Sunday, October 4, 2009

ನೀನಿಲ್ಲದಿರೆ...

ಮುಂಜಾನೆ ಆಗಷ್ಟೇ ಎದ್ದು
ಕಿಟಕಿಯಾಚೆ ಕಣ್ಣ ಹಾಯಿಸಿದಾಗ
ಉದಯರವಿಯ ಹೊನ್ನ ಕಿರಣಗಳಲ್ಲಿ
ತುಂಬಿತ್ತು ನಿನ್ನದೇ ಹೊಳಪು
ಹೊತ್ತು ತಂದಿತ್ತು ನಿನ್ನ ನೆನಪು||

ಮಂಚದಿಂದಿಳಿದು ಈಚೆ ಬಂದು
ಎಲ್ಲರಿಗೂ ಸುಪ್ರಭಾತವ ಹೇಳುವಾಗ
ಮನೆಯವರೆಲ್ಲರ ನಗುವಿನಲ್ಲಿ
ಕಂಡಿತ್ತು ನಿನ್ನದೇ ಬಿಂಬ
ಆ ಬಿಂಬವೇ ಎನ್ನ ಕಣ್ಣ ತುಂಬ||

ನಿದ್ದೆಯ ಮಂಪರಿನಿಂದ ಹೊರಬಂದು
ಸ್ನಾನಕ್ಕೆ ಬಿಸಿನೀರ ತುಂಬಿಸುವಾಗ
ಅದರಿಂದ ಹೊರಬರುತ್ತಿದ್ದ ಆವಿಯಲ್ಲಿ
ನಿನ್ನ ಬಿಸಿಯುಸಿರ ಸ್ಪರ್ಶವಿತ್ತು
ಆ ಪುಳಕಕ್ಕೆ ಮನ ಕುಣಿದಾಡಿತ್ತು||

ಮನೆಯಿಂದ ಹೊರಹೋಗಲೆಂದು
ಸ್ಕೂಟಿಯನೇರಿ ಹೋಗುತ್ತಿದ್ದಾಗ
ಮುಖಕ್ಕೆ ಮುತ್ತಿಡುತ್ತಿದ್ದ ತಂಗಾಳಿಗೆ
ನಿನ್ನ ಸ್ಪರ್ಶದ ಸೆಳಹಿತ್ತು
ಆ ಸುಖವನ್ನರಸಿ ಹೃದಯ ಒದ್ದಾಡಿತ್ತು||

ಕಾಣುವ ನೂರಾರು ಕಂಗಳೊಂದಿಗೆ
ನನ್ನ ನೋಟ ಬೆರೆತಾಗ
ಹುಡುಕಿದವು ಈ ನಯನಗಳು
ನಿನ್ನ ಕುಡಿನೋಟದಲ್ಲಿನ ಸೆಳೆತ
ಆ ನೋಟದಲ್ಲೇ ಲೀನವಾಗುವ ತುಡಿತ||

ಮತ್ತೆ ನನ್ನ ಸ್ಕೂಟಿಯನೇರಿ
ಮನೆಗೆ ಹಿಂದಿರುಗುವಾಗ
ಮಳೆಹನಿಯ ಚಿಟಪಟ ಸದ್ದಲ್ಲಿ
ನಿನ್ನ ಪಿಸುಮಾತು ಕೇಳಿತ್ತು
ಆ ಮಾತಿಗೆ ನನ್ನ ಕಿವಿ ನಿಮಿರಿತ್ತು||

ನೀಲಾಕಾಶ ತಾ ಕೆಂಪಾಗಿ
ಸೂರ್ಯ ಹೊರಡಲು ಸಜ್ಜಾದಾಗ
ಹಚ್ಚಿದ ಜ್ಯೋತಿಯ ಬೆಳಕಿಂದ
ಎಲ್ಲಿಯೋ ಓಡಿಹೋಗಿತ್ತು ಕತ್ತಲು
ಕಂಡಿತ್ತು ನಿನ್ನ ಗುರುತೇ ಸುತ್ತಲು||

ಹಾಲ ಬೆಳದಿಂಗಳ ಚಂದ್ರ ತಾ ಚೆಲ್ಲಿ
ತಾರೆಗಳು ಬಾನನ್ನೆಲ್ಲಾ ಆವರಿಸಿದಾಗ
ಮಲಗಿ ಮುಚ್ಚಿದ ಕಂಗಳ ಹಿಂದೆ
ನಿನ್ನ ನೆನಪುಗಳನ್ನೆ ಕನವರಿಸಿದ್ದೆ
ಇನ್ನೆಲ್ಲಿ ಹತ್ತಿರ ಸುಳಿದೀತು ನಿದ್ದೆ||

ಹಾದಿಯಲ್ಲೆಲ್ಲೋ ಜೊತೆಯಾಗಿ
ನೂರ್ಕಾಲ ಜೊತೆಯಾಗಿರುವೆನೆಂದು
ಭರವಸೆಯಿತ್ತು ನನ್ನಾವರಿಸಿದೆ ನೀನು
ಈಗ ನನ್ನ ಕಣಕಣದಲ್ಲೂ ತುಂಬಿರುವೆ ನೀನು
ನೀನಲ್ಲದಿರೆ ನಿನ್ನ ಪ್ರೀತಿ ಬೇರಿನ್ನೇನು?

16 comments:

  1. ಶುಭೋದಯದಿಂದ ಶುಭ ರಾತ್ರಿಯವರೆಗಿನ ಪ್ರವರದಲ್ಲಿ ಕಾಡು(ಣು)ವ "ಅವನ' ಒಡನಾಟಕ್ಕೆ ಅಚ್ಚುಕಟ್ಟಾಗಿ ಕಾವ್ಯದ ಹೊದಿಕೆ ಹೊದಿಸಿದ್ದೀರಿ. ಪ್ರತೀ ಚರಣಗಳ ಕೊನೆಯ ಎರಡು ಸಾಲುಗಳ ಅಂತ್ಯಪ್ರಾಸ ಇಡೀ ಕವಿತೆಗೆ ಅಂದ ಕಟ್ಟಿಕೊಟ್ಟಿದೆ. ಖುಷಿ ಕೊಡುವ ಕವಿತೆ. ಧನ್ಯವಾದಗಳು.

    ReplyDelete
  2. beautiful poem. fine expression of your subtle thoughts and feelings. i really enjoyed the poem. keep chiselling such poems indushri.
    dr Gnanadev bolde

    ReplyDelete
  3. ಇಡೀ ದಿನ ಜೊತೆಗಿರುವ "ಅವನ" ಒಡನಾಟದ ನೆನಪುಗಳು....
    ಸೊಗಸಾಗಿತ್ತು...
    ಬಹಳ ಚೆನ್ನಾಗಿದೆ ಎಲ್ಲಾ ಸಾಲುಗಳು...
    ಮಹೇಶ್!

    ReplyDelete
  4. ಇಂದುಶ್ರೀ
    ತುಂಬ ಚೆನ್ನಾಗಿ ಇದೆ ಕವನ ..

    ReplyDelete
  5. kavana tumbaa chennaagide....

    Happy Dipavali....!

    ReplyDelete
  6. ಸಕ್ಕತ್ ಕವಿತೆ. ತುಂಬ ಇಷ್ಟ ಆಯ್ತು.

    ReplyDelete
  7. ದಿನ ಬೆಳಗಾಗಿ ಪ್ರತಿ ಹೆಜ್ಜೆಗೂ ನೆನಪುಗಳಿಗೆ ಅಕಾರ ಕೊಡುವ ಸಾಕಾರ ಮೂರ್ತಿ
    ಮನದಲ್ಲಿ ಹೇಗೆ ಹುಚ್ಚಲೆಗಳನ್ನು ಎಬ್ಬಿಸುತ್ತೆ ಎನ್ನುವುದನ್ನು ಚನ್ನಾಗಿ ಬಿಂಬಿಸಿದ್ದಿರಿ ಇಂದುಶ್ರೀ..ಮುಂದುವರೆಯಲಿ ನಿಮ್ಮ ಕೃಷಿ..ಅಭಿನಂದನೆಗಳು

    ReplyDelete
  8. """" ತುಂಬ ಚೆನ್ನಾಗಿ ಇದೆ ಕವನ """"

    ReplyDelete
  9. ಇಂಧುಶ್ರೀ ಮೇಡಂ,
    ಕವನ ತುಂಬಾ ಚೆನ್ನಾಗಿದೆ.... ದಿನವಿಡೀ ಕಾಡುವವನನ್ನ ಇಷ್ಟು ಮುದ್ದಾದ ಕವನದಲ್ಲಿ ಸೆರೆ ಹಿಡಿದಿದ್ದೀರಿ...

    ReplyDelete
  10. ತುಂಬ ಚೆನ್ನಾಗಿದೆ ನಿಮ್ಮ ಕವಿತೆ :) ಓದಿ ಖುಷಿಯಾಯಿತು :)

    ಸುಮಾ

    ReplyDelete