಗುವುದಕ್ಕೆ ಬಿಡದೆ ಆ ಕನಸನ್ನು ಬೆನ್ನಟ್ಟಿ ಅದನ್ನು ನನಸು ಮಾಡಿಯೇ ತೀರಬೇಕೆಂಬ ಛಲ ನಮ್ಮಲ್ಲಿ ಉದಯವಾದರೆ ನಮ್ಮನ್ನು ತಡೆಯುವವರು ಯಾರು ಇರೋಲ್ಲ ನೀವೇನಂತೀರಿ?
ಇತ್ತೀಚ್ಗೆ ನಾನು ಓದಿದ “THE ALCHEMIST” ಎಂಬ ಕಥೆಯಲ್ಲಿ ನನಗಿಷ್ಟವಾಗಿದ್ದು ಅದೇ ಸಾಧಿಸಿಯೇ ತೀರಬೇಕೆಂಬ ಕಥಾನಾಯಕನ ಛಲ… ಏನೇ ಕಷ್ಟ ಎದುರಾದರು ಅದನ್ನು ಸಮರ್ಥವಾಗಿ ಎದುರಿಸಿ ನಮ್ಮ ಕನಸಿಗೆ ಸಾಕಾರ ರೂಪ ಕೊಡುವ ಹಂಬಲ, ಅದನ್ನು ಕಾರ್ಯರೂಪಕ್ಕೆ ತರಬೇಕೆಂಬ ದೃಢ ನಿರ್ಧಾರ ಜೊತೆಗಿದ್ದರೆ ಅಸಾಧ್ಯವಾದ ಕೆಲಸ ಯಾವುದು ಇಲ್ಲ……
ನಾವೆಲ್ಲರೂ ನಮ್ಮ ಜೀವನ ಹೀಗೆ ಇರಬೇಕೆಂದು ಕನಸು ಕಂಡೆ ಇರುತ್ತೇವೆ…. ಆದರೆ ಅದು ನನಸಾಗುವುದಕ್ಕೆ ಬೇಕಾದಷ್ಟು ಸಮಯ ಇದೆಅಂತ ಕೈ ಕಟ್ಟಿ ಕೂರುವುದಕ್ಕಿಂತ ಆ ಗುರಿಯತ್ತ ಸಾಗುವ ಸಲುವಾಗಿ ನಮ್ಮ ಪಾಲಿನ ಕರ್ತವ್ಯವನ್ನು ಮಾಡಲೇಬೇಕು ಅಲ್ವ… ಆದರೆ ಆಕನಸುಗಳು practical ಆಗಿ ಇರಬೇಕು ಅನ್ನೋದನ್ನು ನಮ್ಮ ಮನಸಲ್ಲಿಟ್ಟುಕೊಂಡಿರಬೇಕು…
ನಾವು ಕಂಡ ಕನಸುಗಳಲ್ಲಿ ಕೆಲವು ನಿಜವಾಗಿದ್ದರೆ ಎಷ್ಟು ಚೆನಾಗಿರ್ತಿತ್ತು ಅಂತ ಹೇಗೆ ಯೋಚಿಸ್ತೀವೋ ಹಾಗೆ ಕೆಲವು ನಮ್ಮ ಬಾಳಹಾದಿಯಲ್ಲಿ ಯಾವುದೇ ಕಾರಣಕ್ಕೂ ಇದಿರಾಗದೆ ಇರಲಿ ಅಂತಾನು ಬಯಸ್ತೀವಿ…. ಕಂಡ ಕನಸೆಲ್ಲ ನನಸಾಗದೇ ಇರಬಹುದು ಆದರೆ ಅದನ್ನು ಸಾಧಿಸುವ ನಮ್ಮ ಹಾದಿಗೆ ಯಾವತ್ತು ಮಬ್ಬು ಆವರಿಸಲು ಬಿಡದೆ ಅದರತ್ತ ಇಡುವ ಪ್ರತಿ ಹೆಜ್ಜೆಯೂ ಮುಂದೆಯೇ ಇಡಬೇಕು …. ಯಾವುದೋ ಒಂದು ವಿಘ್ನ ಎದುರಾಯಿತೆಂದು ನಮ್ಮ ಹೆಜ್ಜೆ ಹಿಂದೆ ಸರಿಯಬಾರದು…. ವಿಘ್ನಗಳಿರೋದೆ ನಮಗೆ ತೊಡುಕುಂಟು ಮಾಡೋಕೆಅಲ್ವ….
ಹಗಲುಗನಸನ್ನು ಯಾರು ಬೇಕಾದ್ರೂ ಕಾಣುತ್ತಾರೆ ಆದರೆ ಅದು ನಿಜ ಜೀವನದಲ್ಲಿ ರೂಪ ಪಡೆಯುವುದನ್ನು ಕಾಣುವುದು ಎಲ್ಲರಿಗೂ ಸಾಧ್ಯವಿಲ್ಲ….. ಏನೇ ಆಗಲೀ ನಿಮ್ಮ practical ಕನಸುಗಳೆಲ್ಲ ನನಸಾಗಲಿ….