Tuesday, March 30, 2010

ಇರಲಿ ಈ ಬಂಧ ಶಾಶ್ವತ

ಕಣ್ಣ ತುಂಬ ನೂರು ಕನಸು
ಮನವ ಕಾಡೋ ನೂರು ನೆನಪು
ಹೊತ್ತು ಹೊಸತು ಹೆಜ್ಜೆಯಿಡಲು
ನಿಮ್ಮ ಭೇಟಿಯಾಯಿತು

ಮೊದಲ ದಿನವೇ ಮಾತನಾಡಿ
ಇಷ್ಟಾನಿಷ್ಟ ತಿಳಿದುಕೊಂಡು
ಕಷ್ಟ ಸುಖವ ಹಂಚಿಕೊಳಲು
ಸ್ನೇಹ ಕುದುರಿತು

ಹಲವು ವಿಷಯಗಳನು ಕೆದಕಿ
ನೆನಪುಗಳನು ಮೆಲುಕು ಹಾಕಿ
ನಾವು ಜೊತೆಯಲಿರಲು ಸಮಯ
ಲೆಕ್ಕ ತಪ್ಪಿತು

ಬಿರುಕು ಎಲ್ಲೂ ಮೂಡಲಿಲ್ಲ
ಜಗಳಕಿಲ್ಲಿ ಜಾಗವಿಲ್ಲ
ಮನವ ಅರಿತ ಮೇಲೆ ವಿರಸ
ಕಾಣದಾಯಿತು

ನಾನು ನಡೆವ ಹಾದಿಯಲ್ಲಿ
ಜೊತೆಗೆ ನೀವು ಹೆಜ್ಜೆಯಿಡಲು
ಅಕ್ಕಪಕ್ಕ ಸುತ್ತಮುತ್ತ
ಹಸಿರೆ ತುಂಬಿದೆ

ನನ್ನ ನಿಮ್ಮ ನಡುವ ಬಂಧ
ಹೇಳಲಿಕ್ಕೆ ಪದಗಳಿಲ್ಲ
ಮಾತು ಕೂಡ ಸೋಲನೊಪ್ಪಿ
ಮೌನವಾಗಿದೆ

ಯಾರ ಪುಣ್ಯಫಲವೋ
ನಮ್ಮ ಬಂಧನ
ಎಂದೂ ಹೀಗೆ ಇರಲಿ ನಮ್ಮ
ಭಾವ ಸ್ಪಂದನ

Thursday, March 4, 2010

ಇಂದಿನ ಪಯಣ

ಇವತ್ತು ಬಸಲ್ಲಿ ಕಾಲೇಜಿಗೆ ಹೋಗ್ತೀನಿ ಅಂತ ಹೇಳಿ ಮನೆ ಬಿಟ್ಟಾಗ ೧೦:೧೫. ೧೧:೩೦ಕ್ಕೆ microcontrollers ಪರೀಕ್ಷೆ ಶುರು ಆಗೋದಿತ್ತು. ನಮ್ಮ ಮನೆಯಿಂದ ಸುಮಾರು ಒಂದುವರೆ ಕಿ.ಮೀ. ದೂರವಿರುವ ವಿಜಯನಗರ ಬಸ್ ನಿಲ್ದಾಣಕ್ಕೆ ನಡೆಯುತ್ತಾ ಹೊರಟೆ. ವಿಜಯನಗರ ಪಾದಚಾರಿ ಸುರಂಗ ಮಾರ್ಗದಲ್ಲಿ ಮೊದಲ ಸಲ ನಡೆದು ನಿಲ್ದಾಣ ತಲುಪಿದಾಗ ೧೦:೨೮. ಸರಿ ಬಸ್ ಗೋಸ್ಕರ ಕಾಯ್ತಾ ಇದ್ದೆ. ನಮ್ಮ ಕಾಲೇಜಿನ ಕೆಲವು ಹುಡುಗಿಯರು ಅದೇ ನಿಲ್ದಾಣದಲ್ಲಿ ಕಾಯುತ್ತಿದ್ದರು. ೧೦:೪೦ ಆದರೂ ನಮ್ಮ ಕಾಲೇಜು ಮಾರ್ಗದಲ್ಲಿ ಹೋಗುವ ಯಾವ ಬಸ್ ಕೂಡ ಬರಲಿಲ್ಲ. ಅದಕ್ಕೂ ಮುಂಚೆ ಬಂದಿದ್ದ ೪೦೧ R ಅಲ್ಲಿ ನಾಯಂಡಹಳ್ಳಿವರೆಗೆ ಹೋಗಿ ಅಲ್ಲಿಂದ ಇನ್ನೊಂದು ಬಸ್ ಅಲ್ಲಿ ಹೋಗಬಹುದಿತ್ತು ಅಂತ ಅನ್ನಿಸಿದ್ರೂ ಈಗ ನಾನು ಈ ಥರ ಯೋಚ್ನೆ ಮಾಡಿದ್ರೆ ಹೋಗಿರೋ ಬಸ್ ವಾಪಸ್ ಬರೊಲ್ಲ ಅಲ್ವಾ ಕಾಯೋಣ ಅಂತ ಅಲ್ಲೆ ನಿಲ್ದಾಣದಲ್ಲಿ ನಿಂತೆ.

ಇನ್ನೊಂದು ೫ ನಿಮಿಷವಾದ ಮೇಲೆ ಅಲ್ಲಿ ಕಾಯುತ್ತಿದ್ದ ನಮ್ ಕಾಲೇಜಿನ ೩ ಹುಡುಗಿಯರು ಆಟೋದಲ್ಲಿ ಹೊರಟು ಹೋದರು. ಅಯ್ಯೊ ನಾನೇನು ಮಾಡಲಿ... ಇನ್ನೇನು ಮಾಡೋದು ಇನ್ನೊಂದ್ ಐದು ನಿಮಿಷ ನೋಡೋದು ಬಸ್ ಸಿಗಲಿಲ್ಲ ಅಂದ್ರೆ ಆಟೋದಲ್ಲೇ ಹೋಗೋದು ಅಂತ ಅಂದುಕೊಳ್ತಾ ಇರೋವಾಗ್ಲೇ ಬಂತು ಬನಶಂಕರಿಗೆ ಹೋಗೋ ಪುಷ್ಪಕ್ ಪ್ಲಸ್... ಹತ್ತಿ ಡ್ರೈವರ್ ಹಿಂದಿನ ಸೀಟಲ್ಲೇ ಕುಳಿತೆ. ಇದೇ ಮೊದಲೇನಾಗಿರಲಿಲ್ಲ. ಆದರೂ ನಾನು ಮುಂಚೆ ಅಲ್ಲಿ ಕುಳಿತಾಗ ಗಮನಿಸುತ್ತಿದ್ದ ವಿಷಯ ಮತ್ತು ಇವತ್ತು ಗಮನಿಸಿದ ವಿಷಯ ಬೇರೆಯವು... ಮುಂಚೆ ಅಲ್ಲಿ ಕುಳಿತಾಗ ಬಸ್ ಗೆ ಹತ್ತುವವರು ಇಳಿಯುವವರು ಕಿಟಕಿಯಿಂದ ಕಾಣುವ ಸುತ್ತ ಮುತ್ತ ಇರುವ ಅಂಗಡಿಗಳ ಪೋಸ್ಟರ್ ಗಳೇ ಕಣ್ಣಿಗೆ ಬೀಳ್ತಾ ಇದ್ವು. ಇವತ್ತು ಅದರ ಜೊತೆಗೆ ಡ್ರೈವರ್ ಗಾಡಿ ಹೇಗೆ ಓಡಿಸ್ತಾರೆ ಅನ್ನೋದನ್ನು ಗಮನಿಸ್ತಾ ಇದ್ದೆ.... ಗಾಡಿ ವೇಗಕ್ಕೆ ತಕ್ಕಂತೆ ಗೇರ್ ಬದಲಾಯಿಸುತ್ತಿದ್ದುದು, ಸ್ಪೀಡೋಮೀಟರ್ ಅಲ್ಲಿ ಕಾಣುವ ಗಾಡಿಯ ವೇಗ ಎಲ್ಲವನ್ನು ಗಮನಿಸುತ್ತಿದ್ದೆ.ನಮ್ಮ ಆಭಿರುಚಿ ಆಸಕ್ತಿಗಳು ಬದಲಾದಂತೆ ನಮ್ಮ ಕಣ್ಣಿಗೆ ಕಾಣುವ ವಿಷಯಗಳು ಬದಲಾಗುತ್ತವೆ ಅಲ್ವಾ... ಹೀಗೆ ಅತ್ತಿಗುಪ್ಪೆ ಬಳಿ ಬಂದಾಗ ಎಂದಿನಂತೆ ಅಲ್ಲಿ ಟ್ರಾಫಿಕ್ ಜಾಮ್.

ಗಡಿಯಾರ ಗಂಟೆ ೧೧:೦೦ ತೋರಿಸ್ತಾ ಇತ್ತು. ಅಯ್ಯೊ ಈ ಟ್ರಾಫಿಕ್ ಹೀಗೆ ಇದ್ರೆ ನಾನು ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗ್ತೀನಾ... ಪರೀಕ್ಷೆ ಸಮಯದಲ್ಲಿ ಬಸ್ಸಲ್ಲಿ ಹೋಗುವ ನಿರ್ಧಾರ ತಗೊಂಡಿದ್ದು ತಪ್ಪಾಯ್ತು ಅಂತ ಒಂದು ಮನಸ್ಸು ಹೇಳ್ತಿತ್ತು. ಆದ್ರೆ ಇನ್ನೊಂದು ಮನಸ್ಸು ೮:೧೫ಕ್ಕೆ ಕಾಲೇಜಿಗೆ ಹೋಗೋದಿಕ್ಕೆ ನೀನು ಸ್ಕೂಟಿಯಲ್ಲಿ ಬರ್ತಾ ಇದ್ದಾಗ ಇದೇ ಜಂಕ್ಷನ್ ಅಲ್ಲಿ ೮:೦೦ ಗಂಟೆಗೆ ಇದ್ರು ೮:೧೦ ಕ್ಕೆಲ್ಲಾ ಕಾಲೇಜ್ ತಲುಪ್ತಾ ಇರ್ಲಿಲ್ವಾ ಅಂತಿತ್ತು. ಹೇಗೋ ಅದೇ ಟ್ರಾಫಿಕ್ ಅಲ್ಲೇ ದೀಪಾಂಜಲಿನಗರದ ಬಳಿಯಿರುವ ಸರ್ಕಲ್ ಗೆ ಬರುವಷ್ಟರಲ್ಲಿ ೧೧:೧೦ ಆಗಿತ್ತು. ಇನ್ನು ಮೈಸೂರು ರಸ್ತೆಯಲ್ಲಿ ಯಾವುದೇ ಬ್ಲಾಕ್ ಇರದಿರಲಿ ಅಂತ ದೇವರಲ್ಲಿ ಬೇಡಿಕೊಂಡೆ.

ಇನ್ನು ಮುಂದೆ ಎಲ್ಲಾ ಸುಸೂತ್ರವಾಗಿತ್ತು. ಎಲ್ಲೂ ಜಾಮ್ ಆಗದೇ ಪಿ.ಇ.ಎಸ್. ಕಾಲೇಜಿನ ನಿಲ್ದಾಣದಲ್ಲಿಳಿದಾಗ ೧೧:೧೮. ಹಾಗೆ ರಸ್ತೆ ದಾಟಿ ಬಂದಾಗ ದಾರಿಯಲ್ಲಿ ಎದುರುಗೊಂಡ ಜೂನಿಯರ್ಸ್ ಸಹನಾ ಮತ್ತೆ ನವೀನ್ ಜೊತೆ ಮಾತಾಡ್ತಾ ಇದ್ದಾಗ ಪರೀಕ್ಷೆಯ ಮೊದಲ ಬೆಲ್ ಹೊಡೆಯಿತು.ಸರಿ ಅವರಿಗೆ ಪರೀಕ್ಷೆಗೆ "ಆಲ್ ದಿ ಬೆಸ್ಟ್" ಹೇಳಿ ನನ್ನ ತರಗತಿಗೆ ಓಡಿದೆ. ಸರಿಯಾದ ಸಮಯಕ್ಕೆ ಕಾಲೇಜ್ ಸೇರಿ ಪರೀಕ್ಷೆ ಬರೆದೆ.

ವಾಪಸ್ ಬರುವಾಗ ನಿಲ್ದಾಣಕ್ಕೆ ಬಂದ ಐದು ನಿಮಿಷಗಳೊಳಗೆ ೫೦೦ ಕೆ ಮಾರ್ಕೊಪೋಲೋ ಬಸ್ ಹತ್ತಿದೆ. ಸುಮಾರು ೧:೪೦ ಕ್ಕೆಲ್ಲಾ ವಿಜಯನಗರ ತಲುಪಿದೆ. ಅಲ್ಲಿಂದ ಮತ್ತೆ ಮನೆ ಕಡೆ ನಡಿಗೆ. ಮನೆಗೆ ಬಂದ ತಕ್ಷಣ ಅಪ್ಪ ಕೇಳಿದ್ರು ಹೇಗಿತ್ತು ಬಸಲ್ಲಿ ಹೋದ ಅನುಭವ ಅಂತ. ನಾನು ಚೆನ್ನಾಗಿತ್ತು ಅಂದೆ. ಅಮ್ಮ "ಹೂಂ... ಬಿಸಿಲಲ್ಲಿ ನಡೆದು ಬಂದಿದ್ದೀಯಾ..,ಕೆನ್ನೆಯೆಲ್ಲಾ ಹೇಗೆ ಕೆಂಪಗಾಗಿದೆ ನೋಡ್ಕೋ. ನೀನು ಹೀಗೆ ಒಂದು ತಿಂಗಳು ಈ ಬೇಸಿಗೆಯಲ್ಲಿ ಬಸಲ್ಲಿ ಕಾಲೇಜಿಗೆ ಹೋಗಿ ಬಂದ್ರೆ ನೋಡೋಕೆ ಆಗೊಲ್ಲ ಹಾಗಾಗ್ತೀಯಾ" ಅಂದ್ರು. ಏನೇ ಅಂದ್ರೂ ಇವತ್ತಿನ ಪಯಣ ಮಾತ್ರ ಚೆನ್ನಾಗಿತ್ತು.

ಅಂದ ಹಾಗೆ ಪಿ.ಇ.ಎಸ್.ಐ.ಟಿ. ಸೇರಿದ ಮೇಲೆ ಇದು ಮೂರನೇ ಬಾರಿ ನಾನು ಬಸಲ್ಲಿ ಕಾಲೇಜಿಗೆ ಹೋಗಿದ್ದು :)