Monday, November 24, 2014

ಬಯಕೆ

ಮುಗ್ಧ ಮನದ ಅಂಗಳದಲ್ಲಿ
ಯಾರೋ ಎಸೆದ ಬೀಜವೊಡೆದು
ಚಿಗುರಿತೊಂದು ಪುಟ್ಟ ಬಯಕೆ

ತಿಳಿಯದ ಭಾವಗಳ ನೀರ ಕುಡಿದು
ಕೇಳದ ಮಾತುಗಳ ಆರೈಕೆ ಪಡೆದು
ಹೆಮ್ಮರವಾಯ್ತು ಬಯಕೆ

ಕೋಟೆಯ ಕಾವಲನ್ನು ಭೇದಿಸಿ
ಬಂಧನದ ಕೊಂಡಿಯನ್ನು ಛೇದಿಸಿ
ಜೀವ ತಳೆಯುವ ಮನಸು

ಯಾರೂ ಕೇಳದ ಹಾಡನ್ನು ಹಾಡಿ
ಯಾರೂ ಬಾರದ ಹಾದಿಯಲ್ಲಿ ನಡೆದು
ಕಾಣದೂರಿನ ಬೆಳಕ ಕಾಣುವ ಕನಸು

ಗೊಂದಲಗಳ ಗೂಡಲ್ಲಿ ಅರಳಿದ
ಆಸೆಯ ಅಭಿವ್ಯಕ್ತಿ ಹೇಗೆ?
ಭಾವಗಳೆಲ್ಲಾ ಚೆಲ್ಲಾಪಿಲ್ಲಿ

ಮನದಲ್ಲಿ ಮೂಡದ ಮಾತುಗಳಿಗೆ
ಸವಿಜೇನ ಬೆರೆಸುವುದು ಹೇಗೆ?
ಮೌನವೇ ಭಾಷೆ ಇಲ್ಲಿ

ಪದಗಳ ಗೋಜಲಿಗೆ ಸಿಲುಕದೆ
ವ್ಯಕ್ತವಾಯ್ತು ಅಂತರ್ದನಿ
ಮನಸೀಗ ಒಡೆದ ಕನ್ನಡಿ