Thursday, December 31, 2009
೨೦೦೯ ಒಂದು ಸುತ್ತು
ತುಂಬಾ ಖುಷಿಯಾದ ದಿನ - ನಾನು ಎಡೆಯೂರು ಮಾರ್ಗವಾಗಿ ತಿಪಟೂರು ತಾಲೂಕಿನಲ್ಲಿರುವ ನಮ್ಮ ಮನೆದೇವರ ದೇವಸ್ಥಾನಕ್ಕೆ ಸ್ವತಂತ್ರವಾಗಿ ಕಾರ್ ಓಡಿಸಿಕೊಂಡು ಹೋಗಿದ್ದು. ಅವತ್ತು ಒಟ್ಟು ೨೮೪ ಕಿ.ಮೀ. ಕ್ರಮಿಸಿದ್ವಿ.
ತುಂಬಾ ಬೇಸರ ತಂದ ಮಾತು - ಕಾರ್ ಓಡಿಸೋದು ಹೇಳಿಕೊಡುತ್ತಿದ್ದಾಗ ಅಪ್ಪ "ಈ ಜನ್ಮದಲ್ಲಿ ನೀನು ಕಾರ್ ಓಡಿಸೋದು ಕಲಿಯೊಲ್ಲ ಬಿಡು" ಅಂದಿದ್ದು
ಸಂತೋಷ ತಂದ ಮಾತು - ಅಪ್ಪ "ನೀನು ನಮ್ಮ ಮನೆಯ ಕಲಶ" ಎಂದು ಹೇಳಿದ್ದು
ಮರೆಯಲಾರದ ದಿನ -ನನ್ನಕ್ಕನ ನಿಶ್ಚಿತಾರ್ಥದ ದಿನ/ ನನ್ನ ಸ್ನೇಹಿತೆಯ ಹುಟ್ಟುಹಬ್ಬದ ಜೊತೆ ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದ ದಿನ
ಸಂತಸದ ಒಡನಾಟ - ಸಂಪದದ್ದು
ತುಂಬಾ ಬೇಸರವಾದ ಕ್ಷಣ -external evaluator ನನ್ ಸೆಮಿನಾರ್ ಕೇಳಲು ಆಸಕ್ತಿಯಿಲ್ಲ ಎಂದಾಗ
ತುಂಬಾ ನೋವಾಗಿದ್ದು - ಸಹಪಾಠಿಗಳು ಮೈಸೂರಿಗೆ ಪ್ರವಾಸಕ್ಕೆಂದು ಹೋದಾಗ ಅವರ ಜೊತೆ ನಾನು ಹೋಗಲಾಗದಿದ್ದಾಗ
ಈ ವರ್ಷ ಹೆಚ್ಚು ಬಾರಿ ಕೇಳಿದ compliment - ನಿಮ್ಮ ನಗು ಚೆನ್ನಾಗಿದೆ... ಇದನ್ನಂತೂ ಕೇಳಿ ಕೇಳಿ ನಂಗೆ ಬೇಜಾರಾಗಿ ಹೋಗಿದೆ....
ಈ ವರ್ಷ ಮಾಡಿದ ಪ್ರಮುಖ ಕೆಲಸ - ೪ ವೀಲರ್ D.L. ತಗೊಂಡಿದ್ದು... ಇನ್ನು ೨೦ ವರ್ಷ ಅದರ ಬಗ್ಗೆ ಚಿಂತೆಯಿಲ್ಲ...
ಆರೋಗ್ಯದ ದೃಷ್ಟಿಯಿಂದ ಮಾಡಿದ ನಿರ್ಣಯ- ನಾನು ದೇಹ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬುದು. ಅದರ ಬಗ್ಗೆ ಆಗಲೇ ಕಾರ್ಯಪ್ರವೃತ್ತಳಾಗಿ ಭಾಗಶಃ ಯಶಸ್ವಿಯಾಗಿದ್ದೇನೆ ;)
ಇನ್ನೊಂದು ವಿಷ್ಯ : ನನ್ನ ಮೊದಲ ಸೀರೆ ಕೊಂಡುಕೊಂಡಿದ್ದು ೨೦೦೯ರಲ್ಲೆ
Wednesday, December 23, 2009
ಸುನಾಮಿಗೆ ೫ ವರ್ಷ
ಸುನಾಮಿ
ನೀ ಪ್ರಕೃತಿಯಲ್ಲಿರುವ ಮಾಯೆ
ಬಂದು, ಇಂದಿಗೂ ಉಳಿಸಿರುವೆ ನಿನ್ನ ಕರಾಳ ಛಾಯೆ |
ಬಂದೆ ನೀ ಡಿಸೆಂಬರ್ ಇಪ್ಪತ್ತಾರರಂದು
ರಜಾದಿನವಾದ್ದರಿಂದ ಇದ್ದರು ಬಹಳ ಜನ ಬಂದರಿನಲ್ಲಿ ಅಂದು |
ನೀ ಬಂದೆ ಕೊಡದೆ ಯಾವುದೇ ಮುನ್ಸೂಚನೆ
ಇರಲಿಲ್ಲ ಒಂದು ಕ್ಷಣವೂ ಜನರಿಗೆ ಮಾಡಲು ಯೋಚನೆ |
ಸುನಾಮಿ - ಹೆಸರೇ ಹೇಳುವಂತೆ ನೀ ಬಂದರಿನ ಅಲೆ
ಆದ್ದರಿಂದ ಬೀಸಿದೆಯೇನು ಬಂದರಿನಲ್ಲಿದ್ದವರಿಗೆಲ್ಲಾ ಮರಣದ ಬಲೆ?
ನೀ ಕೊಂದೆ ಹಲವರ ಪ್ರೀತಿಪಾತ್ರರನ್ನು
ಅವರು ಶಪಿಸುತ್ತಿದ್ದಾರೆ ಇಂದಿಗೂ ನಿನ್ನನ್ನು |
ದುರ್ಜನರು ಹೆಚ್ಚಾದಾಗ ಪ್ರಕೃತಿವಿಕೋಪ ಎನ್ನುತ್ತೆ ಸಿದ್ಧಾಂತ
ಆದರೆ ತುಸು ಹೆಚ್ಚೇ ಆಯಿತು ನೀನು ಸೃಷ್ಟಿಸಿದ ರಾದ್ಧಾಂತ |
ಪಾಪ! ಏನೂ ಮಾಡದ ಮುಗ್ಧ ಮಕ್ಕಳು ಸತ್ತರು
ಇನ್ನೂ ಕೆಲವು ಮಕ್ಕಳು ಅನಾಥರಾಗಿ ಅತ್ತರು
ಸುನಾಮಿ- ನಿನಗೆ ಸಿಕ್ಕ ಸಂತೋಷವಾದರೂ ಏನು?
ಜನರ ಸಾವು ನೋವು ದುಃಖಗಳೇನು?
ಹಿಂಸಿಸಬೇಡ ನಮ್ಮನ್ನು ಈ ರೀತಿ ತ್ರಾಸ ಕೊಟ್ಟು
ಪ್ರಾರ್ಥಿಸುವೆ ನಿನ್ನನ್ನು ಮತ್ತೆ ಬರಬೇಡ ದಯವಿಟ್ಟು
ಸುನಾಮಿ ಅಲೆ ಭಾರತದ ಸಮುದ್ರ ಕಿನಾರೆಗಳಿಗೆ ಬಡಿದು ಈ ಶನಿವಾರಕ್ಕೆ ೫ ವರ್ಷ.ಆಗ (೫ ವರ್ಷಗಳ ಹಿಂದೆ) ಒಂದು ಪುಸ್ತಕದಲ್ಲಿ ಸುನಾಮಿ ಬಗ್ಗೆ ನಾನು ಬರೆದಿದ್ದ ಕೆಲವು ಸಾಲುಗಳು ಇತ್ತೀಚೆಗೆ ನನಗೆ ಮತ್ತೆ ಸಿಕ್ಕವು. ಆ ಪುಸ್ತಕದಲ್ಲಿ ನಾನು ನಮೂದಿಸಿರುವಂತೆ ನಾನಿದನ್ನು ಬರೆದಿದ್ದುದು ೧೮/೧/೦೫ ರಂದು. ಅಂದು ಅಪ್ಪನ ಸ್ನೇಹಿತರೊಬ್ಬರು ಮನೆಗೆ ಬಂದು ಸುನಾಮಿಯಲ್ಲಿ ಕಾಣೆಯಾದ ತಮ್ಮ ಮಗನ ವಿಚಾರ ಹೇಳುತ್ತಿದ್ದುದನ್ನು ಕೇಳಿ ಬರೆದಿದ್ದು ಇದು...ಈಗ ಓದಿದ್ರೆ ಕೆಲವು ಕಡೆ ಸ್ವಲ್ಪ ಬದಲಾವಣೆಯ ಅಗತ್ಯ ಇದೆ ಅನಿಸುತ್ತೆ. ಆದ್ರೆ ಇದು ನಾನು ನನ್ನ ಆಲೋಚನೆಗಳನ್ನು ಅಕ್ಷರ ರೂಪದಲ್ಲಿ ದಾಖಲಿಸಲು ಮಾಡಿದ ಮೊದಲ ಪ್ರಯತ್ನಗಳಲ್ಲೊಂದು. ಬದಲಾಯಿಸಲು ಮನಸ್ಸಾಗಲಿಲ್ಲ. ಆಗ ಬರೆದಿದ್ದಂತೆಯೇ ಇಲ್ಲಿ ಬರೆದಿದ್ದೇನೆ.
Sunday, October 4, 2009
ನೀನಿಲ್ಲದಿರೆ...
ಕಿಟಕಿಯಾಚೆ ಕಣ್ಣ ಹಾಯಿಸಿದಾಗ
ಉದಯರವಿಯ ಹೊನ್ನ ಕಿರಣಗಳಲ್ಲಿ
ತುಂಬಿತ್ತು ನಿನ್ನದೇ ಹೊಳಪು
ಹೊತ್ತು ತಂದಿತ್ತು ನಿನ್ನ ನೆನಪು||
ಮಂಚದಿಂದಿಳಿದು ಈಚೆ ಬಂದು
ಎಲ್ಲರಿಗೂ ಸುಪ್ರಭಾತವ ಹೇಳುವಾಗ
ಮನೆಯವರೆಲ್ಲರ ನಗುವಿನಲ್ಲಿ
ಕಂಡಿತ್ತು ನಿನ್ನದೇ ಬಿಂಬ
ಆ ಬಿಂಬವೇ ಎನ್ನ ಕಣ್ಣ ತುಂಬ||
ನಿದ್ದೆಯ ಮಂಪರಿನಿಂದ ಹೊರಬಂದು
ಸ್ನಾನಕ್ಕೆ ಬಿಸಿನೀರ ತುಂಬಿಸುವಾಗ
ಅದರಿಂದ ಹೊರಬರುತ್ತಿದ್ದ ಆವಿಯಲ್ಲಿ
ನಿನ್ನ ಬಿಸಿಯುಸಿರ ಸ್ಪರ್ಶವಿತ್ತು
ಆ ಪುಳಕಕ್ಕೆ ಮನ ಕುಣಿದಾಡಿತ್ತು||
ಮನೆಯಿಂದ ಹೊರಹೋಗಲೆಂದು
ಸ್ಕೂಟಿಯನೇರಿ ಹೋಗುತ್ತಿದ್ದಾಗ
ಮುಖಕ್ಕೆ ಮುತ್ತಿಡುತ್ತಿದ್ದ ತಂಗಾಳಿಗೆ
ನಿನ್ನ ಸ್ಪರ್ಶದ ಸೆಳಹಿತ್ತು
ಆ ಸುಖವನ್ನರಸಿ ಹೃದಯ ಒದ್ದಾಡಿತ್ತು||
ಕಾಣುವ ನೂರಾರು ಕಂಗಳೊಂದಿಗೆ
ನನ್ನ ನೋಟ ಬೆರೆತಾಗ
ಹುಡುಕಿದವು ಈ ನಯನಗಳು
ನಿನ್ನ ಕುಡಿನೋಟದಲ್ಲಿನ ಸೆಳೆತ
ಆ ನೋಟದಲ್ಲೇ ಲೀನವಾಗುವ ತುಡಿತ||
ಮತ್ತೆ ನನ್ನ ಸ್ಕೂಟಿಯನೇರಿ
ಮನೆಗೆ ಹಿಂದಿರುಗುವಾಗ
ಮಳೆಹನಿಯ ಚಿಟಪಟ ಸದ್ದಲ್ಲಿ
ನಿನ್ನ ಪಿಸುಮಾತು ಕೇಳಿತ್ತು
ಆ ಮಾತಿಗೆ ನನ್ನ ಕಿವಿ ನಿಮಿರಿತ್ತು||
ನೀಲಾಕಾಶ ತಾ ಕೆಂಪಾಗಿ
ಸೂರ್ಯ ಹೊರಡಲು ಸಜ್ಜಾದಾಗ
ಹಚ್ಚಿದ ಜ್ಯೋತಿಯ ಬೆಳಕಿಂದ
ಎಲ್ಲಿಯೋ ಓಡಿಹೋಗಿತ್ತು ಕತ್ತಲು
ಕಂಡಿತ್ತು ನಿನ್ನ ಗುರುತೇ ಸುತ್ತಲು||
ಹಾಲ ಬೆಳದಿಂಗಳ ಚಂದ್ರ ತಾ ಚೆಲ್ಲಿ
ತಾರೆಗಳು ಬಾನನ್ನೆಲ್ಲಾ ಆವರಿಸಿದಾಗ
ಮಲಗಿ ಮುಚ್ಚಿದ ಕಂಗಳ ಹಿಂದೆ
ನಿನ್ನ ನೆನಪುಗಳನ್ನೆ ಕನವರಿಸಿದ್ದೆ
ಇನ್ನೆಲ್ಲಿ ಹತ್ತಿರ ಸುಳಿದೀತು ನಿದ್ದೆ||
ಹಾದಿಯಲ್ಲೆಲ್ಲೋ ಜೊತೆಯಾಗಿ
ನೂರ್ಕಾಲ ಜೊತೆಯಾಗಿರುವೆನೆಂದು
ಭರವಸೆಯಿತ್ತು ನನ್ನಾವರಿಸಿದೆ ನೀನು
ಈಗ ನನ್ನ ಕಣಕಣದಲ್ಲೂ ತುಂಬಿರುವೆ ನೀನು
ನೀನಲ್ಲದಿರೆ ನಿನ್ನ ಪ್ರೀತಿ ಬೇರಿನ್ನೇನು?
Sunday, September 13, 2009
ಏಕೆ ಹೀಗಾಯ್ತೋ......
ಚಿತ್ರ: ಅಂಜದ ಗಂಡು
ಸಂಗೀತ : ಹಂಸಲೇಖ
ಹಾಡು: ಏಕೆ ಹೀಗಾಯ್ತೋ ನಾನು ಕಾಣೆನು
ಆರ್. ಎನ್. ಜಯಗೋಪಾಲ್ ಹಾಗೂ ಹಂಸಲೇಖ ಅವರ ಕ್ಷಮೆ ಕೋರುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ..
ಏಕೆ ಹೀಗಾಯ್ತೋ ನಾನು ಕಾಣೆನು
ಏಕೋ ಮನದಲ್ಲಿ doubtಉ ಶುರುವಾಯ್ತೋ
bread board ಮೇಲಿನ circuit ಅಂತು ಬೊಂಬಾಟಾಗಿತ್ತೋ
ಏನೇ ಆದರೂ output ಮಾತ್ರ ಕಾಣದಾಯಿತೋ || ಏಕೆ ಹೀಗಾಯ್ತೋ ||
ಈ circuitiನಲಿ ಅದು ಏನಿದೆಯೋ
sir ಕೊಟ್ಟಂಗೆನೆ components ಇದೆಯೋ|| ಬ್ರೆಡ್ ಬೋರ್ಡ್ ||
ಈ resistru.... designಗೆ ತಕ್ಕಂತೆ ನಾನು ಹುಡುಕಾಡಿ ತಂದೆ
ಈ transistru... emitteru- collectoru ಬೇಸು ಚೆಕ್ ಮಾಡಿ ತಂದೆ
ತಲೆಯಂತು ಕೆಟ್ಟು ಹೋಯಿತು
ಬೇರೇನು ತೋಚದಾಯಿತು
ಮನದಲ್ಲಿ ನಿರಾಸೆ ತುಂಬಿ ಹೋಯಿತು.... || ಏಕೆ ||
ಈ components... check ಮಾಡಿ test ಮಾಡಿ ನಾನಂತೂ ಸುಸ್ತಾದೆ
ಈ IFT... wire ಕಿತ್ತು ಹೋಗಿತ್ತಂತ ನಾನಾಗ ತಿಳಿದೆ
IFT ಬದಲು ಆಯಿತು
outputಉ clearಉ ಆಯಿತು
circuitಉ ಕೊನೆಗೂ debug ಆಯಿತು .....|| ಏಕೆ ||
Friday, August 28, 2009
ಕಲಿಗಾಲ
ವಾರೆಗಣ್ಣನೋಟ, ಪಿಸುಮಾತು, ಲಜ್ಜೆ ,ತುಂಬು ಸಡಗರದ ನಡುವೆ
ಹರುಷವೇ ಮನೆಮಾಡಿತ್ತು ಮನದಿ ನಮ್ಮ ವಿವಾಹದಂದು
ವಿಪರ್ಯಾಸವೇನೋ - ಇದು ನನ್ನ ನಿನ್ನ ಕದನ
ವಾದ ವಿವಾದ, ಸಿಡುಕು, ಮುನಿಸು, ಭಿನ್ನಾಭಿಪ್ರಾಯವೆಲ್ಲಾ ಸೇರಿ
ದಡ ಸೇರದ ದೋಣಿಯಾಯ್ತು ನಮ್ಮ ಬಾಳು
ವಿಧಿಯಾಟವೇನೋ ಇದು - ನನ್ನ ನಿನ್ನ ವಿಚ್ಛೇದನ
ರಣರಂಗದಲ್ಲಿರುವಂಥ ದ್ವೇಷ, ದರ್ಪ, ಅಸೂಯೆ, ದುರಭಿಮಾನಗಳ ನಡುವೆ
ಹತ್ಯೆಯಾಗಿತ್ತು ಸುಖ ಸಂತೋಷ ನಮ್ಮ ಒಡಲಾಳದಲ್ಲಿ
ಇದು ನಾನು ನನ್ನ ಗೆಳತಿ ನಯನ analog communication theory class ಅಲ್ಲಿ ಬರೆದಿದ್ದು... ಹಾಗಾಗಿ ಇದರ ಕ್ರೆಡಿಟ್ ಇಬ್ಬರಿಗೂ ಸೇರುತ್ತೆ....
ಪಲ್ಲವಿ - ಚರಣ
ಚರಣವಿನ್ನು ನಿನ್ನ ಪಾಲು ತುಂಬಿಸದನು ನೀನೇ ಎಂದೆ
ಪ್ರೀತಿಯ ಅಡಿಪಾಯಕ್ಕೆ ವಿಶ್ವಾಸವನ್ನು ತುಂಬಿ
ಆಸೆ-ಭಾವಗಳಿಂದ ಕನಸಿನ ಗೂಡನ್ನು ಕಟ್ಟಿ
ಸಾಮರಸ್ಯದ ಹಸೆಯಿಟ್ಟು ಸಹಬಾಳ್ವೆಯ ಜ್ಯೋತಿ ಬೆಳಗಿಸಿದರೆ ಸಾಕು
ಚರಣ ಪೂರ್ಣವಾಗಲು ಇನ್ನೇನು ಬೇಕು
ಎಂದೆನಿಸುತಿರುವಾಗಲೇ ನನಗಾಯಿತು ಅರಿವು
ಇವೆಲ್ಲವೂ ತುಂಬಿದ್ದ ನನ್ನ ಮನವೇ ಆಗಿದೆ ಕಳುವು
ಮನಸನ್ನೇ ಕದ್ದಿರುವೆಯಲ್ಲ ಆಸೆಗಳನೆಲ್ಲಿಂದ ತರಲಿ
ಬರಿದಾದ ಈ ಎದೆಗೂಡಲ್ಲಿ ಅಕ್ಷರಗಳ ಹೇಗೆ ಹುಡುಕಲಿ
ಅರ್ಥವಿಲ್ಲದ ಸಾಲುಗಳಿಂದ ಚರಣ ಪೂರ್ತಿಯಾಗುವುದು ಹೇಗೆ
ಒಬ್ಬಂಟಿಯಾಗಿ ಈ ಪ್ರೇಮಗೀತೆಯ ಹಾಡುವುದು ಹೇಗೆ
ಸಪ್ತಸಾಗರಗಳಾಚೆಯೆಲ್ಲೋ ನೀ ಅಡಗಿ ಕುಳಿತು
ಮೂಡಿಸಿರುವೆ ನನ್ನೊಳಗೆ ಎಂದೂ ಮಾಸದ ಗುರುತು
ಒಮ್ಮೆ ಬಂದು ನನ್ನ ನೋಡು ಕಣ್ಣ ತುಂಬಾ
ರೆಪ್ಪೆ ಹಿಂದೆ ಹಿಡಿದಿಡುವೆ ನಾ ನಿನ್ನ ಬಿಂಬ
ಭೂಮಿಗೂ ಬಾನಿಗೂ ಇರುವುದೆಷ್ಟೋ ಅಂತರ
ನಿನ್ನ ನೋಡಲಿಲ್ಲಿ ನನಗೆ ಅಷ್ಟೇ ಕಾತರ
ಹುಡುಗಾಟ ಸಾಕಿನ್ನು ಬೇಕೇ ಈ ಪರೀಕ್ಷೆ
ಚರಣ ಬರೆಯಲು ಜೊತೆಯಾಗು ಹುಸಿ ಮಾಡದೆ ನಿರೀಕ್ಷೆ
Tuesday, August 18, 2009
ನಾನು ಕಾರ್ ಡ್ರೈವ್ ಮಾಡುತ್ತಿದ್ದಾಗ...
ಹೋಗ್ತಾ ದಾರಿಯಲ್ಲಿ.....
೧. ತುಮಕೂರು - ಗುಬ್ಬಿ ಮಧ್ಯದ ದಾರಿಯಲ್ಲಿ ಮಲ್ಲಸಂದ್ರ ಅನ್ನೋ ಒಂದು ಊರು ಸಿಗುತ್ತೆ. ಅಪ್ಪ ಅಲ್ಲಿ ಹೂವು ತರ್ತೀನಿ ಗಾಡಿನಿಲ್ಲಿಸು ಅಂದ್ರು. ನಿಲ್ಲಿಸಿ ಅಪ್ಪ ಬರೋದನ್ನೆ ಕಾಯ್ತಾ ಇದ್ದೆ. ಆಗ ಒಬ್ಳು ಹುಡುಗಿ ಸುಮಾರು ೧೦ ವರ್ಷ ಇರ್ಬೇಕು ನೀರು ತಗೊಂಡುಹೋಗ್ತಿದ್ಳು. ಕಾರ್ ಒಳ್ಗೆ ಇಣುಕಿ ನಾನು ಕೂತಿದ್ದನ್ನ ನೋಡಿ ಅವರಮ್ಮನಿಗೆ "ನೋಡಿಲ್ಲಿ ಈಯಮ್ಮ ಕಾರ್ ಬಿಡ್ತಾ ಇರೋದಾ" ಅಂದ್ಳು.ಅವರಮ್ಮನೂ ಸೋಜಿಗದಿಂದ ಒಮ್ಮೆ ಕಾರ್ ಒಳಗೆ ಇಣುಕಿ ಮುಂದೆ ಹೋದಳು.
೨. ತುಮಕೂರು ಡೈರಿಯ ಬಳಿ ಅಪ್ಪ ಪೇಡ ತಗೊಳ್ಳೋಣ ಅಂದ್ರು. ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಹಿಂದೆ ಬರುತ್ತಿದ್ದಗಾಡಿಗಳ ಕಡೆ ನೋಡಿ ಯಾವುದೇ ಗಾಡಿಯಿರಲಿಲ್ಲವಾದ್ದರಿಂದ ಬಲಕ್ಕೆ ಬಂದೆ. ಅಲ್ಲಿ ನಿಂತಿದ್ದ ಒಬ್ಬ ಹುಡುಗ " ಏ ' L' ಬೋರ್ಡು " ಅಂದ. ನನ್ ಕಾರು ನನ್ನಿಷ್ಟ 'L' ಬೋರ್ಡಾದ್ರೂ ಹಾಕ್ತೀನಿ ಏನಾದ್ರು ಹಾಕ್ತೀನಿ ನಾನು ಸರಿಯಾಗಿ ಓಡಿಸ್ತಾ ಇರ್ಬೇಕಾದ್ರೆ ಈಕಾಮೆಂಟ್ ಯಾಕೆ ಅಂತ ಕೇಳ್ಬೇಕು ಅನ್ನಿಸಿದ್ರೂ ಸುಮ್ನೆ ಜಗಳ ಯಾಕೆ ಅಂತ ಏನೂ ಮಾತಾಡಲಿಲ್ಲ.
೩. ಮದುವೆಮನೆಗೆ ಹೋಗಿ ಮದುವೆ ಮುಗಿಸಿಕೊಂಡು ಬರುವಾಗ ಅಪ್ಪ ಕಾರ್ ಕೀ ಕೊಟ್ಟು ಗೇಟ್ ಹತ್ರ ಕಾರ್ ತಗೊಂಡು ಬಾಅಂದ್ರು. ನಾನು ತಂದು ಗೇಟ್ ಮುಂದೆ ನಿಲ್ಲಿಸಿದಾಗ ಅಪ್ಪ ಅಮ್ಮ ದೊಡ್ಡಪ್ಪ ದೊಡ್ಡಮ್ಮನ ಜೊತೆ ಮಾತಾಡ್ತಾ ಇದ್ರು. ನಾನುಬಂದಿದ್ದನ್ನು ನೋಡಿ ದೊಡ್ಡಪ್ಪ ವ್ಯಂಗ್ಯವಾಗಿ "ಯಾಕೆ ಇವತ್ತು ಬೇರೆ ಯಾರೂ ಡ್ರೈವರ್ ಸಿಗ್ಲಿಲ್ವಾ" ಅಂದ್ರು. ನಂಗೆ ಕೋಪ ಬಂತು. "ಯಾಕೆ ನಾನು ಡ್ರೈವ್ ಮಾಡ್ಬಾರ್ದಾ?" ಅಂದೆ. ಅಪ್ಪ ಇವತ್ತು ಬೆಂಗಳೂರಿಂದ ಅವಳೆ ಓಡಿಸಿಕೊಂಡು ಬಂದಿರೋದು ಅಂದ್ರು. ದೊಡ್ಡಪ್ಪ ಮತ್ತೊಮ್ಮೆ ವ್ಯಂಗ್ಯವಾಗಿ ನಕ್ಕು ಸುಮ್ಮನಾದ್ರು.
೪. ಮುಂದೆ ಊರಿಗೆ ಹೋಗಿ ಮನೆ ಮುಂದೆ ನಿಲ್ಲಿಸಿದಾಗ ಎಲ್ರೂ ಏನೋ ಜೋರಾಗಿ ನಗ್ತಿದ್ರು. ತಾತ ಏನೂ ಮಾತಾಡ್ಲಿಲ್ಲ. ಇನ್ನೂ೧೩ ವರ್ಷದ ನನ್ ತಮ್ಮಂಗೆ ನೀನು ಯಾವಾಗ್ ಕಲಿಯೋದು ಅಂದ್ರು ಅಷ್ಟೆ. ಅಜ್ಜಿ ನೀನೆ ಓಡಿಸ್ಕೊಂಡು ಬಂದುಬಿಟ್ಟಿದ್ದೀಯಾಅಂದ್ರು. ಅಜ್ಜಿಗೆ ಖುಷಿಯಾಗಿತ್ತು ನಾ ಕಲಿತದ್ದು. ತಾತಂಗೆ ಯಾಕೋ ಬೇಜಾರಾದಂಗಿತ್ತು.
೫. ಊಟ ಮುಗಿಸಿ ಮತ್ತೆ ವಾಪಸ್ ಹೊರಟ್ವಿ. ಅಲ್ಲಿ ದಾರಿಯಲ್ಲಿ ಒಂದು ಹುಡುಗಿ ಆಟ ಆಡ್ತಾ ಇದ್ದಳು. ಹಾರ್ನ್ ಮಾಡಿದೆ. ಗಾಡಿನೋಡಿ ಕಿರುಚಿದ್ಳು. "ಅಮ್ಮ ಬೇಗ ಓಡ್ ಬಾ. ಒಂದು ಹೆಂಗ್ಸು ಕಾರ್ ಓಡಿಸ್ತಾ ಇದ್ದಾಳೆ" ಅಂತ. ನಕ್ಕು ಮುಂದೆ ಬಂದೆ.
೬. ಇನ್ನು ಮುಂದೆ ಬಂದ್ರೆ ಒಂದು ನಾಲ್ಕೈದ್ ಜನ ಹುಡುಗ್ರು ನಿಂತಿದ್ರು. " ಟ್ರೈನಿಂಗ್ ಕೊಡ್ತಾ ಅವ್ರೆ" ಅಂತ ಇನ್ನೊಂದು ಕಾಮೆಂಟ್.
೭. ಮತ್ತೆ ಇನ್ನೇನು ಗುಬ್ಬಿ ಸಮೀಪ ಬಂದಾಗ ಯಾರೋ ಒಬ್ರು ಸೈಕಲ್ ತುಳಿಯುತ್ತಾ ಹಿಂದೆ ನೋಡ್ಕೊಂಡು ಬರ್ತಿದ್ರು. ಜೋರಾಗಿಹಾರ್ನ್ ಮಾಡಿದೆ. ತಕ್ಷಣ ಗಾಡಿ ಕಡೆ ನೋಡಿ ಒಂದು ಕ್ಷಣ ಹಾಗೇ ನಿಂತಿದ್ದು ಆಮೇಲೆ ಸೈಕಲ್ ಪಕ್ಕಕ್ಕೆ ನಿಲ್ಲಿಸಿ ಕಾರನ್ನೇ ನೋಡ್ತಾಇದ್ರು ಅಂತ ಹಿಂದೆ ಕುಳಿತಿದ್ದ ನನ್ ತಮ್ಮ ಹೇಳ್ದ. ಅಲ್ಲ ಒಬ್ಳು ಹುಡುಗಿ ಕಾರ್ ಡ್ರೈವ್ ಮಾಡಿದ್ರೆ ಇವ್ರಿಗೆಲ್ಲಾ ಏನಾಗುತ್ತೆ ಅಂತ. ಅಲ್ಲೆಲ್ಲಾ ಕಾರ್ ಡ್ರೈವಿಂಗ್ ಗೊತ್ತಿರೋ ಹುಡುಗಿಯರು ಕಮ್ಮಿ ಇರ್ಬಹುದು ಆದ್ರೆ ಅದೇ ಒಂದು ಸೋಜಿಗ ಅನ್ನುವಂತೆ ನೋಡೋದಾ?
ಇದೆಲ್ಲಾ ನನ್ ಕಿವಿಗೆ ಬಿದ್ದಿದ್ದಂತೂ ನಿಜ. ಆದ್ರೆ ಮೊದಲನೇ ಸಲ ಊರಿಗೆ ಕಾರ್ ಡ್ರೈವ್ ಮಾಡಿಕೊಂಡು ಹೋಗ್ತಾ ಇದ್ದೀನಿ ಅಂತನಾನು ತುಂಬಾ excite ಆಗಿ ಈ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೀನಾ??
ಗೊತ್ತಿಲ್ಲ "
Wednesday, August 5, 2009
ಕವಿ ಕಾವ್ಯ ಶ್ರಾವಣ
ಆಧುನಿಕ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯೆಲ್ಲೋ ನಶಿಸಿ ಹೋಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ವಚನಜ್ಯೋತಿ ಬಳಗವು ಕಳೆದ ಹದಿಮೂರು ವರ್ಷಗಳಿಂದ ಕನ್ನಡ ಸಾಹಿತ್ಯ-ಸಂಸ್ಕೃತಿಯ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ವಚನ ಚಳುವಳಿಯ ಪರಿಚಯ ಮಾಡಿಕೊಟ್ಟು ತನ್ಮೂಲಕ ಕನ್ನಡ ಸಂಸ್ಕೃತಿಯನ್ನು ಬಿತ್ತುವುದು ಬಳಗದ ಪ್ರಮುಖ ಕಾರ್ಯವಾಗಿದೆ.
ಈ ವರ್ಷ ಶ್ರಾವಣ ಮಾಸಾದ್ಯಂತ ಪ್ರತಿದಿನ ಒಬ್ಬೊಬ್ಬರ ಮನೆಯಲ್ಲಿ "ಕವಿ ಕಾವ್ಯ ಶ್ರಾವಣ - ಮನೆಯಿಂದ ಮನಕ್ಕೆ ಕನ್ನಡ ಸಂಸ್ಕೃತಿ ಸಂಚಾರ" ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ೨೬ನೇ ಜುಲೈ ೨೦೦೯ರಿಂದ ೨೦ನೇ ಆಗಸ್ಟ್ ೨೦೦೯ರವರೆಗೆ ಈ ಕಾರ್ಯಕ್ರಮ ಪ್ರತಿದಿನ ಸಂಜೆ ೬ ಗಂಟೆಗೆ ನಡೆಯುತ್ತದೆ. ಆದಿಕವಿ ಪಂಪನಿಂದ ಮೊದಲ್ಗೊಂಡು ರಾಷ್ಟ್ರಕವಿ ಕುವೆಂಪುರವರ ವರೆಗೆ ಕನ್ನಡದ ಪ್ರಮುಖ ಕವಿಗಳ-ದಾರ್ಶನಿಕರ ಕಿರುಪರಿಚಯವನ್ನು ಮನೆ- ಮನೆಗಳಲ್ಲಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಮೊದಲಿಗೆ ಗೀತ ಗಾಯನ ನಂತರ ಕವಿ ಕಾವ್ಯ ಪರಿಚಯದ ಮೂಲಕ ಕನ್ನಡದ ಸಿರಿವಂತಿಕೆಯನ್ನು ಆತಿಥೇಯರಿಗೂ ಅತಿಥಿಗಳಿಗೂ ಉಣಬಡಿಸುವ ಯತ್ನ ಇದಾಗಿದೆ.
ಜುಲೈ ತಿಂಗಳಲ್ಲಿ ನಮ್ಮ ತಂದೆಗೆ ಇದರ ಬಗ್ಗೆ ಮಾಹಿತಿ ಸಿಕ್ಕಿದ್ದರೂ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಬಳಗದ ಸದಸ್ಯರೊಂದಿಗೆ ಚರ್ಚೆ ನಡೆಸುವ ದಿನ ಕಾರಣಾಂತರಗಳಿಂದ ಹೋಗಲಾಗದೆ ಇದ್ದುದರಿಂದ ಮೊದಲು ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಹೋಗಿ ಬಂದ ಅಪ್ಪ ಅಮ್ಮ ಇಬ್ಬರಿಗೂ ನಮ್ಮ ಮನೆಯಲ್ಲೂ ಇಂಥ ಒಂದು ಕಾರ್ಯಕ್ರಮ ನಡೆಸಬೇಕು ಎಂಬ ಆಸೆ ಬಲವಾಯಿತು. ಈ ಬಾರಿ ಸಾಧ್ಯವಾಗದೇ ಇದ್ದರೂ ಮುಂದಿನ ಬಾರಿ ಖಂಡಿತ ನಡೆಸಬೇಕು ಎಂದು ಮಾತನಾಡುತ್ತಿದ್ದಾಗಲೇ ಕಾರ್ಯಕ್ರಮ ವ್ಯವಸ್ಥಾಪಕರಿಂದ ಒಂದು ಕರೆ ಬಂತು. "ಸೋಮವಾರ ಕಾರ್ಯಕ್ರಮ ನಡೆಸಬೇಕಿದ್ದ ಮನೆಯವರು ಕಾರ್ಯಕ್ರಮ ನಡೆಸುವುದರಿಂದ ಹಿಂದೆ ಸರಿಯುತ್ತಿದ್ದಾರೆ ನಿಮಗೆ ಆಸಕ್ತಿಯಿದ್ದರೆ ನೀವು ನಡೆಸಬಹುದು" ಎಂದರು. ಅಪ್ಪ ಒಪ್ಪಿಗೆ ನೀಡುವುದರೊಂದಿಗೆ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸುವುದು ಖಾತ್ರಿಯಾಯ್ತು.
ಸೋಮವಾರ ಸಂಜೆ ಸುಮಾರು ೬ : ೧೫ಕ್ಕೆ ಶ್ರೀಮತಿ ಸರಸ್ವತಿ ಹೆಗಡೆಯವರ ಗಾಯನದೊಂದಿಗೆ ಕಾರ್ಯಕ್ರಮ ಶುರುವಾಯಿತು. ವಚನ, ಭಕ್ತಿಗೀತೆ ಗಾಯನ ಸುಮಾರು ೭ ಗಂಟೆಯವರೆಗೆ ನಡೆಯಿತು.ನಮ್ಮ ಮನೆಯಲ್ಲಿ ಕವಿ ಷಡಕ್ಷರದೇವ ಅವರ ಕಿರುಪರಿಚಯ ನೀಡುವುದಿತ್ತು.ಗಾಯನಾನಂತರ ನಿವೃತ್ತ ತಹಸೀಲ್ದಾರರಾದ ಕೆ.ಎಂ.ರೇವಣ್ಣನವರು ಕವಿ ಷಡಕ್ಷರದೇವ ಅವರ ಬಗ್ಗೆ ತಮ್ಮ ಉಪನ್ಯಾಸ ಪ್ರಾರಂಭಿಸಿದರು. ನಿಜ ಹೇಳಬೇಕಂದ್ರೆ ಅದುವರೆಗೆ ಷಡಕ್ಷರದೇವ ಎಂಬ ಮಹಾಕವಿಯೊಬ್ಬರು ಇದ್ದರೆಂಬುದು ನನಗೆ ತಿಳಿದಿರಲಿಲ್ಲ. ಅವರು ಹೇಳಿದ್ದನ್ನು ನನಗೆ ನೆನಪಿರುವಷ್ಟು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಚಂಪೂ ಶೈಲಿಯಲ್ಲಿ ಕಾವ್ಯ ರಚಿಸಿದ ಷಡಕ್ಷರದೇವನ ಕಾಲದ ಬಗ್ಗೆ ನಿರ್ದಿಷ್ಟವಾದ ಮಾಹಿತಿಯಿಲ್ಲದಿದ್ದರೂ ಅವನ ಕಾವ್ಯಗಳ ಆಧಾರದಿಂದ ಅವನ ಕಾಲ ಹದಿನೇಳನೇ ಶತಮಾನ ಎಂದು ಗುರುತಿಸಬಹುದು.ಮೈಸೂರು ಕರ್ನಾಟಕದ ಮಳವಳ್ಳಿ ತಾಲೂಕಿನ ದನಗೂರಿನಲ್ಲ ಜನಿಸಿದ ಷಡಕ್ಷರಿದೇವ ರೇಣುಕ ಪರಂಪರೆಗೆ ಸೇರಿದ ಚಿಕ್ಕವೀರದೇಶಿಕರಲ್ಲಿ ಶಿಷ್ಯವೃತ್ತಿಯನ್ನು ಮಾಡಿ ಅಲ್ಲಿನ ಮಠದಲ್ಲಿ ಮಠಾಧಿಪತಿಯೂ ಆಗಿದ್ದನು. ಆದರೆ ನಂತರ ಯಲಂದೂರಿನ ನಾಡಪ್ರಭುವಾದ ಮುದ್ದುರಾಜನ ಪತ್ನಿಯು ತನ್ನ ತವರೂರಾದ ದನಗೂರಿನಿಂದ ಷಡಕ್ಷರದೇವನನ್ನು ಯಲಂದೂರಿಗೆ ಕರೆಸಿಕೊಂಡು ಅಲ್ಲಿಯೇ ನೆಲೆಸಲು ಕೋರಿದಳೆಂದು ಹೇಳಲಾಗುತ್ತದೆ. ಷಡಕ್ಷರದೇವನು ಮುಂದೆ ಯಲಂದೂರಿನಲ್ಲೇ ಸಮಾಧಿ ಹೊಂದಿದನು ಎಂದು ಹೇಳಲಾಗುತ್ತದೆ.
ಕನ್ನಡ ಹಾಗೂ ಸಂಸ್ಕೃತದಲ್ಲಿ ಪ್ರವೀಣನಾದ ಷಡಕ್ಷರದೇವನಿಗೆ "ಉಭಯಕವಿತಾವಿಶಾರದ" ಎಂಬ ಬಿರುದಿತ್ತು. ಇವನು ಕನ್ನಡದಲ್ಲಿ ಮೂರು ಮಹಾಕಾವ್ಯಗಳನ್ನು ಸಂಸ್ಕೃತದಲ್ಲಿ ಒಂದು ಮಹಾಕಾವ್ಯವನ್ನು ರಚಿಸಿದ್ದಾನೆ. ಕನ್ನಡದ ಕಾವ್ಯಗಳು
೧. ರಾಜಶೇಖರವಿಲಾಸ
ಪಂಚಾಕ್ಷರೀ ಮಂತ್ರದ ಮಹತ್ವವನ್ನು ಸತ್ಯೇಂದ್ರ ಚೋಳ ಹಾಗೂ ಅಮೃತಮತಿಯ ಮಗನಾದ ರಾಜಶೇಖರ ಚೋಳನ ಕತೆಯ ಮೂಲಕ ಕವಿ ಇಲ್ಲಿ ಹೇಳಿದ್ದಾನೆ. (ಉಪನ್ಯಾಸಕರು ಇದರ ಕಥೆಯನ್ನು ,ಸಾರಾಂಶವನ್ನು ತಿಳಿಸಿದರು.ನನಗೆ ಕೆಲವು ಹೆಸರುಗಳು ಸರಿಯಾಗಿ ನೆನಪಿಲ್ಲವಾದ್ದರಿಂದ ಇಲ್ಲಿ ಬರೆಯುತ್ತಿಲ್ಲ.)
೨. ವೃಷಭೇಂದ್ರವಿಜಯ
ಭಕ್ತಿರಸ ಪ್ರಧಾನವಾದ ಈ ಕಾವ್ಯ ಬಸವಣ್ಣನವರ ಜೀವನಚರಿತೆಯ ಬಗ್ಗೆ ಹೇಳುತ್ತದೆ.
೩. ಶಬರಶಂಕರವಿಲಾಸ
ಮಹಾಭಾರತದ ಒಂದು ಪ್ರಸಂಗದ ಮೇಲೆ ಈ ಕಾವ್ಯವು ಅವಲಂಬಿತವಾಗಿದೆ. ಅರ್ಜುನ ಶಿವನ ಕುರಿತು ತಪಸ್ಸನ್ನಾಚರಿಸಿದಾಗ ಶಬರನ ರೂಪದಲ್ಲಿ ಪ್ರತ್ಯಕ್ಷನಾದ ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡುವ ಕತೆಯನ್ನು ಇದು ವಿವರಿಸಿದೆ.
ಸಂಸ್ಕೃತದಲ್ಲಿ ಕರ್ಣರಸಾಯನ ಎಂಬ ಮಹಾಕಾವ್ಯವನ್ನು ಷಡಕ್ಷರದೇವ ರಚಿಸಿದ್ದಾನೆ. ಇದಲ್ಲದೆ ಆತ ರತ್ನಾವಳಿ, ಶಿವಶಕ್ತಿಮಂಜರಿ, ವೀರಭದ್ರದಂಡಕ, ಸಿದ್ಧಲಿಂಗಸ್ತವ, ಪಾದಪೂಜಾಸ್ತೋತ್ರ, ಶಿವಮಾನಸಸ್ತೋತ್ರ ,ಸಿದ್ಧಲಿಂಗಾಷ್ಟಕ, ಬಸವಾಷ್ಟಕ ಎಂಬಿತ್ಯಾದಿ ಸ್ತೋತ್ರಗಳನ್ನೂ ಬರೆದಿದ್ದಾನೆ.
ರೇವಣ್ಣನವರು ನೀಡಿದ ಷಡಕ್ಷರದೇವನ ಪರಿಚಯದ ನಂತರ ಬಳಗದ ಅಧ್ಯಕ್ಷರಾದ ಪ್ರೊ. ಟಿ.ಆರ್.ಮಹಾದೇವಯ್ಯನವರು, ಪ್ರಧಾನ ಕಾರ್ಯದರ್ಶಿಗಳಾದ ಪಿನಾಕಪಾಣಿಯವರು ಮಾತನಾಡಿದರು. ವಂದನಾರ್ಪಣೆಯ ನಂತರ ಮಂಗಳಗೀತೆಯನ್ನು ಹಾಡಿ ನಂತರ ಪ್ರಸಾದ ವಿನಿಯೋಗವಾಯಿತು. ಒಟ್ಟಿನಲ್ಲಿ ಒಂದು ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸವಿಯನ್ನು ಮನ ಅನುಭವಿಸಿತ್ತು.
(ನನ್ನ ಸ್ಮೃತಿಯ ಆಧಾರದ ಮೇಲೆ ಕವಿ ಪರಿಚಯವನ್ನು ಬರೆದಿರುವುದು. ತಪ್ಪಿದ್ದರೆ ತಿದ್ದಿರಿ. ಹೆಚ್ಚಿನ ಮಾಹಿತಿ ತಿಳಿದಿದ್ದರೆ ಹಂಚಿಕೊಳ್ಳಿ.)
Monday, July 20, 2009
ನನ್ನನ್ನಿನ್ನು ಕಾಡಬೇಡ
ಚಂದಿರನೆಷ್ಟೇ ಹೊಳೆಯುತ್ತಿದ್ದರೂ
ಬೆಳದಿಂಗಳನ್ನೇ ಚೆಲ್ಲಿದ್ದರೂ
ನೋಡು ಗೆಳೆಯ
ಅರಳುವುದು ಈ ತಾವರೆ
ಸೂರ್ಯ ರಶ್ಮಿ ಸೋಂಕಿದಾಗಷ್ಟೇ
ನೀ ನನ್ನನ್ನೆಷ್ಟೇ ಕೇಳಿದರೂ
ಯಾವ ಪರಿಯಲ್ಲೇ ಕಾಡಿದರೂ
ತಿಳಿದುಕೊ ಗೆಳೆಯ
ನನ್ನ ಬಾಳಸಂಗಾತಿಯ ಆಯ್ಕೆ
ನನ್ನ ತಾಯ್ತಂದೆಯರದಷ್ಟೇ
ಮನದ ಬಾಗಿಲಿಗೆ ಬೀಗ ಹಾಕಿ
ನನ್ನಿಚ್ಛೆಯಿಂದಲೇ ಕೀಲಿ ಕೈಯನ್ನು
ಕೊಟ್ಟುಬಿಟ್ಟಿದ್ದೇನೆ ನಾನವರಿಗೆ
ಈ ಹೃದಯ ಚೂರಾಗುವುದು ಖಚಿತ
ಬೀಗ ಮುರಿಯಲು ಪ್ರಯತ್ನಿಸಿದರೆ
ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ನಿಂತವರನ್ನು
ಈ ವಿಷಯವಾಗಿ ದೂರ ಮಾಡಿಕೊಳ್ಳಲು
ನನ್ನ ಮನಸು ಒಪ್ಪುತ್ತಿಲ್ಲ
ನನ್ನನ್ನಿನ್ನು ಕಾಡಬೇಡ ಗೆಳೆಯ
ಈ ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ
Tuesday, July 7, 2009
ನನ್ನ ೪ನೇ ಸೆಮಿಸ್ಟರ್
ಆ ಸವಿಯನುಂಡು
ಕಾಲೇಜು ದಿನಗಳೇ ಹಾಗೇ
ನಾವು ಕಪಿಗಳ ಒಂದು ತುಂಡು
ಸೋಮವಾರದಿಂದ ಶುಕ್ರವಾರ
ನಡೆಯುತ್ತಿದ್ದ ಘಟನೆಗಳು ನೂರಾರು
ಅವುಗಳಲ್ಲಿ ಇತ್ತೀಚೆಗಿನ ೪ನೇ ಸೆಮಿಸ್ಟರಿನ
ಕೆಲವು ತೆರೆದುಕೊಳ್ಳುತ್ತಿವೆ ನೆನಪಿನ ಬುತ್ತಿ ಬಿಚ್ಚಲು
ತರಗತಿಗಳು ೫ನೇ ಮಹಡಿಯಲ್ಲಿದ್ದಾಗ ತಯಾರಾಗಿರದಿದ್ದ
ಲಿಫ್ಟ್ ತಯಾರಾಯಿತು ೪ನೇ ಮಹಡಿಗೆ ಬಂದಾಗ
ಆದರೇನು ಪ್ರಯೋಜನ ೬,೭ನೇ ಮಹಡಿಯವರೇ
ತುಂಬಿರುತ್ತಿದ್ದರು ಅದರಲ್ಲಿ ನಮಗೆ ಬೇಕಾದಾಗ
ನೆನಪಲ್ಲುಳಿಯುವುದು ಚಿರಕಾಲ ಈ ಸೆಮಿಸ್ಟರಿನ
ಬುಧವಾರದ ಪಠ್ಯೇತರ ಚಟುವಟಿಕೆಗಳು
ಕಾಲ್ಚೆಂಡು,ವಾಲಿಬಾಲ್,ಕ್ರಿಕೆಟ್, ಕೊಲಾಜ್, ನೃತ್ಯ...
ಭಾಗವಹಿಸುತ್ತ, ಸಂಘಟಿಸುತ್ತ ಹುರಿದುಂಬಿಸುತ್ತಿದ್ದ ದಿನಗಳು
ಪ್ರತಿ ಪರೀಕ್ಷೆಯ ನಂತರ ಕಳೆದ ಕ್ಷಣಗಳೂ ಮಧುರ
ಜನುಮದಿನದ ಆಚರಣೆಗಳಿಗೂ ಬರವಿಲ್ಲ
ಜೊತೆಗೇ ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ
ಹಾಗೂ ನಮ್ಮ ಕಾಲೇಜಿನ ೩ ದಿನಗಳ ಉತ್ಸವ "ಆತ್ಮ ತೃಷಾ"
"ಆತ್ಮ ತೃಷಾ"ಕ್ಕಾಗಿ ನನ್ನ ಸ್ನೇಹಿತೆಯರು ನೃತ್ಯ ಮಾಡುವ ದಿನ ಮಳೆ ಬಂದಿದ್ದು
ಆನಂತರ ಮುಂದೂಡಲ್ಪಟ್ಟ ಆ ಕಾರ್ಯಕ್ರಮಕ್ಕೆ ಮನೆಯಲ್ಲಿ ಕಾಡಿ ಬೇಡಿ ಹೋದದ್ದು
ಒಂದು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಅವಕಾಶ ದೊರೆತದ್ದು
ನಾನು ವಂದಿಸುವ ಮುನ್ನ ಪ್ರಾಂಶುಪಾಲರೇ ನನಗೆ "ಗುಡ್ ಮಾರ್ನಿಂಗ್" ಹೇಳಿದ್ದು ;)
ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೊಗಲಾಗದಿದ್ದುದು
ಅಪ್ಪ ಹೊಸ ಮೊಬೈಲ್ ಕೊಡಿಸಿದ್ದು
LIC* ಕ್ಲಾಸಲ್ಲಿ ಕುಳಿತು ಕವನ ಬರೆದಿದ್ದು
ಹೇಗೆ ಮರೆಯಲಿ ನಾನು ಸಂಪದಕ್ಕೆ ಸೇರಿದ್ದು
ನನ್ನ ಜೀವನದ ಈ ನಾಲ್ಕು ತಿಂಗಳು
ನಾನನುಭವಿಸಿದ ಆನಂದ ಅಪಾರ
ಅನೇಕ ಸ್ನೇಹಿತರು,ಮನೆಯಲ್ಲೊಂದು ಹೊಸ ನಂಟು
ಸ್ವರ್ಗಕ್ಕಿನ್ನಿತ್ತು ಮೂರೇ ಗೇಣು
ಅಷ್ಟರಲ್ಲಿ ಬಂತು ನಮ್ಮ ಸೆಮಿಸ್ಟರಿನ ಅಂತಿಮ ಪರೀಕ್ಷೆ
೩ ವಾರದಲ್ಲಿ ಮುಗಿದು ಅದಾದ ೧ ವಾರಕ್ಕೆ ಫಲಿತಾಂಶವೂ ಬಂತು
ಈಗ ನಮಗಿದೆ ಇನ್ನೂ ೨ ತಿಂಗಳ ರಜೆ
ರಜೆಯೋ ಸಜೆಯೋ ತಿಳಿಯದೇ ಮನ ಕಾಲೇಜು ಪುನರಾರಂಭವಾಗುವುದನ್ನೇ ಕಾಯುತಿದೆ
(*LIC- Linear Integrated Circuits. Life Insurance Corporation ಅಲ್ಲ ;) )
Wednesday, June 3, 2009
ಮತ್ತೆ ಒಂದಾಗಬಾರದೇಕೆ?
ಹಣೆಯ ಸಿಂಗರಿಸುವ ಕಾರ್ಯವಿಲ್ಲ ಹಿಂದಿನ ಬೇಡಿಕೆಯೂ ಇಲ್ಲ
ಗೆಳತಿಯರ ನೋಡಲು ಹೊರಟಿತು ಬೇಸರಗೊಂಡ ಸಿಂಧೂರ.
ಜೊತೆಗೆ ಅವರ ಸ್ಥಿತಿಗತಿ ಏನಾಗಿದೆಯೋ ಎಂಬ ಕಳವಳ
ಆದ್ರೆ ಮನದಲ್ಲಿ ಅವರು ಸಂತಸದಿಂದಿರುವುದನ್ನು ನೋಡುವ ಆಶಯ.
ರಸ್ತೆ ಬದಿಯಲ್ಲಿತ್ತು ದುಂಡು ಮಲ್ಲಿಗೆ
ಆಗ ತಾನೆ ಜಗವ ನೋಡುತ ತನ್ನ ಕಣ್ತೆರೆದು.
ಕೇಳಿತು ಸಿಂಧೂರ "ಹೇಗಿರುವೆ ಗೆಳತಿ
ಹೇಗೆ ಸಾಗಿದೆ ನಿನ್ನ ಜೀವನವಿಂದು?"
"ಏನ ಹೇಳಲಿ ನಾನು?
ದೇವರ ಪೂಜೆಗಷ್ಟೇ ನಾನೀಗ ಸೀಮಿತ.
ಸುಕೋಮಲೆಯರ ಮುಡಿಯೇರುವುದೇ
ನನ್ನ ಈಗಿನ ಇಂಗಿತ."
ಮಾತು ಹೊರಡಲಿಲ್ಲ ಸಿಂಧೂರಕೆ
ಏನು ಹೇಳಿದರದೂ ಕಡಿಮೆಯೇ.
"ಒಂದೇ ದೋಣಿಯ ಪಯಣಿಗರು ನಾವು
ನನಗೂ ಒದಗಿದೆ ನಿನ್ನೀ ಸ್ಥಿತಿಯೇ."
ಘಲ್ ಘಲ್ಲೆನುತ ಊರೆಲ್ಲ ಓಡಾಡುತ್ತಿದ್ದ
ಕಾಲ್ಗೆಜ್ಜೆಯ ನೆನೆಯಿತು ಮನ.
ಮಲ್ಲಿಗೆಯ ಜೊತೆಗೂಡಿ
ಮುಂದುವರೆಸಿತು ತನ್ನ ಪ್ರಯಾಣ.
ಹುಡುಕುತ ಅಲೆದವು ಪುಷ್ಪ-ಸಿಂಧೂರ
ಕೊನೆಗೆ ಕಪಾಟಿನಲ್ಲಿ ಕಂಡಿತು ನೂಪುರ.
ಭೇಟಿಯಾದವು ಹಸಿರ ಗಾಜಿನ ಬಳೆಗಳನ್ನೂ
ಮತ್ತದೇ ಕಪಾಟಿನ ಮೂಲೆಯಲ್ಲಿ.
ಅಂದು ಒಂದರೆಘಳಿಗೆಯೂ ನಿಲ್ಲದಿದ್ದ
ಗೆಜ್ಜೆಯು ಇಂದು ಮೌನದಿ ಮಲಗಿದೆ.
ಎಲ್ಲ ಕಾರ್ಯಗಳಲ್ಲೂ ತನ್ನ ನಿನಾದ ಹೊಮ್ಮಿಸುತ್ತಿದ್ದ
ಗಾಜಿನ ಬಳೆಗಳೂ ಈಗ ಮೂಲೆಗುಂಪಾಗಿವೆ
ಒಬ್ಬರನ್ನೊಬ್ಬರು ಬಿಟ್ಟಿರದಿದ್ದ ಇವರೆಲ್ಲ
ಎಷ್ಟೋ ವರುಷಗಳ ನಂತರ ಸಂಧಿಸಿದ್ದರೂ ಮಾತೇಕೆ ಒಂದೂ ಇಲ್ಲ?
ಮಾತು ಬೇಕೇ ಇವರ ನಡುವಲ್ಲಿ
ಎಲ್ಲರೂ ತಮಗೊದಗಿರುವ ಸ್ಥಿತಿಗೆ ಕೊರಗುತಿರುವಲ್ಲಿ
ಎಲ್ಲರೊಳಿದ್ದ ಪ್ರಶ್ನೆಗಳಿಷ್ಟೇ
ಬದಲಾಯಿಸಿದ್ದೇನು ನಮ್ಮನ್ನೆಲ್ಲ ಒಂದಾಗಿಸಿದ್ದ "ಆಕೆ"ಯನ್ನು
ಬಿಟ್ಟಿರಲಾಗದಿದ್ದ ನಂಟನ್ನೂ ಕಿತ್ತೆಸೆಯುವಂತೆ
ಭಾವನೆಗಳನ್ನೆಲ್ಲ ಭಸ್ಮ ಮಾಡಿದ್ದು "ಆಕೆ"ಗೆ ಕಂಡೂ ಕಾಣದಂತೆ?
ನಾವೇರದೆತ್ತರಕ್ಕೆ "ಆಕೆ" ಬೆಳೆದಿರುವಳೇ?
ನಮಗೇ "ಆಕೆ"ಯ ಸಿಂಗರಿಸುವ ಅರ್ಹತೆಯಿಲ್ಲವೇ?
ಉತ್ತರಿಸುವವರು ಯಾರು ಈ ಪ್ರಶ್ನೆಗಳಿಗೆ?
ಕೇಳಿಸೀತೇ ಈ ಪ್ರಶ್ನೆಗಳು "ಆಕೆ"ಗೆ?
ಪ್ರಶ್ನೆಗಳಿಗೆ ಉತ್ತರ ಕೊಡದಿದ್ದರೂ ಚಿಂತೆಯಿಲ್ಲ
ನಮ್ಮೆಲ್ಲರನ್ನೊಮ್ಮೆ ನೋಡು ಗೆಳತಿ.
ಬಿಂಕ ಬಿಗುಮಾನವ ಬಿಟ್ಟು ಒಂದಾಗುವ ನಾವೆಲ್ಲರೂ
ಆ ಹಿಂದಿನ ವೈಭವ ನೆನಪಿಸುವ ನೋಡುವವರ ಕಂಗಳಿಗೂ.
Friday, May 29, 2009
ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?
ನಮ್ಮ ಕಾಲೇಜಿಗೆ ಸ್ವಾಯತ್ತತೆ ಬಂದಾಗಿನಿಂದ ನಮಗೆ ಕೊನೆಗೆ ಫಲಿತಾಂಶ ಅಂತ ಕೊಡೋದು ಹತ್ತಕ್ಕೆ ಇಷ್ಟು ಅಂಕ ಅಂತ. ಅದರಲ್ಲಿ ೯ಕ್ಕಿಂತ ಜಾಸ್ತಿ ಬಂದವರಿಗೆ ಜಯನಗರದಲ್ಲಿರೋ ’ಬುಕ್ ಪ್ಯಾರಡೈಸ್’ ನಲ್ಲಿ ಪುಸ್ತಕ ಕೊಳ್ಳಲು ೧೦೦೦ ರೂಪಾಯಿಗಳ ಬಹುಮಾನ. ಕಳೆದೆರಡು ಸೆಮೆಸ್ಟರಿನ ಬಹುಮಾನ ಒಟ್ಟಿಗೆ ಬಂದದ್ದರಿಂದ ೨೦೦೦ ರೂ ಮೌಲ್ಯದ ಪುಸ್ತಕಗಳನ್ನು ಆ ಪುಸ್ತಕದಂಗಡಿಯಿಂದ ಪಡೆಯಬೇಕಿತ್ತು.
ಈಗ್ಗೆ ಒಂದು ತಿಂಗಳ ಹಿಂದೆ ಅಪ್ಪನ್ನ ಜಯನಗರಕ್ಕೆ ಕರೆದುಕೊಂಡು ಹೋಗಿ ೧೦೦೦ ರೂ. ಮೌಲ್ಯದ ಪುಸ್ತಕ ತಂದಿದ್ದೆ ಇನ್ನು ೧೦೦೦ ರೂ.ಗಳ ಪುಸ್ತಕ ತೆಗೆದುಕೊಳ್ಳುವುದು ಬಾಕಿಯಿತ್ತು. ಅದಕ್ಕೆ ಬೇರೆ ಈ ಭಾನುವಾರವೇ (ಮೇ ೩೧) ಕೊನೆಯ ದಿನ ಅಂತ ಘೋಷಿಸಿಯಾಗಿತ್ತು.ಅಪ್ಪ ಈ ಸಲ ಸರಿಯಾಗಿ ದಾರಿ ನೋಡಿಕೋ ಮುಂದಿನ ಸಲದಿಂದ ನಾನು ಬರೊಲ್ಲ ಅಂತ ಹೇಳಿ ಕರೆದುಕೊಂಡು ಹೋಗಿದ್ರು.ಹೋಗ್ತಾ ಒಂದು ದಾರಿ ಬರ್ತಾ ಒಂದು ದಾರಿ. ಸರಿಯಾಗಿ ತಿಳಿಯಲಿಲ್ಲ. ಏನೇ ಆಗಲಿ ಈ ಸಲ ನಾನೇ ಹೋಗಿ ಪುಸ್ತಕ ತೆಗೆದುಕೊಳ್ಳೋಣ ಅಂತ ನನ್ನ ಗೆಳತಿ ಅಶ್ವಿನಿಯನ್ನು ಕೇಳಿದೆ "ಬರ್ತೀರೇನ್ರೀ ಹೋಗಿ ಪುಸ್ತಕ ತಂದುಬಿಡೋಣ" ಅಂತ "ಸರಿ" ಅಂದಳು.
ಮೈಕ್ರೊ ಪ್ರೊಸೆಸರ್ ಪರೀಕ್ಷೆ ಮುಗಿಸಿಕೊಂಡು ಗಿರಿನಗರದಲ್ಲಿರುವ ಹುಡುಗಿಯರ ಹಾಸ್ಟೆಲ್ ಕಡೆ ಹೊರಟೆ. ಅಷ್ಟು ಹೊತ್ತಿಗೆ ನನ್ನ ಗೆಳತಿ ತಯಾರಾಗಿದ್ದಳು. ಇಬ್ಬರೂ ಸ್ಕೂಟಿಯೇರಿ ಅಲ್ಲಿಂದ ಹೊರಟ್ವಿ. ಇನ್ನು ಮುಖ್ಯರಸ್ತೆಗೆ ಬಂದಿರಲಿಲ್ಲ ನನ್ನ ಗೆಳತಿಯನ್ನು ಕೇಳಿದೆ " ನಿಮಗೆ ಜಯನಗರಕ್ಕೆ ಹೋಗೋದು ಹೇಗೆ ಅಂತ ಗೊತ್ತೇನ್ರೀ" ಅಂತ.ಅದಕ್ಕವಳು "ಯಾಕ್ರೀ ನಿಮ್ಗೆ ಗೊತ್ತಿಲ್ವಾ?" ಅಂತ ನನ್ನನ್ನೇ ಕೇಳಿದ್ಳು. "ಇಲ್ಲ" ಅಂದೆ "ಮತ್ತೆ ಹೇಗೆ ಹೋಗೋದು" ಅಂದ್ಳು. "ನೋಡೋಣ ನಡೀರಿ ಕೇಳಿಕೊಂಡು ಹೋಗೋಣ" ಅಂತ ಧೈರ್ಯ ಮಾಡಿ ಮುಖ್ಯರಸ್ತೆಗೆ ಬಂದೇ ಬಿಟ್ವಿ.
ಸರಿ ಕಾಲೇಜು, ಕತ್ರಿಗುಪ್ಪೆ,ಪದ್ಮನಾಭನಗರ( ನಮ್ಮ ಕಾಲೇಜು ಸುತ್ತಮುತ್ತ ನನಗೆ ತಿಳಿದಿರುವುದಿಷ್ಟೇ) ಎಲ್ಲ ದಾಟಿ ಸ್ವಲ್ಪ ಮುಂದೆ ಬಂದ್ವಿ ರಸ್ತೆ ದುರಸ್ತಿಯಲ್ಲಿತ್ತು. ಅಲ್ಲಿ ಹೋಗುತ್ತಿದ್ದ ಎಲ್ಲ ವಾಹನಗಳೂ ಎಡಕ್ಕೆ ತಿರುಗುತ್ತಿದ್ದರಿಂದ ನಾನೂ ಗಾಡಿಯನ್ನು ಆ ಕಡೆ ತಿರುಗಿಸಿದೆ. ಅಶ್ವಿನಿ "ಹೀಗೆ ಏನ್ರೀ ಹೋಗೋದು" ಅಂದ್ಳು. "ಗೊತ್ತಿಲ್ಲ, ಕೇಳೋಣ" ಅಂದೆ. ಅಂದ್ರೂ ಗಾಡಿ ನಿಲ್ಲಿಸದೆ ಹಾಗೆ ಮುಂದೆ ಹೋಗ್ತಾ ಇದ್ದೆ. ಆದ್ರೆ ಹೋಗ್ತಾ ಅಲ್ಲಿಗೆ ರಸ್ತೆ ಮುಗಿದಿತ್ತು ಬಲಕ್ಕೋ ಎಡಕ್ಕೊ ತಿರುಗಲೇಬೇಕಿತ್ತು. ಎಡಕ್ಕೆ ತಿರುಗಿ ಅಲ್ಲಿದ್ದ ಹಣ್ಣಿನಂಗಡಿಯವರನ್ನು ಕೇಳಿದೆ " ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು" ಅವರೇನೋ ಹೇಳ್ತಿದ್ರು ಸರಿಯಾಗಿ ಕೇಳ್ತಾ ಇರ್ಲಿಲ್ಲ. ಅಶ್ವಿನಿ ಗಾಡಿಯಿಂದ ಕೆಳಗಿಳಿದು ಹೋಗಿ ಕೇಳಿಕೊಂಡು ಬಂದು "ಬಲಕ್ಕೆ ತಿರುಗಿಸಬೇಕಿತ್ತಂತೆ" ಅಂದ್ಳು ಸರಿ ಬಲಕ್ಕೆ ತಿರುಗಿಸ್ದೆ.
ಹಾಗೆ ಸ್ವಲ್ಪ ಮುಂದೆ ಬಂದ್ರೆ ಯಾಕೋ ಸರಿ ದಾರಿ ಅಲ್ಲವೇನೋ ಅನ್ನಿಸ್ತು. ಅಲ್ಲಿದ್ದ ಪೇಪರ್ ಅಂಗಡಿಯವರನ್ನು ಅದೇ ಪ್ರಶ್ನೆ ಕೇಳಿದ್ವಿ ಅವರು "ದಯಾನಂದ ಸಾಗರ್ ಕಾಲೇಜು ಮುಂದೆ ಹೋಗಿ ಬಂಟರ ಸಂಘದತ್ತ ಕೇಳೀ ಯಾರು ಬೇಕಾದ್ರೂ ಹೇಳ್ತಾರೆ" ಅಂದ್ರು. ಅಯ್ಯೊ ಅದೆಲ್ಲ ಎಲ್ಲಿದೆ ಅಂತ ಗೊತ್ತಿಲ್ಲ ಅನ್ನೋದು ನನ್ನ ಮುಖದಿಂದಲೇ ಗೊತ್ತಾಯ್ತು ಅನಿಸುತ್ತೆ. " ಈಗ ಬಂದಿದ್ದೀರಲ್ಲ ಇದೇ ದಾರಿಯಲ್ಲಿ ಹಿಂದೆ ಹೋಗಿ ದಯಾನಂದ ಸಾಗರ್ ಕಾಲೇಜು ಸಿಗುತ್ತೆ. ಅಲ್ಲಿಂದ ಮುಂದೆ ಹೋಗಿ ಅಂದ್ರು" ಸರಿ ಮತ್ತೆ ಆ ಕಡೆ ಹೊರಟ್ವಿ . ಆ ಹಣ್ಣಿನಂಗಡಿಯನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಸ್ವಲ್ಪವೇ ದೂರದಲ್ಲಿ ಕಾಲೇಜು ಸಿಕ್ಕಿತು. ಅಲ್ಲಿಂದ ಮುಂದೆ ಹೋಗಿ ಒಂದು ಸಿಗ್ನಲ್ ಹತ್ರ ನಿಂತಿದ್ದಾಗ ಪಕ್ಕದಲ್ಲಿದ್ದ ಸವಾರರನ್ನು ಮತ್ತೆ ಅದೇ ಪ್ರಶ್ನೆ ಕೇಳಿದೆ ಅವರು ಸೀದಾ ಹೋಗಿ ಎಡಕ್ಕೆ ತಿರುಗಿ ಅಂದ್ರು. ಮುಂದೆ ಬರ್ತಾ ಇದ್ದಾಗ ಒಬ್ಬ ಸೈಕಲ್ ಸವಾರ ನಮ್ಮ ಮುಂದೇನೇ ಬಂದು ಇಲ್ಲಿ ಹೋಗಿ ಅಂತ ಆ ತಿರುವನ್ನು ತೋರಿಸಿದ. ಬಿಜಾಪುರದವಳಾದ ಅಶ್ವಿನಿ "ಏನ್ರೀ ಬೆಂಗಳೂರಿನವರು ಇಷ್ಟೊಂದು ಹೆಲ್ಪ್ ಫುಲ್ಲಾ" ಅಂದ್ಳು. ಮಾತಾಡದೆ ಮುಂದೆ ಹೋಗ್ತಾ ಇದ್ದಾಗ ಬನಶಂಕರಿ ಬಸ್ ನಿಲ್ದಾಣದ ಸಮೀಪ ಬಂದಿದ್ದೀವಿ ಅಂತ ಗೊತ್ತಾಯ್ತು.
ಅಲ್ಲಿ ಪಕ್ಕದಲ್ಲಿದ್ದ ಆಟೋ ಚಾಲಕನಿಗೂ ಮತ್ತದೇ ಪ್ರಶ್ನೆ "ಇಲ್ಲಿಂದ ಮೂರನೇ ಸಿಗ್ನಲ್ಲಲ್ಲಿ ಎಡಕ್ಕೆ ತಿರುಗಿ" ಅಂತ ಹೇಳಿದ್ರು.ಹೋದ್ವಿ. ಕೆಂಪು ಸಿಗ್ನಲ್ ಇತ್ತು. ಎಡಕ್ಕೆ ತಿರುಗುವ ಮುನ್ನ ಪಕ್ಕದಲ್ಲಿದ್ದ ಬಸ್ ಚಾಲಕನಿಗೆ ಮತ್ತೆ ಅದೇ ಪ್ರಶ್ನೆ. "ಇಲ್ಲೇ ಎಡಕ್ಕೆ ತಿರುಗಿ"ಅಂದ್ರು. ಹಾಗೆ ಹೋದ್ವಿ. ಜಯನಗರ ನಾಲ್ಕನೇ ಹಂತ ತಲುಪಿಯಾಗಿತ್ತು. ಅಲ್ಲಿ ೯ನೇ ಮುಖ್ಯರಸ್ತೆಗೆ ಹೋಗಬೇಕಿತ್ತು. ಸರಿ ೬ , ೭ , ೮ ಕಂಡ್ರೂ ೯ ಕಾಣಲೇ ಇಲ್ಲ ಮುಂದೆ ಹೋಗಿಬಿಟ್ಟಿದ್ವಿ. ಅಲ್ಲಿ ಮತ್ತೊಬ್ಬರನ್ನು ಕೇಳಿದ್ವಿ ಆದ್ರೆ ಪ್ರಶ್ನೆ ಬೇರೆ " ೯ನೇ ಮುಖ್ಯರಸ್ತೆಯಲ್ಲಿರೋ ಬುಕ್ ಪ್ಯಾರಡೈಸ್ ಗೆ ಹೇಗೆ ಹೋಗೋದು" ಅಂತ. ಅವರು ಹೇಳಿದ ಹಾಗೆ ಹೋಗ್ತಾ ಇದ್ವಿ ಅಷ್ಟರಲ್ಲಿ ಅಲ್ಲಿದ್ದ ಒಂದು ದೇವಾಲಯ ಕಣ್ಣಿಗೆ ಬಿತ್ತು. ಹೋದ ಸಲ ಅಪ್ಪನ ಜೊತೆ ಹೋದಾಗ ನೋಡಿದ್ದ ನೆನೆಪಿತ್ತು.ಅಲ್ಲಿ ಎಡಕ್ಕೆ ತಿರುಗಿ ನೋಡಿದ್ರೆ ಬುಕ್ ಪ್ಯಾರಡೈಸ್ ಗೆ ಹೋಗೋ ದಾರಿ ’ಒನ್ ವೇ’. ಸರಿ ಮುಂದಿನ ರಸ್ತೆಯಿಂದ ಅಲ್ಲಿಗೆ ಹೋಗಿ ಪುಸ್ತಕ ತಂದದ್ದಾಯಿತು. ಅಲ್ಲಿಂದ ಬರುವಾಗ ಅಪ್ಪ ತೋರಿದ್ದ ದಾರಿ ನೆನಪಿದ್ದುದರಿಂದ ಅದೇ ದಾರಿಯಲ್ಲಿ ವಾಪಸ್ ಬಂದು ಅಶ್ವಿನಿಯನ್ನು ಹಾಸ್ಟೆಲ್ ಗೆ ಬಿಟ್ಟು ನಾನೂ ಮನೆ ಸೇರಿದೆ.
ನನಗೆ "ಜಯನಗರ ೪ನೇ ಹಂತಕ್ಕೆ ಹೇಗೆ ಹೋಗೋದು?" ಅಂತ ಹೇಳಿದ ಎಲ್ಲರಿಗೂ ನನ್ನ ಧನ್ಯವಾದಗಳು. ಇದರಿಂದ ನನಗೆ ಇನ್ನು ಬೆಂಗಳೂರಲ್ಲಿ ಎಲ್ಲಿಗೆ ಬೇಕಾದ್ರು ಹೋಗಬಹುದು ಅನ್ನೋ ಧೈರ್ಯ ಬಂದಿದೆ.
Saturday, April 25, 2009
ಮಳೆ
ಬಾನಲ್ಲಿ ಗುಡುಗಿದನು ಮೇಘರಾಜ
ಭೂಮಿಯ ಜೊತೆ ಮಾತನಾಡಬಯಸಿ
ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ
ಕೇಳಲೇ ಇಲ್ಲವೆಂಬಂತೆ ನಟಿಸಿ
ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು
ಕಳುಹಿಸಿದನವ ಮಿಂಚೆಂಬ ಬೆಳಕು
ಆದರೆ ಅದೂ ನೀಡಲಿಲ್ಲ
ಭೂಮಿಯ ನಟನೆಗೆ ಯಾವುದೇ ತೊಡಕು
ಗಾಢ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ
ಎಂದು ಸುರಿಸಿದ ವರ್ಷಧಾರೆ
ಅದರಿಂದ ಪುಳಕಗೊಂಡು ಪರಿಮಳ ಸೂಸಿದರೂ
ಪ್ರತಿಕ್ರಿಯಿಸಲಿಲ್ಲ ಧರೆ
ಕುಪಿತನಾದ ಮೇಘರಾಜ
ಆರ್ಭಟಿಸಿದಾಗ ಸಿಡಿಲು ಬಂದೆರಗಿತು
ನಡುಗಿ ಹೋದಳು ಭೂಮಿ
ಇದರೊಂದಿಗೆ ಅವಳ ನಟನೆಯೂ ಕೊನೆಗೊಂಡಿತು
ಭೂಮಿಯ ಚುಂಬಿಸಿ ಮೇಘರಾಜನ
ಸಂದೇಶ ರವಾನಿಸಿತು ಮಳೆ
ಅವನೆಲ್ಲ ತನ್ನ ಒಡಲಾಳದಲ್ಲಿ
ಬೆಚ್ಚಗೆ ತುಂಬಿಸಿಕೊಂಡಳು ಇಳೆ
Wednesday, March 11, 2009
ನಿನ್ನಲೊಂದು ಬಿನ್ನಹ
ನನ್ನ ಬಾಳು ಹೀಗೆ ಇರಬೇಕೆಂದು ನಾನು ಕನಸ ಕಂಡದ್ದು ತಪ್ಪೇ?
ಅ ಕನಸ ನನಸು ಮಾಡುವತ್ತ ಮೊದಲಹೆಜ್ಜೆ ಇಟ್ಟಿದ್ದು ತಪ್ಪೇ?
ನನ್ನ ಪ್ರತಿಯೊಂದು ಕ್ರಿಯೆಯೂ ನಿನಗೆ ತಿಳಿದುದೇ ಅಲ್ಲವೇ?
ನನ್ನ ಪ್ರತಿಹೆಜ್ಜೆಗೂ ಮುನ್ನ ನಿನ್ನ ಸಹಮತವಿದ್ದುದೂ ನಿಜವಲ್ಲವೆ?
ಏಕೀ ಸಂಶಯ ಅಪನಂಬಿಕೆ ನುಸುಳಿದೆ ನಮ್ಮ ನಡುವಲ್ಲಿ?
ಅಥವಾ ಸಮಾಜ ಏನೆನ್ನಬಹುದೆಂಬ ಭಯ ಮನೆಮಾಡಿದೆಯೇ ನಿನ್ನಲ್ಲಿ?
ಇದೇ ಮೊದಲಲ್ಲ ನೀ ನನ್ನ ಬಯಕೆಗೆ ತಣ್ಣೀರೆರಚಿದ್ದು
ಸವಿಮಾತ ಮೂಲಕವೇ ಈ ನನ್ನ ಪುಟ್ಟ ಹೃದಯಕ್ಕೆ ಚುಚ್ಚಿದ್ದು
ಕಂಗಳ ತುಂಬಿರುವ ಹನಿಗಳು ನಿನಗೆ ಕಾಣದೆ?
ತಾಳಲಾರೆ ಈ ನೋವ ನಾನಿನ್ನು ಮುಂದೆ
“ನಾ ಬರೆದ ಬಾಳಚಿತ್ರ ಕಣ್ಣೀರಿನಿಂದಲೇ ಅಳಿಸಿ ಹೋಗಿದೆ
ಪುನಃ ಅದನು ಚಿತ್ರಿಸುವ ಆಸೆಯು ಬತ್ತಿ ಹೋಗಿದೆ
ಇನ್ನು ನೀನೆ ನನ್ನೀ ಬಾಳ ಕಥೆಗಾರ
ಮರುನುಡಿಯಿಲ್ಲದೆ ಪಾಲಿಸುವೆ ನಿನ್ನ ಆದೇಶವ ಪೂರ"
ಇಲ್ಲ…. ಹೀಗೆ ಹೇಳಿ ನನ್ನ ಕನಸನ್ನೆಲ್ಲ ಸುಟ್ಟು ಹಾಕಲು ನಾ ಯೋಗಿಯಲ್ಲ
ನನ್ನಾಸೆಯ ನೀನು ಗೌರವಿಸುವೆಯೆಂಬ ಆಶಯವೂ ಸೋತಿಲ್ಲ
ಹೇಳು ಮುಂದೊಂದು ದಿನ ನನಗೂ ಸಮಯ ಬರುವುದಲ್ಲವೇ?
ನನ್ನ ಕನಸಿನ ಜೀವನ ಜೀವಿಸಲು ಅವಕಾಶ ಕೊಡುವೆಯಲ್ಲವೇ?
Sunday, March 1, 2009
ಬಾ ನನ್ನ ಜೊತೆಯಾಗಿ
ಬೈಕನ್ನೇರಿ ಇರುಳಿನಲಿ
ಬೀಸುವ ಗಾಳಿಯ ವೇಗದಲಿ
ಘಟ್ಟದ ತಿರುವುಗಳನ್ನು ದಾಟಿ
ದೂರ ಕಳೆದು ಹೋಗುವ||
ಮನೋಹರ ಬೆಟ್ಟದಂಚಿನಲ್ಲಿ
ಹೂಗಳ ಏಣಿ ಮಾಡಿ
ಮೋಡದ ಮೇಲೆ ಏರುತ
ಚಂದ್ರಲೋಕಕ್ಕೆ ಹಾರುವ||
ಚುಕ್ಕಿ ಚಂದ್ರಮರ ಮದುವೆಗೆ
ಚಪ್ಪರವ ಕಟ್ಟುವ
ಅವರ ಮಿಲನ ಮಹೋತ್ಸವದಿ
ಸಂಭ್ರಮದಿ ಪಾಲ್ಗೊಳ್ಳುವ||
ಬಂದ ತಾರೆಗಳನೆಲ್ಲ ಎಣಿಸುವ
ಪ್ರತಿ ತಾರೆಗೂ ನಮ್ಮ
ಕನಸ ಬರೆದು ಕಟ್ಟುವ
ಸ್ವಪ್ನಲೋಕವನ್ನೆ ಬರಿದು ಮಾಡುವ||
ಜಗದ ನಿಯಮ ಮುರಿಯುವ
ಕಾಲವನ್ನೆ ತಡೆಯುವ
ಮೈ ಮರೆತು ವಿಹರಿಸುತ
ಇರುಳ ಪೂರ ಕಳೆಯುವ||
ನಾ ಪ್ರಕೃತಿಯ ಮಡಿಲಲ್ಲಿ
ನೀ ನನ್ನ ಮಡಿಲಲ್ಲಿ
ಬೇರೇನು ಬೇಕು ಹೇಳು
ಪ್ರೀತಿಯೆ ತುಂಬಿರಲು ಕಂಗಳಲಿ||
ಹೇಳು ಗೆಳೆಯ ಬೇರೆಲ್ಲಿದೆ
ಅವನಿಯೊಳಿಂಥ ಸುಖ
ನನಗ್ಯಾರುಂಟು ನೀನಲ್ಲದೆ
ಬಾ ನನ್ನ ಜೊತೆಯಾಗಿ ಸಖ||
Friday, February 27, 2009
ನಿನಗಾಗಿ ಕಾದಿರುವೆ
ಹುಚ್ಚೆದ್ದು ಕುಣಿಯುತಿರುವ
ಆಸೆಗಳನೆಲ್ಲ ತಡೆದಿಟ್ಟುಕೊಂಡು
ಹಾರಾಡುತಿರುವ ಮನಸನ್ನು
ತಹಬಂದಿಗೆ ತಂದುಕೊಂಡು
ತಪ್ಪದೆ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
ನಿನ್ನಿಷ್ಟದ ಕೆಂಪು ದಿರಿಸನ್ನು ಧರಿಸಿ
ಕಾಳಜಿಯಿಂದ ಸಿಂಗರಿಸಿಕೊಂಡು
ಮನದಾಳದಲ್ಲಿ ನಿನ್ನ
ನೆನಪುಗಳನ್ನೇ ತುಂಬಿಕೊಂಡು
ನಿರಾಸೆಗೊಳಿಸದೆ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
ಮುನಿಸಿಕೊಂಡಿದ್ದರೆ ರಮಿಸಿ
ಕೋಪ ತಣಿಸುವೆಯೆಂದು
ಜೊತೆಯಲ್ಲಿ ಕುಳಿತು ನನ್ನ
ಕನಸುಗಳಿಗೆ ರೂಪ ಕೊಡುವೆಯೆಂದು
ನನಗೋಸ್ಕರ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
ಮುಡಿದ ಮಲ್ಲಿಗೆ
ಹೂವಿನ ದಂಡೆ ಬಾಡಿದರೂ
ಕಾಯುವ ಬೇಸರ
ಎಡಬಿಡದೆ ಕಾಡಿದರೂ
ತಡವಾದರೂ ನೀ ಬಂದೆ ಬರುವೆಯೆಂದು
ಗೆಳೆಯ ನಾ ನಿನಗಾಗಿ ಕಾದಿರುವೆ ||
Monday, February 16, 2009
ಹೃದಯ ಗೀತೆ
ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ
ಬಾ ಬೇಗ ನೀ ನನ್ನ ಬಳಿಗೆ
ಎನುತ ಮೀಟಿದನವ ನನ್ನ ಹೃದಯ ವೀಣೆ
ಅಂದಿನಿಂದ ನನಗೇನಾಗಿದೆಯೋ ನಾ ಕಾಣೆ
ಮನಸಿನ ಪುಟಗಳ ಮೇಲೆ
ಅವ ಬರೆದ ಹಾಡಿದೆ
ಹೃದಯ ತನನಂ ಎಂದಿದೆ
ಕಣಕಣವು ಅದ ಪ್ರತಿಧ್ವನಿಸಿದೆ
ಕಂಡ ಕನಸೆಲ್ಲ ನನಸಾಗಲೆಂಬ ಬಯಕೆ
ಸದಾ ನಿನ್ನ ನೆನಪುಗಳದೆ ಕನವರಿಕೆ
ಇದ್ದ ಕೋಟೆಗಳನೆಲ್ಲ ದಾಟಿ ಒಳಬಂದಿಹೆ ನೀ ಗೆಳೆಯ
ಬಿಡಬೇಡ ಎಂದೆಂದಿಗೂ ನೀ ಹಿಡಿದ ಈ ಕೈಯ