Sunday, April 25, 2010

ಏನು ಕಾರಣ

ನಿನ್ನನ್ನು ಮೊದಲ ಬಾರಿ ಕಂಡ
ನೆನಪಿನ್ನೂ ಹಚ್ಚಹಸುರಾಗಿದೆ
ಕನಸಿನ ರಾಜಕುಮಾರನೇ
ಜೀವತಳೆದು ಕಣ್ಣೆದುರು ನಿಂತಂತೆ

ಯಾರನ್ನೂ ಇಷ್ಟಪಡದವಳು
ನಿನ್ನ ಕಂಡೊಡನೆ ಕೆಂಪಾಗಿದ್ದೇಕೆ?
ತಿಳಿಯದಾಗಿದೆ ಉತ್ತರ
ನೀ ನನ್ನ ಬಾಳಲ್ಲಿ ಬಂದದ್ದೇಕೆ?

ಕಪ್ಪೆಚಿಪ್ಪೊಳಗಿನ ಮುತ್ತಂತಿರುವೆ
ಜಗವ ತಿಳಿಯಬೇಕು ನೀನು
ಎಲ್ಲವ ನೋಡಬೇಕು ಹುಡುಗಿ
ತಿಳಿಯಬೇಕೆಲ್ಲವ ಕಾಣದ್ದನ್ನೂ ಹುಡುಕಿ

ಎಂದು ನೀ ನನಗೆ ಹೇಳುತ್ತಿದ್ದರೆ
ನನ್ನ ಮನಸಲ್ಲೇನೋ ಉಲ್ಲಾಸ
ನೀನೊಬ್ಬ ನನ್ನೊಂದಿಗಿದ್ದರೆ
ಜಗತ್ತನ್ನೇ ಗೆದ್ದ ಉತ್ಸಾಹ

ಮೌನಗೌರಿಯಂತಿದ್ದವಳಿಗೆ
ಪಟ ಪಟ ಮಾತ ಕಲಿಸಿದವ ನೀನು
ಮಾತಿನೊಂದಿಗೆ ನನ್ನೊಳಗೀಗಿರುವ
ಆತ್ಮವಿಶ್ವಾಸ ತುಂಬಿದ್ದೂ ನೀನು

ನೀ ನನ್ನವನೇ ಕಣೋ ಹುಡುಗ ಎಂದು
ಹೇಳಬೇಕೆನಿಸುತ್ತದೆ ನೂರಾರು ಬಾರಿ
ಮನದಲ್ಲಿ ಅರಳಿದ ಮಾತು
ತುಟಿಗೆ ಬರುವುದರೊಳಗೆ ಸಾಯುತ್ತದೆ

ಕೊನೆಗೂ ಹೇಳಲೇಬೇಕೆಂದು ನಿರ್ಧರಿಸಿ
ನಿನ್ನೆದುರು ಸಾಲಂಕೃತಳಾಗಿ ಬಂದಾಗ
ತುಂಬಾ ಚೆಂದ ಕಾಣ್ತಿ ನೀನು
ಆದರೂ ಕಾಡುತಿದೆಯೇನೋ ಕೊರತೆ

ನೋಡಲದು ಕಂಗಳಿಗೆ ಸೊಗಸು
ನಿನ್ನ ಮುಡಿಯಲಿರೆ ಮಲ್ಲಿಗೆ
ತರುವೆನೀಗಲೇ ನಾನದನು
ಕಾಯುತಿರು ನೀ ನಾ ಹೋಗಿ ಬರುವೆ  ಎಂದು ಹೇಳಿ ಒಂದೇ ಉಸಿರಿನಲಿ ಹೊರಟು ಹೋದೆ ನೀ ಹಿಂದೆ ನೋಡದೇ
ಹೊರಬರಲು ಅಣಿಯಾಗಿದ್ದ ಮಾತು
ಪುನಃ ಮನದೊಳಗೆ ಬಂಧಿಯಾಯ್ತು
ನನ್ನ ಮುಗ್ಧ ಮನಸಿನೊಂದಿಗೆ
ಚೆಲ್ಲಾಟವಾಡುವ ಬಯಕೆಯೇ ವಿಧಿಯೇ?
ಮಲ್ಲಿಗೆ ತರುವೆನೆಂದು ಸಂಜೆ ಹೋದವನು
ಇನ್ನೂ ಹಿಂದಿರುಗಿ ಬಂದಿಲ್ಲವೇಕೆ?

ಮಲ್ಲಿಗೆಯ ಹುಡುಕಾಟ ತಡವಾಯ್ತೋ?
ಬರುವ ಹಾದಿಯಲ್ಲಿ ನೂರಾರು ವಿಘ್ನಗಳೋ?
ಅಥವಾ ಹೂವಿನ ಅಂದಕ್ಕೆ ಸೋತು
ಅಲ್ಲೇ ಇದ್ದು ಬಿಡುವ ನಿರ್ಧಾರವೋ?

( ವಿ.ಕ.ದಲ್ಲಿ ಇಂದು ಪ್ರಕಟವಾಗಿರುವ ಮಣಿಕಾಂತ್ ಅವರ ಲೇಖನದಿಂದ ಪ್ರೇರಿತ)