Wednesday, December 31, 2008

ಐ ಮಿಸ್ ಯು 2008

ನಮ್ಮೆಲ್ಲರ ಬಾಳಿನ ಕಾದಂಬರಿಯ ಮತ್ತೊಂದು ಅಧ್ಯಾಯ ಇವತ್ತು ಪೂರ್ಣ ಗೊಳ್ಳುತ್ತಾ ಇದೆ. ನಾಳೆಯಿಂದ ಹೊಸ ವರ್ಷ ನಮ್ಮ ಬಾಳ ಹೊಸ ಅಧ್ಯಾಯ ಶುರುವಾಗ್ತಾ ಇದೆ ಒಂಥರಾ ಹೊಸ ಅನುಭೂತಿ ಹೊಸ ಸ್ಪರ್ಶ ಹೊಸ ಹರ್ಷ…. ಒಟ್ಟಿನಲ್ಲಿ ನಮಗೆಲ್ಲ ನವ ವರ್ಷ

ನಾನು ಇದುವರೆಗೆ ನನ್ನ ಬಾಳ ಕಾದಂಬರಿಯನ್ನು ಬರೆಯುತ್ತಾ ಹೋಗಿದ್ದೀನಿ ಈಗ ಆ ಪುಟಗಳನೆಲ್ಲ ತಿರುವಿ ಹಾಕಿ ಏನಾಯ್ತು ಅಂತ ವಿಮರ್ಶಿಸೋಣ ಅಂತ ಅನ್ನಿಸ್ತಾ ಇದೆ… ಅದಕ್ಕೆ ಈ ಸಮಯವೇ ಸುಸಮಯ ಅಂತ ಅನ್ನಿಸ್ತು ಹೇಗಿದ್ರು ನಾಳೆಯಿಂದ ಎಲ್ಲ ಹೊಸತೇ ಅಲ್ವ…. ಯಾವುದನ್ನಾದ್ರು ಮರೆಯಬೇಕು ಅನ್ನಿಸಿದ್ರೆ ಇವತ್ತೇ ಮರೆತು ನಾಳೆಯಿಂದ ಎಲ್ಲ ಫ್ರೆಶ್ ಆಗಿ ಶುರು ಮಾಡಬಹುದು ನೀವೇನಂತೀರಿ…

ನನ್ನ ೧೯ ವರ್ಷಗಳ ಜೀವನದಲ್ಲಿ ಇದೆ ಮೊದಲ ಬಾರಿಗೆ ಇಂಥ ಒಂದು ವಿಮರ್ಶೆ ಮಾಡ್ತಾ ಇರೋದು… ಕಳೆದ ವರ್ಷ ನಾನು ಏನೇನು ಮಾಡಿದೆ ಅಂತ ಯೋಚಿಸಿದರೆ ನೆನಪು ಬರೋ ವಿಷಯಗಳು ತುಂಬ ಕಮ್ಮಿ….ಅದರಲ್ಲಿ ಪ್ರಮುಖವಾದವು ನಾನು ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿದ್ದು… ಒಂದು ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದು … ಹೇಗೆ ಮರೀಲಿ ನನ್ನೀ ಬ್ಲಾಗ್ ಶುರು ಮಾಡಿದ್ದು…. ಅಷ್ಟೆ…ಉಳಿದವು ನೆನಪಿನಲ್ಲೂ ಇಲ್ಲ….

ಆದರು ೨೦೦೮ ನಂಟುಗಳ ಗಂಟನ್ನು ಹೊತ್ತು ತಂದು ಈ ನನ್ನ ಪುಟ್ಟ ಹೃದಯದಲ್ಲಿ ಹೊಸ ಚೈತನ್ಯವನ್ನಂತು ತಂದಿದೆ…. ಕಳೆದ ಅಧ್ಯಾಯವನ್ನು ಪರಾಮರ್ಶಿಸಿದರೆ ಅದೊಂದು ಅನೇಕ ಘಟನೆಗಳ ಸರಮಾಲೆ… ಅವುಗಳಲ್ಲಿ ಮಿರಿ ಮಿರಿ ಮಿಂಚ್ತಾ ಕೆಲವಿದ್ರೆ ಇನ್ನು ಕೆಲವು ಯಾವುದೋ ಒಂದು ಮೂಲೆಯಲ್ಲಿ ಹಾಯಾಗಿ ಕುಳಿತಿದ್ದು ಬೇಕೆಂದಾಗ ಮಾತ್ರ ನೆನಪಿಗೆ ಬರುವಂಥವು…

2008 ಅನೇಕ ಸ್ನೇಹಿತರನ್ನು ಕೊಟ್ಟಿದೆ… ಇರೋ ಬಂಧಗಳನ್ನು ಗಟ್ಟಿ ಮಾಡಿದೆ… ಆದ್ರೆ ಆಗಲೇ ಇರುವ ಕೆಲವು ಕೊಂಡಿಗಳು ಸಂಪರ್ಕದ ಕೊರತೆಯಿಂದ ಕಳಚುತ್ತಿರುವುದು ನಿಜಾನೆ… ಏನೇ ಆದರು ಈ ವರ್ಷ ಚೆನ್ನಾಗಿಯೇ ಆಯ್ತು ಅನ್ನೋದು ನನ್ನ ಭಾವನೆ…

ಪ್ರತಿ ವರ್ಷ ನಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ಅಲ್ವ.. ಕೆಲವೊಂದು ಎಲ್ಲರಿಗೂ ಹೇಳಿ ಸಂತೋಷ ಪಟ್ರೆ ಇನ್ನು ಕೆಲವನ್ನು ನಮ್ಮೆದೆ ಗೂಡಿನಲ್ಲಿ ಕಪ್ಪೆ ಚಿಪ್ಪಿನೊಳಗಿನ ಮುತ್ತಿನಂತೆ ಕಾಪಾಡ್ತೀವಿ… ಕೆಲವು ಹೃದಯಾನ ಹುಚ್ಚೆದ್ದು ಕುಣಿಸಿದ್ರೆ ಕೆಲವು ಎಲ್ಲರಿಂದ ದೂರಾಗಿ ಒಬ್ಬಳೇ ಕುಳಿತು ಅಳುವಂತೆ ಮಾಡುತ್ತವೆ…. ಹೌದಲ್ವಾ “ಈ ಜೀವನ ಬೇವು ಬೆಲ್ಲ ಬಲ್ಲಾತಗೆ ನೋವೆ ಇಲ್ಲ..” ಎಂಥ ಅರ್ಥಪೂರ್ಣ ಸಾಲು…ಆದ್ರೆ ನಮ್ಮಂಥವರು ಸುಖ ದುಃಖ ಎರಡನ್ನು ಸಾಮಾನಾಗಿ ಕಾಣಬೇಕು ಅಂದ್ರೆ ಇನ್ನಷ್ಟು ಪ್ರೌಢಿಮೆ ಬೇಕು ಅಲ್ವ…

ಈಗ ಏನೇ ಯೋಚನೆ ಮಾಡಿದ್ರು ೨೦೦೮ ತನ್ನ ಗಂಟು ಕಟ್ಟಿಕೊಂಡು ಹೊರಡೋಕೆ ಸಿದ್ಧವಾಗಿದೆ… ಎಷ್ಟೇ ಕೇಳಿದ್ರು ಇನ್ನೊಂದು ಕ್ಷಣಾನೂ ಹೆಚ್ಚಿಗೆ ಇರೋಲ್ಲ…. ನೀವೆಲ್ಲ ಕೇಳಿರ್ತೀರ
ಜಿಪುಣ ಅಂದ್ರೆ ಜಿಪುಣ ಈ ಕಾಲ
ಎಷ್ಟೇ ಬಡ್ಡಿ ಕೊಟ್ರು
ಎಷ್ಟೇ ಗಿರವಿ ಇಟ್ರು
ಸಿಕ್ಕೋದಿಲ್ಲ ಒಂದು ಘಳಿಗೆ ಸಾಲ
ಅದಕ್ಕೆ ನಾನಂತೂ ನಿರ್ಧಾರ ಮಾಡಿಬಿಟ್ಟಿದ್ದೀನಿ… ೨೦೦೮ ರಲ್ಲಿ ಏನು ಆಗಿದೆಯೋ ಅದು ಒಳ್ಳೆಯದಕ್ಕೆ ಆಗಿದೆ… ೨೦೦೯ ಇನ್ನು ಚೆನ್ನಾಗಿರುತ್ತೆ ಅಂತ ಆಶಿಸ್ತೀನಿ

ಈ ಹೊಸ ವರ್ಷ ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಅಲೆಯೊಂದನ್ನು ಶುರು ಮಾಡಿ ನಿಮೆಲ್ಲರ ಬಾಳು ಹಸನಾಗಿರಲಿ ಎಂದು ಆಶಿಸ್ತಾ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!!!!!!!

Friday, September 5, 2008

ಮಿಂಚು
ನೀ ಬಂದಾಗ ನಾನೆಣಿಸಿದೆ
ನೀ ನನ್ನ ಬಾಳ ಬೆಳಕೆಂದು
ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು
ಆದರೆ ನೀನು ಮಿಂಚಿ ಮರೆಯಾಗುವ
ಬಾಳನ್ನೇ ಛಿದ್ರ ಮಾಡುವ ಸಿಡಿಲೆಂದು ತಿಳಿದದ್ದು
ಆ ಎದೆ ನಡುಗಿಸುವ ಶಬ್ದ ಕೇಳಿದ ನಂತರವಷ್ಟೇ….

ನೆನಪು
ಮಳೆಯ ಹನಿ ನಿಂತರು
ಮರದ ಎಲೆಯ ಹನಿ ನಿಲ್ಲದೋ ಗೆಳೆಯ
ನೀ ನನ್ನಿಂದ ದೂರ ನಡೆದರೂ
ನಿನ್ನ ಹೆಜ್ಜೆಗುರುತು ಮಾಸದೋ ನನ್ನೊಡೆಯ!!!

Monday, August 18, 2008

ನಾನು!!!!!?

ಈ ಬಾಳವೀಣೆಯ ತಂತಿ ನಾನು
ವೈಣಿಕನ್ಯಾರೋ….
ಈ ಬಾಳನೌಕೆಯಲಿ ಪಯಣಿಗಳು ನಾನು
ನಾವಿಕನ್ಯಾರೋ

ಮಿಡಿದ ಧ್ವನಿ ಶ್ರುತಿಯೋ ಅಪಶ್ರುತಿಯೋ
ಕಾರಣಳು ನಾನಲ್ಲ
ನೌಕೆ ಮುಳುಗುವುದೋ ತೇಲುವುದೋ
ಬಲ್ಲವರು ಯಾರಿಲ್ಲ….

ವೈಣಿಕನ ಕೈಚಳಕದಲಿ
ಅಡಗಿದೆ ನನ್ನ ಜೀವನ
ನಾವಿಕನ ಜ್ಞಾನದಲಿ
ಸಂಸಾರಸಾಗರಯಾನ…..

ವೈಣಿಕನ ಕಲಾನೈಪುಣ್ಯತೆಗೆ
ನನಗೆ ಹೊಗಳಿಕೆಯೇ?
ನನ್ನ ತಪ್ಪಿಗೆ ನಾವಿಕನ
ಮೂದಲಿಕೆ ಸರಿಯೇ?

ನಾವಿಕನಲ್ಲಿ ಭರವಸೆಯಿಟ್ಟು
ನೌಕೆಯೇರಿದವಳು ನಾನು
ವೈಣಿಕನಲ್ಲಿ ನಂಬಿಕೆಯಿಟ್ಟು
ಅವನಿಗೆ ಸಮರ್ಪಿತಳಾದವಳು ನಾನು

ಈ ಬಾಳ ಪ್ರತಿನುಡಿಯ ಪ್ರತಿಶ್ರುತಿಯ
ಸೂತ್ರಧಾರ ಆ ವೈಣಿಕ
ಈ ಬಾಳ ದಾರಿಯ
ಮಾರ್ಗದರ್ಶಕ ಆ ನಾವಿಕ…..

ತಾನು ನುಡಿಸುವ ಧ್ವನಿ ಶುದ್ಧ
ಆಗಿರಬೇಕೆಂಬ ಆಸೆ ವೈಣಿಕನಿಗಿಲ್ಲವೇ
ಗುರಿ ತಲುಪಿಸುವ ಬಯಕೆ
ನಾವಿಕನಿಗಿರುವುದಿಲ್ಲವೇ…..

ವೈಣಿಕನ ಕೈಬೆರಳ ತುದಿಯಲ್ಲಿ ನಾದವಾಗಿ
ನಾವಿಕನ ನೆರಳಲ್ಲಿ ಕೂಸಾಗಿ
ಬಾಳ ಗುರಿಯ ತಲುಪಿಸುವರೆಂಬ ಭರವಸೆಯಲ್ಲಿ
ಸಾಗುತಿರುವೆ ನಾನು ಈ ಜೀವನದಲ್ಲಿ……..

Wednesday, August 6, 2008

ನಗು ನಗುತಾ…….

ಯಾವುದೋ ಹೊಸ ಊರು, ಹೊಸ ಪರಿಸರ, ಹೊಸ ಜನ, ಒಬ್ಬಂಟಿಯಾಗಿ ಅಲ್ಲಿಗೆ ಕಾಲಿಟ್ಟಾಗ ನಮಗೆ ಎದುರಾದವರು ಒಂದು ಸುಂದರ ಹೂ ನಗೆ ಬೀರಿದರೆ ನಮ್ಮ ಮನಸಿಗೆ ಒಂಥರಾ ಖುಷಿಯಾಗುತ್ತೆ ಅಲ್ವ…. ಯಾರೋ ನಮ್ಮ ಸ್ನೇಹ ಬಯಸ್ತಾ ಇದ್ದಾರೆ ಅವರು ನಮ್ಮ ಸ್ವಲ್ಪ ಹೊತ್ತು ಜೊತೆಗಿರ್ತಾರೆ ಅನ್ನೋ ಭಾವನೆ ತಕ್ಷಣ ಮನಸ್ಸಲ್ಲಿ ಬಂದು ಹೋಗುತ್ತೆ….. ಒಂದು ನಗು ಇಬ್ಬರ ನಡುವೆ ಸಂಪರ್ಕ ಕೊಂಡಿಯಾಗಿಬಿಡುತ್ತೆ ಹೌದೋ ಅಲ್ಲವೋ….

ಅಂಥ ನಗು ಎಂಥ ಸಂದರ್ಭದಲ್ಲೂ ಮನಸಿನ ಪುಟದಿಂದ ಅಳಿಸಿ ಹೋಗೊಲ್ಲ ..... ಒಂದು ಸುಂದರ ಮುಗುಳುನಗೆ ಎಂಥ ಗಂಭೀರವಾದ ಸಂದರ್ಭವನ್ನು ತಿಳಿಯಾಗಿಸುತ್ತೆ... ಇಬ್ಬರ ನಡುವೆ ಒಂದು ಮಧುರ ಸಂಬಂಧ ಏರ್ಪಡುವ ಮುನ್ನ ಇಂಥ ಎಷ್ಟು ನಗು ವಿನಿಮಯವಾಗಿರುತ್ತೋ.... ಅವರ ಸಂಬಂಧ ಇರುವವರೆಗೂ ಇಂಥ ನಗು ವಿನಮಯ ಆಗುತ್ತಲೇ ಇರುತ್ತೆ ..... ಯಾಕಂದ್ರೆ ಈ ನಗು ನಮಗೆ ಅವರ ಮೇಲಿರೋ ಪ್ರೀತಿಯ ಸಂಕೇತವು ಹೌದು.....

ಈ ನಗುವಿಗೆ ಒಂದು ತೆರನಾದ ಮಾಂತ್ರಿಕ ಶಕ್ತಿಯಿದೆಯೇನೋ ಅಂತ ಅನಿಸುತ್ತೆ. ತುಂಬ ದುಃಖದಲ್ಲಿದ್ದಾಗ ಯಾರೋ ಹತ್ತಿರ ಬಂದು ಭುಜದ ಮೇಲೆ ಕೈಯಿಟ್ಟು ನಾನು ನಿನ್ನ ಜೊತೆಗಿರ್ತೀನಿ ಎನ್ನುವಂತೆ ಒಂದು ಸಣ್ಣ ನಗು ಅವರ ತುಟಿಯ ಮೇಲೆ ಹಾದು ಹೋದರೆ ಮನಸು ಒಂದು ಕ್ಷಣ ತನ್ನ ದುಃಖವನ್ನೆಲ್ಲ ಮರೆತುಬಿಡುತ್ತೆ…. ಜೊತೆಗೆ ಅವರ ಮೇಲಿನ ಪ್ರೀತಿನು ಜಾಸ್ತಿಯಾಗುತ್ತೆ..

ಎಲ್ಲರಿಗಿಂತ ಮುದ್ದಾದ ನಗು ಮಕ್ಕಳದ್ದು…. ಮಾತೆ ಬಾರದಿದ್ದರೂ ಅವರ ಒಂದು ನಗು ಸಾಕಷ್ಟು ವಿಷಯಗಳನ್ನು ಹೇಳುತ್ತೆ…. ಅವರು ಇಷ್ಟ ಪಡುವವರು ಎದುರು ಬಂದರಂತೂ ಕೇಕೆ ಹಾಕುತ್ತ ನಗುವ ಆ ಕಂದಮ್ಮಗಳನ್ನು ನೋಡ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗೊಲ್ಲ….. ಕೆಲವೊಂದು ಸಲ ಸಿಗ್ನಲಲ್ಲಿ ನಿಂತಾಗ ಪಕ್ಕದ ಗಾಡಿ ಮೇಲೆ ಕುಳಿತಿರುವ ಮಗುವಿನ ನಗು ನೋಡ್ತಾ ಗ್ರೀನ್ ಸಿಗ್ನಲ್ ಬಂದ್ರು ಅಲ್ಲೇ ಗಾಡಿ ನಿಲ್ಲಿಸಿಕೊಂಡಿದ್ದು ಹಿಂದಿರುವವರು ಹಾರ್ನ್ ಮಾಡಿದ ಮೇಲೆ ಮುಂದೆ ಹೋಗಿದ್ದೀನಿ….. ಆ ಸುಂದರ ನಗು ನೋಡಿ ಅವರಿಗೆ ಪ್ರತಿಕ್ರಯಿಸದವರು ನಿಜವಾಗಿಯು ಕಲ್ಲು ಹೃದಯದವರೇ ಆಗಿರಬೇಕು…… ಅಂತ ಮುಗ್ಧ ನಗು ನಾವು ದೊಡ್ದವರಾಗ್ತಾ ಆಗ್ತಾ ಎಲ್ಲಿ ಕಳೆದು ಹೋಗುತ್ತೆ????

ಬೆಳ್ಳಿಗ್ಗೆ ಎದ್ದಾಗ ನಗು ಮೊಗದಿಂದ ಗುಡ್ ಮಾರ್ನಿಂಗ್ ಹೇಳುವವರು ಇದ್ದರೆ ಆ ದಿನದ ಶುರುವಿನಲ್ಲೇ ಹೊಸ ಹುರುಪು ತುಂಬಿಕೊಳ್ತೀವಿ …… ಆ ನಗು ಮಾಸದಂತೆ ನಮ್ಮ ಮುಂದಿನ ಘಂಟೆಗಳು ಕಳೆದು ಹೋದರೆ ಆ ದಿನ ಏನೋ ಒಂಥರಾ ನೆಮ್ಮದಿಯ ಅನುಭವ…. ನಾವು ಕಾಲೇಜಿಗೆ ಹೋದಾಗ ಎದುರಾದವರಿಗೂ ಆ ನಗುವನ್ನು ಹಂಚಿ ಅವರ ನಗುವಿನಲ್ಲಿ ನಮ್ಮನ್ನು ನಾವು ನೋಡಿಕೊಳ್ಳಬಹುದು…. ಹಾಗೆ ಮನೆಗೆ ಹಿಂದಿರುಗಿ ಬಂದಾಗ ಅದೇ ನಗುವನ್ನು ಮನೆಯವರಿಗೂ ಹಂಚಿ ಅವರ ಕಣ್ಣಲ್ಲಿ ಮೂಡುವ ಮಿಂಚನ್ನು ನೋಡಿ ಆನಂದ ಪಡಬಹುದು….. ಎಲ್ಲ ಕಡೆ ನಾವು ಬೀರಿದ್ದು ಅದೇ ನಗುವಾದ್ರು ಆ ನಗು ಎಂದಿಗೂ ಹಳೆಯದು ಅನಿಸೋಲ್ಲ ಅಲ್ವ…..

ಎಷ್ಟೇ ದುಃಖ ಇದ್ರೂ ನಗುವನ್ನು ಮಾಸದೆ ಇಟ್ಕೊಂಡಿರ್ತಾರಲ್ಲ ಅವರ ಬಗ್ಗೆ ನಿಜವಾಗ್ಲು ಒಂಥರಾ ಗೌರವ ಭಾವನೆ ಮೂಡುತ್ತೆ….. ನಾವು ನಮ್ಮ ಜೀವನದಲ್ಲಿ ಎದುರಾಗೋ ಸಣ್ಣ ಪುಟ್ಟ ತೊಡಕುಗಳಿಗೆ ಅಷ್ಟೊಂದು ಸಿಡುಕ್ತೀವಲ್ಲ ಇನ್ನು ಅಷ್ಟು ನೋವಿಟ್ಟುಕೊಂಡಿದ್ದರೂ ನಗುವೇ ಅವ್ರ ಮುಖದ ಮೇಲೆ ಕಾಣುತ್ತಲ್ಲ ಅವರಿಂದ ನಾವು ಕಲಿಯೋದು ಬಹಳಷ್ಟಿದೆ ಅಂತ ಅನಿಸುತ್ತೆ…. ಅದೇ ನಗು ಅವರ ನೋವುಗಳನ್ನು ಮರೆಸುತ್ತಿರಲೂ ಬಹುದು ಅಲ್ವ……..

ಕೆಲವೊಬ್ರು ಇರ್ತಾರೆ ನಕ್ಕರೆ ಎಲ್ಲಿ ಮುತ್ತು ಸುರಿದು ಹೋಗುತ್ತೋ ಅನ್ನೋ ಹಾಗೆ ಆ ಮುತ್ತುಗಳನ್ನು ಕಾಪಾಡೋ ಸಲುವಾಗಿ ತುಟಿ ಬಿರಿಯೋದೆ ಇಲ್ಲ… ನಾವು ಎಷ್ಟು ದಿನ ಇರ್ತೀವೋ ಯಾರಿಗೆ ಗೊತ್ತು…. ಇರೋ ಅಷ್ಟು ದಿನ ನಗ್ತಾ ಎಲ್ಲರನ್ನು ನಗಿಸುತ್ತ ಇದ್ದು ಬಿಡಬೇಕಪ್ಪ….. ನಗೋಕು ಕಂಜೂಸಿ ಮಾಡೋದ….ಬೇಡ….

ಎಲ್ಲರು ಅದನ್ನೇ ಬಯಸೋದು ಸದಾ ನಗ್ತಾ ನಗ್ತಾ ಇರ್ಬೇಕು ಅಂತ .... ಅಂಥ ನಗು ನಿಮ್ಮ ಬಾಳಲ್ಲಿ ಸದಾ ತುಂಬಿರಲಿ ಅಂತ ಮನಃ ಪೂರ್ವಕವಾಗಿ ನಾನು ಆಶಿಸ್ತೀನಿ……..

Thursday, July 17, 2008

ಕೈ ತುತ್ತು

ಅಲ್ಲ ನಾವು ಬದುಕುವುದಕ್ಕೋಸ್ಕರ ತಾನೆ ಊಟ ಮಾಡೋದು…… ಆ ಊಟದ ಬಗ್ಗೆ ಪ್ರೀತಿ ಇರಲೇಬೇಕು ಅಲ್ವ……. ಅದೇ ಊಟಾನ ನಾವು ಪ್ರೀತಿಸುವವರು ತಿನ್ನಿಸಿದರೆ…… ಆಹಾ ಏನು ಸಂತೋಷ….. ನಮ್ಮ ಮನಸು ನಿಂತಲ್ಲೇ ಕುಣಿಯೋಕೆ ಆರಂಭಿಸುತ್ತೆ……..

ನಾನು ಒಂಥರಾ ವಿಚಿತ್ರ ಹುಡುಗಿ…ಚಿಕ್ಕವಳಿದ್ದಾಗ ಏನು ಮಾಡಿದರು ಕೈತುತ್ತು ತಿನ್ನದೇ ನಾನೇ ತಿನ್ನಬೇಕು ಅಂತ ಹಠ ಮಾಡ್ತಿದ್ದೆ. ಆದ್ರೆ ಈಗ ಕೈತುತ್ತು ತಿನ್ನಬೇಕು ಅಂತ ಇಷ್ಟ ಪಡ್ತಾ ಇದ್ದೀನಿ. ಹೌದಲ್ವಾ ನಮಗೆ ಅನಾಯಾಸವಾಗಿ ಏನಾದ್ರೂ ಸಿಕ್ಕರೆ ಅದರಲ್ಲಿ ನಮಗೆ ಆಸಕ್ತಿ ಇರೋಲ್ಲ. ಅದೇ ಅದು ನಮ್ಮಿಂದ ದೂರ ಆದಾಗ ಅದು ಬೇಕು ಅಂತ ಚಡಪಡಿಸ್ತೀವಿ……

ಸರಿ ಸರಿ ತುತ್ತಿನ ಬಗ್ಗೆ ಮಾತಾಡೋದು ಬಿಟ್ಟು ಏನೇನೋ ಬರೀತಾ ಇದ್ದೀನಿ. ಕೈತುತ್ತಲ್ಲಿ ಏನೋ ಒಂದು ವಿವರಿಸಲಾಗದಂಥ ಬಂಧ ಬೆಸೆಯುವ ತಾಕತ್ತಿದೆ. ಅದಕ್ಕೆ ಚಿಕ್ಕವರಿದ್ದಾಗ ನಾವು ಅಮ್ಮನ ಕೈತುತ್ತು ತಿನ್ನೋಕೆ ಹಾತೊರೆಯುತ್ತೇವೆ. ಒಂದೊಂದು ಸಲ ಅಂತು ನನಗೆ ನಾನು ಯಾಕಾದ್ರೂ ಊಟ ಮಾಡೋದು ಕಲಿತೆನೋ ಅಂತ ಅನಿಸುತ್ತೆ. ಊಟ ಮಾಡೋದೇ ಕಲಿತಿರಲಿಲ್ಲ ಅಂದ್ರೆ ಪ್ರತಿ ದಿನ ಅಪ್ಪ ಅಥವಾ ಅಮ್ಮ ತಿನ್ನಿಸ್ತಾ ಇರ್ತಿದ್ರು…….ಅಲ್ವ……..

ಇತೀಚೆಗೆ ನಾನು ಒಂದು ಧ್ಯಾನ ಶಿಬಿರಕ್ಕೆ ಸ್ವಯಂ ಸೇವಕಿಯಾಗಿ ಹೋಗಿದ್ದೆ. ೪ ದಿನ ಹರಪನಹಳ್ಳಿಯಲ್ಲಿ( ದಾವಣಗೆರೆ) ಶಿಬಿರ. ಅಲ್ಲಿದ್ದ ಇನ್ನು ಅನೇಕ ಸ್ವಯಂ ಸೇವಕರಲ್ಲಿ ಒಬ್ಬರು ನನಗೆ ಎರಡು ದಿನ ಕೈತುತ್ತು ತಿನಿಸಿದ್ದರು…… ನಮ್ಮ ನಡುವೆ ನಾವಿಬ್ಬರೂ ಸ್ವಯಂ ಸೇವಕರು ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಸಂಬಂಧ ಇರಲಿಲ್ಲ……. ಅವರ ಹೆಸರು ಬಿಟ್ಟರೆ ಅವರ ಬಗ್ಗೆ ನನಗೇನು ಗೊತ್ತಿಲ್ಲ.. ಆದರು ಅವರ ಕೈತುತ್ತೆ ನಮ್ಮ ನಡುವೆ ಒಂದು ಮರೆಯಲಾಗದ ಬಂಧವನ್ನು ನಿರ್ಮಿಸಿತ್ತು…..ಕೈತುತ್ತಿಗೆ ಇರುವ ಶಕ್ತಿ ಅಂಥದ್ದು……

ಅಲ್ಲಿಂದ ಮನೆಗೆ ಬಂದ ಮೇಲೆ ಅಪ್ಪನ ಕೈಗೆ ತಿಂಡಿ ತಟ್ಟೆ ಕೊಟ್ಟು ಅವರ ಮುಂದೆ ಕುಳಿತೆ…ಒಂದೊಂದೇ ತುತ್ತು ನನ್ನ ಬಾಯೊಳಗೆ ಪ್ರವೇಶ ಪಡೀತಾ ಇತ್ತು……ಆಹಾ ಅದರ ರುಚಿ ವರ್ಣಿಸಲಸದಳ. ಅಮ್ಮನ ಕೈರುಚಿಯ ಜೊತೆ ಅಪ್ಪನ ಪ್ರೀತಿ ತುಂಬಿದ ಆ ಕೈತುತ್ತು ನಾಲಿಗೆ ಮೇಲೆ ಇಟ್ಟರೆ ಏನೋ ಒಂಥರಾ ಸಂತಸ…..ಇನ್ನೊಂದು ವಿಷಯ ಕೈತುತ್ತು ತಿನ್ನುವಾಗ ನಮಗೆ ಗೊತ್ತಿಲ್ಲದೆ ಸ್ವಲ್ಪ ಜಾಸ್ತಿ ತಿಂದಿರ್ತೀವಿ….. ಕೊನೆ ಕೊನೆಗೆ “ಇನ್ನೊಂದು ತುತ್ತು” ಅಂತ ಹೇಳ್ಕೊಂಡೇ ಅಪ್ಪ ಎಷ್ಟೊಂದು ತುತ್ತು ತಿನ್ನಿಸಿಬಿಟ್ಟಿದ್ದರು…… ಅವರು ಹಾಗೆ ಹೇಳಿದಾಗ ಬೇಡ ಅನ್ನೋಕೆ ಯಾಕೋ ನನಗೆ ಮನಸೇ ಬರಲಿಲ್ಲ…..ನಾನು ತಿಂದು ಬಿಟ್ಟೆ…..ಮತ್ತೆ ಇನ್ನೊಂದೆರಡು ದಿನ ಆದ ಮೇಲೆ ಅಪ್ಪಾನೆ ಕರೆದರು ಬಾ ತಿನ್ನಿಸ್ತೀನಿ ಅಂತ……ಮತ್ತೆ ಅವರ ಕೈಯಿಂದ ಒಂದೊಂದೇ ತುತ್ತು……..

ಇತೀಚೆಗೆ ಯಾವಾಗಲಾದ್ರು ನೀವು ಕೈತುತ್ತು ತಿಂದಿದ್ದೀರಾ??? ಇಲ್ಲ ಅಂದ್ರೆ ಈಗಲೇ ಅಡುಗೆ ಮನೆಗೆ ನೀವೇ ಹೋಗಿ ಮಾಡಿರೋ ಅಡುಗೆ ಬಡಿಸಿಕೊಂಡು ತಂದು ಆ ತಟ್ಟೆಯನ್ನ ನೀವು ತುಂಬ ಪ್ರೀತಿಸುವವರ ಕೈಗೆ ಕೊಟ್ಟು ಅವರ ಮುಂದೆ ಕುಳಿತುಕೊಳ್ಳಿ…… ಒಂದೊಂದು ತುತ್ತು ತಿನ್ನುವಾಗಲೂ ನಿಮಗೊಂದು ವಿಶೇಷ ಅನುಭವ ಆಗ್ಲಿಲ್ಲ ಅಂದ್ರೆ ಕೇಳಿ…… ನನಗಂತೂ ಎಷ್ಟೋ ವರ್ಷಗಳ ನಂತರ ಕೈತುತ್ತು ತಿನ್ನಿಸಿಕೊಂಡ ಆ ಕ್ಷಣ…… ನೆನಪಿಸಿಕೊಂಡರೆ ಕಣ್ಣು ತೇವವಾಗುತ್ತೆ….. ಅಲ್ಲ ಪ್ರೀತಿ ವ್ಯಕ್ತ ಪಡಿಸೋಕೆ ಇದಕ್ಕಿಂತ ಒಳ್ಳೆ ಮಾರ್ಗ ಬೇಕಾ?????

ಅದಕ್ಕೆ ಹೇಳ್ತಾ ಇದ್ದೀನಿ ನೀವು ಕೈತುತ್ತು ತಿಂದು ಒಂದು ವರ್ಷಕ್ಕಿಂತ ಜಾಸ್ತಿಯಾಗಿದ್ರೆ ದಯವಿಟ್ಟು ಹೋಗಿ ನೀವು ತುಂಬಾ ಪ್ರೀತಿಸುವವರ ಕೈಯಿಂದ ತಿನ್ನಿಸಿಕೊಳ್ಳಿ. ಅದರ ಹಿತ ಅನುಭವಿಸಿ….ಆಗ ಗೊತ್ತಾಗುತ್ತೆ ಕೈತುತ್ತಿನ ಗಮ್ಮತ್ತು….. ಸರಿ ಹೋಗಿ ಕೈತುತ್ತು ತಿಂತೀರಾ ತಾನೆ…….

Wednesday, July 16, 2008

ಚಂದಮಾಮ ಬಾರೋ

ರಾತ್ರಿ ಮಲಗಲೆಂದು ಕೋಣೆಗೆ ಹೋಗಿ ಮಂಚದ ಮೇಲೆ ಬಿದ್ದೆ
ಅಲ್ಲಿ ತೆರದ ಕಿಟಕಿಯಾಚೆ ನಿಂತಿದ್ದ ಒಬ್ಬ ಪೋರ
ನನ್ನಂಥ ಅನೇಕ ಹುಡುಗಿಯರ ನಿದ್ದೆ ಕೆಡಿಸಿದ ಚೋರ
ನನ್ನನ್ನೇ ದಿಟ್ಟಿಸುತ್ತಾ……..
ನಾಚಿಕೆಯಿಂದ ಹಾಗೆ ಮುಖವನ್ನು ಮುಚ್ಚಿಕೊಂಡೆ….
ಅವನ ಪ್ರತಿಕ್ರಿಯೆ ಏನಿತ್ತೋ ನಾ ಕಾಣೆ
ಯಾಕೋ ಏನೋ ಅವನು ನನ್ನವನೇ ಅಲ್ಲವೇ ನೋಡಿದರೆ ತಪ್ಪೇನು????
ಎಂದು ಮುಸುಕು ಸರಿಸಿ ಅವನನ್ನೇ ನಾನೂ ದಿಟ್ಟಿಸಿದೆ……
ಅದು ಏನಾಯ್ತೋ ಏನೋ ಅವನೇ ನಾಚಿಕೆಯಿಂದ ಮೋಡಗಳ ಮುಸುಕೆಳೆದುಕೊಂಡುಬಿಟ್ಟ……..

ಹೌದು ಕಣ್ರೀ ಮೊನ್ನೆ ನಾನು ಮಲಗಿದ್ದಾಗ ಕಿಟಕಿಯಿಂದ ಆ ಚಂದ್ರನನ್ನು ನೋಡಿದಾಗ ನನ್ನ ಮನಸಿಗನಿಸಿದ್ದೆ ಹೀಗೆ……

ವೈಜ್ಞಾನಿಕವಾಗಿ ಮಾತಾಡೋವಾಗ ಚಂದ್ರ ಒಂದು ಆಕಾಶಕಾಯ ಅಷ್ಟೆ……..ಆದ್ರೆ ಅದರೊಂದಿಗೆ ನಾವು ಒಂದು ರೀತಿಯ ಸಂಬಂಧ ಬೆಳೆಸಿಕೊಂಡುಬಿಟ್ಟಿದ್ದೀವಿ…… ಭೂಮಿನ ತಾಯಿ ಅಂತ ಪೂಜಿಸಿದರೆ ಚಂದ್ರನ್ನ ಪ್ರೀತಿಯಿಂದ ಮಾಮ ಅಂತ ಕರೀತೀವಿ ಅಲ್ವ……. ಅದೇನು ಮೋಡಿನೋ ಅದೇನೋ ಮಂತ್ರನೋ ಆ ಚಂದ್ರ ಒಂದು ನಿರ್ಜೀವ ವಸ್ತು ಅಂತ ನಂ ಮನಸು ಅಷ್ಟು ಸುಲಭವಾಗಿ ಒಪ್ಪಿಕೊಳ್ಳೊಲ್ಲ…….ಅದರೊಂದಿಗೆ ಒಂದು ಭಾವನಾತ್ಮಕ ಬಂಧವನ್ನು ಇಟ್ಟುಕೊಳ್ಳುವುದಕ್ಕೆ ಹಾತೊರೆಯುತ್ತೆ…… ಚಂದ್ರನನ್ನು ನೋಡಿದಾಗ ಒಂದು ರೀತಿಯ ಆನಂದವನ್ನು ಅನುಭವಿಸುತ್ತೆ…… ನಿಮ್ಮ ಬದುಕಲ್ಲೂ ಒಂದಿಲ್ಲೊಂದು ಬಾರಿ ಹಾಗೆ ಆಗಿರುತ್ತೆ ಅಲ್ವ…..

ಅಲ್ಲ ಯಾವ ತಾಯಿ ತಾನೆ ಚಂದ್ರನ್ನ ತೋರಿಸದೇ ತನ್ ಮಗುಗೆ ಊಟ ಮಾಡಿಸಿರುತ್ತಾಳೆ ಹೇಳಿ……ನಾವು ನೀವು ಎಲ್ಲ ಮಗುವಾಗಿದ್ದಾಗ ಅಮ್ಮನ ಕೈ ತುತ್ತಿನ ಸವಿಯ ಜೊತೆ ಚಂದ್ರನ ನೋಟದ ಸವಿಯನ್ನು ಅನುಭವಿಸಿದವರೇ ಅಲ್ಲವೇ……….ಅಲ್ಲಿ ನೋಡು ಚಂದ್ರ ಅಂತ ಚಂದ್ರನ್ನ ತೋರಿಸಿ ಚಂದ್ರನ್ನ ನೋಡುವಾಗ ಗೊತ್ತಿಲ್ಲದ ಹಾಗೆ ಬಾಯಿಗೆ ತುತ್ತಿಡುವ ತಾಯಿಯರೆಷ್ಟೋ…….ಅವರೆಲ್ಲ ಚಂದ್ರನಿಗೊಂದು ಥ್ಯಾಂಕ್ಸ್ ಹೇಳ್ಬೇಕು…….. ಯಾಕಂದ್ರೆ ಚಂದ್ರನೇ ಇರ್ಲಿಲ್ಲ ಆದ್ರೆ ಅವರು ಮಗುಗೆ ಊಟ ಮಾಡಿಸೋಕೆ ಎಷ್ಟು ಕಷ್ಟ ಪಡಬೇಕಿತ್ತು ಅಲ್ವ……

ಈ ಚಂದ್ರನ್ನ ನೋಡುತ್ತಾ ಊಟ ಮಾಡೋದು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಷ್ಟ……ಅದಕ್ಕೆ ಮೂನ್ ಲೈಟ್ ಡಿನ್ನರ್ ಅಂತ ಬೆಳದಿಂಗಳ ಊಟ ಮಾಡೋಕೆ ಇಷ್ಟ ಪಡೋದು….. ನಾವು ಒಂದು ಸಲ ಹಬ್ಬದ ದಿನ ಬೆಳದಿಂಗಳ ಊಟ ಮಾಡಿದ್ವಿ…..ಅದು ಒಂಥರಾ ಹೊಸ ಅನುಭವ………

ಕವಿಗಳಿಗೆ ಸಾಹಿತಿಗಳಿಗಂತೂ ಚಂದ್ರ ಅಂದ್ರೆ ತುಂಬ ಇಷ್ಟ ತಮ್ಮ ಅನೇಕ ಕವಿತೆಗಳಿಗೆ ರೂಪಕವಾಗಿ ಬಳಸಿರುತ್ತಾರೆ….. ಕುವೆಂಪು ಅವರು “ಎಲ್ಲಿಗೆ ನಾ ಹೋದರಲ್ಲಿಗೆ ಬರುವನು ಅಮ್ಮ ಚಂದಿರ ನನ್ನವನು” ಅಂತ ಹಾಡಿದರೆ ಬೇಂದ್ರೆಯವರು “ ಬಿದಿಗಿ ಚಂದ್ರ ಚೋಗಡಿ ನಗಿ ಹೂ ಮಲ್ಲಿಗೆ ಮೂಡಿತ್ತ” ಅಂತಾರೆ……ಜನಪದ ಕವಿಗಳಂತೂ ಚಂದ್ರನ ಬಗ್ಗೆ ಅನೇಕ ಹಾಡುಗಳನ್ನು ಹಾಡುತ್ತಾರೆ……ಇನ್ನು ನಮ್ಮ ಸಿನಿಮಾ ಸಾಹಿತಿಗಳು ಈ ವಿಷಯದಲ್ಲಿ ಹಿಂದೆ ಇಲ್ಲ…..

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೋದ್ರೆ ಭಾದ್ರಪದ ಚೌತಿಯ ಚಂದ್ರನನ್ನು ನೋಡಬಾರದು ಅಂತಾರೆ…….ರಾತ್ರಿ ಹೊತ್ತಲ್ಲಿ ನಕ್ಷತ್ರಗಳ ಮಧ್ಯೆ ಚಕ್ರಾಧಿಪತಿಯಂತೆ ರಾರಾಜಿಸುವ ಆ ಚಂದ್ರನಿಗೆ ಅದೆಷ್ಟು ಧೈರ್ಯ ಅಲ್ವ ನಮ್ಮ ಗಣೇಶನನ್ನೇ ಆಡಿಕೊಂಡು ನಕ್ಕುಬಿಟ್ಟ…….ಅದಕ್ಕೆ ನಂ ಗಣುಮಾಮ ಅವನಿಗೆ ಶಾಪ ಕೊಟ್ಟು ಅವನ ಕೊಬ್ಬನ್ನು ಕಡಿಮೆ ಮಾಡಿದ….. ಅಲ್ವೇನ್ರಿ……

ಅದೇ ನಮ್ಮ ಊರ ಕಡೆ ಯುಗಾದಿಯ ಮರುದಿನದ ಚಂದ್ರನನ್ನು ನೋಡಿ ಆ ವರ್ಷದ ಆಯ-ವ್ಯಯ…ಮಳೆ-ಬೆಳೆ ಹೇಗಿರುತ್ತೆ ಅಂತ ಹೇಳ್ತಾರೆ……ಅದರಲ್ಲಿ ಎಷ್ಟು ನಿಜನೋ ಎಷ್ಟು ಸುಳ್ಳೋ ನನಗಂತೂ ಗೊತ್ತಿಲ್ಲ ಆದ್ರೆ ಇದೆಲ್ಲ ಅವರವರ ಭಾವಕ್ಕೆ ಅವರವರ ಭಕುತಿಗೆ ಅಲ್ವ…..ಅದಕ್ಕೆ ಅವರ ಮನಸಿನ ನಂಬಿಕೆಯನ್ನು ನಾವು ಪ್ರಶ್ನಿಸೋದು ಬೇಡ ಅಲ್ವ….

ಚಂದ್ರನ ಬಗ್ಗೆ ಯಾರು ಏನೇ ಹೇಳಲಿ ಈ ಭೂಮಿ ಮೇಲಿಂದ ನೋಡೋಕೆ ಅವನು ಫಳ ಫಳ ಹೊಳೆಯುವ ಬೆಳ್ಳಿ ತಟ್ಟೆಯಂತೆ ಕಾಣುತ್ತಾನೆ…..ಆ ತಟ್ಟೆಯಲ್ಲಿ ಕಾಣೋ ಅನೇಕ ಉಬ್ಬು ತಗ್ಗುಗಳು….ಅವುಗಳ ಮಧ್ಯೆಯೂ ನಮ್ಮನ್ನು ಆಕರ್ಷಿಸುವ ಆ ಸೌಂದರ್ಯ……ಆಹಾ…..ಪ್ರಕೃತಿಯ ಸೊಬಗನ್ನು ಅನುಭವಿಸಬೇಕು ಅನ್ನೋ ಆಸೆ ಇದ್ದರೆ ನಿಜವಾಗ್ಲೂ ಆ ನೋಟ ನಮ್ಮ ಮನಸೂರೆಗೊಂಡುಬಿಡುತ್ತೆ ಅಲ್ವ…….

ಆದ್ರೆ ನಾವೆಲ್ಲರೂ ವಾರ ವಾರ ರಜ ತಗೊಂಡ್ರೆ ಈ ಚಂದ್ರಂದು ಇನ್ನೊಂದು ಥರ ರಜ……. ಮೊದ್ಲು ಪೂರ್ತಿ ಕಂಡ್ರೆ ದಿನ ದಿನ ಸ್ವಲ್ಪ ಸ್ವಲ್ಪ ಭಾಗ ರಜೆ ತಗೊಳ್ಳುತ್ತ ಹೋಗುತ್ತೆ……. ಕೊನೆಗೆ ಒಂದು ದಿನ ಪೂರ್ತಿ ರಜ…….ಆ ದಿನ ಆಕಾಶ ನೋಡಿದಾಗ ಚಂದ್ರಿನಿಲ್ಲದ ಬೇಸರ ಕಾಡಿದರೂ…… ಅಲ್ಲಲ್ಲಿ ಮಿನುಗುವ ನಕ್ಷತ್ರಗಳ ಸೊಬಗನ್ನು ಆಸ್ವಾದಿಸೋ ಅವಕಾಶ ಸಿಗುತ್ತೆ…… ಆಮೇಲೆ ಮತ್ತೆ ಸ್ವಲ್ಪ ಭಾಗ ಮತ್ತೆ ಪ್ರತ್ಯಕ್ಷ ಆಗಿ ಅದು ಹೆಚ್ಚುತ್ತಾ ಹೋಗಿ ಕೊನೆಗೆ ಒಂದು ತಿಂಗಳೊಳಗೆ ಪೂರ್ಣ ಚಂದ್ರನ ದರ್ಶನ ಭಾಗ್ಯ ನಮಗೆ ದೊರೆಯುತ್ತೆ…….

ಇದನೆಲ್ಲ ನೋಡಿ ಅದರಿಂದ ಸಿಗುವ ಆನಂದವನ್ನು ನಮ್ಮ ಮನಸಿನ ಮೂಲೆಯಲ್ಲಿ ಅಚ್ಚಳಿಯದ ಹಾಗೆ ಕಾಪಾಡಿಕೊಂಡು ಪ್ರತಿ ದಿನ ಆ ಚಂದ್ರನಿಗೆ….. "ಚಂದಮಾಮ ಬಾರೋ" ಅಂತ ಹಾಡಿ ಕರೆಯೋಣವಾ?????

Tuesday, July 15, 2008

ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ

ನಂ ಮನಸಲ್ಲಿ ಮೂಡೋ ಎಲ್ಲ ಭಾವನೆಗಳಿಗೂ ಈ ಪ್ರೀತಿನೆ ಕಾರಣ ಅಲ್ವ……..ಅನುಕಂಪ, ವಾತ್ಸಲ್ಯ, ಮಮತೆ ಏನೇ ಆಗಿರಬಹುದು ಅದಕ್ಕೆಲ್ಲ ಪ್ರೀತಿನೆ ಕಾರಣ……… ಇನ್ನೊಂದು ವಿಷಯ ಹೇಳಲಾ???? ನನ್ ಪ್ರಕಾರ ದ್ವೇಷದ ಹಿಂದೇನು ಪ್ರೀತಿ ಇದ್ದೇ ಇರುತ್ತೆ…….. ಒಂದು ಕ್ಷಣ ಕಣ್ಣು ಮುಚ್ಚಿ ಯೋಚನೆ ಮಾಡ್ರಿ………… ಈ ಜಗತ್ತಲ್ಲಿ ಪ್ರೀತಿ ಅನೋದೆ ಇರ್ಲಿಲ್ಲ ಅಂದ್ರೆ ಏನಾಗುತ್ತಿತ್ತು????

ನಾವು ಹುಟ್ಟಿದಾಗಿನಿಂದ ನಂ ಜೊತೇನೆ ಇದ್ದು ನಮ್ಮನ್ನ ತುಂಬ ತುಂಬ ತುಂಬ ಪ್ರೀತಿ ಮಾಡೋ ತಂದೆ ತಾಯಿ ನಮಗೋಸ್ಕರ ಎಷ್ಟು ಕಷ್ಟ ಪಡ್ತಾ ಇದ್ದಾರೆ ಅಲ್ವ……ತಮ್ಮ ನೋವನ್ನೆಲ್ಲ ಮರೆತು ನಮ್ಮೆದುರು ನಗ್ತಾ ಇರ್ತಾರೆ…… ಇದೆಲ್ಲ ಅವರು ನಂ ಮೇಲಿರೋ ಪ್ರೀತಿಯಿಂದಾನೆ ಮಾಡೋದು…. ಅಕಸ್ಮಾತ್ ಅವರಿಗೆ ನಂ ಮೇಲೆ ಪ್ರೀತಿ ಇಲ್ಲದಿದ್ದರೆ ನಾವು ಈಗ ಹೇಗಿದ್ದೇವೋ ಹಾಗೆ ಇರೋಕೆ ಅಗ್ತಿತ್ತಾ???..... ಜಗತ್ತೇ ನಮ್ಮ ವಿರುದ್ಧ ನಿಂತರೂ ನಾನು ನಿನ್ ಜೊತೆಗಿರ್ತೀನಿ ಅನ್ನೋ ಆ ಮಾತು……ಅಳುವಾಗ ತಬ್ಬಿ ಸಂತೈಸೋ ಆ ತೋಳುಗಳು…..ಹಸಿದಾಗ ತುತ್ತಿಟ್ಟು ತಿನ್ನಿಸೋ ಆ ಕೈಗಳು…..ಸುಸ್ತಾದಾಗ ಮಲಗೋಕೆ ಜಾಗ ಕೊಡೊ ಆ ಮಡಿಲು………ಇವೆಲ್ಲ ಇಲ್ಲ ಅಂದ್ರೆ……ಬೇಡ ಬೇಡ ಅದರ ಬಗ್ಗೆ ಮಾತೇ ಬೇಡ…….

ನಾವು ಪ್ರೈಮರಿ ಸ್ಕೂಲಿಂದ ಕಲಿತಾ ಇರೋದು ಮನುಷ್ಯ ಸಂಘ ಜೀವಿ ಅವನು ಯಾವಾಗಲು ಬೇರೆಯವರನ್ನು ಅವಲಂಬಿಸಿಯೇ ಇರುತ್ತಾನೆ ಅಂತ……. ಅಲ್ಲ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ ಇರ್ಲಿಲ್ಲ ಅಂದ್ರೆ ನಾವು ಸಮಾಜ ಶಾಸ್ತ್ರ ಓದೋದೇ ಬೇಕಾಗ್ತಾ ಇರ್ಲಿಲ್ಲ…… ಯಾಕಂದ್ರೆ ಆಗ ಸಮಾಜ ಅನ್ನೋ ವಿಚಾರಾನೆ ನಂ ತಲೆಗೆ ಹೊಳೀತಾ ಇರ್ಲಿಲ್ಲ ಅಲ್ವ………

ಯಾರಿಗಾದರು ನೋವಾದಾಗ ಮಿಡಿಯೋ ಮನಸು….ಅಯ್ಯೋ ಪಾಪ ಹಾಗಾಗಬಾರದಿತ್ತು ಅಂತ ಮರುಕ ಪಡೋ ಮನಸು……..ಛೆ ಯಾಕಾದ್ರೂ ದೇವ್ರು ಇಷ್ಟು ಕ್ರೂರಿ ಆಗ್ತಾನೋ ಅಂತ ಶಪಿಸೋ ಮನಸು….ಇವೆಲ್ಲ ನೀವು ಅನುಕಂಪ ಅಂತ ಅನ್ನಬಹುದು ಆದ್ರೆ ನಾನು ಇದನ್ನೂ ಪ್ರೀತಿ ಅಂತಾನೆ ಕರೀತೀನಿ…..ಪ್ರೀತಿ ಇಲ್ಲ ಅಂದ್ರೆ ನಂ ಮನಸಿಗೆ ಇಂಥ ಯೋಚನೆಗಳೇ ಬರೋಲ್ಲ ಅಲ್ವ…..

ಜೊತೆಗೆ ಇಲ್ಲದೆ ಇದ್ರೂ ಸದಾ ನಮ್ಮ ಬಗ್ಗೆನೇ ಕಾಳಜಿ ವಹಿಸೋ ಅಕ್ಕ……ಸದಾ ಒಂದಿಲ್ಲೊಂದು ವಿಷಯಕ್ಕೆ ಜಗಳ ಆಡಿದರು ಅಷ್ಟೆ ಗೌರವಾದರಗಳಿರೋ ತಮ್ಮ……… ವಾತ್ಸಲ್ಯ ಭರಿತ ಮಾತುಗಳಿಂದ ಸದಾ “ಹುಷಾರು” ಅಂತ ಹೇಳೋ ತಾತ ಅಜ್ಜಿ …….ನಗುನಗುತ್ತ ಮಾತಾಡಿಸೋ ಚಿಕ್ಕಪ್ಪ ಚಿಕ್ಕಮ್ಮಂದಿರು…….. “ಅಕ್ಕ ಅಕ್ಕ” ಅಂತ ಜೊತೆಗೆ ಓಡಾಡೋ ಅವರ ಮಕ್ಕಳು…....ದೊಡ್ಡಪ್ಪ, ದೊಡ್ಡಮ್ಮ, ಸೋದರ ಮಾವ, ಅತ್ತೆ, ಅವರ ಮಕ್ಕಳು, ಅಕ್ಕನ ಮಕ್ಕಳು, ಅಣ್ಣಂದಿರು…… ಇನ್ನು ಹೇಳ್ತಾ ಹೋದ್ರೆ ಇಂಥ ನೂರೆಂಟು ಸಂಬಂಧಗಳು …… ಪ್ರೀತಿನೇ ಇಲ್ಲ ಅಂದ್ರೆ ಇವರೆಲ್ಲ ನಮ್ಮವರು ಅಂತಿದ್ವಾ? ಅಷ್ಟೆಲ್ಲಾ ಯಾಕೆ ಇಂಥ ಸಂಬಂಧಗಳೇ ಇರುತ್ತಿರಲಿಲ್ಲ ಅಲ್ವೇನ್ರಿ……. ಆ ಸಂಬಂಧಗಳೇ ಇಲ್ಲದ ಬದುಕು ಹೇಗಿರುತ್ತೆ????? ಊಹೆ ಮಾಡೋಕೂ ಸಾಧ್ಯ ಇಲ್ಲ ಅಲ್ವ…….

ಅಕಸ್ಮಾತಾಗಿ ನಮ್ಮ ಬದುಕಲ್ಲಿ ಬಂದು ನಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಅನುಭವಿಸುವಲ್ಲಿ ಜೊತೆಗಾರರಾಗಿದ್ದು ನಮ್ಮ ಮನಸಿಗೆ ಸಂತೋಷವಾದಾಗ ಅದನ್ನು ಹಂಚಿಕೊಂಡು ದುಃಖವಾದಾಗ ನಮ್ಮನ್ನು ಸಂತೈಸೋ ಸ್ನೇಹಿತರಿಗೆ ನಮ್ಮ ಮೇಲೆ ಪ್ರೀತಿನೇ ಇರ್ಲಿಲ್ಲ ಅಂದ್ರೆ…… ಈ ಜಗತ್ತಲ್ಲೇ ಒಂದು ಅತ್ಯುತ್ತಮ ಬಂಧ ಅಂತ ನಾವು ಕರೆಯೋ ಸ್ನೇಹಕ್ಕೆ ಆಗ ಏನು ಬೆಲೆ ಇರ್ತಿತ್ತು ನೀವೇ ಹೇಳ್ರಿ……. ಸ್ನೇಹಿತರೂ ಒಬ್ಬರನ್ನೊಬ್ಬರು ಪ್ರೀತಿಸದೆ ಇದ್ರೆ ಮನಸುಗಳ ನಡುವೆ ಸೇತುವೆ ಕಟ್ಟೋಕೆ ಆಗುತ್ತಾ ಹೇಳಿ………

ನಮಗೆ ಪರಿಚಿತರಲ್ಲದ ಹಲವರು ನಮಗೆ ಎಷ್ಟೋ ಸಂದರ್ಭದಲ್ಲಿ ಸಹಾಯ ಮಾಡಿರ್ತಾರೆ…. ಅವರನ್ನೆಲ್ಲ ನಾವು ನೆನಪಲ್ಲಿಟ್ಟುಕೊಳ್ಳದೆ ಇರಬಹುದು ಆದ್ರೆ ಅವರು ನಮಗೆ ಸಹಾಯ ಮಾಡಿದ್ದು ನಂ ಮೇಲಿನ ಪ್ರೀತಿಯಿಂದಾನೆ………ಅವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲದೆ ಹೋಗಿದ್ರೆ ನಾವು ಅವರಿಂದ ಯಾವುದೇ ಸಹಾಯ ಅಪೇಕ್ಷಿಸೋದಿಕ್ಕೆ ಆಗೋಲ್ಲ………

ಇಷ್ಟು ಹೊತ್ತು ಬೇರೆಯವರಿಗೆ ನಮ್ಮ ಬಗ್ಗೆ ಪ್ರೀತಿ ಇಲ್ಲದೆ ಹೋದ್ರೆ ಏನಾಗುತ್ತಿತ್ತು ಅಂತ ಹೇಳಿದ್ದಾಯ್ತು ......ನಾವೇ ಯಾರನ್ನು ಪ್ರೀತಿಸಲಿಲ್ಲ ಅಂದ್ರೆ…..ನಮ್ಮ ಮನಸಲ್ಲಿ ಯಾವುದೇ ಭಾವನೆಗಳೇ ಇರೋಲ್ಲ ಅಲ್ವ……ಆಗ ನಾನು ತುಂಬ ಇಷ್ಟ ಪಡೋ ಮನಸನ್ನು ದ್ವೇಷಿಸುತ್ತಿದ್ದೆನೇನೋ………ಓಹ್……ಆಗ ದ್ವೇಷ ಅನ್ನೋದು ತಾನೆ ಹೇಗೆ ಬರ್ತಿತ್ತು ಯಾಕಂದ್ರೆ ನಾನು ಈಗಾಗಲೇ ಹೇಳಿರೋ ಹಾಗೆ ಪ್ರೀತಿ ಇದ್ರೇನೆ ದ್ವೇಷನು ಇರೋದು ಅಲ್ವ………

ಅದಕ್ಕೆ ಈ ಭೂಮಿ ಮೇಲೆ ಎಲ್ಲಿವರೆಗೂ ಮನುಷ್ಯರಿರುತ್ತರೋ ಅಲ್ಲಿವರೆಗೆ ಪ್ರೀತಿನೂ ಇರುತ್ತೆ……. ಯಾಕಂದ್ರೆ ಮನುಷ್ಯ ಒಂದು ಕ್ಷಣ ಜೀವಿಸೋಕು ಅವನಿಗೆ ಪ್ರೀತಿ ಬೇಕು……..ತಾಯಿ ತನ್ನ ಮಗುನ ಪ್ರೀತಿಸದೆ ಇದ್ರೆ ಆ ಮಗು ಈ ಜಗತ್ತಿಗೆ ಬರೋಕೆ ಆಗೋಲ್ಲ. ಹಾಗಾಗಿ ಈ ಭೂಮಿ ಮೇಲೆ ಪ್ರೀತಿ ಇದ್ದೇ ಇರುತ್ತೆ…….ಪ್ರೀತಿ ಯಾಕೆ ಭೂಮಿ ಮೇಲಿದೆ ಅಂತ ಪ್ರಶ್ನಿಸಿ ನಮ್ಮ ಸಮಯ ಹಾಳು ಮಾಡಿಕೊಳ್ಳೋದಕ್ಕಿಂತ ಅದರಿಂದ ನಮಗಾಗುಗುವ ಆ ವರ್ಣನಾತೀತ ಅನುಭವವನ್ನು ಅನುಭವಿಸುವುದೇ ಮೇಲು ಅಲ್ವ……..

Tuesday, July 8, 2008

ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ

ಈ ಪ್ರೀತಿ ಬಗ್ಗೆ ಮಾತಾಡುವವರು ಎಷ್ಟೊಂದು ಜನ……. ಆದ್ರೆ ಒಬ್ಬೊಬ್ಬರು ಅದನ್ನ ತಮಗಿಷ್ಟಬಂದಂತೆ ವ್ಯಾಖ್ಯಾನಿಸ್ತಾರೆ ಅಲ್ವ…… ಅಂತ ಒಂದೊಂದು ಅರ್ಥಾನು ಒಂದೊಂದು ಸಂದರ್ಭಕ್ಕೆ ಸರಿಯಾಗೇ ಇರುತ್ತೆ. ಈ ಮನಸು ಎಷ್ಟು ವಿಚಿತ್ರನೋ ಅದರಲ್ಲಿ ಮೂಡೋ ಪ್ರೀತಿನೂ ಅಷ್ಟೆ ವಿಚಿತ್ರ….

ನನ್ನ ಪ್ರಕಾರ ಪ್ರೀತಿ ಅಂದ್ರೆ ಎರಡು ಮನಸುಗಳ ನಡುವಿನ ಸಂವಹನದ ಕುರುಹು. ನೀವು ಒಪ್ತೀರೋ ಇಲ್ವೋ ನಾನಂತೂ ಈ ಪ್ರೀತಿ ಇಲ್ಲ ಅಂದ್ರೆ ಈ ಜಗತ್ತೇ ಇಲ್ಲ ಅಂತಾನೆ ಹೇಳ್ತೀನಿ…… ಅಲ್ಲ ಈ ಪ್ರೀತಿಯಿಂದಾನೆ ತಾನೆ ಜೀವನ. ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಪ್ರೀತಿಗೋಸ್ಕರ ಹಂಬಲಿಸ್ತೀವಿ…….. ಚಿಕ್ಕವರಿದ್ದಾಗ ಅತ್ತು ಹೆತ್ತವರ ಪ್ರೀತಿ ಪಡೆದುಕೊಂಡರೆ ಆನಂತರ ನಮ್ಮ ನಡವಳಿಕೆಯಿಂದ ನಾವು ಅವರನ್ನ ಪ್ರೀತಿಸ್ತೀವಿ ಅನ್ನೋದನ್ನ, ಅವರ ಪ್ರೀತಿ ನಮಗೆ ಬೇಕು ಅನ್ನೋದನ್ನ ತೋರಿಸ್ತೀವಿ……ಸ್ನೇಹಿತರ ಜೊತೆ ಇರುವಾಗ ನಮ್ಮ ಮಾತಿನ ಮೂಲಕ ನಂ ಪ್ರೀತಿನ ತೋರಿಸ್ತೀವಿ….. ಹಿರಿಯರ ಮುಂದೆ ತಗ್ಗಿ ಬಗ್ಗಿ ನಡೆದುಕೊಳ್ಳೊ ಮೂಲಕ ನಮ್ಮ ಪ್ರೀತಿನ ವ್ಯಕ್ತ ಪಡಿಸ್ತೀವಿ……. ಇದೆಲ್ಲ ನಮ್ಮ ಮನಸಲ್ಲಿ ಅವರ ಬಗ್ಗೆ ಇರುವ ಪ್ರೀತಿಯ ಪ್ರಕಟಣೆಯೇ ಆದರು ನಾವು ಇದೆಲ್ಲವನ್ನೂ ಒಂದೊಂದು ರೀತಿ ಅರ್ಥೈಸ್ತೀವಿ…… ಒಂದನ್ನ ವಾತ್ಸಲ್ಯ ಅಂದ್ರೆ ಇನ್ನೊಂದನ್ನ ಸ್ನೇಹ ಅಂತೀವಿ……ಮತ್ತೊಂದನ್ನ ಗೌರವ ಅಂತೀವಿ……..ಅದು ಯಾವುದೇ ಆಗಿರಲಿ ನಮ್ಮ ಮನಸಲ್ಲಿ ಅವ್ರ ಬಗ್ಗೆ ಪ್ರೀತಿ ಇಲ್ಲ ಅಂದ್ರೆ ಇದ್ಯಾವುದು ಹುಟ್ಟೋಕೆ ಸಾಧ್ಯ ಇಲ್ಲ ಅಲ್ವ……

ನಿಮ್ಮ ವಿಷ್ಯ ನನಗೆ ಗೊತ್ತಿಲ್ಲ ಆದ್ರೆ ನನ್ ಮನಸ್ಸಂತೂ ನಾನು ಪ್ರೀತಿಸುವವರು ನನ್ನನ್ನು ಪ್ರೀತಿಸ್ಲೇಬೇಕು ಅಂತ ಹಠ ಹಿಡಿಯುತ್ತೆ…… ನಿಮಗೂ ಹಾಗೆ ಆಗುತ್ತೆ ಅಲ್ವ…. ನಂಗೊತ್ತು….. ಆದ್ರೆ ಈ ಹಠದ ತೀವ್ರತೆ ಎನಿರುತ್ತಲ್ಲ ಅದು ಮಾತ್ರ ಒಬ್ರಿಂದ ಒಬ್ರಿಗೆ ಬದಲಾಗುತ್ತೆ…. ಯಾರೇ ಆಗಲಿ ನಾವು ಯಾರನ್ನಾದರು ಪ್ರೀತಿಸ್ತಾ ಇದ್ರೆ ಅವ್ರ ಪ್ರೀತಿ ನಮಗೆ ಸಿಕ್ಕಿದ್ದೇ ಆದ್ರೆ ನಮ್ಮ ಮನಸು ಕುಣಿದು ಕುಪ್ಪಳಿಸುತ್ತೆ. ಆದ್ರೆ ಅವ್ರು ನಮ್ಮನ್ನ ಪ್ರೀತಿಸ್ತಾರೆ ಅಂತ ಗೊತ್ತಾದ್ರೆ ಮಾತ್ರ ಸಾಲದು……ಅದನ್ನ ವ್ಯಕ್ತ ಪಡಿಸಲಿ ಅಂತ ಮನಸು ಹಾತೊರೆಯುತ್ತೆ……ಹೌದಾ ಇಲ್ವಾ ನೀವೇ ಹೇಳ್ರಿ….

ಈ ಪ್ರೀತಿ ಅನ್ನೋದು ರಕ್ತಸಂಬಂಧಗಳಲ್ಲಿ ಇದ್ದೆ ಇರುತ್ತೆ……ನಾನು ನಮಪ್ಪ ಅಮ್ಮನ್ನ…. ಅಕ್ಕನ್ನ …. ತಮ್ಮನ್ನ ಎಲ್ಲರನ್ನು ಪ್ರೀತಿಸ್ತೀನಿ………ನಾನು ನಮ್ಮಕ್ಕ ಒಬ್ಬರನ್ನು ಒಬ್ರು ಎಷ್ಟು ಅರ್ಥ ಮಾಡ್ಕೊಂಡಿದ್ದೀವಿ ಅಂದ್ರೆ ನಮ್ಮಕ್ಕನಿಗಿರೋ ಏಕೈಕ ಬೆಸ್ಟ್ ಫ್ರೆಂಡ್ ನಾನು ಮತ್ತೆ ನನಗೆ ನಮ್ಮಕ್ಕ…….ನಾವಿಬ್ರು ಇದುವರೆಗೆ ಜಗಳ ಆಡೇ ಇಲ್ಲ ಅಂತಾನೆ ಹೇಳಬಹುದು…….. ಆದ್ರೆ ಇದೆ ಮಾತನ್ನ ನನ್ ತಮ್ಮನ ಬಗ್ಗೆ ಹೇಳೋಕೆ ಆಗೋಲ್ಲ…… ಅಂದ್ರೆ ಅವನನ್ನ ಅರ್ಥ ಮಾಡಿಕೊಂಡಿಲ್ಲ ಅಂತಲ್ಲ ಆದ್ರೆ ಜಗಳ ಆಡೋದು ಒಂಥರಾ ಇಬ್ರಿಗೂ ಖುಷಿ ಕೊಡುತ್ತೆ……..ಹೇಗೆ ಅಂದ್ರೆ ನಾವಿಬ್ರು ದೂರ ಆದ್ರೆ ಅವ್ರನ್ನ ಮಿಸ್ ಮಾಡಿಕೊಳ್ಳೋದಕ್ಕಿಂತ ಅವ್ರ ಜೊತೆ ಆಡ್ತಾ ಇದ್ದ ಜಗಳನ ಮಿಸ್ ಮಾಡಿಕೊಳ್ತೀವಿ………

ಅಲ್ಲ ಯಾವುದೇ ಸಂಬಂಧ ಇಲ್ಲದ ಕೆಲವರನ್ನ ನಮ್ಮ ಮನಸು ತುಂಬ ಇಷ್ಟ ಪಡುತ್ತೆ… ಅವ್ರ ಬಗ್ಗೆ ಒಂದು ವಿಶ್ವಾಸ ಬೆಳಿಸಿಕೊಳ್ಳುತ್ತೆ……ಅಷ್ಟೆ ಅಲ್ಲ ಅದಕ್ಕೆ ಸ್ನೇಹ ಅಂತ ಹೆಸರನ್ನು ಇಡುತ್ತೆ… ಅಲ್ಲ ಕಣ್ರೀ…….. ಈ ಮನಸು ಎಲ್ಲರನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳೊಲ್ಲ. ಆದರು ಕೆಲವೊಬ್ರು ಸೀದಾ ನಮ್ಮ ಮನಸಿನ ಒಂದು ಮೂಲೆಯಲ್ಲಿ ಸ್ಥಾನ ಪಡೆದುಕೊಂಡುಬಿಡ್ತಾರೆ……..ಆಮೇಲೆ ಅವರೊಂದಿಗಿನ ಒಡನಾಟ ಮುಂದುವರೆದ ಹಾಗೆ ಅವ್ರು ನಮ್ಮ ಮನಸಲ್ಲಿ ತಮ್ಮದೇ ಆದ ಜಾಗ ಉಳಿಸಿಕೊಂಡು ಬಿಡ್ತಾರೆ……..

ಇದು ಒಂದು ಥರ ಸ್ನೇಹ ಆದ್ರೆ ಇನ್ನು ಕೆಲವರನ್ನು ನಮ್ಮ ಮನಸು ಕೆಲವು ದಿನ ನೋಡಿ ಆಮೇಲೆ ಅವ್ರನ್ನ ಇಷ್ಟ ಪಡೋಕೆ ಶುರು ಮಾಡುತ್ತೆ….. ನನ್ನ ಬಹುಪಾಲು ಎಲ್ಲ ಸ್ನೇಹಿತರು/ ಸ್ನೇಹಿತೆಯರೂ ಈ ಸಾಲಿಗೆ ಸೇರ್ತಾರೆ……...ಅವರಿಗೂ ಈ ಮೇಲೆ ಹೇಳಿದಂಥ ಸ್ನೇಹಿತರಿಗೂ ನನ್ ಮನಸಲ್ಲಿ ಇರೋ ಸ್ಥಾನದಲ್ಲಿ ವ್ಯತ್ಯಾಸ ಇಲ್ಲದೆ ಇದ್ರೂ ಅವ್ರನ್ನ ನನ್ನ ಮನಸು ಒಪ್ಪಿಕೊಳ್ಳೋಕೆ ತಗೊಂಡಿದ್ದ ಸಮಯ ಮಾತ್ರ ಬೇರೆ ಬೇರೆ……..

ನಾವು ಇದೆಲ್ಲವನ್ನೂ ಪ್ರೀತಿ ಅಂತಾನೆ ಕರೆದರು ಕೆಲವೊಂದ್ಸಲ ಈ ಪ್ರೀತಿಯ ಅರ್ಥಾನ ತುಂಬ ಕಿರಿದಾಗಿಸಿ ಬಿಡ್ತೀವಿ……ಕೆಲವೊಂದ್ಸಲ ಅಂತೂ ಅದಷ್ಟೇ ಪ್ರೀತಿನೇನೋ ಅನ್ನೋ ರೀತಿ ಮಾತಾಡ್ತೀವಿ……ಅಲ್ಲ ಈ ಜಗತ್ತಲ್ಲಿರೋ ಎಲ್ಲರನ್ನು ಪ್ರೀತಿಸೋ ಅರ್ಹತೆ, ಸಾಮರ್ಥ್ಯ ಇರೋ ನಾವು ಈ ರೀತಿ ಮಾಡೋದು ಸರೀನ????

ಸಧ್ಯಕ್ಕೆ ಹೀಗೆ ಬರೀತಾ ಇದ್ರೆ ಈ ಪೋಸ್ಟ್ ನ ಉದ್ದ ಹೆಚ್ಚುತ್ತ ಹೋಗುತ್ತೆ……. ಇನ್ನೊಂದು ಸಲ ಯಾವಾಗಲಾದರು ಪ್ರೀತಿ ಬಗ್ಗೆ ಮತ್ತೆ ಮಾತಾಡೋಣ……..ಈ ಪೋಸ್ಟ್ ಗೆ ಸಾಕು ಅಲ್ವ…….

Saturday, July 5, 2008

ವಿಚಿತ್ರ ಮನಸು (೨)

ಇವತ್ತು ನಿನ್ನೆಯ ಪೋಸ್ಟ್ ನ ಮುಂದುವರಿದ ಭಾಗ………

ನಂ ಮನಸು ಯಾವಾಗಲು ಮಾಡಬೇಡ ಅಂತ ಹೇಳಿದ್ದನ್ನೇ ಮಾಡು ಅಂತ ಪ್ರಚೋದಿಸುತ್ತೆ. ಈಗ ರೆಕಾರ್ಡ್ ಬರೆದು ಮುಗಿಸಿ ಆಮೇಲೆ ಓದಬೇಕು ಟಿವಿ ನೋಡಬಾರದು ಅಂತ ಅಂದುಕೊಂಡರೆ ನಾವು ರೆಕಾರ್ಡ್ ಬರೆದು ಮುಗಿಸೋ ಹೊತ್ತಿಗೆ ಟಿವಿ ನೆ ನೋಡ್ಬೇಕು ಅಂತ ಮನಸು ನಮ್ಮನ್ನ ಒಪ್ಪಿಸಿಬಿಟ್ಟಿರುತ್ತೆ. ಮನೇಲಿ ಏನಾದ್ರೂ ಈ ಕೆಲಸ ಮಾಡು ಅಂದ್ರೆ ಅದನ್ನ ಮಾಡೋಕೆ ಆಸಕ್ತಿ ಇರೋಲ್ಲ ಬದಲಾಗಿ ಇನ್ನೊಂದೇನನ್ನೋ ಮಾಡು ಅನ್ನುತ್ತೆ. ಉದಾಹರಣೆಗೆ ಅಮ್ಮ ತರಕಾರಿ ಹೆಚ್ಚು ಅಂದ್ರೆ, ಅದು ಬೇಡ ನೀನು ಪಾತ್ರೆ ತೊಳೆದಿಡು ಅನ್ನುತ್ತೆ….. ಒಣಗೋಕೆ ಅಂತ ಹಾಕಿರೋ ಬಟ್ಟೆ ಎತ್ತುಕೊಂಡು ಬಾ ಅಂದ್ರೆ, ಬೇಡ ಗಿಡಗಳಿಗೆ ನೀರು ಹಾಕು ಅನ್ನುತ್ತೆ……..ಒಂದೊಂದು ಸಲ ಅಂತು ಏನು ಮಾಡ್ಬೇಡ ಸುಮ್ನೆ ಕುಳಿತುಕೋ ಅನ್ನುತ್ತೆ………ಅಲ್ಲ ಮನಸು ಯಾಕೆ ಹೀಗೆ ಹೇಳುತ್ತೆ?????

ನಾವು ಬಹಳಷ್ಟು ಜನರನ್ನ ಪ್ರೀತಿಸಬಹುದು ಆದ್ರೆ ನಂ ಮನಸು ಕೆಲವರಿಗಷ್ಟೇ ತನ್ನಲ್ಲಿ ಆಶ್ರಯ ಕೊಡುತ್ತೆ…….ಅವರೆಲ್ಲರಿಗೂ ಒಂದು ರೀತಿಯ ಸ್ಥಾನ ಮಾನಗಳನ್ನ ಕೊಡುತ್ತೆ……ಆದ್ರೆ ಈ ಸ್ಥಾನ ಶಾಶ್ವತ ಅಲ್ಲ…….ಸಂದರ್ಭಕ್ಕೆ ತಕ್ಕಂತೆ ಅದು ಬದಲಾಗುತ್ತೆ……ಒಂದು ಪಟ್ಟಿಯಲ್ಲಿ ಕೊನೆಯಲ್ಲಿರುವ ಹೆಸರು ಮತ್ತೊಂದರಲ್ಲಿ ಮೊದಲನೆ ಸ್ಥಾನನ ಅಲಂಕರಿಸಿರುತ್ತೆ.......ಅಲ್ಲ ನಮ್ಮ ಮನಸು ಯಾಕೆ ಎಲ್ಲರನ್ನು ತನ್ನವರು ಅಂತ ಒಪ್ಪಿಕೊಳ್ಳೊಲ್ಲ………ಮತ್ತೆ ಆ ಪಟ್ಟಿಯನ್ನು ಅಷ್ಟು ಬೇಗ ಹೇಗೆ ಬದಲಾಯಿಸುತ್ತೆ????

ನಾವು ಯಾರನ್ನ ತುಂಬ ಪ್ರೀತಿಸುತ್ತೇವೋ ಅವ್ರಿಂದಾನೆ ನಮಗೆ ಜಾಸ್ತಿ ದುಃಖ ಆಗೋದು. ಬೇರೆಯವರು ಅದೇ ಮಾತು ಹೇಳಿದ್ರೆ ಬರದೆ ಇರೋ ದುಃಖ ನಾವು ಪ್ರೀತಿಸುವವರ ಬಾಯಿಂದ ಬಂದ್ರೆ ಎಲ್ಲಿದ್ರು ಹುಡುಕಿಕೊಂಡು ಬಂದು ಬಿಡುತ್ತೆ.……ಮನಸಲ್ಲೇ ಇರುವವರು ಹೇಳಿದ ಮಾತು ನಂ ಮನಸಿಗೆ ಬೇಗ ಚುಚ್ಚುತ್ತೆ ಅಲ್ವ…….ಅದರಿಂದ ಆಗೋ ನೋವು ಅಷ್ಟೆ ಜಾಸ್ತಿ ಅಲ್ವ….….ಆದ್ರೂ ನಮಗೆ ಅವರ ಮೇಲೆ ಇರೋ ಪ್ರೀತಿ ಕಡಿಮೆ ಆಗೋಲ್ಲ…….ಬದಲಾಗಿ ಅವರನ್ನ ಇನ್ನು ಹೆಚ್ಚು ಪ್ರೀತಿಸ್ತೀವಿ…… ಅಲ್ಲ, ಯಾವಾಗಲು ಸಂತೋಷವಾಗಿರಬೇಕು ಅನ್ನೋ ನಂ ಮನಸ್ಸು ಅವರ ಬಗ್ಗೆ ಇರೋ ಪ್ರೀತಿನೆ ನಮ್ಮ ದುಃಖಕ್ಕೆ ಕಾರಣ ಅಂತ ಗೊತ್ತಿದ್ದೂ ಅವರನ್ನ ದೂರ ಮಾಡಿಕೊಳ್ಳೋಕೆ ಇಷ್ಟ ಪಡೋಲ್ಲ ಯಾಕೆ??????

ಎಷ್ಟೇ ಸ್ನೇಹ ಇರಲಿ ಸ್ನೇಹಿತರಲ್ಲಿ ಯಾರಾದ್ರು ಒಬ್ರು ನಮಗಿಂತ ಉತ್ತಮ ಅನಿಸಿದರೆ ಮನಸು ಅವರ ಬಗ್ಗೆ ನಮಗೇ ಗೊತ್ತಿಲ್ಲದ ಹಾಗೆ ಒಂದು ರೀತಿ ಅಸೂಯೆ ಬೆಳೆಸಿಕೊಳ್ಳುತ್ತೆ…….. ನೀನು ಅವರಿಗಿಂತ ಉತ್ತಮ ಅಂತ ಅನ್ನಿಸಿಕೊಳ್ಳುವಂಥದ್ದನ್ನು ಏನಾದ್ರೂ ಮಾಡು ಅನ್ನುತ್ತೆ…….ಅವರ ಮುಂದೆ ಅದನ್ನ ತೋರಿಸದಿದ್ದರೂ ನೀನು ಅವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಅವರಿಗಿಂತ ಹೆಚ್ಚು ಸಾಧಿಸಬಲ್ಲೆ ಅದನ್ನ ಮಾಡಿ ತೋರಿಸು ಅನ್ನುತ್ತೆ……. ಇದು ಒಳ್ಳೆಯದಾ ಅಥವಾ ಕೆಟ್ಟದ್ದಾ????.

ಯಾವುದಾದರು ತಪ್ಪು ನಡೆದರೆ ಅದಕ್ಕೆ ತಾನೆ ಕಾರಣ ಅಂತ ಗೊತ್ತಿದ್ರು ನಂ ಕಳ್ಳ ಮನಸು ಆ ತಪ್ಪನ್ನ ಬೇರೆಯವರ ಮೇಲೆ ಹಾಕೋಕೆ ಪ್ರಯತ್ನ ಪಡುತ್ತೆ……… ಅಕಸ್ಮಾತ್ ಆಗದಿದ್ರೆ ಆ ತಪ್ಪಲ್ಲಿ ಬೇರೆಯವರಿಗೂ ಪಾಲು ಇದೆ ಅಂತ ವಾದಿಸುತ್ತೆ…… ಅದೂ ಸಾಧ್ಯ ಆಗಲಿಲ್ಲ ಅಂದ್ರೆ ಆ ತಪ್ಪನ್ನೇ ಬೇರೆಯವರು ಮಾಡಿರುತ್ತಾರೆ ಅಂತ ಉದಾಹರಣೇನು ಕೊಡುತ್ತೆ…….ಇದ್ಯಾವುದು ಆಗ್ಲಿಲ್ಲ ಅಂದ್ರೆ ಅದು ತಪ್ಪೇ ಅಲ್ಲ ಅಂತಾನು ಸಾಧಿಸಿ ಬಿಡುತ್ತೆ……..ಅಲ್ಲ ಅದು ತಪ್ಪು ಅಂತ ಗೊತ್ತಿದ್ರು ಹೀಗೆ ವಾದ ಮಾಡೋಕೆ ನಂ ಮನಸಿಗೆ ಹೇಗೆ ಸಾಧ್ಯ?????

ಇನ್ನು ಎಷ್ಟೋ ವೈಚಿತ್ರ್ಯಗಳ ಸರಮಾಲೆ ಈ ಮನಸು……ಆದ್ರೆ ಅದೂ ಹೇಳೋದೆಲ್ಲ ನಂ ಒಳ್ಳೆಯದಕ್ಕೆ ಅನ್ನೋ ಭಾವನೆ ನಮ್ಮಲ್ಲಿ ಬರೋ ಹಾಗೆ ಮಾಡಿಬಿಡುತ್ತೆ……ಹೌದಲ್ವಾ ಈ ಮನಸು
ಥರ ಥರ ಥರ ಥರ ಒಂಥರಾ………….

Friday, July 4, 2008

ವಿಚಿತ್ರ ಮನಸು(೧)

ಅಲ್ಲ ನಮ್ಮ ಮನಸು ಎಷ್ಟು ವಿಚಿತ್ರ ಅಲ್ವೇನ್ರಿ. ನಾವು ಈ ಮನಸಿನ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ರು ನಮಗೆ ಈ ಭಾವನೆ ಬಂದು ಬಿಡುತ್ತೆ. ಪ್ರತಿಯೊಂದು ವಿಷಯದಲ್ಲೂ ನಮ್ಮ ಮನಸು ತೀರ ವಿಚಿತ್ರವಾಗೆ ಇರುತ್ತೆ. ಅದರಲ್ಲಿ ಮೂಡೋ ಭಾವನೆಗಳು ಅಷ್ಟೆ ವಿಚಿತ್ರ ಅಲ್ವ…

ನಾನು ಯಾಕೆ ಹೀಗೆ ಹೇಳ್ತೀನಿ ಅಂದ್ರೆ ಯಾರನ್ನೇ ಆಗ್ಲಿ ನೋಡಿದ್ ತಕ್ಷಣ ಅವರ ಬಗ್ಗೆ ಒಂದು ಭಾವನೆ ನಮ್ಮ ಮನಸಲ್ಲಿ ಬಂದು ಬಿಡುತ್ತೆ. ಅದರಿಂದ ಅವರು ಒಳ್ಳೆಯವರ ಅಥವಾ ಕೆಟ್ಟವರ ಅಂಥ ನಾವು ನಿರ್ಧಾರ ಮಾಡಿಬಿಡ್ತೀವಿ …… ಇದರಲ್ಲಿ ಏನು ವಿಚಿತ್ರ ಅಂತ ನೀವು ಕೇಳಬಹುದು ….. ಅಲ್ಲ ಅವ್ರ ಜೊತೆ ಒಂದು ಸಲ ಮಾತಾಡೋಕೆ ಮುಂಚೆನೇ ಅವ್ರ ಬಗ್ಗೆ ಒಂದು ಅಭಿಪ್ರಾಯ ಬೆಳೆಸಿಕೊಳ್ಳೋದು ಹೇಗೆ ಸಾಧ್ಯ?.... ಆಮೇಲೆ ಇನ್ನೊಂದೇನಂದ್ರೆ ನನ್ನ ಅನುಭವದಲ್ಲಿ ನನ್ನ ಮನಸು ಇದುವರೆಗೆ ಬೆಳೆಸಿಕೊಂಡಿರೋ ಅಭಿಪ್ರಾಯದಲ್ಲಿ ಒಂದು ಸಲಾನೂ ತಪ್ಪಾಗಿಲ್ಲ………ಇದು ಹೇಗೆ ಸಾಧ್ಯ ಅಂತ?????

ಹೋಗ್ಲಿ ಆ ಅಭಿಪ್ರಾಯದ ವಿಷಯ ಪಕ್ಕಕ್ಕೆ ಇಡೋಣ….. ಇನ್ನು ಈ ಮನಸು ಎಲ್ಲರನ್ನು ಅಷ್ಟು ಸುಲಭವಾಗಿ ನಂಬೋಲ್ಲ……..ಕೆಲವರನ್ನ ಬೇಗ ನಂಬಿದ್ರೆ ಕೆಲವರನ್ನ ಬಹಳಷ್ಟು ಸಲ ಪರೀಕ್ಷಿಸಿ ನಂಬುತ್ತೆ…….ಅದು ಯಾಕೆ ಹಾಗೆ ಅಂತ ಗೊತ್ತಾಗೊಲ್ಲ ಮತ್ತೆ ಕೆಲವೊಂದ್ಸಲ ಏನಾಗುತ್ತೆ ಅಂದ್ರೆ ಯಾರೋ ಒಬ್ರು ಒಳ್ಳೆಯವರು ಅಂತ ಗೊತ್ತಿದ್ರು ಅವ್ರನ್ನ ಮನಸು ಅಷ್ಟು ಬೇಗ ನಂಬೋಲ್ಲ ಇದು ಉಲ್ಟಾ ಅಗೋ ಪರಿಸ್ಥಿತಿಗಳು ಸಾಕಷ್ಟಿವೆ. ಇಲ್ಲಿ ಮನಸು ಯಾರನ್ನಾದರು ನಂಬೋಕೆ ಬಳಸೋ ಮಾಪಕ ಯಾವ್ದು????????

ಆಮೇಲೆ ಒಂದು ಸಲ ನಂಬಿದ್ರೆ ಅವರ ಬಗ್ಗೆ ನಾವು ತುಂಬಾ ವಿಶ್ವಾಸ ಇಟ್ಟುಕೊಂಡುಬಿಡ್ತೀವಿ…. ಅದನ್ನ ಬದಲಾಯಿಸೋಕೆ ತುಂಬ ಕಷ್ಟ…….. ಆದ್ರೆ ಅವರೇನಾದ್ರೂ ನಮ್ಮ ನಂಬಿಕೆಗೆ ಅರ್ಹರಲ್ಲ ಅಂತ ಗೊತ್ತಾದ್ರೆ ಆಗೋ ಆಘಾತ ಇದೆಯಲ್ಲ ಅದನ್ನ ಯೋಚನೆ ಮಾಡಿದ್ರೆನೇ ಮೈ ಜುಮ್ಮೆನ್ನುತ್ತೆ…… ಆದ್ರೆ ವಿಪರ್ಯಾಸ ಏನು ಅಂದ್ರೆ ಆ ವಿಶ್ವಾಸ ದ್ರೋಹಾನ ಮರೆಯೋಕೆ ನಂ ಮನಸು ಮತ್ತೊಬ್ಬರ ಮೇಲಿನ ವಿಶ್ವಾಸ ಹೆಚ್ಚು ಮಾಡಿಕೊಳ್ಳುತ್ತೆ……..ಯಾಕ್ ಹೀಗೆ?????

ಅದು ಹೋಗ್ಲಿ……. ಒಂದೇ ವಿಷಯಾನ ನಮ್ಮ ಮನಸು ಎಷ್ಟೊಂದ್ ಥರ ಅರ್ಥೈಸುತ್ತೆ ಅಲ್ವ……. ಒಂದೇ ಮಾತನ್ನ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಅರ್ಥ ಮಾಡಿಕೊಳ್ಳುತ್ತೆ….. ಆದ್ರೆ ಅದು ಯಾವಾಗಲು ತನ್ನ ಪರವಾಗೇ ಮಾತುಗಳನ್ನ ತಿರುಚೋದು…….ಆದ್ರೆ ಒಂದು ಸಮಯದಲ್ಲಿ ಒಂದು ರೀತಿ ಅರ್ಥಕ್ಕೆ ತಲೆಯಾಡಿಸಿದ್ದ ನಾವು ಮತ್ತೆ ಇನ್ನೊಂದು ಸಂದರ್ಭದಲ್ಲಿ ಆ ವಿಚಾರಕ್ಕೂ ತಲೆ ಆಡಿಸ್ತೀವಿ…….. ಅಲ್ಲ ನಂ ಮನಸು ಇಷ್ಟೊಂದು ರೀತಿ ಹೇಗೆ ಯೋಚನೆ ಮಾಡುತ್ತೆ ಅಂತ???????

ಅದು ಸರಿ….. ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳೋದರಲ್ಲೂ ಮನಸು ಇದೇ ಆಟ ಆಡುತ್ತೆ……. ಸಂದರ್ಭಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾತ್ರ ನೋಡುತ್ತೆ………ನನ್ ಜೀವನದಲ್ಲೇ ನಡೆದಿದ್ದ ಒಂದು ಸಣ್ಣ ಸಂದರ್ಭ………..

ನಾನಾಗ ೮ನೆ ತರಗತಿಯಲ್ಲಿದ್ದೆ. ನಮ್ಮಕ್ಕ ೧ ಪಿ ಯು ನನ್ ತಮ್ಮ ೧ನೆ ತರಗತಿಯಲ್ಲಿದ್ದ. ಅಪ್ಪ ಅಕ್ಕನ ಟ್ಯೂಶನ್ ಕಾಲೇಜ್ ಅಂತ ಓಡಾಡುತ್ತ ಇದ್ರೆ ಅಮ್ಮ ತಮ್ಮನ್ನ ಓದಿಸೋದ್ರಲ್ಲಿ ಮಗ್ನರಾಗಿರುತ್ತಿದ್ರು. ನನ್ ಮನಸಿಗೆ ಆಗ ಸ್ವಲ್ಪ ಏಕಾಂಗಿತನ ಕಾಡ್ತಾ ಇತ್ತು ಅದು ನೀನು ಒಂಟಿ ಒಂಟಿ ಅಂತ ಹೇಳ್ತಾ ಇತ್ತು . ಅದೇ ಸಮಯಕ್ಕೆ ನನಗೆ ಭಾಸನ ಮಧ್ಯಮವ್ಯಾಯೋಗ ಅನ್ನೋ ಸಂಸ್ಕೃತ ನಾಟಕದ ಕನ್ನಡಾನುವಾದ ಸಿಕ್ತು. ಅದು ಒಂದು ದೊಡ್ಡ ಕಥೆ ಚಿಕ್ಕದಾಗಿ ಹೇಳ ಬೇಕು ಅಂದ್ರೆ……..

ಘಟೋತ್ಕಚ ತನ್ ತಾಯಿ ಹಿಡಿಂಬಿಯ ಊಟಕ್ಕೋಸ್ಕರ ಒಂದು ಬ್ರಾಹ್ಮಣ ಕುಟುಂಬದವ್ರನ್ನ ತಡೆದು ನಿಲ್ಸಿ ಅವರಲ್ಲಿ ಒಬ್ಬರು ಆಹಾರವಾಗಿ ಬರಬೇಕು ಅಂತ ಹೇಳ್ತಾನೆ. ಮನೆ ನೋಡಿಕೊಳ್ಳೋ ಜವಾಬ್ದಾರಿ ಇರೋದ್ರಿಂದ ಆ ಬ್ರಾಹ್ಮಣ ಮತ್ತೆ ಅವನ ಹೆಂಡ್ತಿ ಆಹಾರ ಆಗೋಕೆ ಸಾಧ್ಯ ಇಲ್ಲ…… ತಂದೆ ತಾನು ಹಿರಿ ಮಗನನ್ನು ತುಂಬಾ ಪ್ರೀತಿಸುತ್ತ ಇರೋದ್ರಿಂದ ಅವನನ್ನು ಕಳಿಸೊಲ್ಲ ಅಂತಾನೆ……..ತಾಯಿ ತಾನು ಕಿರಿ ಮಗನನ್ನು ತುಂಬಾ ಪ್ರೀತಿಸುತ್ತ ಇರೋದ್ರಿಂದ ಅವನನ್ನು ಕಳಿಸೊಲ್ಲ ಅಂತಾಳೆ……...ಇನ್ನು ಉಳಿದವನು ಮಧ್ಯದವನು ಮಾತ್ರ……ಅವನೇ ಆಹಾರವಾಗಿ ಹೋಗಬೇಕಾಗುತ್ತೆ…….ಆದ್ರೆ ಅವನು ಸಂಧ್ಯಾವಂದನೆಗೆ ಅಂತ ಘಟೋತ್ಕಚನಿಂದ ಅನುಮತಿ ತಗೊಂಡು ಹೋಗಿ ವಾಪಾಸಾಗೋಲ್ಲ .ಆಗ ಘಟೋತ್ಕಚ ……ಓ ಮಧ್ಯಮ ಅಂತ ಕೂಗಿದ್ದನ್ನ ಕೇಳಿಸಿಕೊಂಡು ಭೀಮ ತನ್ನನ್ನು ಯಾರೋ ಕರೀತಾ ಇದ್ದಾರೆ ಅಂತ ಅವನಲ್ಲಿಗೆ ಬರ್ತಾನೆ. ಬಂದ್ ಮೇಲೆ ಸ್ವಲ್ಪ ಮಾತುಕಥೆ ನಡೆದು ಅವ್ರು ಹಿಡಿಂಬಿ ಹತ್ರ ಹೋದಾಗ ಭೀಮನಿಗೆ ಘಟೋತ್ಕಚ ತನ್ನ ಮಗ ಅಂತ ಗೊತ್ತಾಗುತ್ತೆ……

ಈ ಕಥೆ ಓದಿದಾಗ ನನ್ ಮನಸು ನೀನು ಅದೇ ಸ್ಥಿತಿಯಲ್ಲಿ ಇದ್ದೀಯ. ನೋಡು ನೀನು ಮನೇಲಿ ಮಧ್ಯದವಳು.ನಿಮ್ಮಪ್ಪನ್ಗೆ ನಿಮ್ಮಕ್ಕನನ್ನು ಕಂಡ್ರೆ ಪ್ರೀತಿ ಜಾಸ್ತಿ. ನಿಮ್ಮಮಂಗೆ ನಿನ್ ತಮ್ಮನ್ನ ಕಂಡ್ರೆ ಇಷ್ಟ ನಿನ್ನನ್ನ ಪ್ರೀತಿಸೋರು ಯಾರು ಇಲ್ಲ ಅಂತು. ಆಗ ನಾನು ಅದನ್ನ ನಂಬಿದೆ. ಎಷ್ಟೋ ರಾತ್ರಿ ನನ್ನನ್ನು ಪ್ರೀತಿಸೋರು ಯಾರೂ ಇಲ್ಲ ಅಂತ ಅತ್ತಿದ್ದೆ…….ಈಗ ಅದ್ರ ಬಗ್ಗೆ ಯೋಚನೆ ಮಾಡಿದ್ರೆ ಅದೇ ಮನಸು ನೀನವಾಗ ಎಷ್ಟು ಬಾಲಿಶವಾಗಿ ಯೋಚನೆ ಮಾಡ್ತಾ ಇದ್ದೆ ಅಂತ ಹೇಳುತ್ತೆ…… ಅಲ್ಲ ನಂ ಮನಸು ಯಾಕೆ ಯಾವಾಗಲೂ ಒಂದೇ ಥರ ಇರೋಲ್ಲ???????

ಇನ್ನೂ ಎಷ್ಟೋ ವಿಚಿತ್ರಗಳು ನಮ್ಮ ಮನಸಿನ ಬಗ್ಗೆ…ಅಲ್ಲ ಈ ಮನಸು ವಿಚಿತ್ರ ಅಂತ ಹೇಳ್ತಾ ಇರೋದು ನನ್ ಮನಸೇ …. …..ಮನಸಿನ ವೈಚಿತ್ರ್ಯದ ಬಗ್ಗೆ ಮನಸೇ ಹೇಳೋದು…. ಏನು ವಿಚಿತ್ರ .ಸಧ್ಯಕ್ಕೆ ಸಮಯ ಇಲ್ಲ……ಮುಂದಿನ ಪೋಸ್ಟಲ್ಲಿ ಮತ್ತೆ ಇದರ ಬಗ್ಗೆ ಬರಿತೀನಿ……ಅಷ್ಟರೊಳಗೆ ಈ ಮೇಲಿನ ಪ್ರಶ್ನೆಗಳಿಗೆ ನಿಮಗೇನಾದ್ರು ಉತ್ತರ ಗೊತ್ತಿದ್ರೆ ನನಗೆ ಅದನ್ನ ಹೇಳ್ತೀರಾ ಪ್ಲೀಸ್……..

Thursday, July 3, 2008

ಮನಸುಗಳ ಮಾತು ಮಧುರ.....

ಒಮ್ಮೆ ಒಬ್ಬ ರೈತ ಸಂತೆಯಿಂದ ಮನೆಗೆ ಹಿಂದಿರುಗುವಷ್ಟರಲ್ಲಿ ಕತ್ತಲಾಗಿಹೋಯ್ತು. ಆ ರೈತ ಪ್ರತಿ ದಿನ ಗೋಧೂಳಿ ಸಮಯದಲ್ಲಿ ದೇವರ ಪ್ರಾರ್ಥನೆ ಮಾಡ್ತಾ ಇದ್ದ. ಆದ್ರೆ ಇವತ್ತು ಅವ್ನಿಗೆ ಮನೆಗೆ ಹೋಗೋಕೆ ಆಗ್ಲಿಲ್ಲ. ಆ ಪ್ರಾರ್ಥನೆ ಅವ್ನಿಗೆ ಬಾಯಿಪಾಠ ಆಗಿರಲಿಲ್ಲ. ಹೋಗ್ಲಿ ಅಂದ್ರೆ ಇವತ್ತು ಅವನು ಆ ಪ್ರಾರ್ಥನೆ ಪುಸ್ತಕನೂ ತಗೊಂಡು ಹೋಗೋದನ್ನ ಮರೆತಿದ್ದ. ಈಗ ಏನಪ್ಪಾ ಮಾಡೋದು ಅಂಥ ಯೋಚನೆ ಮಾಡಿ ದೇವರ ಹತ್ರ ಹೀಗೆ ಹೇಳ್ದ…"ದೇವ್ರೇ…ನಾನಿವತ್ತು ನನ್ ಪ್ರಾರ್ಥನೆ ಪುಸ್ತಕಾನ ಮನೇಲೆ ಬಿಟ್ಟು ಬಂದುಬಿಟ್ಟಿದ್ದೀನಿ. ಹಾಗಾಗಿ ನಾನು ಸ್ವರಮಾಲೇನ ನಿಧಾನವಾಗಿ ಐದು ಸಲ ಹೇಳ್ತೀನಿ ಸರ್ವಜ್ಞನಾದ ನೀನು ಆ ಅಕ್ಷರಗಳನ್ನ ಪ್ರಾರ್ಥನೆಯಲ್ಲಿ ಬಾರೋ ರೀತೀನೇ ಜೋಡಿಸಿಕೊಂಡು ಅರ್ಥ ಮಾಡ್ಕೋ " ಅಂತ ಹೇಳಿ ಅಕ್ಷರಮಾಲೆನ ಹೇಳ್ದ.

ಇದನ್ನ ಕೇಳಿದ ದೇವರು ಯಕ್ಷರಿಗೆ ಹೇಳ್ದ, "ನಾನಿವತ್ತು ಕೇಳಿದ ಎಲ್ಲ ಪ್ರಾರ್ಥನೆಗಳಿಗಿಂತ ಆ ರೈತನ ಪ್ರಾರ್ಥನೆ ನನಗೆ ತುಂಬ ಇಷ್ಟ ಆಯ್ತು ಯಾಕೆ ಅಂದ್ರೆ ಅದು ಮನಃ ಪೂರ್ವಕವಾದ ನಿವೇದನೆಯಾಗಿತ್ತು” ಅಂತ.

ನೋಡ್ರಿ ನಮ್ಮ ಮನಸ್ಸಿನ ಅಂತರಾಳದ ಮಾತು ದೇವರಿಗೂ ಕೇಳುತ್ತೆ, ಮತ್ತೆ ಅವನಿಗೂ ಇಷ್ಟ ಆಗುತ್ತೆ ಅಂದ್ಮೇಲೆ ಮನುಷ್ಯರಿಗೆ ಇಷ್ಟ ಆಗಲ್ವ…ಮನಸುಗಳು ಮಾತಾಡಿದ್ರೆ ಯಾವುದೇ ಭಿನ್ನಾಭಿಪ್ರಾಯ ಆಗ್ಲಿ ಜಗಳ ಆಗ್ಲಿ ಇರೋದಿಲ್ಲ ಅಲ್ವ… ಆದ್ರೆ ಈ ಬಾಯಿ ಅನ್ನೋದು ಇದೆಯಲ್ಲ , ಇದು ಬಡ್ಕೊಳ್ಳೋಕೆ ಶುರು ಮಾಡಿದ್ರೆನೇ ಎಲ್ಲ ಸಮಸ್ಯೆಗಳು ಉದ್ಭವ ಆಗೋದು.ಆದ್ರೆ ಏನು ಮಾಡೋದು ನನ್ನಂಥ ಬಾಯಿಬಡುಕಿಯರಿಗೆ ಮಾತಾಡದೆ ಇರೋಕೆ ಆಗೊಲ್ವಲ್ಲ. ನಿಮಗೆ ಇನ್ನು ಗೊತ್ತಿಲ್ಲ ಅಲ್ವ ನಾನ್ ಎಂಥವಳು ಅಂಥ….. ನಾನು ಎಷ್ಟು ಮಾತಾಡ್ತಾ ಇದ್ದೆ ಅನ್ನೋದಕ್ಕೆ ಒಂದು ಸಂದರ್ಭ ಹೇಳ್ತೀನಿ ಕೇಳಿ……… ಒಂದು ಸಣ್ಣ ಫ್ಲಾಶ್ ಬ್ಯಾಕ್…………………..

ನಾನಾಗ ಒಂಭತ್ತನೇ ತರಗತಿಲಿದ್ದೆ. ಅವತ್ತು ಯಾಕೋ ನಂ ಟೀಚರ್ರು ಕ್ಲಾಸಿಗೆ ಬಂದಿರಲಿಲ್ಲ. ಕ್ಲಾಸಲ್ಲಿ ಯಾರು ಇಲ್ಲ ಅಂದ್ರೆ, ಬಾಲ ಇಲ್ಲದ ಕೋತಿಗಳು ನಾವು ಸುಮ್ನಿರಬೇಕಲ್ಲ…..ಎಲ್ಲಾರೂ ಗಲಾಟೆ ಮಾಡ್ತಾ ಇದ್ವಿ……ನಂ ಗಲಾಟೆ ಕೇಳಿ ಪಕ್ಕದ್ ಕ್ಲಾಸಲ್ಲಿ ಪಾಠ ಮಾಡ್ತಾ ಇದ್ದ ಮಂಜುನಾಥ್ ಸರ್ ನಂ ಕ್ಲಾಸಿಗೆ ಬಂದು, ಎಲ್ಲಾರಿಗೂ ಬೈದು, ಯಾರೋ ಒಬ್ರಿಗೆ ಮಾತಾಡಿದವರ ಹೆಸರು ಬರೆದು ಕೊಡೋಕೆ ಹೇಳಿದ್ರು. ಆಗಿಂದ ಎಲ್ಲಾರು ಗಪ್ ಚುಪ್ …..ಸೂಜಿ ಬಿದ್ರು ಕೇಳೋ ಅಷ್ಟು ಮೌನ……..ಯಾರು ಮಾತಾಡ್ತಾ ಇಲ್ಲ……ನನಿಗೋ ಮಾತಾಡದೆ ಆ ಪೀರಿಯಡ್ ಮುಗಿಯೋ ಹೊತ್ತಿಗೆ ತಲೆ ನೋವೇ ಬಂದು ಬಿಟ್ಟಿತ್ತು……ಅಷ್ಟು ಮಾತಾಡ್ತಿದ್ದೆ……

ಆದ್ರೆ ಈಗೀಗ ಸ್ವಲ್ಪ ಮಾತು ಕಡಿಮೆ ಮಾಡ್ಕೊಂಡಿದ್ದೀನಿ…….ನನಗೂ ಮೌನದ ಮಹತ್ತ್ವ ತಿಳೀತ ಇದೆ. ನಾವು ಮೌನವಾಗಿದ್ದಾಗ್ಲೆ ನಂ ಮನಸ್ಸಿನ ಮಾತು ನಮಗೆ ಸ್ಪಷ್ಟವಾಗಿ ಅರ್ಥ ಆಗೋದು. ಅಷ್ಟೆ ಅಲ್ಲ ಬೇರೆಯವರ ಮನಸಿನ ಮಾತು ಕೇಳುತ್ತೆ. ಈ ಮನಸುಗಳು ಮಾತಾಡೋವಾಗ ಬಾಯಿಗಿನ್ನೇನು ಕೆಲಸ? ಆ ಮನಸುಗಳು ಮಾತಾಡೋವಾಗ ಅರ್ಥ ಆಗೋದು ಭಾವನೆಗಳೇ ಹೊರತು ಶಬ್ಧಗಳಲ್ಲ. ನಮ್ಮೆಲ್ಲ ಭಾವನೆಗಳನ್ನು ಶಬ್ಧಗಳಿಂದ ಹೇಳೋಕಾಗೋಲ್ಲ ನೋಡಿ. ಆದ್ರೆ ಅರ್ಥ ಮಾಡ್ಕೊಳ್ಳೋ ಮನಸ್ಸು ಇದ್ರೆ ನಾವು ಶಬ್ದಗಳಲ್ಲಿ ಹೇಳೋದನ್ನೆಲ್ಲ ಭಾವನೆಗಳ ಮೂಲಕ ಹೇಳಬಹುದು…..ಅಲ್ವ?? ಅದಕ್ಕೆ ನಂ ಮನಸಿಗೂ ಮಾತಾಡೋದನ್ನ, ಮಾತಾಡಿದ್ದನ್ನ ಅರ್ಥ ಮಾಡಿಕೊಳ್ಳೋದನ್ನ ಹೇಳಿಕೊಡಬೇಕು. ಆಗ ಭಾಷೆ ಸಮಸ್ಯೆ ಬರೋದೇ ಇಲ್ಲ. ಯಾರ್ ಜೊತೆ ಬೇಕಾದರು ವ್ಯವಹರಿಸಬಹುದು ಅಲ್ವ……

ಹಾಗಂತ ಈ ಮನಸು ಹೇಳೋ ಮಾತೆಲ್ಲ ಸರಿ ಅಂಥ ಅಲ್ಲ ನಾನ್ ಹೇಳ್ತಾ ಇರೋದು… ಮನಸಿನ ಮಾತಿಗೆ ನಮ್ಮ ಅಂತಃ ಸಾಕ್ಷಿನೂ ಒಪ್ಪಿದರೆ ಅಂತ ಮಾತು ಖಂಡಿತ ಸರೀನೇ ಇರುತ್ತೆ. ಆದ್ರೆ ಸಮಸ್ಯೆ ಏನಪ್ಪಾ ಅಂದ್ರೆ ಕೆಲವೊಂದ್ಸಲ ಈ ಸಾಕ್ಷಿ ಸುಮ್ನೆ ಇದ್ದು ಬಿಡುತ್ತೆ ……ಏನು ಹೇಳೋದೇ ಇಲ್ಲ ಅಂತೀನಿ…. ಆಗ ಮನಸಿನ ಮಾತನ್ನ ಕೇಳದೆ ಇರೋದೇ ಉತ್ತಮ…… ಯಾಕಂದ್ರೆ ಆಮೇಲೆ ಅದರ ಪರಿಣಾಮಗಳನ್ನ ಎದುರಿಸಬೇಕಾದವ್ರು ನಾವೇ ತಾನೆ……..

ಏನೇ ಆದ್ರೂ ಈ ಮನಸಿನ ಮಾತನ್ನ ಕೇಳೋದ್ರಲ್ಲಿ ಒಂಥರಾ ಖುಷಿ ಇರುತ್ತೆ…… ನಾನೀಗ ಸ್ವಲ್ಪ ಮಾತು ಕಡಿಮೆ ಮಾಡ್ಕೊಂಡಿದ್ದೀನಿ ಅಂದೆನಲ್ಲ…….. ಅದು ಬರಿ ಬಾಯಿಂದ ಬರೋ ಮಾತನ್ನ ಕಡಿಮೆ ಮಾಡಿದ್ದೀನಿ ಅಷ್ಟೆ……. ಆದ್ರೆ ನನ್ ಮನಸ್ಸಿನ ಜೊತೆ ಮಾತಾಡೋದನ್ನ, ಅದು ಹೇಳಿದ್ದನ್ನ ಕೇಳಿಸಿಕೊಳ್ಳೋದನ್ನ ಜಾಸ್ತಿ ಮಾಡಿದ್ದೀನಿ…….ಆ ಮಾತುಗಳು ಒಂದೊಂದು ಸಲ ಏನ್ ಚೆನ್ನಾಗಿರುತ್ತೆ ಅಂತೀನಿ….. ನೀವು ಯಾವತ್ತಾದ್ರು ಮನಸಿನ ಮಾತುಗಳನ್ನ ಕೇಳಿದ್ದೀರಾ????? ಕೇಳಿದ್ರೆ ಗೊತ್ತಾಗುತ್ತೆ ಅದ್ರಲ್ಲಿರೋ ಸುಖ…….

ಸರಿ……ನಾನು ಮುಂದಿನ ಪೋಸ್ಟ್ ಕಳಿಸೋವರೆಗೆ ನೀವು ನಿಮ್ಮ ಮನಸಿನ ಮಾತುಗಳನ್ನ ಕೇಳ್ತಾ ಇರಿ….. ಆಯ್ತಾ…..???

Wednesday, July 2, 2008

ಈ ಮನಸು

ಆ ಲೋಕದಲ್ಲಿ ತೇಲಾಡೋ ಆ ಆನಂದ ಆಹ್ಲಾದ ಅನುಭವಿಸಿದವ್ರಿಗೆ ಗೊತ್ತು. ಆ ಕಲ್ಪನಾಲೋಕಕ್ಕೆ ಒಂದು ಸಣ್ಣ ಕಿಟಕಿ ಈ ಮನಸಿನ ಮಾತು. ಇದು ಬರಿ ನನ್ ಮನಸಿಗೆ ಮಾತ್ರ ಕಿಟಕಿ ಅಲ್ಲ ನನ್ ಥರದ ಎಷ್ಟೋ ಹುಡುಗಿಯರ ಮನಸಿಗೆ ಕಿಟಕಿ ಅಂತ ಹೇಳಬಹುದು ಯಾಕೆ ಅಂತೀರಾ? ಈ ವಯಸ್ಸಿನ ಹುಡುಗೀರೆ ಹೀಗೆ……… ಹುಚ್ಚು ಖೋಡಿ ಮನಸು ಅಂತಾರಲ್ಲ ಹಾಗೆ ಒಂಥರಾ ಮರ್ಕಟ ಮನಸು…

ಹೌದಲ್ವೇನ್ರಿ …ಈ ಸುಂದರ ಜಗತ್ತಲ್ಲಿ ಅತ್ಯದ್ಭುತ ಅಂತ ಹೇಳೋಕಾಗೋದು ಮನಸ್ಸಿಗೆ ಮಾತ್ರ…. ನಂ ಮನಸಲ್ಲಿ ಸಂಕಲ್ಪ ಮಾಡಿದ್ವಿ ಅಂದ್ರೆ ಎಂಥ ಕೆಲ್ಸ ಬೇಕಾದ್ರೂ ಸಾಧಿಸಬಹುದು……. ಮನಸ್ಸಿಗೆ ಯಾವುದೇ ಅಡೆತಡೆಗಳಿಲ್ಲ….ಯಾವಾಗ ಅಂದ್ರೆ ಆವಾಗ ಎಲ್ಲಂದ್ರೆ ಅಲ್ಲಿಗೆ ಹೋಗೋ ಶಕ್ತಿ ಇರೋದು ಮನಸ್ಸಿಗೆ ಮಾತ್ರ ಯಾವ್ದೇ ವೀಸಾ ಪಾಸ್ ಪೋರ್ಟ್ ಇಲ್ದೆ ಎಲ್ಲಾ ದೇಶಕ್ಕೂ ಹೋಗಿ ಅಷ್ಟೇ ಬೇಗ ವಾಪಸ್ ಬರೋಕೆ ಇನ್ನ್ಯಾರಿಗೆ ಆಗುತ್ತೆ ನೀವೇ ಹೇಳ್ರಿ…

ಈ ಮನಸ್ಸು ಒಂದೊಂದು ಸಲ ಎನೇನೇನೇನೆಲ್ಲಾ ಮಾಡ್ಸುತ್ತೆ ಗೊತ್ತೇನ್ರಿ?? ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದ್ರು ಸಾಕು ಎಲ್ಲೆಲ್ಲಿಗೋ ಹೋಗ್ಬಿಡುತ್ತೆ……ಸುಮ್ನೆ ತನ್ ಪಾಡಿಗೆ ತಾನಿರೋ ನನ್ನಂಥ ಮುಗ್ಧ ಹುಡುಗೀರಿಗೆ ಏನೇನೋ ಮೋಡಿ ಮಾಡಿ ತನ್ ಕೆಲ್ಸ ಸಾಧಿಸಿಕೊಂಡು ಬಿಡುತ್ತೆ. ಏನೂ ಬರೆಯೋಕೇ ಬರದ ನನ್ನಂಥವಳಿಗೂ ಬರೆಯೋ ಆಸೆ ತಂದು ಈ ಮೂಲಕ ಅದನ್ನ ನೆರವೇರಿಸಿಕೊಂಡು ಬಿಡುತ್ತೆ ಅಂದ್ರೆ ಅದು ಹಾಕೋ ಮೋಡಿ ಎಂಥದ್ದು ಅಂತ ಗೊತ್ತಾಗುತ್ತೆ ಅಲ್ವೇನ್ರಿ……..

ಯಾಕೋ ಏನೋ ಕೆಲವೊಂದ್ಸಲ ಬುದ್ಧಿಗೂ ಮನಸ್ಸಿಗೂ ಜಗಳ ಬಂದಾಗ ಮಾತ್ರ ನನ್ನಂಥವರಿಗೆ ನಿಜವಾಗ್ಲು ಕಷ್ಟ ಆಗುತ್ತೆ ಕಣ್ರೀ….ಯಾಕೆ ಗೊತ್ತ? ಬುದ್ಧಿ ಹೇಳಿದ್ದನ್ನ ಮನಸ್ಸು ಒಪ್ಪಲ್ಲ ಮನಸು ಹೇಳೋದಕ್ಕೆ ಬುದ್ಧಿ ಕ್ಯಾರೆ ಅನ್ನಲ್ಲ. ಇಂಥ ಸಮಯದಲ್ಲಿ ನನ್ನಂಥವರ ಪೀಕಲಾಟ ಯಾರ್ ಶತ್ರುಗೂ ಬೇಡ….ಕೆಲವೊಂದ್ಸಲ ಮಾತ್ರ ಬುದ್ಧಿ ಹೇಳ್ತಾ ಇರೋದೇ ಸರಿ ಅಂತ ಗೊತ್ತಿದ್ರೂ ಆ ಮಾತನ್ನ ಧಿಕ್ಕರಿಸಿ ಮನಸು ಮುಂದುವರಿದು ಎಂತೆಂಥ ಅನರ್ಥಗಳಿಗೆ ದಾರಿ ಮಾಡಿಕೊಡುತ್ತೆ ಗೊತ್ತೇನ್ರಿ???? ಆಮೇಲೆ ಇದ್ದೆ ಇರುತ್ತೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಕೊಂಡು ಪ್ರಾಯಶ್ಚಿತ್ತಕ್ಕಾಗಿ ಅಲೆದಾಡೋದು…..ತಮಾಷಿ ಅಂದ್ರೆ ಹೀಗೆ ಒದ್ದಾಡೋದು ಬುದ್ಧಿಯಲ್ಲ ಆಗ ಕೆಲ್ಸ ಸಾಧಿಸಿದ ಖುಷೀಲಿ ಕುಣಿದಾಡಿರುತ್ತಲ್ಲ ಅದೇ ಕಳ್ಳ ಮನಸ್ಸು…….

ಅದಕ್ಕೆ ನಾನ್ ಹೇಳೋದ್ ಏನಪ್ಪಾ ಅಂದ್ರೆ… ಈ ಮನಸಿದೆಯಲ್ಲ ಅದು ಲಾಯರ್ ಇದ್ದ ಹಾಗೆ ಒಳ್ಳೆಯದರ ಪರವಾಗಿ ಮಾತಾಡಬಹುದು ಅಥವಾ ಕೆಟ್ಟದ್ದರ ಪರವಾಗಿ ಮಾತಾಡಬಹುದು ಆದ್ರೆ ಈ ಬುದ್ಧಿ ಜಡ್ಜ್ ಇದ್ದ ಹಾಗೆ ಮನಸ್ಸಿನ ಮಾತನ್ನ ಅಳೆದು ತೂಗಿ ನಿರ್ಧಾರ ತಗೋಬೇಕು. ಆದ್ರೂ ಒಂದೊಂದ್ ಸಲ ಈ ಲಾಯರ್ನ ಕಿತಾಪತಿಯಿಂದ ಖೈದಿಗಳು ಹೊರಗೆ ಬಂದುಬಿಡ್ತಾರೆ. ಅವ್ರನ್ನ ಇತಿಮಿತಿಯಲ್ಲಿ ಇಟ್ಕೊಳ್ಳೋದು ಮಾತ್ರ ನಮಗೆ ಬಿಟ್ಟಿದ್ದು…

ನೀವೇನೇ ಹೇಳಿ ಎಲ್ಲಾರೂ ಮನಸ್ಸನ್ನ ನನ್ ಥರ ಸುಂದರವಾಗಿ ಇಟ್ಕೊಂಡಿರಲ್ಲ ನೋಡಿ…… ಏನೇನೆಲ್ಲ ಇರುತ್ತಪ್ಪ ಅವ್ರ ಮನಸ್ಸಲ್ಲಿ ! ಆ ಥರದ ವಿಕೃತ ಮನಸ್ಸಿನ ಬಗ್ಗೆ ಅಲ್ಲ ನಾನ್ ಬರೀತಾ ಇರೋದು… ನಾನು ಹೇಳ್ತಾ ಇರೋದು ಮನಸ್ಸನ್ನ ಶುಭ್ರವಾಗಿ ತಿಳಿಯಾದ ಸರೋವರದ ಥರಾ ಇಟ್ಕೊಂಡಿರ್ತಾರಲ್ಲ ಕೆಲವೊಬ್ರು…. ನನ್ ಥರದವ್ರು ….ಕ್ಷಮಿಸಿ ಕ್ಷಮಿಸಿ.... ನಿಮ್ ಥರದವ್ರು ಅಂಥವ್ರ ಬಗ್ಗೆ. ಅಂಥ ಮನಸ್ಸು ಎಲ್ಲರನ್ನೂ ಪ್ರೀತಿಸುತ್ತೆ ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೆ ಅರ್ಹನಾಗಿರುತ್ತೆ ಅಲ್ವ….ಅದಕ್ಕೆ ನಿಮ್ ಪ್ರೀತಿ ಯಾವಾಗಲೂ ನನ್ ಮೇಲೆ ಇರಲಿ ಅಂತ ಕೇಳ್ತಾ ಜೊತೆಗೆ ನನ್ ಮನಸು ಕೂಡ ನಿಮ್ಮನ್ನ ಸದಾ ಪ್ರೀತಿಸುತ್ತಾ ಇರುತ್ತೆ ಅಂತ ಹೇಳ್ತಾ ಇದ್ದೀನಿ.

ಸದ್ಯಕ್ಕೆ ಮನಸಿನ ಬಗೆಗಿನ ಮಾತು ಸಾಕು ಅಲ್ವ….ಈ ಮನಸ್ಸು ನನಗೆ ಎನೇನೇನೇನೇನೇನೆಲ್ಲ ಹೇಳುತ್ತೆ ಅನ್ನೋದು ಮುಂದಿನ ಪೋಸ್ಟ್ನಲ್ಲಿ….ಸರೀನಾ……….ಆದ್ರೆ ಈ ಪೋಸ್ಟ್ ಬಗ್ಗೆ ನಿಮ್ಮ ಅನಿಸಿಕೆ ಏನು ಅಂತ ಹೇಳ್ತೀರಿ ತಾನೆ??????