Monday, June 25, 2012

ಹೀಗೊಂದು ರಾತ್ರಿ

ನಿಜ ಹೇಳ್ಬೇಕು ಅಂದ್ರೆ ನಾನು ಈ‌ ವರ್ಷ ಇನ್ನೊಂದು ಬ್ಲಾಗ್ ಬರಹ ಪ್ರಕಟ ಮಾಡ್ತೀನಿ ಅಂತ ನಿಜವಾಗಲೂ ಅಂದುಕೊಂಡಿರಲಿಲ್ಲ. ಸಧ್ಯಕ್ಕೆ ಏನು ಬರೀಬೇಕು ಅನ್ನೋದು ಗೊತ್ತಿರಲಿಲ್ಲ. ಆದ್ರೆ ನಿನ್ನೆ ರಾತ್ರಿ ನನ್ನ ಕನಸಲ್ಲಿ ಒಂದು ವಿಚಿತ್ರ ನಡೀತು. ಅದು ಏನು ಅಂತ ಹೇಳಿಕೊಳ್ಳಬೇಕು ಅಂತ ಅನ್ನಿಸ್ತು. ಹಾಗಾಗಿ...

ಆ ವಿಚಿತ್ರ ಏನು ಅಂತೀರಾ?‌ ನಿನ್ನೆ ರಾತ್ರಿ ನನ್ನ ಕನಸಲ್ಲಿ ನಾನು ಓದ್ತಾ ಕೂತಿದ್ದೆ (ಕನಸಲ್ಲೂ ಓದೋದೇನಾ?‌ ಅಂತ ಕೇಳ್ಬೇಡಿ...just imagine...) ಅದು ಎಲ್ಲಿ ಅಂತೀರಾ? ಒಂದು ಸುಂದರವಾದ ಪಾರ್ಕಲ್ಲಿ. ಅಷ್ಟೇನೂ‌ ಜನರ ಓಡಾಟ ಇರದಿದ್ದ ಆ ಪ್ರದೇಶ ಶಾಂತವಾಗಿ ಓದಲು ಅನುಕೂಲಕರವಾಗಿತ್ತು. ನಾನು ನನ್ನ ಪಾಡಿಗೆ ಓದ್ತಾ ಇದ್ದಾಗ ಇಬ್ಬರು ಹುಡುಗರು ಅಲ್ಲಿಗೆ ಬಂದ್ರು. ಬಂದವರೇ‌ ತಮ್ಮ ತಮ್ಮಲ್ಲೇ ಮಾತನಾಡುತ್ತ ನಾನು ಕೂತಿದ್ದ ಜಾಗಕ್ಕೆ ತುಂಬಾ ಸಮೀಪ ಬಂದಿದ್ರು...ಅವರು ಮಾತಾಡೋದು ನನಗೆ ಕೇಳುವಷ್ಟು ಹತ್ರ. ಅವರು ಹತ್ತಿರ ಬಂದಾಗ ನನಗೆ ಗೊತ್ತಾಗಿದ್ದು ಅವರ ನಡುವೆ  ಕವನಗಳ ಜುಗಲಬಂದಿ ನಡೀತಾ ಇತ್ತು ಅಂತ. ಒಂದೊಂದು ಕವನವೂ‌ ಇನ್ನೊಂದಕ್ಕಿಂತ ಚೆನ್ನಾಗಿತ್ತು. ಅದನ್ನು ಕೇಳಿದಾಗ ನಾನು ಜೋರಾಗಿ ಚಪ್ಪಾಳೆ ತಟ್ಟಿದೆ. ಅವರಿಬ್ಬರೂ ನನ್ನ ನೋಡಿ ನಕ್ಕರೆ ಹೊರತು ಬೇರೇನೂ ಮಾತಾಡಲಿಲ್ಲ . ಜುಗಲಬಂದಿ ಮುಂದುವರೀತಾ ಇತ್ತು. ಅದರಲ್ಲಿ ನನಗೆ ನೆನಪಿರೋದು ತುಂಬಾ ಇಷ್ಟವಾಗಿದ್ದು ಇದು.

ಬಿಸಿಲ ಬೇಗೆಯಲಿ ಕಾದ
ಬಸವಳಿದು ಒಣಗಿದ್ದ
ಇಳೆಗೆ ತಂಪನೆರೆಯುವ
ಮಳೆಯಾಗಿ ಬಂದೆ ನೀನು

ಮಣ್ಣಲ್ಲಿ ಒಂದಾಗಿ
ಹೇಗೋ ಶಾಂತವಾಗಿದ್ದೆ  
ನಿನ್ನ ಸವಿಸ್ಪರ್ಶದಿಂದ
ಕಾಯೊಡೆದು ಚಿಗುರಿದೆ ನಾನು

ನಿಜ ಹೇಳ್ತೀನಿ...ಆಗ ಆ ಹುಡುಗ ಎಷ್ಟು ಇಷ್ಟ ಆಗಿಬಿಟ್ಟ್ ಗೊತ್ತಾ... ಆದ್ರೆ ಈಗ ಅವನ ಮುಖಾನೇ ನೆನಪಾಗ್ತಾ ಇಲ್ಲ. ಛೆ! bad luck :(

ಇನ್ನೊಂದು ವಿಷ್ಯ ಇವತ್ತು ಬ್ಲಾಗಲ್ಲಿ ಈ ಸಾಲುಗಳನ್ನಷ್ಟೇ ಬರೀಬೇಕು ಅಂತ ಅಂದುಕೊಂಡಿದ್ದೆ... ಆದ್ರೆ ಕನಸಲ್ಲಿ ಬಂದಿದ್ದ ಆ ಹುಡುಗ ಈ ಸಾಲುಗಳನ್ನು ಎಷ್ಟು ಚೆನ್ನಾಗಿ ಹೇಳಿದ್ದ ಅಂದ್ರೆ ಅವನಿಗೆ credits ಕೊಡದೆ ಇರಲಾಗಲಿಲ್ಲ. ಹಾಗಾಗಿ ಇಡೀ ಕಥೆ ಇಲ್ಲಿದೆ :)