Friday, August 28, 2009

ಕಲಿಗಾಲ

ವಿಸ್ಮಯವೇನೋ ಇದು - ನನ್ನ ನಿನ್ನ ಮಿಲನ
ವಾರೆಗಣ್ಣನೋಟ, ಪಿಸುಮಾತು, ಲಜ್ಜೆ ,ತುಂಬು ಸಡಗರದ ನಡುವೆ
ರುಷವೇ ಮನೆಮಾಡಿತ್ತು ಮನದಿ ನಮ್ಮ ವಿವಾಹದಂದು

ವಿಪರ್ಯಾಸವೇನೋ - ಇದು ನನ್ನ ನಿನ್ನ ಕದನ
ವಾದ ವಿವಾದ, ಸಿಡುಕು, ಮುನಿಸು, ಭಿನ್ನಾಭಿಪ್ರಾಯವೆಲ್ಲಾ ಸೇರಿ
ಡ ಸೇರದ ದೋಣಿಯಾಯ್ತು ನಮ್ಮ ಬಾಳು

ವಿಧಿಯಾಟವೇನೋ ಇದು - ನನ್ನ ನಿನ್ನ ವಿಚ್ಛೇದನ
ಣರಂಗದಲ್ಲಿರುವಂಥ ದ್ವೇಷ, ದರ್ಪ, ಅಸೂಯೆ, ದುರಭಿಮಾನಗಳ ನಡುವೆ
ತ್ಯೆಯಾಗಿತ್ತು ಸುಖ ಸಂತೋಷ ನಮ್ಮ ಒಡಲಾಳದಲ್ಲಿ

ಇದು ನಾನು ನನ್ನ ಗೆಳತಿ ನಯನ analog communication theory class ಅಲ್ಲಿ ಬರೆದಿದ್ದು... ಹಾಗಾಗಿ ಇದರ ಕ್ರೆಡಿಟ್ ಇಬ್ಬರಿಗೂ ಸೇರುತ್ತೆ....

ಪಲ್ಲವಿ - ಚರಣ

ಪ್ರೀತಿಯೆಂಬ ಹಾಡಿಗೆ ಪಲ್ಲವಿಯ ನೀ ಬರೆದೆ
ಚರಣವಿನ್ನು ನಿನ್ನ ಪಾಲು ತುಂಬಿಸದನು ನೀನೇ ಎಂದೆ

ಪ್ರೀತಿಯ ಅಡಿಪಾಯಕ್ಕೆ ವಿಶ್ವಾಸವನ್ನು ತುಂಬಿ
ಆಸೆ-ಭಾವಗಳಿಂದ ಕನಸಿನ ಗೂಡನ್ನು ಕಟ್ಟಿ
ಸಾಮರಸ್ಯದ ಹಸೆಯಿಟ್ಟು ಸಹಬಾಳ್ವೆಯ ಜ್ಯೋತಿ ಬೆಳಗಿಸಿದರೆ ಸಾಕು
ಚರಣ ಪೂರ್ಣವಾಗಲು ಇನ್ನೇನು ಬೇಕು

ಎಂದೆನಿಸುತಿರುವಾಗಲೇ ನನಗಾಯಿತು ಅರಿವು
ಇವೆಲ್ಲವೂ ತುಂಬಿದ್ದ ನನ್ನ ಮನವೇ ಆಗಿದೆ ಕಳುವು

ಮನಸನ್ನೇ ಕದ್ದಿರುವೆಯಲ್ಲ ಆಸೆಗಳನೆಲ್ಲಿಂದ ತರಲಿ
ಬರಿದಾದ ಈ ಎದೆಗೂಡಲ್ಲಿ ಅಕ್ಷರಗಳ ಹೇಗೆ ಹುಡುಕಲಿ

ಅರ್ಥವಿಲ್ಲದ ಸಾಲುಗಳಿಂದ ಚರಣ ಪೂರ್ತಿಯಾಗುವುದು ಹೇಗೆ
ಒಬ್ಬಂಟಿಯಾಗಿ ಈ ಪ್ರೇಮಗೀತೆಯ ಹಾಡುವುದು ಹೇಗೆ

ಸಪ್ತಸಾಗರಗಳಾಚೆಯೆಲ್ಲೋ ನೀ ಅಡಗಿ ಕುಳಿತು
ಮೂಡಿಸಿರುವೆ ನನ್ನೊಳಗೆ ಎಂದೂ ಮಾಸದ ಗುರುತು

ಒಮ್ಮೆ ಬಂದು ನನ್ನ ನೋಡು ಕಣ್ಣ ತುಂಬಾ
ರೆಪ್ಪೆ ಹಿಂದೆ ಹಿಡಿದಿಡುವೆ ನಾ ನಿನ್ನ ಬಿಂಬ

ಭೂಮಿಗೂ ಬಾನಿಗೂ ಇರುವುದೆಷ್ಟೋ ಅಂತರ
ನಿನ್ನ ನೋಡಲಿಲ್ಲಿ ನನಗೆ ಅಷ್ಟೇ ಕಾತರ

ಹುಡುಗಾಟ ಸಾಕಿನ್ನು ಬೇಕೇ ಈ ಪರೀಕ್ಷೆ
ಚರಣ ಬರೆಯಲು ಜೊತೆಯಾಗು ಹುಸಿ ಮಾಡದೆ ನಿರೀಕ್ಷೆ

Tuesday, August 18, 2009

ನಾನು ಕಾರ್ ಡ್ರೈವ್ ಮಾಡುತ್ತಿದ್ದಾಗ...

ಹೋದ ಸಾರಿ ಊರಿಗೆ ಸ್ವಾತಂತ್ರ್ಯದಿನದಂದು ಹೋಗಿದ್ದಾಗ ನಾನು ನಮ್ ತಾತಂಗೆ ಹೇಳಿದ್ದೆ "ಇನ್ನೊಂದು ವರ್ಷದಲ್ಲಿ ನಾನೇಕಾರ್ ಡ್ರೈವ್ ಮಾಡಿಕೊಂಡು ಬರ್ತೀನಿ" ಅಂತ.ಆಗ ನಮ್ ತಾತ ಅಜ್ಜಿ ಇಬ್ರೂ "ನೀನು ಓಡಿಸ್ತೀಯಾ?" ಅಂತ ನಕ್ಕಿದ್ರು. ಅಮ್ಮನೋಡ್ತಾ ಇರಿ ಮುಂದಿನ ವರ್ಷ ಅವಳೇ ಓಡಿಸಿಕೊಂಡು ಬರ್ತಾಳೆ " ಅಂದ್ರು. ಅಂತೂ ಇಂತೂ ಕಾರ್ ಡ್ರೈವಿಂಗ್ ಕಲಿತು ಕಳೆದಭಾನುವಾರ(೧೬ರಂದು) ಒಂದು ಮದುವೆಗೆ ಹೋಗಬೇಕಿದ್ದರಿಂದ ನಾನೇ ಬೆಂಗಳೂರಿನಿಂದ ಕಾರ್ ಓಡಿಸಿಕೊಂಡು ಹೋಗಿದ್ದೆ.

ಹೋಗ್ತಾ ದಾರಿಯಲ್ಲಿ.....

. ತುಮಕೂರು - ಗುಬ್ಬಿ ಮಧ್ಯದ ದಾರಿಯಲ್ಲಿ ಮಲ್ಲಸಂದ್ರ ಅನ್ನೋ ಒಂದು ಊರು ಸಿಗುತ್ತೆ. ಅಪ್ಪ ಅಲ್ಲಿ ಹೂವು ತರ್ತೀನಿ ಗಾಡಿನಿಲ್ಲಿಸು ಅಂದ್ರು. ನಿಲ್ಲಿಸಿ ಅಪ್ಪ ಬರೋದನ್ನೆ ಕಾಯ್ತಾ ಇದ್ದೆ. ಆಗ ಒಬ್ಳು ಹುಡುಗಿ ಸುಮಾರು ೧೦ ವರ್ಷ ಇರ್ಬೇಕು ನೀರು ತಗೊಂಡುಹೋಗ್ತಿದ್ಳು. ಕಾರ್ ಒಳ್ಗೆ ಇಣುಕಿ ನಾನು ಕೂತಿದ್ದನ್ನ ನೋಡಿ ಅವರಮ್ಮನಿಗೆ "ನೋಡಿಲ್ಲಿ ಈಯಮ್ಮ ಕಾರ್ ಬಿಡ್ತಾ ಇರೋದಾ" ಅಂದ್ಳು.ಅವರಮ್ಮನೂ ಸೋಜಿಗದಿಂದ ಒಮ್ಮೆ ಕಾರ್ ಒಳಗೆ ಇಣುಕಿ ಮುಂದೆ ಹೋದಳು.

. ತುಮಕೂರು ಡೈರಿಯ ಬಳಿ ಅಪ್ಪ ಪೇಡ ತಗೊಳ್ಳೋಣ ಅಂದ್ರು. ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಹಿಂದೆ ಬರುತ್ತಿದ್ದಗಾಡಿಗಳ ಕಡೆ ನೋಡಿ ಯಾವುದೇ ಗಾಡಿಯಿರಲಿಲ್ಲವಾದ್ದರಿಂದ ಬಲಕ್ಕೆ ಬಂದೆ. ಅಲ್ಲಿ ನಿಂತಿದ್ದ ಒಬ್ಬ ಹುಡುಗ " ' L' ಬೋರ್ಡು " ಅಂದ. ನನ್ ಕಾರು ನನ್ನಿಷ್ಟ 'L' ಬೋರ್ಡಾದ್ರೂ ಹಾಕ್ತೀನಿ ಏನಾದ್ರು ಹಾಕ್ತೀನಿ ನಾನು ಸರಿಯಾಗಿ ಓಡಿಸ್ತಾ ಇರ್ಬೇಕಾದ್ರೆ ಕಾಮೆಂಟ್ ಯಾಕೆ ಅಂತ ಕೇಳ್ಬೇಕು ಅನ್ನಿಸಿದ್ರೂ ಸುಮ್ನೆ ಜಗಳ ಯಾಕೆ ಅಂತ ಏನೂ ಮಾತಾಡಲಿಲ್ಲ.

. ಮದುವೆಮನೆಗೆ ಹೋಗಿ ಮದುವೆ ಮುಗಿಸಿಕೊಂಡು ಬರುವಾಗ ಅಪ್ಪ ಕಾರ್ ಕೀ ಕೊಟ್ಟು ಗೇಟ್ ಹತ್ರ ಕಾರ್ ತಗೊಂಡು ಬಾಅಂದ್ರು. ನಾನು ತಂದು ಗೇಟ್ ಮುಂದೆ ನಿಲ್ಲಿಸಿದಾಗ ಅಪ್ಪ ಅಮ್ಮ ದೊಡ್ಡಪ್ಪ ದೊಡ್ಡಮ್ಮನ ಜೊತೆ ಮಾತಾಡ್ತಾ ಇದ್ರು. ನಾನುಬಂದಿದ್ದನ್ನು ನೋಡಿ ದೊಡ್ಡಪ್ಪ ವ್ಯಂಗ್ಯವಾಗಿ "ಯಾಕೆ ಇವತ್ತು ಬೇರೆ ಯಾರೂ ಡ್ರೈವರ್ ಸಿಗ್ಲಿಲ್ವಾ" ಅಂದ್ರು. ನಂಗೆ ಕೋಪ ಬಂತು. "ಯಾಕೆ ನಾನು ಡ್ರೈವ್ ಮಾಡ್ಬಾರ್ದಾ?" ಅಂದೆ. ಅಪ್ಪ ಇವತ್ತು ಬೆಂಗಳೂರಿಂದ ಅವಳೆ ಓಡಿಸಿಕೊಂಡು ಬಂದಿರೋದು ಅಂದ್ರು. ದೊಡ್ಡಪ್ಪ ಮತ್ತೊಮ್ಮೆ ವ್ಯಂಗ್ಯವಾಗಿ ನಕ್ಕು ಸುಮ್ಮನಾದ್ರು.

. ಮುಂದೆ ಊರಿಗೆ ಹೋಗಿ ಮನೆ ಮುಂದೆ ನಿಲ್ಲಿಸಿದಾಗ ಎಲ್ರೂ ಏನೋ ಜೋರಾಗಿ ನಗ್ತಿದ್ರು. ತಾತ ಏನೂ ಮಾತಾಡ್ಲಿಲ್ಲ. ಇನ್ನೂ೧೩ ವರ್ಷದ ನನ್ ತಮ್ಮಂಗೆ ನೀನು ಯಾವಾಗ್ ಕಲಿಯೋದು ಅಂದ್ರು ಅಷ್ಟೆ. ಅಜ್ಜಿ ನೀನೆ ಓಡಿಸ್ಕೊಂಡು ಬಂದುಬಿಟ್ಟಿದ್ದೀಯಾಅಂದ್ರು. ಅಜ್ಜಿಗೆ ಖುಷಿಯಾಗಿತ್ತು ನಾ ಕಲಿತದ್ದು. ತಾತಂಗೆ ಯಾಕೋ ಬೇಜಾರಾದಂಗಿತ್ತು.

. ಊಟ ಮುಗಿಸಿ ಮತ್ತೆ ವಾಪಸ್ ಹೊರಟ್ವಿ. ಅಲ್ಲಿ ದಾರಿಯಲ್ಲಿ ಒಂದು ಹುಡುಗಿ ಆಟ ಆಡ್ತಾ ಇದ್ದಳು. ಹಾರ್ನ್ ಮಾಡಿದೆ. ಗಾಡಿನೋಡಿ ಕಿರುಚಿದ್ಳು. "ಅಮ್ಮ ಬೇಗ ಓಡ್ ಬಾ. ಒಂದು ಹೆಂಗ್ಸು ಕಾರ್ ಓಡಿಸ್ತಾ ಇದ್ದಾಳೆ" ಅಂತ. ನಕ್ಕು ಮುಂದೆ ಬಂದೆ.

. ಇನ್ನು ಮುಂದೆ ಬಂದ್ರೆ ಒಂದು ನಾಲ್ಕೈದ್ ಜನ ಹುಡುಗ್ರು ನಿಂತಿದ್ರು. " ಟ್ರೈನಿಂಗ್ ಕೊಡ್ತಾ ಅವ್ರೆ" ಅಂತ ಇನ್ನೊಂದು ಕಾಮೆಂಟ್.

. ಮತ್ತೆ ಇನ್ನೇನು ಗುಬ್ಬಿ ಸಮೀಪ ಬಂದಾಗ ಯಾರೋ ಒಬ್ರು ಸೈಕಲ್ ತುಳಿಯುತ್ತಾ ಹಿಂದೆ ನೋಡ್ಕೊಂಡು ಬರ್ತಿದ್ರು. ಜೋರಾಗಿಹಾರ್ನ್ ಮಾಡಿದೆ. ತಕ್ಷಣ ಗಾಡಿ ಕಡೆ ನೋಡಿ ಒಂದು ಕ್ಷಣ ಹಾಗೇ ನಿಂತಿದ್ದು ಆಮೇಲೆ ಸೈಕಲ್ ಪಕ್ಕಕ್ಕೆ ನಿಲ್ಲಿಸಿ ಕಾರನ್ನೇ ನೋಡ್ತಾಇದ್ರು ಅಂತ ಹಿಂದೆ ಕುಳಿತಿದ್ದ ನನ್ ತಮ್ಮ ಹೇಳ್ದ. ಅಲ್ಲ ಒಬ್ಳು ಹುಡುಗಿ ಕಾರ್ ಡ್ರೈವ್ ಮಾಡಿದ್ರೆ ಇವ್ರಿಗೆಲ್ಲಾ ಏನಾಗುತ್ತೆ ಅಂತ. ಅಲ್ಲೆಲ್ಲಾ ಕಾರ್ ಡ್ರೈವಿಂಗ್ ಗೊತ್ತಿರೋ ಹುಡುಗಿಯರು ಕಮ್ಮಿ ಇರ್ಬಹುದು ಆದ್ರೆ ಅದೇ ಒಂದು ಸೋಜಿಗ ಅನ್ನುವಂತೆ ನೋಡೋದಾ?

ಇದೆಲ್ಲಾ ನನ್ ಕಿವಿಗೆ ಬಿದ್ದಿದ್ದಂತೂ ನಿಜ. ಆದ್ರೆ ಮೊದಲನೇ ಸಲ ಊರಿಗೆ ಕಾರ್ ಡ್ರೈವ್ ಮಾಡಿಕೊಂಡು ಹೋಗ್ತಾ ಇದ್ದೀನಿ ಅಂತನಾನು ತುಂಬಾ excite ಆಗಿ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೀನಾ??

ಗೊತ್ತಿಲ್ಲ "

Wednesday, August 5, 2009

ಕವಿ ಕಾವ್ಯ ಶ್ರಾವಣ


ಆಧುನಿಕ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿಯೆಲ್ಲೋ ನಶಿಸಿ ಹೋಗುತ್ತಿದೆ ಎಂಬ ಕೂಗು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ವಚನಜ್ಯೋತಿ ಬಳಗವು ಕಳೆದ ಹದಿಮೂರು ವರ್ಷಗಳಿಂದ ಕನ್ನಡ ಸಾಹಿತ್ಯ-ಸಂಸ್ಕೃತಿಯ ಪ್ರಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ವಚನ ಚಳುವಳಿಯ ಪರಿಚಯ ಮಾಡಿಕೊಟ್ಟು ತನ್ಮೂಲಕ ಕನ್ನಡ ಸಂಸ್ಕೃತಿಯನ್ನು ಬಿತ್ತುವುದು ಬಳಗದ ಪ್ರಮುಖ ಕಾರ್ಯವಾಗಿದೆ.

ಈ ವರ್ಷ ಶ್ರಾವಣ ಮಾಸಾದ್ಯಂತ ಪ್ರತಿದಿನ ಒಬ್ಬೊಬ್ಬರ ಮನೆಯಲ್ಲಿ "ಕವಿ ಕಾವ್ಯ ಶ್ರಾವಣ - ಮನೆಯಿಂದ ಮನಕ್ಕೆ ಕನ್ನಡ ಸಂಸ್ಕೃತಿ ಸಂಚಾರ" ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ೨೬ನೇ ಜುಲೈ ೨೦೦೯ರಿಂದ ೨೦ನೇ ಆಗಸ್ಟ್ ೨೦೦೯ರವರೆಗೆ ಈ ಕಾರ್ಯಕ್ರಮ ಪ್ರತಿದಿನ ಸಂಜೆ ೬ ಗಂಟೆಗೆ ನಡೆಯುತ್ತದೆ. ಆದಿಕವಿ ಪಂಪನಿಂದ ಮೊದಲ್ಗೊಂಡು ರಾಷ್ಟ್ರಕವಿ ಕುವೆಂಪುರವರ ವರೆಗೆ ಕನ್ನಡದ ಪ್ರಮುಖ ಕವಿಗಳ-ದಾರ್ಶನಿಕರ ಕಿರುಪರಿಚಯವನ್ನು ಮನೆ- ಮನೆಗಳಲ್ಲಿ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಮೊದಲಿಗೆ ಗೀತ ಗಾಯನ ನಂತರ ಕವಿ ಕಾವ್ಯ ಪರಿಚಯದ ಮೂಲಕ ಕನ್ನಡದ ಸಿರಿವಂತಿಕೆಯನ್ನು ಆತಿಥೇಯರಿಗೂ ಅತಿಥಿಗಳಿಗೂ ಉಣಬಡಿಸುವ ಯತ್ನ ಇದಾಗಿದೆ.

ಜುಲೈ ತಿಂಗಳಲ್ಲಿ ನಮ್ಮ ತಂದೆಗೆ ಇದರ ಬಗ್ಗೆ ಮಾಹಿತಿ ಸಿಕ್ಕಿದ್ದರೂ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಬಳಗದ ಸದಸ್ಯರೊಂದಿಗೆ ಚರ್ಚೆ ನಡೆಸುವ ದಿನ ಕಾರಣಾಂತರಗಳಿಂದ ಹೋಗಲಾಗದೆ ಇದ್ದುದರಿಂದ ಮೊದಲು ಕಾರ್ಯಕ್ರಮ ವೇಳಾಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಹೋಗಿ ಬಂದ ಅಪ್ಪ ಅಮ್ಮ ಇಬ್ಬರಿಗೂ ನಮ್ಮ ಮನೆಯಲ್ಲೂ ಇಂಥ ಒಂದು ಕಾರ್ಯಕ್ರಮ ನಡೆಸಬೇಕು ಎಂಬ ಆಸೆ ಬಲವಾಯಿತು. ಈ ಬಾರಿ ಸಾಧ್ಯವಾಗದೇ ಇದ್ದರೂ ಮುಂದಿನ ಬಾರಿ ಖಂಡಿತ ನಡೆಸಬೇಕು ಎಂದು ಮಾತನಾಡುತ್ತಿದ್ದಾಗಲೇ ಕಾರ್ಯಕ್ರಮ ವ್ಯವಸ್ಥಾಪಕರಿಂದ ಒಂದು ಕರೆ ಬಂತು. "ಸೋಮವಾರ ಕಾರ್ಯಕ್ರಮ ನಡೆಸಬೇಕಿದ್ದ ಮನೆಯವರು ಕಾರ್ಯಕ್ರಮ ನಡೆಸುವುದರಿಂದ ಹಿಂದೆ ಸರಿಯುತ್ತಿದ್ದಾರೆ ನಿಮಗೆ ಆಸಕ್ತಿಯಿದ್ದರೆ ನೀವು ನಡೆಸಬಹುದು" ಎಂದರು. ಅಪ್ಪ ಒಪ್ಪಿಗೆ ನೀಡುವುದರೊಂದಿಗೆ ನಮ್ಮ ಮನೆಯಲ್ಲಿ ಕಾರ್ಯಕ್ರಮ ನಡೆಸುವುದು ಖಾತ್ರಿಯಾಯ್ತು.

ಸೋಮವಾರ ಸಂಜೆ ಸುಮಾರು ೬ : ೧೫ಕ್ಕೆ ಶ್ರೀಮತಿ ಸರಸ್ವತಿ ಹೆಗಡೆಯವರ ಗಾಯನದೊಂದಿಗೆ ಕಾರ್ಯಕ್ರಮ ಶುರುವಾಯಿತು. ವಚನ, ಭಕ್ತಿಗೀತೆ ಗಾಯನ ಸುಮಾರು ೭ ಗಂಟೆಯವರೆಗೆ ನಡೆಯಿತು.ನಮ್ಮ ಮನೆಯಲ್ಲಿ ಕವಿ ಷಡಕ್ಷರದೇವ ಅವರ ಕಿರುಪರಿಚಯ ನೀಡುವುದಿತ್ತು.ಗಾಯನಾನಂತರ ನಿವೃತ್ತ ತಹಸೀಲ್ದಾರರಾದ ಕೆ.ಎಂ.ರೇವಣ್ಣನವರು ಕವಿ ಷಡಕ್ಷರದೇವ ಅವರ ಬಗ್ಗೆ ತಮ್ಮ ಉಪನ್ಯಾಸ ಪ್ರಾರಂಭಿಸಿದರು. ನಿಜ ಹೇಳಬೇಕಂದ್ರೆ ಅದುವರೆಗೆ ಷಡಕ್ಷರದೇವ ಎಂಬ ಮಹಾಕವಿಯೊಬ್ಬರು ಇದ್ದರೆಂಬುದು ನನಗೆ ತಿಳಿದಿರಲಿಲ್ಲ. ಅವರು ಹೇಳಿದ್ದನ್ನು ನನಗೆ ನೆನಪಿರುವಷ್ಟು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಚಂಪೂ ಶೈಲಿಯಲ್ಲಿ ಕಾವ್ಯ ರಚಿಸಿದ ಷಡಕ್ಷರದೇವನ ಕಾಲದ ಬಗ್ಗೆ ನಿರ್ದಿಷ್ಟವಾದ ಮಾಹಿತಿಯಿಲ್ಲದಿದ್ದರೂ ಅವನ ಕಾವ್ಯಗಳ ಆಧಾರದಿಂದ ಅವನ ಕಾಲ ಹದಿನೇಳನೇ ಶತಮಾನ ಎಂದು ಗುರುತಿಸಬಹುದು.ಮೈಸೂರು ಕರ್ನಾಟಕದ ಮಳವಳ್ಳಿ ತಾಲೂಕಿನ ದನಗೂರಿನಲ್ಲ ಜನಿಸಿದ ಷಡಕ್ಷರಿದೇವ ರೇಣುಕ ಪರಂಪರೆಗೆ ಸೇರಿದ ಚಿಕ್ಕವೀರದೇಶಿಕರಲ್ಲಿ ಶಿಷ್ಯವೃತ್ತಿಯನ್ನು ಮಾಡಿ ಅಲ್ಲಿನ ಮಠದಲ್ಲಿ ಮಠಾಧಿಪತಿಯೂ ಆಗಿದ್ದನು. ಆದರೆ ನಂತರ ಯಲಂದೂರಿನ ನಾಡಪ್ರಭುವಾದ ಮುದ್ದುರಾಜನ ಪತ್ನಿಯು ತನ್ನ ತವರೂರಾದ ದನಗೂರಿನಿಂದ ಷಡಕ್ಷರದೇವನನ್ನು ಯಲಂದೂರಿಗೆ ಕರೆಸಿಕೊಂಡು ಅಲ್ಲಿಯೇ ನೆಲೆಸಲು ಕೋರಿದಳೆಂದು ಹೇಳಲಾಗುತ್ತದೆ. ಷಡಕ್ಷರದೇವನು ಮುಂದೆ ಯಲಂದೂರಿನಲ್ಲೇ ಸಮಾಧಿ ಹೊಂದಿದನು ಎಂದು ಹೇಳಲಾಗುತ್ತದೆ.

ಕನ್ನಡ ಹಾಗೂ ಸಂಸ್ಕೃತದಲ್ಲಿ ಪ್ರವೀಣನಾದ ಷಡಕ್ಷರದೇವನಿಗೆ "ಉಭಯಕವಿತಾವಿಶಾರದ" ಎಂಬ ಬಿರುದಿತ್ತು. ಇವನು ಕನ್ನಡದಲ್ಲಿ ಮೂರು ಮಹಾಕಾವ್ಯಗಳನ್ನು ಸಂಸ್ಕೃತದಲ್ಲಿ ಒಂದು ಮಹಾಕಾವ್ಯವನ್ನು ರಚಿಸಿದ್ದಾನೆ. ಕನ್ನಡದ ಕಾವ್ಯಗಳು
೧. ರಾಜಶೇಖರವಿಲಾಸ
ಪಂಚಾಕ್ಷರೀ ಮಂತ್ರದ ಮಹತ್ವವನ್ನು ಸತ್ಯೇಂದ್ರ ಚೋಳ ಹಾಗೂ ಅಮೃತಮತಿಯ ಮಗನಾದ ರಾಜಶೇಖರ ಚೋಳನ ಕತೆಯ ಮೂಲಕ ಕವಿ ಇಲ್ಲಿ ಹೇಳಿದ್ದಾನೆ. (ಉಪನ್ಯಾಸಕರು ಇದರ ಕಥೆಯನ್ನು ,ಸಾರಾಂಶವನ್ನು ತಿಳಿಸಿದರು.ನನಗೆ ಕೆಲವು ಹೆಸರುಗಳು ಸರಿಯಾಗಿ ನೆನಪಿಲ್ಲವಾದ್ದರಿಂದ ಇಲ್ಲಿ ಬರೆಯುತ್ತಿಲ್ಲ.)
೨. ವೃಷಭೇಂದ್ರವಿಜಯ
ಭಕ್ತಿರಸ ಪ್ರಧಾನವಾದ ಈ ಕಾವ್ಯ ಬಸವಣ್ಣನವರ ಜೀವನಚರಿತೆಯ ಬಗ್ಗೆ ಹೇಳುತ್ತದೆ.
೩. ಶಬರಶಂಕರವಿಲಾಸ
ಮಹಾಭಾರತದ ಒಂದು ಪ್ರಸಂಗದ ಮೇಲೆ ಈ ಕಾವ್ಯವು ಅವಲಂಬಿತವಾಗಿದೆ. ಅರ್ಜುನ ಶಿವನ ಕುರಿತು ತಪಸ್ಸನ್ನಾಚರಿಸಿದಾಗ ಶಬರನ ರೂಪದಲ್ಲಿ ಪ್ರತ್ಯಕ್ಷನಾದ ಶಿವನು ಅರ್ಜುನನಿಗೆ ಪಾಶುಪತಾಸ್ತ್ರವನ್ನು ನೀಡುವ ಕತೆಯನ್ನು ಇದು ವಿವರಿಸಿದೆ.

ಸಂಸ್ಕೃತದಲ್ಲಿ ಕರ್ಣರಸಾಯನ ಎಂಬ ಮಹಾಕಾವ್ಯವನ್ನು ಷಡಕ್ಷರದೇವ ರಚಿಸಿದ್ದಾನೆ. ಇದಲ್ಲದೆ ಆತ ರತ್ನಾವಳಿ, ಶಿವಶಕ್ತಿಮಂಜರಿ, ವೀರಭದ್ರದಂಡಕ, ಸಿದ್ಧಲಿಂಗಸ್ತವ, ಪಾದಪೂಜಾಸ್ತೋತ್ರ, ಶಿವಮಾನಸಸ್ತೋತ್ರ ,ಸಿದ್ಧಲಿಂಗಾಷ್ಟಕ, ಬಸವಾಷ್ಟಕ ಎಂಬಿತ್ಯಾದಿ ಸ್ತೋತ್ರಗಳನ್ನೂ ಬರೆದಿದ್ದಾನೆ.

ರೇವಣ್ಣನವರು ನೀಡಿದ ಷಡಕ್ಷರದೇವನ ಪರಿಚಯದ ನಂತರ ಬಳಗದ ಅಧ್ಯಕ್ಷರಾದ ಪ್ರೊ. ಟಿ.ಆರ್.ಮಹಾದೇವಯ್ಯನವರು, ಪ್ರಧಾನ ಕಾರ್ಯದರ್ಶಿಗಳಾದ ಪಿನಾಕಪಾಣಿಯವರು ಮಾತನಾಡಿದರು. ವಂದನಾರ್ಪಣೆಯ ನಂತರ ಮಂಗಳಗೀತೆಯನ್ನು ಹಾಡಿ ನಂತರ ಪ್ರಸಾದ ವಿನಿಯೋಗವಾಯಿತು. ಒಟ್ಟಿನಲ್ಲಿ ಒಂದು ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸವಿಯನ್ನು ಮನ ಅನುಭವಿಸಿತ್ತು.
(ನನ್ನ ಸ್ಮೃತಿಯ ಆಧಾರದ ಮೇಲೆ ಕವಿ ಪರಿಚಯವನ್ನು ಬರೆದಿರುವುದು. ತಪ್ಪಿದ್ದರೆ ತಿದ್ದಿರಿ. ಹೆಚ್ಚಿನ ಮಾಹಿತಿ ತಿಳಿದಿದ್ದರೆ ಹಂಚಿಕೊಳ್ಳಿ.)