Friday, February 27, 2009

ನಿನಗಾಗಿ ಕಾದಿರುವೆ

ಹುಚ್ಚೆದ್ದು ಕುಣಿಯುತಿರುವ

ಆಸೆಗಳನೆಲ್ಲ ತಡೆದಿಟ್ಟುಕೊಂಡು

ಹಾರಾಡುತಿರುವ ಮನಸನ್ನು

ತಹಬಂದಿಗೆ ತಂದುಕೊಂಡು

ತಪ್ಪದೆ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||


ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ

ಕಾಳಜಿಯಿಂದ ಸಿಂಗರಿಸಿಕೊಂಡು

ಮನದಾಳದಲ್ಲಿ ನಿನ್ನ

ನೆನಪುಗಳನ್ನೇ ತುಂಬಿಕೊಂಡು

ನಿರಾಸೆಗೊಳಿಸದೆ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||


ಮುನಿಸಿಕೊಂಡಿದ್ದರೆ ರಮಿಸಿ

ಕೋಪ ತಣಿಸುವೆಯೆಂದು

ಜೊತೆಯಲ್ಲಿ ಕುಳಿತು ನನ್ನ

ಕನಸುಗಳಿಗೆ ರೂಪ ಕೊಡುವೆಯೆಂದು

ನನಗೋಸ್ಕರ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||


ಮುಡಿದ ಮಲ್ಲಿಗೆ

ಹೂವಿನ ದಂಡೆ ಬಾಡಿದರೂ

ಕಾಯುವ ಬೇಸರ

ಎಡಬಿಡದೆ ಕಾಡಿದರೂ

ತಡವಾದರೂ ನೀ ಬಂದೆ ಬರುವೆಯೆಂದು

ಗೆಳೆಯ ನಾ ನಿನಗಾಗಿ ಕಾದಿರುವೆ ||

Monday, February 16, 2009

ಹೃದಯ ಗೀತೆ

ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ

ಬಾ ಬೇಗ ನೀ ನನ್ನ ಬಳಿಗೆ

ಎನುತ ಮೀಟಿದನವ ನನ್ನ ಹೃದಯ ವೀಣೆ

ಅಂದಿನಿಂದ ನನಗೇನಾಗಿದೆಯೋ ನಾ ಕಾಣೆ


ಮನಸಿನ ಪುಟಗಳ ಮೇಲೆ

ಅವ ಬರೆದ ಹಾಡಿದೆ

ಹೃದಯ ತನನಂ ಎಂದಿದೆ

ಕಣಕಣವು ಅದ ಪ್ರತಿಧ್ವನಿಸಿದೆ


ಕಂಡ ಕನಸೆಲ್ಲ ನನಸಾಗಲೆಂಬ ಬಯಕೆ

ಸದಾ ನಿನ್ನ ನೆನಪುಗಳದೆ ಕನವರಿಕೆ

ಇದ್ದ ಕೋಟೆಗಳನೆಲ್ಲ ದಾಟಿ ಒಳಬಂದಿಹೆ ನೀ ಗೆಳೆಯ

ಬಿಡಬೇಡ ಎಂದೆಂದಿಗೂ ನೀ ಹಿಡಿದ ಈ ಕೈಯ

Monday, February 9, 2009

ನಿರೀಕ್ಷೆ

ಎಲ್ಲೋ ಮಲಗಿದೆ ಬೇಸರ
ಕಣ್ಣ ತುಂಬ ಕಾತರ
ಬರುವನೇ ನನ್ನ ಚಂದಿರ
ಕೇಳಲು ನನ್ನ ಇಂಚರ

ಕೊನೆಯಾಯ್ತು ಅನುದಿನದ ದುಗುಡ
ಚಿಗುರುತಿದೆ ಹೊಸತನದ ಗಿಡ
ಬರುವನೇ ನನ್ನ ಚಂದಿರ
ಆಡಲು ನನ್ನ ಸಂಗಡ

ಆವರಿಸುತಿದೆ ಇರುಳ ಹಿತ
ಹರಡುತಿದೆ ಮಂದಬೆಳಕ ಸ್ಮಿತ
ಬರುವನೇ ನನ್ನ ಚಂದಿರ
ತಿಳಿಯಲು ನನ್ನ ಇಂಗಿತ

ಕಳಚುತಿದೆ ಮಬ್ಬಿನ ತೆರೆ
ಸರಿಯುತಿದೆ ಮೋಡದ ಮರೆ
ಬರುವನೇ ನನ್ನ ಚಂದಿರ
ಸವಿಯಲು ನನ್ನ ಅಕ್ಕರೆ

Wednesday, December 31, 2008

ಐ ಮಿಸ್ ಯು 2008

ನಮ್ಮೆಲ್ಲರ ಬಾಳಿನ ಕಾದಂಬರಿಯ ಮತ್ತೊಂದು ಅಧ್ಯಾಯ ಇವತ್ತು ಪೂರ್ಣ ಗೊಳ್ಳುತ್ತಾ ಇದೆ. ನಾಳೆಯಿಂದ ಹೊಸ ವರ್ಷ ನಮ್ಮ ಬಾಳ ಹೊಸ ಅಧ್ಯಾಯ ಶುರುವಾಗ್ತಾ ಇದೆ ಒಂಥರಾ ಹೊಸ ಅನುಭೂತಿ ಹೊಸ ಸ್ಪರ್ಶ ಹೊಸ ಹರ್ಷ…. ಒಟ್ಟಿನಲ್ಲಿ ನಮಗೆಲ್ಲ ನವ ವರ್ಷ

ನಾನು ಇದುವರೆಗೆ ನನ್ನ ಬಾಳ ಕಾದಂಬರಿಯನ್ನು ಬರೆಯುತ್ತಾ ಹೋಗಿದ್ದೀನಿ ಈಗ ಆ ಪುಟಗಳನೆಲ್ಲ ತಿರುವಿ ಹಾಕಿ ಏನಾಯ್ತು ಅಂತ ವಿಮರ್ಶಿಸೋಣ ಅಂತ ಅನ್ನಿಸ್ತಾ ಇದೆ… ಅದಕ್ಕೆ ಈ ಸಮಯವೇ ಸುಸಮಯ ಅಂತ ಅನ್ನಿಸ್ತು ಹೇಗಿದ್ರು ನಾಳೆಯಿಂದ ಎಲ್ಲ ಹೊಸತೇ ಅಲ್ವ…. ಯಾವುದನ್ನಾದ್ರು ಮರೆಯಬೇಕು ಅನ್ನಿಸಿದ್ರೆ ಇವತ್ತೇ ಮರೆತು ನಾಳೆಯಿಂದ ಎಲ್ಲ ಫ್ರೆಶ್ ಆಗಿ ಶುರು ಮಾಡಬಹುದು ನೀವೇನಂತೀರಿ…

ನನ್ನ ೧೯ ವರ್ಷಗಳ ಜೀವನದಲ್ಲಿ ಇದೆ ಮೊದಲ ಬಾರಿಗೆ ಇಂಥ ಒಂದು ವಿಮರ್ಶೆ ಮಾಡ್ತಾ ಇರೋದು… ಕಳೆದ ವರ್ಷ ನಾನು ಏನೇನು ಮಾಡಿದೆ ಅಂತ ಯೋಚಿಸಿದರೆ ನೆನಪು ಬರೋ ವಿಷಯಗಳು ತುಂಬ ಕಮ್ಮಿ….ಅದರಲ್ಲಿ ಪ್ರಮುಖವಾದವು ನಾನು ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ್ದು… ಒಂದು ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದು … ಹೇಗೆ ಮರೀಲಿ ನನ್ನೀ ಬ್ಲಾಗ್ ಶುರು ಮಾಡಿದ್ದು…. ಅಷ್ಟೆ…ಉಳಿದವು ನೆನಪಿನಲ್ಲೂ ಇಲ್ಲ….

ಆದರು ೨೦೦೮ ನಂಟುಗಳ ಗಂಟನ್ನು ಹೊತ್ತು ತಂದು ಈ ನನ್ನ ಪುಟ್ಟ ಹೃದಯದಲ್ಲಿ ಹೊಸ ಚೈತನ್ಯವನ್ನಂತು ತಂದಿದೆ…. ಕಳೆದ ಅಧ್ಯಾಯವನ್ನು ಪರಾಮರ್ಶಿಸಿದರೆ ಅದೊಂದು ಅನೇಕ ಘಟನೆಗಳ ಸರಮಾಲೆ… ಅವುಗಳಲ್ಲಿ ಮಿರಿ ಮಿರಿ ಮಿಂಚ್ತಾ ಕೆಲವಿದ್ರೆ ಇನ್ನು ಕೆಲವು ಯಾವುದೋ ಒಂದು ಮೂಲೆಯಲ್ಲಿ ಹಾಯಾಗಿ ಕುಳಿತಿದ್ದು ಬೇಕೆಂದಾಗ ಮಾತ್ರ ನೆನಪಿಗೆ ಬರುವಂಥವು…

2008 ಅನೇಕ ಸ್ನೇಹಿತರನ್ನು ಕೊಟ್ಟಿದೆ… ಇರೋ ಬಂಧಗಳನ್ನು ಗಟ್ಟಿ ಮಾಡಿದೆ… ಆದ್ರೆ ಆಗಲೇ ಇರುವ ಕೆಲವು ಕೊಂಡಿಗಳು ಸಂಪರ್ಕದ ಕೊರತೆಯಿಂದ ಕಳಚುತ್ತಿರುವುದು ನಿಜಾನೆ… ಏನೇ ಆದರು ಈ ವರ್ಷ ಚೆನ್ನಾಗಿಯೇ ಆಯ್ತು ಅನ್ನೋದು ನನ್ನ ಭಾವನೆ…

ಪ್ರತಿ ವರ್ಷ ನಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ಅಲ್ವ.. ಕೆಲವೊಂದು ಎಲ್ಲರಿಗೂ ಹೇಳಿ ಸಂತೋಷ ಪಟ್ರೆ ಇನ್ನು ಕೆಲವನ್ನು ನಮ್ಮೆದೆ ಗೂಡಿನಲ್ಲಿ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ ಕಾಪಾಡ್ತೀವಿ… ಕೆಲವು ಹೃದಯಾನ ಹುಚ್ಚೆದ್ದು ಕುಣಿಸಿದ್ರೆ ಕೆಲವು ಎಲ್ಲರಿಂದ ದೂರಾಗಿ ಒಬ್ಬಳೇ ಕುಳಿತು ಅಳುವಂತೆ ಮಾಡುತ್ತವೆ…. ಹೌದಲ್ವಾ “ಈ ಜೀವನ ಬೇವು ಬೆಲ್ಲ ಬಲ್ಲಾತಗೆ ನೋವೆ ಇಲ್ಲ..” ಎಂಥ ಅರ್ಥಪೂರ್ಣ ಸಾಲು…ಆದ್ರೆ ನಮ್ಮಂಥವರು ಸುಖ ದುಃಖ ಎರಡನ್ನು ಸಾಮಾನಾಗಿ ಕಾಣಬೇಕು ಅಂದ್ರೆ ಇನ್ನಷ್ಟು ಪ್ರೌಢಿಮೆ ಬೇಕು ಅಲ್ವ…

ಈಗ ಏನೇ ಯೋಚನೆ ಮಾಡಿದ್ರು ೨೦೦೮ ತನ್ನ ಗಂಟು ಕಟ್ಟಿಕೊಂಡು ಹೊರಡೋಕೆ ಸಿದ್ಧವಾಗಿದೆ… ಎಷ್ಟೇ ಕೇಳಿದ್ರು ಇನ್ನೊಂದು ಕ್ಷಣಾನೂ ಹೆಚ್ಚಿಗೆ ಇರೋಲ್ಲ…. ನೀವೆಲ್ಲ ಕೇಳಿರ್ತೀರ
ಜಿಪುಣ ಅಂದ್ರೆ ಜಿಪುಣ ಈ ಕಾಲ
ಎಷ್ಟೇ ಬಡ್ಡಿ ಕೊಟ್ರು
ಎಷ್ಟೇ ಗಿರವಿ ಇಟ್ರು
ಸಿಕ್ಕೋದಿಲ್ಲ ಒಂದು ಘಳಿಗೆ ಸಾಲ
ಅದಕ್ಕೆ ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೀನಿ… ೨೦೦೮ ರಲ್ಲಿ ಏನು ಆಗಿದೆಯೋ ಅದು ಒಳ್ಳೆಯದಕ್ಕೆ ಆಗಿದೆ… ೨೦೦೯ ಇನ್ನು ಚೆನ್ನಾಗಿರುತ್ತೆ ಅಂತ ಆಶಿಸ್ತೀನಿ

ಈ ಹೊಸ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಅಲೆಯೊಂದನ್ನು ಶುರು ಮಾಡಿ ನಿಮೆಲ್ಲರ ಬಾಳು ಹಸನಾಗಿರಲಿ ಎಂದು ಆಶಿಸ್ತಾ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!!!!!!!

Friday, September 5, 2008

ಮಿಂಚು
ನೀ ಬಂದಾಗ ನಾನೆಣಿಸಿದೆ
ನೀ ನನ್ನ ಬಾಳ ಬೆಳಕೆಂದು
ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು
ಆದರೆ ನೀನು ಮಿಂಚಿ ಮರೆಯಾಗುವ
ಬಾಳನ್ನೇ ಛಿದ್ರ ಮಾಡುವ ಸಿಡಿಲೆಂದು ತಿಳಿದದ್ದು
ಆ ಎದೆ ನಡುಗಿಸುವ ಶಬ್ದ ಕೇಳಿದ ನಂತರವಷ್ಟೇ….

ನೆನಪು
ಮಳೆಯ ಹನಿ ನಿಂತರು
ಮರದ ಎಲೆಯ ಹನಿ ನಿಲ್ಲದೋ ಗೆಳೆಯ
ನೀ ನನ್ನಿಂದ ದೂರ ನಡೆದರೂ
ನಿನ್ನ ಹೆಜ್ಜೆಗುರುತು ಮಾಸದೋ ನನ್ನೊಡೆಯ!!!

Monday, August 18, 2008

ನಾನು!!!!!?

ಈ ಬಾಳವೀಣೆಯ ತಂತಿ ನಾನು
ವೈಣಿಕನ್ಯಾರೋ….
ಈ ಬಾಳನೌಕೆಯಲಿ ಪಯಣಿಗಳು ನಾನು
ನಾವಿಕನ್ಯಾರೋ

ಮಿಡಿದ ಧ್ವನಿ ಶ್ರುತಿಯೋ ಅಪಶ್ರುತಿಯೋ
ಕಾರಣಳು ನಾನಲ್ಲ
ನೌಕೆ ಮುಳುಗುವುದೋ ತೇಲುವುದೋ
ಬಲ್ಲವರು ಯಾರಿಲ್ಲ….

ವೈಣಿಕನ ಕೈಚಳಕದಲಿ
ಅಡಗಿದೆ ನನ್ನ ಜೀವನ
ನಾವಿಕನ ಜ್ಞಾನದಲಿ
ಸಂಸಾರಸಾಗರಯಾನ…..

ವೈಣಿಕನ ಕಲಾನೈಪುಣ್ಯತೆಗೆ
ನನಗೆ ಹೊಗಳಿಕೆಯೇ?
ನನ್ನ ತಪ್ಪಿಗೆ ನಾವಿಕನ
ಮೂದಲಿಕೆ ಸರಿಯೇ?

ನಾವಿಕನಲ್ಲಿ ಭರವಸೆಯಿಟ್ಟು
ನೌಕೆಯೇರಿದವಳು ನಾನು
ವೈಣಿಕನಲ್ಲಿ ನಂಬಿಕೆಯಿಟ್ಟು
ಅವನಿಗೆ ಸಮರ್ಪಿತಳಾದವಳು ನಾನು

ಈ ಬಾಳ ಪ್ರತಿನುಡಿಯ ಪ್ರತಿಶ್ರುತಿಯ
ಸೂತ್ರಧಾರ ಆ ವೈಣಿಕ
ಈ ಬಾಳ ದಾರಿಯ
ಮಾರ್ಗದರ್ಶಕ ಆ ನಾವಿಕ…..

ತಾನು ನುಡಿಸುವ ಧ್ವನಿ ಶುದ್ಧ
ಆಗಿರಬೇಕೆಂಬ ಆಸೆ ವೈಣಿಕನಿಗಿಲ್ಲವೇ
ಗುರಿ ತಲುಪಿಸುವ ಬಯಕೆ
ನಾವಿಕನಿಗಿರುವುದಿಲ್ಲವೇ…..

ವೈಣಿಕನ ಕೈಬೆರಳ ತುದಿಯಲ್ಲಿ ನಾದವಾಗಿ
ನಾವಿಕನ ನೆರಳಲ್ಲಿ ಕೂಸಾಗಿ
ಬಾಳ ಗುರಿಯ ತಲುಪಿಸುವರೆಂಬ ಭರವಸೆಯಲ್ಲಿ
ಸಾಗುತಿರುವೆ ನಾನು ಈ ಜೀವನದಲ್ಲಿ……..

Wednesday, August 6, 2008

ನಗು ನಗುತಾ…….

ಯಾವುದೋ ಹೊಸ ಊರು, ಹೊಸ ಪರಿಸರ, ಹೊಸ ಜನ, ಒಬ್ಬಂಟಿಯಾಗಿ ಅಲ್ಲಿಗೆ ಕಾಲಿಟ್ಟಾಗ ನಮಗೆ ಎದುರಾದವರು ಒಂದು ಸುಂದರ ಹೂ ನಗೆ ಬೀರಿದರೆ ನಮ್ಮ ಮನಸಿಗೆ ಒಂಥರಾ ಖುಷಿಯಾಗುತ್ತೆ ಅಲ್ವ…. ಯಾರೋ ನಮ್ಮ ಸ್ನೇಹ ಬಯಸ್ತಾ ಇದ್ದಾರೆ ಅವರು ನಮ್ಮ ಸ್ವಲ್ಪ ಹೊತ್ತು ಜೊತೆಗಿರ್ತಾರೆ ಅನ್ನೋ ಭಾವನೆ ತಕ್ಷಣ ಮನಸ್ಸಲ್ಲಿ ಬಂದು ಹೋಗುತ್ತೆ….. ಒಂದು ನಗು ಇಬ್ಬರ ನಡುವೆ ಸಂಪರ್ಕ ಕೊಂಡಿಯಾಗಿಬಿಡುತ್ತೆ ಹೌದೋ ಅಲ್ಲವೋ….

ಅಂಥ ನಗು ಎಂಥ ಸಂದರ್ಭದಲ್ಲೂ ಮನಸಿನ ಪುಟದಿಂದ ಅಳಿಸಿ ಹೋಗೊಲ್ಲ ..... ಒಂದು ಸುಂದರ ಮುಗುಳುನಗೆ ಎಂಥ ಗಂಭೀರವಾದ ಸಂದರ್ಭವನ್ನು ತಿಳಿಯಾಗಿಸುತ್ತೆ... ಇಬ್ಬರ ನಡುವೆ ಒಂದು ಮಧುರ ಸಂಬಂಧ ಏರ್ಪಡುವ ಮುನ್ನ ಇಂಥ ಎಷ್ಟು ನಗು ವಿನಿಮಯವಾಗಿರುತ್ತೋ.... ಅವರ ಸಂಬಂಧ ಇರುವವರೆಗೂ ಇಂಥ ನಗು ವಿನಮಯ ಆಗುತ್ತಲೇ ಇರುತ್ತೆ ..... ಯಾಕಂದ್ರೆ ಈ ನಗು ನಮಗೆ ಅವರ ಮೇಲಿರೋ ಪ್ರೀತಿಯ ಸಂಕೇತವು ಹೌದು.....

ಈ ನಗುವಿಗೆ ಒಂದು ತೆರನಾದ ಮಾಂತ್ರಿಕ ಶಕ್ತಿಯಿದೆಯೇನೋ ಅಂತ ಅನಿಸುತ್ತೆ. ತುಂಬ ದುಃಖದಲ್ಲಿದ್ದಾಗ ಯಾರೋ ಹತ್ತಿರ ಬಂದು ಭುಜದ ಮೇಲೆ ಕೈಯಿಟ್ಟು ನಾನು ನಿನ್ನ ಜೊತೆಗಿರ್ತೀನಿ ಎನ್ನುವಂತೆ ಒಂದು ಸಣ್ಣ ನಗು ಅವರ ತುಟಿಯ ಮೇಲೆ ಹಾದು ಹೋದರೆ ಮನಸು ಒಂದು ಕ್ಷಣ ತನ್ನ ದುಃಖವನ್ನೆಲ್ಲ ಮರೆತುಬಿಡುತ್ತೆ…. ಜೊತೆಗೆ ಅವರ ಮೇಲಿನ ಪ್ರೀತಿನು ಜಾಸ್ತಿಯಾಗುತ್ತೆ..

ಎಲ್ಲರಿಗಿಂತ ಮುದ್ದಾದ ನಗು ಮಕ್ಕಳದ್ದು…. ಮಾತೆ ಬಾರದಿದ್ದರೂ ಅವರ ಒಂದು ನಗು ಸಾಕಷ್ಟು ವಿಷಯಗಳನ್ನು ಹೇಳುತ್ತೆ…. ಅವರು ಇಷ್ಟ ಪಡುವವರು ಎದುರು ಬಂದರಂತೂ ಕೇಕೆ ಹಾಕುತ್ತ ನಗುವ ಆ ಕಂದಮ್ಮಗಳನ್ನು ನೋಡ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗೊಲ್ಲ….. ಕೆಲವೊಂದು ಸಲ ಸಿಗ್ನಲಲ್ಲಿ ನಿಂತಾಗ ಪಕ್ಕದ ಗಾಡಿ ಮೇಲೆ ಕುಳಿತಿರುವ ಮಗುವಿನ ನಗು ನೋಡ್ತಾ ಗ್ರೀನ್ ಸಿಗ್ನಲ್ ಬಂದ್ರು ಅಲ್ಲೇ ಗಾಡಿ ನಿಲ್ಲಿಸಿಕೊಂಡಿದ್ದು ಹಿಂದಿರುವವರು ಹಾರ್ನ್ ಮಾಡಿದ ಮೇಲೆ ಮುಂದೆ ಹೋಗಿದ್ದೀನಿ….. ಆ ಸುಂದರ ನಗು ನೋಡಿ ಅವರಿಗೆ ಪ್ರತಿಕ್ರಯಿಸದವರು ನಿಜವಾಗಿಯು ಕಲ್ಲು ಹೃದಯದವರೇ ಆಗಿರಬೇಕು…… ಅಂತ ಮುಗ್ಧ ನಗು ನಾವು ದೊಡ್ದವರಾಗ್ತಾ ಆಗ್ತಾ ಎಲ್ಲಿ ಕಳೆದು ಹೋಗುತ್ತೆ????

ಬೆಳ್ಳಿಗ್ಗೆ ಎದ್ದಾಗ ನಗು ಮೊಗದಿಂದ ಗುಡ್ ಮಾರ್ನಿಂಗ್ ಹೇಳುವವರು ಇದ್ದರೆ ಆ ದಿನದ ಶುರುವಿನಲ್ಲೇ ಹೊಸ ಹುರುಪು ತುಂಬಿಕೊಳ್ತೀವಿ …… ಆ ನಗು ಮಾಸದಂತೆ ನಮ್ಮ ಮುಂದಿನ ಘಂಟೆಗಳು ಕಳೆದು ಹೋದರೆ ಆ ದಿನ ಏನೋ ಒಂಥರಾ ನೆಮ್ಮದಿಯ ಅನುಭವ…. ನಾವು ಕಾಲೇಜಿಗೆ ಹೋದಾಗ ಎದುರಾದವರಿಗೂ ಆ ನಗುವನ್ನು ಹಂಚಿ ಅವರ ನಗುವಿನಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬಹುದು…. ಹಾಗೆ ಮನೆಗೆ ಹಿಂದಿರುಗಿ ಬಂದಾಗ ಅದೇ ನಗುವನ್ನು ಮನೆಯವರಿಗೂ ಹಂಚಿ ಅವರ ಕಣ್ಣಲ್ಲಿ ಮೂಡುವ ಮಿಂಚನ್ನು ನೋಡಿ ಆನಂದ ಪಡಬಹುದು….. ಎಲ್ಲ ಕಡೆ ನಾವು ಬೀರಿದ್ದು ಅದೇ ನಗುವಾದ್ರು ಆ ನಗು ಎಂದಿಗೂ ಹಳೆಯದು ಅನಿಸೋಲ್ಲ ಅಲ್ವ…..

ಎಷ್ಟೇ ದುಃಖ ಇದ್ರೂ ನಗುವನ್ನು ಮಾಸದೆ ಇಟ್ಕೊಂಡಿರ್ತಾರಲ್ಲ ಅವರ ಬಗ್ಗೆ ನಿಜವಾಗ್ಲು ಒಂಥರಾ ಗೌರವ ಭಾವನೆ ಮೂಡುತ್ತೆ….. ನಾವು ನಮ್ಮ ಜೀವನದಲ್ಲಿ ಎದುರಾಗೋ ಸಣ್ಣ ಪುಟ್ಟ ತೊಡಕುಗಳಿಗೆ ಅಷ್ಟೊಂದು ಸಿಡುಕ್ತೀವಲ್ಲ ಇನ್ನು ಅಷ್ಟು ನೋವಿಟ್ಟುಕೊಂಡಿದ್ದರೂ ನಗುವೇ ಅವ್ರ ಮುಖದ ಮೇಲೆ ಕಾಣುತ್ತಲ್ಲ ಅವರಿಂದ ನಾವು ಕಲಿಯೋದು ಬಹಳಷ್ಟಿದೆ ಅಂತ ಅನಿಸುತ್ತೆ…. ಅದೇ ನಗು ಅವರ ನೋವುಗಳನ್ನು ಮರೆಸುತ್ತಿರಲೂ ಬಹುದು ಅಲ್ವ……..

ಕೆಲವೊಬ್ರು ಇರ್ತಾರೆ ನಕ್ಕರೆ ಎಲ್ಲಿ ಮುತ್ತು ಸುರಿದು ಹೋಗುತ್ತೋ ಅನ್ನೋ ಹಾಗೆ ಆ ಮುತ್ತುಗಳನ್ನು ಕಾಪಾಡೋ ಸಲುವಾಗಿ ತುಟಿ ಬಿರಿಯೋದೆ ಇಲ್ಲ… ನಾವು ಎಷ್ಟು ದಿನ ಇರ್ತೀವೋ ಯಾರಿಗೆ ಗೊತ್ತು…. ಇರೋ ಅಷ್ಟು ದಿನ ನಗ್ತಾ ಎಲ್ಲರನ್ನು ನಗಿಸುತ್ತ ಇದ್ದು ಬಿಡಬೇಕಪ್ಪ….. ನಗೋಕು ಕಂಜೂಸಿ ಮಾಡೋದ….ಬೇಡ….

ಎಲ್ಲರು ಅದನ್ನೇ ಬಯಸೋದು ಸದಾ ನಗ್ತಾ ನಗ್ತಾ ಇರ್ಬೇಕು ಅಂತ .... ಅಂಥ ನಗು ನಿಮ್ಮ ಬಾಳಲ್ಲಿ ಸದಾ ತುಂಬಿರಲಿ ಅಂತ ಮನಃ ಪೂರ್ವಕವಾಗಿ ನಾನು ಆಶಿಸ್ತೀನಿ……..

Thursday, July 17, 2008

ಕೈ ತುತ್ತು

ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ……..

ನಾನು ಒಂಥರಾ ವಿಚಿತ್ರ ಹುಡುಗಿ…ಚಿಕ್ಕವಳಿದ್ದಾಗ ಏನು ಮಾಡಿದರು ಕೈತುತ್ತು ತಿನ್ನದೇ ನಾನೇ ತಿನ್ನಬೇಕು ಅಂತ ಹಠ ಮಾಡ್ತಿದ್ದೆ. ಆದ್ರೆ ಈಗ ಕೈತುತ್ತು ತಿನ್ನಬೇಕು ಅಂತ ಇಷ್ಟ ಪಡ್ತಾ ಇದ್ದೀನಿ. ಹೌದಲ್ವಾ ನಮಗೆ ಅನಾಯಾಸವಾಗಿ ಏನಾದ್ರೂ ಸಿಕ್ಕರೆ ಅದರಲ್ಲಿ ನಮಗೆ ಆಸಕ್ತಿ ಇರೋಲ್ಲ. ಅದೇ ಅದು ನಮ್ಮಿಂದ ದೂರ ಆದಾಗ ಅದು ಬೇಕು ಅಂತ ಚಡಪಡಿಸ್ತೀವಿ……

ಸರಿ ಸರಿ ತುತ್ತಿನ ಬಗ್ಗೆ ಮಾತಾಡೋದು ಬಿಟ್ಟು ಏನೇನೋ ಬರೀತಾ ಇದ್ದೀನಿ. ಕೈತುತ್ತಲ್ಲಿ ಏನೋ ಒಂದು ವಿವರಿಸಲಾಗದಂಥ ಬಂಧ ಬೆಸೆಯುವ ತಾಕತ್ತಿದೆ. ಅದಕ್ಕೆ ಚಿಕ್ಕವರಿದ್ದಾಗ ನಾವು ಅಮ್ಮನ ಕೈತುತ್ತು ತಿನ್ನೋಕೆ ಹಾತೊರೆಯುತ್ತೇವೆ. ಒಂದೊಂದು ಸಲ ಅಂತು ನನಗೆ ನಾನು ಯಾಕಾದ್ರೂ ಊಟ ಮಾಡೋದು ಕಲಿತೆನೋ ಅಂತ ಅನಿಸುತ್ತೆ. ಊಟ ಮಾಡೋದೇ ಕಲಿತಿರಲಿಲ್ಲ ಅಂದ್ರೆ ಪ್ರತಿ ದಿನ ಅಪ್ಪ ಅಥವಾ ಅಮ್ಮ ತಿನ್ನಿಸ್ತಾ ಇರ್ತಿದ್ರು…….ಅಲ್ವ……..

ಇತೀಚೆಗೆ ನಾನು ಒಂದು ಧ್ಯಾನ ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದೆ. ೪ ದಿನ ಹರಪನಹಳ್ಳಿಯಲ್ಲಿ( ದಾವಣಗೆರೆ) ಶಿಬಿರ. ಅಲ್ಲಿದ್ದ ಇನ್ನು ಅನೇಕ ಸ್ವಯಂ ಸೇವಕರಲ್ಲಿ ಒಬ್ಬರು ನನಗೆ ಎರಡು ದಿನ ಕೈತುತ್ತು ತಿನಿಸಿದ್ದರು…… ನಮ್ಮ ನಡುವೆ ನಾವಿಬ್ಬರೂ ಸ್ವಯಂ ಸೇವಕರು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಸಂಬಂಧ ಇರಲಿಲ್ಲ……. ಅವರ ಹೆಸರು ಬಿಟ್ಟರೆ ಅವರ ಬಗ್ಗೆ ನನಗೇನು ಗೊತ್ತಿಲ್ಲ.. ಆದರು ಅವರ ಕೈತುತ್ತೆ ನಮ್ಮ ನಡುವೆ ಒಂದು ಮರೆಯಲಾಗದ ಬಂಧವನ್ನು ನಿರ್ಮಿಸಿತ್ತು…..ಕೈತುತ್ತಿಗೆ ಇರುವ ಶಕ್ತಿ ಅಂಥದ್ದು……

ಅಲ್ಲಿಂದ ಮನೆಗೆ ಬಂದ ಮೇಲೆ ಅಪ್ಪನ ಕೈಗೆ ತಿಂಡಿ ತಟ್ಟೆ ಕೊಟ್ಟು ಅವರ ಮುಂದೆ ಕುಳಿತೆ…ಒಂದೊಂದೇ ತುತ್ತು ನನ್ನ ಬಾಯೊಳಗೆ ಪ್ರವೇಶ ಪಡೀತಾ ಇತ್ತು……ಆಹಾ ಅದರ ರುಚಿ ವರ್ಣಿಸಲಸದಳ. ಅಮ್ಮನ ಕೈರುಚಿಯ ಜೊತೆ ಅಪ್ಪನ ಪ್ರೀತಿ ತುಂಬಿದ ಆ ಕೈತುತ್ತು ನಾಲಿಗೆ ಮೇಲೆ ಇಟ್ಟರೆ ಏನೋ ಒಂಥರಾ ಸಂತಸ…..ಇನ್ನೊಂದು ವಿಷಯ ಕೈತುತ್ತು ತಿನ್ನುವಾಗ ನಮಗೆ ಗೊತ್ತಿಲ್ಲದೆ ಸ್ವಲ್ಪ ಜಾಸ್ತಿ ತಿಂದಿರ್ತೀವಿ….. ಕೊನೆ ಕೊನೆಗೆ “ಇನ್ನೊಂದು ತುತ್ತು” ಅಂತ ಹೇಳ್ಕೊಂಡೇ ಅಪ್ಪ ಎಷ್ಟೊಂದು ತುತ್ತು ತಿನ್ನಿಸಿಬಿಟ್ಟಿದ್ದರು…… ಅವರು ಹಾಗೆ ಹೇಳಿದಾಗ ಬೇಡ ಅನ್ನೋಕೆ ಯಾಕೋ ನನಗೆ ಮನಸೇ ಬರಲಿಲ್ಲ…..ನಾನು ತಿಂದು ಬಿಟ್ಟೆ…..ಮತ್ತೆ ಇನ್ನೊಂದೆರಡು ದಿನ ಆದ ಮೇಲೆ ಅಪ್ಪಾನೆ ಕರೆದರು ಬಾ ತಿನ್ನಿಸ್ತೀನಿ ಅಂತ……ಮತ್ತೆ ಅವರ ಕೈಯಿಂದ ಒಂದೊಂದೇ ತುತ್ತು……..

ಇತೀಚೆಗೆ ಯಾವಾಗಲಾದ್ರು ನೀವು ಕೈತುತ್ತು ತಿಂದಿದ್ದೀರಾ??? ಇಲ್ಲ ಅಂದ್ರೆ ಈಗಲೇ ಅಡುಗೆ ಮನೆಗೆ ನೀವೇ ಹೋಗಿ ಮಾಡಿರೋ ಅಡುಗೆ ಬಡಿಸಿಕೊಂಡು ತಂದು ಆ ತಟ್ಟೆಯನ್ನ ನೀವು ತುಂಬ ಪ್ರೀತಿಸುವವರ ಕೈಗೆ ಕೊಟ್ಟು ಅವರ ಮುಂದೆ ಕುಳಿತುಕೊಳ್ಳಿ…… ಒಂದೊಂದು ತುತ್ತು ತಿನ್ನುವಾಗಲೂ ನಿಮಗೊಂದು ವಿಶೇಷ ಅನುಭವ ಆಗ್ಲಿಲ್ಲ ಅಂದ್ರೆ ಕೇಳಿ…… ನನಗಂತೂ ಎಷ್ಟೋ ವರ್ಷಗಳ ನಂತರ ಕೈತುತ್ತು ತಿನ್ನಿಸಿಕೊಂಡ ಆ ಕ್ಷಣ…… ನೆನಪಿಸಿಕೊಂಡರೆ ಕಣ್ಣು ತೇವವಾಗುತ್ತೆ….. ಅಲ್ಲ ಪ್ರೀತಿ ವ್ಯಕ್ತ ಪಡಿಸೋಕೆ ಇದಕ್ಕಿಂತ ಒಳ್ಳೆ ಮಾರ್ಗ ಬೇಕಾ?????

ಅದಕ್ಕೆ ಹೇಳ್ತಾ ಇದ್ದೀನಿ ನೀವು ಕೈತುತ್ತು ತಿಂದು ಒಂದು ವರ್ಷಕ್ಕಿಂತ ಜಾಸ್ತಿಯಾಗಿದ್ರೆ ದಯವಿಟ್ಟು ಹೋಗಿ ನೀವು ತುಂಬಾ ಪ್ರೀತಿಸುವವರ ಕೈಯಿಂದ ತಿನ್ನಿಸಿಕೊಳ್ಳಿ. ಅದರ ಹಿತ ಅನುಭವಿಸಿ….ಆಗ ಗೊತ್ತಾಗುತ್ತೆ ಕೈತುತ್ತಿನ ಗಮ್ಮತ್ತು….. ಸರಿ ಹೋಗಿ ಕೈತುತ್ತು ತಿಂತೀರಾ ತಾನೆ…….

Wednesday, July 16, 2008

ಚಂದಮಾಮ ಬಾರೋ

ರಾತ್ರಿ ಮಲಗಲೆಂದು ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದೆ
ಅಲ್ಲಿ ತೆರದ ಕಿಟಕಿಯಾಚೆ ನಿಂತಿದ್ದ ಒಬ್ಬ ಪೋರ
ನನ್ನಂಥ ಅನೇಕ ಹುಡುಗಿಯರ ನಿದ್ದೆ ಕೆಡಿಸಿದ ಚೋರ
ನನ್ನನ್ನೇ ದಿಟ್ಟಿಸುತ್ತಾ……..
ನಾಚಿಕೆಯಿಂದ ಹಾಗೆ ಮುಖವನ್ನು ಮುಚ್ಚಿಕೊಂಡೆ….
ಅವನ ಪ್ರತಿಕ್ರಿಯೆ ಏನಿತ್ತೋ ನಾ ಕಾಣೆ
ಯಾಕೋ ಏನೋ ಅವನು ನನ್ನವನೇ ಅಲ್ಲವೇ ನೋಡಿದರೆ ತಪ್ಪೇನು????
ಎಂದು ಮುಸುಕು ಸರಿಸಿ ಅವನನ್ನೇ ನಾನೂ ದಿಟ್ಟಿಸಿದೆ……
ಅದು ಏನಾಯ್ತೋ ಏನೋ ಅವನೇ ನಾಚಿಕೆಯಿಂದ ಮೋಡಗಳ ಮುಸುಕೆಳೆದುಕೊಂಡುಬಿಟ್ಟ……..

ಹೌದು ಕಣ್ರೀ ಮೊನ್ನೆ ನಾನು ಮಲಗಿದ್ದಾಗ ಕಿಟಕಿಯಿಂದ ಆ ಚಂದ್ರನನ್ನು ನೋಡಿದಾಗ ನನ್ನ ಮನಸಿಗನಿಸಿದ್ದೆ ಹೀಗೆ……

ವೈಜ್ಞಾನಿಕವಾಗಿ ಮಾತಾಡೋವಾಗ ಚಂದ್ರ ಒಂದು ಆಕಾಶಕಾಯ ಅಷ್ಟೆ……..ಆದ್ರೆ ಅದರೊಂದಿಗೆ ನಾವು ಒಂದು ರೀತಿಯ ಸಂಬಂಧ ಬೆಳೆಸಿಕೊಂಡುಬಿಟ್ಟಿದ್ದೀವಿ…… ಭೂಮಿನ ತಾಯಿ ಅಂತ ಪೂಜಿಸಿದರೆ ಚಂದ್ರನ್ನ ಪ್ರೀತಿಯಿಂದ ಮಾಮ ಅಂತ ಕರೀತೀವಿ ಅಲ್ವ……. ಅದೇನು ಮೋಡಿನೋ ಅದೇನೋ ಮಂತ್ರನೋ ಆ ಚಂದ್ರ ಒಂದು ನಿರ್ಜೀವ ವಸ್ತು ಅಂತ ನಂ ಮನಸು ಅಷ್ಟು ಸುಲಭವಾಗಿ ಒಪ್ಪಿಕೊಳ್ಳೊಲ್ಲ…….ಅದರೊಂದಿಗೆ ಒಂದು ಭಾವನಾತ್ಮಕ ಬಂಧವನ್ನು ಇಟ್ಟುಕೊಳ್ಳುವುದಕ್ಕೆ ಹಾತೊರೆಯುತ್ತೆ…… ಚಂದ್ರನನ್ನು ನೋಡಿದಾಗ ಒಂದು ರೀತಿಯ ಆನಂದವನ್ನು ಅನುಭವಿಸುತ್ತೆ…… ನಿಮ್ಮ ಬದುಕಲ್ಲೂ ಒಂದಿಲ್ಲೊಂದು ಬಾರಿ ಹಾಗೆ ಆಗಿರುತ್ತೆ ಅಲ್ವ…..

ಅಲ್ಲ ಯಾವ ತಾಯಿ ತಾನೆ ಚಂದ್ರನ್ನ ತೋರಿಸದೇ ತನ್ ಮಗುಗೆ ಊಟ ಮಾಡಿಸಿರುತ್ತಾಳೆ ಹೇಳಿ……ನಾವು ನೀವು ಎಲ್ಲ ಮಗುವಾಗಿದ್ದಾಗ ಅಮ್ಮನ ಕೈ ತುತ್ತಿನ ಸವಿಯ ಜೊತೆ ಚಂದ್ರನ ನೋಟದ ಸವಿಯನ್ನು ಅನುಭವಿಸಿದವರೇ ಅಲ್ಲವೇ……….ಅಲ್ಲಿ ನೋಡು ಚಂದ್ರ ಅಂತ ಚಂದ್ರನ್ನ ತೋರಿಸಿ ಚಂದ್ರನ್ನ ನೋಡುವಾಗ ಗೊತ್ತಿಲ್ಲದ ಹಾಗೆ ಬಾಯಿಗೆ ತುತ್ತಿಡುವ ತಾಯಿಯರೆಷ್ಟೋ…….ಅವರೆಲ್ಲ ಚಂದ್ರನಿಗೊಂದು ಥ್ಯಾಂಕ್ಸ್ ಹೇಳ್ಬೇಕು…….. ಯಾಕಂದ್ರೆ ಚಂದ್ರನೇ ಇರ್ಲಿಲ್ಲ ಆದ್ರೆ ಅವರು ಮಗುಗೆ ಊಟ ಮಾಡಿಸೋಕೆ ಎಷ್ಟು ಕಷ್ಟ ಪಡಬೇಕಿತ್ತು ಅಲ್ವ……

ಈ ಚಂದ್ರನ್ನ ನೋಡುತ್ತಾ ಊಟ ಮಾಡೋದು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಷ್ಟ……ಅದಕ್ಕೆ ಮೂನ್ ಲೈಟ್ ಡಿನ್ನರ್ ಅಂತ ಬೆಳದಿಂಗಳ ಊಟ ಮಾಡೋಕೆ ಇಷ್ಟ ಪಡೋದು….. ನಾವು ಒಂದು ಸಲ ಹಬ್ಬದ ದಿನ ಬೆಳದಿಂಗಳ ಊಟ ಮಾಡಿದ್ವಿ…..ಅದು ಒಂಥರಾ ಹೊಸ ಅನುಭವ………

ಕವಿಗಳಿಗೆ ಸಾಹಿತಿಗಳಿಗಂತೂ ಚಂದ್ರ ಅಂದ್ರೆ ತುಂಬ ಇಷ್ಟ ತಮ್ಮ ಅನೇಕ ಕವಿತೆಗಳಿಗೆ ರೂಪಕವಾಗಿ ಬಳಸಿರುತ್ತಾರೆ….. ಕುವೆಂಪು ಅವರು “ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು” ಅಂತ ಹಾಡಿದರೆ ಬೇಂದ್ರೆಯವರು “ ಬಿದಿಗಿ ಚಂದ್ರ ಚೋಗಡಿ ನಗಿ ಹೂ ಮಲ್ಲಿಗೆ ಮೂಡಿತ್ತ” ಅಂತಾರೆ……ಜನಪದ ಕವಿಗಳಂತೂ ಚಂದ್ರನ ಬಗ್ಗೆ ಅನೇಕ ಹಾಡುಗಳನ್ನು ಹಾಡುತ್ತಾರೆ……ಇನ್ನು ನಮ್ಮ ಸಿನಿಮಾ ಸಾಹಿತಿಗಳು ಈ ವಿಷಯದಲ್ಲಿ ಹಿಂದೆ ಇಲ್ಲ…..

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೋದ್ರೆ ಭಾದ್ರಪದ ಚೌತಿಯ ಚಂದ್ರನನ್ನು ನೋಡಬಾರದು ಅಂತಾರೆ…….ರಾತ್ರಿ ಹೊತ್ತಲ್ಲಿ ನಕ್ಷತ್ರಗಳ ಮಧ್ಯೆ ಚಕ್ರಾಧಿಪತಿಯಂತೆ ರಾರಾಜಿಸುವ ಆ ಚಂದ್ರನಿಗೆ ಅದೆಷ್ಟು ಧೈರ್ಯ ಅಲ್ವ ನಮ್ಮ ಗಣೇಶನನ್ನೇ ಆಡಿಕೊಂಡು ನಕ್ಕುಬಿಟ್ಟ…….ಅದಕ್ಕೆ ನಂ ಗಣುಮಾಮ ಅವನಿಗೆ ಶಾಪ ಕೊಟ್ಟು ಅವನ ಕೊಬ್ಬನ್ನು ಕಡಿಮೆ ಮಾಡಿದ….. ಅಲ್ವೇನ್ರಿ……

ಅದೇ ನಮ್ಮ ಊರ ಕಡೆ ಯುಗಾದಿಯ ಮರುದಿನದ ಚಂದ್ರನನ್ನು ನೋಡಿ ಆ ವರ್ಷದ ಆಯ-ವ್ಯಯ…ಮಳೆ-ಬೆಳೆ ಹೇಗಿರುತ್ತೆ ಅಂತ ಹೇಳ್ತಾರೆ……ಅದರಲ್ಲಿ ಎಷ್ಟು ನಿಜನೋ ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ ಆದ್ರೆ ಇದೆಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ ಅಲ್ವ…..ಅದಕ್ಕೆ ಅವರ ಮನಸಿನ ನಂಬಿಕೆಯನ್ನು ನಾವು ಪ್ರಶ್ನಿಸೋದು ಬೇಡ ಅಲ್ವ….

ಚಂದ್ರನ ಬಗ್ಗೆ ಯಾರು ಏನೇ ಹೇಳಲಿ ಈ ಭೂಮಿ ಮೇಲಿಂದ ನೋಡೋಕೆ ಅವನು ಫಳ ಫಳ ಹೊಳೆಯುವ ಬೆಳ್ಳಿ ತಟ್ಟೆಯಂತೆ ಕಾಣುತ್ತಾನೆ…..ಆ ತಟ್ಟೆಯಲ್ಲಿ ಕಾಣೋ ಅನೇಕ ಉಬ್ಬು ತಗ್ಗುಗಳು….ಅವುಗಳ ಮಧ್ಯೆಯೂ ನಮ್ಮನ್ನು ಆಕರ್ಷಿಸುವ ಆ ಸೌಂದರ್ಯ……ಆಹಾ…..ಪ್ರಕೃತಿಯ ಸೊಬಗನ್ನು ಅನುಭವಿಸಬೇಕು ಅನ್ನೋ ಆಸೆ ಇದ್ದರೆ ನಿಜವಾಗ್ಲೂ ಆ ನೋಟ ನಮ್ಮ ಮನಸೂರೆಗೊಂಡುಬಿಡುತ್ತೆ ಅಲ್ವ…….

ಆದ್ರೆ ನಾವೆಲ್ಲರೂ ವಾರ ವಾರ ರಜ ತಗೊಂಡ್ರೆ ಈ ಚಂದ್ರಂದು ಇನ್ನೊಂದು ಥರ ರಜ……. ಮೊದ್ಲು ಪೂರ್ತಿ ಕಂಡ್ರೆ ದಿನ ದಿನ ಸ್ವಲ್ಪ ಸ್ವಲ್ಪ ಭಾಗ ರಜೆ ತಗೊಳ್ಳುತ್ತ ಹೋಗುತ್ತೆ……. ಕೊನೆಗೆ ಒಂದು ದಿನ ಪೂರ್ತಿ ರಜ…….ಆ ದಿನ ಆಕಾಶ ನೋಡಿದಾಗ ಚಂದ್ರಿನಿಲ್ಲದ ಬೇಸರ ಕಾಡಿದರೂ…… ಅಲ್ಲಲ್ಲಿ ಮಿನುಗುವ ನಕ್ಷತ್ರಗಳ ಸೊಬಗನ್ನು ಆಸ್ವಾದಿಸೋ ಅವಕಾಶ ಸಿಗುತ್ತೆ…… ಆಮೇಲೆ ಮತ್ತೆ ಸ್ವಲ್ಪ ಭಾಗ ಮತ್ತೆ ಪ್ರತ್ಯಕ್ಷ ಆಗಿ ಅದು ಹೆಚ್ಚುತ್ತಾ ಹೋಗಿ ಕೊನೆಗೆ ಒಂದು ತಿಂಗಳೊಳಗೆ ಪೂರ್ಣ ಚಂದ್ರನ ದರ್ಶನ ಭಾಗ್ಯ ನಮಗೆ ದೊರೆಯುತ್ತೆ…….

ಇದನೆಲ್ಲ ನೋಡಿ ಅದರಿಂದ ಸಿಗುವ ಆನಂದವನ್ನು ನಮ್ಮ ಮನಸಿನ ಮೂಲೆಯಲ್ಲಿ ಅಚ್ಚಳಿಯದ ಹಾಗೆ ಕಾಪಾಡಿಕೊಂಡು ಪ್ರತಿ ದಿನ ಆ ಚಂದ್ರನಿಗೆ….. "ಚಂದಮಾಮ ಬಾರೋ" ಅಂತ ಹಾಡಿ ಕರೆಯೋಣವಾ?????

Tuesday, July 15, 2008

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ನಂ ಮನಸಲ್ಲಿ ಮೂಡೋ ಎಲ್ಲ ಭಾವನೆಗಳಿಗೂ ಈ ಪ್ರೀತಿನೆ ಕಾರಣ ಅಲ್ವ……..ಅನುಕಂಪ, ವಾತ್ಸಲ್ಯ, ಮಮತೆ ಏನೇ ಆಗಿರಬಹುದು ಅದಕ್ಕೆಲ್ಲ ಪ್ರೀತಿನೆ ಕಾರಣ……… ಇನ್ನೊಂದು ವಿಷಯ ಹೇಳಲಾ???? ನನ್ ಪ್ರಕಾರ ದ್ವೇಷದ ಹಿಂದೇನು ಪ್ರೀತಿ ಇದ್ದೇ ಇರುತ್ತೆ…….. ಒಂದು ಕ್ಷಣ ಕಣ್ಣು ಮುಚ್ಚಿ ಯೋಚನೆ ಮಾಡ್ರಿ………… ಈ ಜಗತ್ತಲ್ಲಿ ಪ್ರೀತಿ ಅನೋದೆ ಇರ್ಲಿಲ್ಲ ಅಂದ್ರೆ ಏನಾಗುತ್ತಿತ್ತು????

ನಾವು ಹುಟ್ಟಿದಾಗಿನಿಂದ ನಂ ಜೊತೇನೆ ಇದ್ದು ನಮ್ಮನ್ನ ತುಂಬ ತುಂಬ ತುಂಬ ಪ್ರೀತಿ ಮಾಡೋ ತಂದೆ ತಾಯಿ ನಮಗೋಸ್ಕರ ಎಷ್ಟು ಕಷ್ಟ ಪಡ್ತಾ ಇದ್ದಾರೆ ಅಲ್ವ……ತಮ್ಮ ನೋವನ್ನೆಲ್ಲ ಮರೆತು ನಮ್ಮೆದುರು ನಗ್ತಾ ಇರ್ತಾರೆ…… ಇದೆಲ್ಲ ಅವರು ನಂ ಮೇಲಿರೋ ಪ್ರೀತಿಯಿಂದಾನೆ ಮಾಡೋದು…. ಅಕಸ್ಮಾತ್ ಅವರಿಗೆ ನಂ ಮೇಲೆ ಪ್ರೀತಿ ಇಲ್ಲದಿದ್ದರೆ ನಾವು ಈಗ ಹೇಗಿದ್ದೇವೋ ಹಾಗೆ ಇರೋಕೆ ಅಗ್ತಿತ್ತಾ???..... ಜಗತ್ತೇ ನಮ್ಮ ವಿರುದ್ಧ ನಿಂತರೂ ನಾನು ನಿನ್ ಜೊತೆಗಿರ್ತೀನಿ ಅನ್ನೋ ಆ ಮಾತು……ಅಳುವಾಗ ತಬ್ಬಿ ಸಂತೈಸೋ ಆ ತೋಳುಗಳು…..ಹಸಿದಾಗ ತುತ್ತಿಟ್ಟು ತಿನ್ನಿಸೋ ಆ ಕೈಗಳು…..ಸುಸ್ತಾದಾಗ ಮಲಗೋಕೆ ಜಾಗ ಕೊಡೊ ಆ ಮಡಿಲು………ಇವೆಲ್ಲ ಇಲ್ಲ ಅಂದ್ರೆ……ಬೇಡ ಬೇಡ ಅದರ ಬಗ್ಗೆ ಮಾತೇ ಬೇಡ…….

ನಾವು ಪ್ರೈಮರಿ ಸ್ಕೂಲಿಂದ ಕಲಿತಾ ಇರೋದು ಮನುಷ್ಯ ಸಂಘ ಜೀವಿ ಅವನು ಯಾವಾಗಲು ಬೇರೆಯವರನ್ನು ಅವಲಂಬಿಸಿಯೇ ಇರುತ್ತಾನೆ ಅಂತ……. ಅಲ್ಲ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ ಇರ್ಲಿಲ್ಲ ಅಂದ್ರೆ ನಾವು ಸಮಾಜ ಶಾಸ್ತ್ರ ಓದೋದೇ ಬೇಕಾಗ್ತಾ ಇರ್ಲಿಲ್ಲ…… ಯಾಕಂದ್ರೆ ಆಗ ಸಮಾಜ ಅನ್ನೋ ವಿಚಾರಾನೆ ನಂ ತಲೆಗೆ ಹೊಳೀತಾ ಇರ್ಲಿಲ್ಲ ಅಲ್ವ………

ಯಾರಿಗಾದರು ನೋವಾದಾಗ ಮಿಡಿಯೋ ಮನಸು….ಅಯ್ಯೋ ಪಾಪ ಹಾಗಾಗಬಾರದಿತ್ತು ಅಂತ ಮರುಕ ಪಡೋ ಮನಸು……..ಛೆ ಯಾಕಾದ್ರೂ ದೇವ್ರು ಇಷ್ಟು ಕ್ರೂರಿ ಆಗ್ತಾನೋ ಅಂತ ಶಪಿಸೋ ಮನಸು….ಇವೆಲ್ಲ ನೀವು ಅನುಕಂಪ ಅಂತ ಅನ್ನಬಹುದು ಆದ್ರೆ ನಾನು ಇದನ್ನೂ ಪ್ರೀತಿ ಅಂತಾನೆ ಕರೀತೀನಿ…..ಪ್ರೀತಿ ಇಲ್ಲ ಅಂದ್ರೆ ನಂ ಮನಸಿಗೆ ಇಂಥ ಯೋಚನೆಗಳೇ ಬರೋಲ್ಲ ಅಲ್ವ…..

ಜೊತೆಗೆ ಇಲ್ಲದೆ ಇದ್ರೂ ಸದಾ ನಮ್ಮ ಬಗ್ಗೆನೇ ಕಾಳಜಿ ವಹಿಸೋ ಅಕ್ಕ……ಸದಾ ಒಂದಿಲ್ಲೊಂದು ವಿಷಯಕ್ಕೆ ಜಗಳ ಆಡಿದರು ಅಷ್ಟೆ ಗೌರವಾದರಗಳಿರೋ ತಮ್ಮ……… ವಾತ್ಸಲ್ಯ ಭರಿತ ಮಾತುಗಳಿಂದ ಸದಾ “ಹುಷಾರು” ಅಂತ ಹೇಳೋ ತಾತ ಅಜ್ಜಿ …….ನಗುನಗುತ್ತ ಮಾತಾಡಿಸೋ ಚಿಕ್ಕಪ್ಪ ಚಿಕ್ಕಮ್ಮಂದಿರು…….. “ಅಕ್ಕ ಅಕ್ಕ” ಅಂತ ಜೊತೆಗೆ ಓಡಾಡೋ ಅವರ ಮಕ್ಕಳು…....ದೊಡ್ಡಪ್ಪ, ದೊಡ್ಡಮ್ಮ, ಸೋದರ ಮಾವ, ಅತ್ತೆ, ಅವರ ಮಕ್ಕಳು, ಅಕ್ಕನ ಮಕ್ಕಳು, ಅಣ್ಣಂದಿರು…… ಇನ್ನು ಹೇಳ್ತಾ ಹೋದ್ರೆ ಇಂಥ ನೂರೆಂಟು ಸಂಬಂಧಗಳು …… ಪ್ರೀತಿನೇ ಇಲ್ಲ ಅಂದ್ರೆ ಇವರೆಲ್ಲ ನಮ್ಮವರು ಅಂತಿದ್ವಾ? ಅಷ್ಟೆಲ್ಲಾ ಯಾಕೆ ಇಂಥ ಸಂಬಂಧಗಳೇ ಇರುತ್ತಿರಲಿಲ್ಲ ಅಲ್ವೇನ್ರಿ……. ಆ ಸಂಬಂಧಗಳೇ ಇಲ್ಲದ ಬದುಕು ಹೇಗಿರುತ್ತೆ????? ಊಹೆ ಮಾಡೋಕೂ ಸಾಧ್ಯ ಇಲ್ಲ ಅಲ್ವ…….

ಅಕಸ್ಮಾತಾಗಿ ನಮ್ಮ ಬದುಕಲ್ಲಿ ಬಂದು ನಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಅನುಭವಿಸುವಲ್ಲಿ ಜೊತೆಗಾರರಾಗಿದ್ದು ನಮ್ಮ ಮನಸಿಗೆ ಸಂತೋಷವಾದಾಗ ಅದನ್ನು ಹಂಚಿಕೊಂಡು ದುಃಖವಾದಾಗ ನಮ್ಮನ್ನು ಸಂತೈಸೋ ಸ್ನೇಹಿತರಿಗೆ ನಮ್ಮ ಮೇಲೆ ಪ್ರೀತಿನೇ ಇರ್ಲಿಲ್ಲ ಅಂದ್ರೆ…… ಈ ಜಗತ್ತಲ್ಲೇ ಒಂದು ಅತ್ಯುತ್ತಮ ಬಂಧ ಅಂತ ನಾವು ಕರೆಯೋ ಸ್ನೇಹಕ್ಕೆ ಆಗ ಏನು ಬೆಲೆ ಇರ್ತಿತ್ತು ನೀವೇ ಹೇಳ್ರಿ……. ಸ್ನೇಹಿತರೂ ಒಬ್ಬರನ್ನೊಬ್ಬರು ಪ್ರೀತಿಸದೆ ಇದ್ರೆ ಮನಸುಗಳ ನಡುವೆ ಸೇತುವೆ ಕಟ್ಟೋಕೆ ಆಗುತ್ತಾ ಹೇಳಿ………

ನಮಗೆ ಪರಿಚಿತರಲ್ಲದ ಹಲವರು ನಮಗೆ ಎಷ್ಟೋ ಸಂದರ್ಭದಲ್ಲಿ ಸಹಾಯ ಮಾಡಿರ್ತಾರೆ…. ಅವರನ್ನೆಲ್ಲ ನಾವು ನೆನಪಲ್ಲಿಟ್ಟುಕೊಳ್ಳದೆ ಇರಬಹುದು ಆದ್ರೆ ಅವರು ನಮಗೆ ಸಹಾಯ ಮಾಡಿದ್ದು ನಂ ಮೇಲಿನ ಪ್ರೀತಿಯಿಂದಾನೆ………ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲದೆ ಹೋಗಿದ್ರೆ ನಾವು ಅವರಿಂದ ಯಾವುದೇ ಸಹಾಯ ಅಪೇಕ್ಷಿಸೋದಿಕ್ಕೆ ಆಗೋಲ್ಲ………

ಇಷ್ಟು ಹೊತ್ತು ಬೇರೆಯವರಿಗೆ ನಮ್ಮ ಬಗ್ಗೆ ಪ್ರೀತಿ ಇಲ್ಲದೆ ಹೋದ್ರೆ ಏನಾಗುತ್ತಿತ್ತು ಅಂತ ಹೇಳಿದ್ದಾಯ್ತು ......ನಾವೇ ಯಾರನ್ನು ಪ್ರೀತಿಸಲಿಲ್ಲ ಅಂದ್ರೆ…..ನಮ್ಮ ಮನಸಲ್ಲಿ ಯಾವುದೇ ಭಾವನೆಗಳೇ ಇರೋಲ್ಲ ಅಲ್ವ……ಆಗ ನಾನು ತುಂಬ ಇಷ್ಟ ಪಡೋ ಮನಸನ್ನು ದ್ವೇಷಿಸುತ್ತಿದ್ದೆನೇನೋ………ಓಹ್……ಆಗ ದ್ವೇಷ ಅನ್ನೋದು ತಾನೆ ಹೇಗೆ ಬರ್ತಿತ್ತು ಯಾಕಂದ್ರೆ ನಾನು ಈಗಾಗಲೇ ಹೇಳಿರೋ ಹಾಗೆ ಪ್ರೀತಿ ಇದ್ರೇನೆ ದ್ವೇಷನು ಇರೋದು ಅಲ್ವ………

ಅದಕ್ಕೆ ಈ ಭೂಮಿ ಮೇಲೆ ಎಲ್ಲಿವರೆಗೂ ಮನುಷ್ಯರಿರುತ್ತರೋ ಅಲ್ಲಿವರೆಗೆ ಪ್ರೀತಿನೂ ಇರುತ್ತೆ……. ಯಾಕಂದ್ರೆ ಮನುಷ್ಯ ಒಂದು ಕ್ಷಣ ಜೀವಿಸೋಕು ಅವನಿಗೆ ಪ್ರೀತಿ ಬೇಕು……..ತಾಯಿ ತನ್ನ ಮಗುನ ಪ್ರೀತಿಸದೆ ಇದ್ರೆ ಆ ಮಗು ಈ ಜಗತ್ತಿಗೆ ಬರೋಕೆ ಆಗೋಲ್ಲ. ಹಾಗಾಗಿ ಈ ಭೂಮಿ ಮೇಲೆ ಪ್ರೀತಿ ಇದ್ದೇ ಇರುತ್ತೆ…….ಪ್ರೀತಿ ಯಾಕೆ ಭೂಮಿ ಮೇಲಿದೆ ಅಂತ ಪ್ರಶ್ನಿಸಿ ನಮ್ಮ ಸಮಯ ಹಾಳು ಮಾಡಿಕೊಳ್ಳೋದಕ್ಕಿಂತ ಅದರಿಂದ ನಮಗಾಗುಗುವ ಆ ವರ್ಣನಾತೀತ ಅನುಭವವನ್ನು ಅನುಭವಿಸುವುದೇ ಮೇಲು ಅಲ್ವ……..