Friday, July 16, 2010

ಇನ್ನು ತಡವೇಕೆ?

ನನ್ನ ಎದುರು ನಿಂತು ನೀನು
ಮಾತನಾಡದಿದ್ದರೇನು
ನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?

ನನ್ನ ಕಂಡ ಒಡನೆ ನಿನ್ನ
ತುಟಿಯಂಚಿನಲ್ಲಿ ಮಿಂಚಿ ಹೋದ
ನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?

ನಾನು ಕಾಣದಿಲ್ಲದಾಗ
ರಾತ್ರಿ ಪೂರ ನಿದ್ರೆಯಿರದೆ
ನನ್ನ ನೆನೆದು ಕಂಡ ಕನಸು ಇನ್ನು ಗೌಪ್ಯವೇ?

ಹೃದಯ ಬರೆದ ಒಲವಿನೋಲೆ
ನನಗೆ ತೋರದಿದ್ದರೇನು
ನಿನ್ನ ಮನದ ಭಾವಗೀತೆ ನನಗೆ ಕೇಳದೆ?

ಸರಿಸಿಬಿಡು ಮೌನ ತೆರೆಯ
ಅರಳಲಿನ್ನು ಸುಖದ ಘಳಿಗೆ
ಕನಸು ಮನಸು ಹಂಚಿಕೊಳಲು ತಡವು ಏತಕೆ?

(ಪ್ರೇರಣೆ : ನನಗೆ ಬಂದ ಒಂದು sms )

14 comments:

  1. ತುಂಬಾ ಮುದ್ದುಮುದ್ದಾಗಿದೆ :)

    ReplyDelete
  2. ಕವನ ಸುಂದರವಾಗಿದೆ.ಧನ್ಯವಾದಗಳು.

    ReplyDelete
  3. ಕವನ ತುಂಬಾ ಚೆನ್ನಾಗಿದೆ ಇಂದುಶ್ರೀ..
    ಪ್ರೀತಿಯ ವಿಷಯದಲ್ಲಿ ಹಾಗೆಯೆ.. ಸಂವೇದನೆಗಳ ಸಂವಹನಕ್ಕೆ ಯಾವುದೇ ಸ್ಪರ್ಶವೇದ್ಯ ಮಾಧ್ಯಮಗಳ ಅವಶ್ಯಕತೆ ಇರುವುದಿಲ್ಲ.. ಅದು ಹಾಗೆಯೇ ಗೊತ್ತಿಲ್ಲದೆಯೇ ಗೊತ್ತಾಗಿಬಿಡುತ್ತದೆ..!!

    ReplyDelete
  4. ಕನಸು ಮನಸು ಹಂಚಿಕೊಳಲು ತಡ ಏತಕೆ..!
    ಕವನ ಚೆನ್ನಾಗಿದೆ. ಇಷ್ಟ ಆಯಿತು.
    ನಿಮ್ಮವ,
    ರಾಘು.

    ReplyDelete
  5. ಕವನ ತುಂಬಾ ಚೆನ್ನಾಗಿ ಇದೆ... ವೆರಿ ನೈಸ್..... SMS ಇದಕ್ಕೆ ಪ್ರೇರಣೆ ನ....? :-)

    Guru

    ReplyDelete
  6. ಚೆನ್ನಾಗಿದೆ ಇಂದುಶ್ರೀಯವರೇ., ಮೊದಲ ಹಾಗೂ ನಾಲ್ಕನೇ ಪ್ಯಾರಾಗಳು ಹೆಚ್ಚು ಇಷ್ಟವಾದವು :)

    ReplyDelete
  7. ಕುದುರೆ ಖುರಪುಟ ರಾಗದ ಸುಮಧುರ ಪ್ರಾಸಭದ್ಧ ಅರ್ಥವತ್ತಾದ ಕವನ! ಸ್ಪೂರ್ತಿಯ ಎಸ್ಸೇಮೆಸ್ಸ್ ಕೊಟ್ಟಿದ್ದಾರೆ ಚೆನ್ನಾಗಿರುತಿತ್ತು.

    ReplyDelete
  8. @ಅಭಿಜಿತ್
    @ಡಾ. ಡಿ.ಟಿ.ಕೆ. ಮೂರ್ತಿ
    @ದಿಲೀಪ್ ಹೆಗ್ಡೆ
    @ರಾಘು
    @Snow White
    @ವಸಂತ್
    @ಗುರುಪ್ರಸಾದ್ ಶೃಂಗೇರಿ
    ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ
    @ಗುರು
    ಹೌದು sms ಪ್ರೇರಣೆ
    @ಸೀತಾರಾಮ ಕೆ
    ಕುದುರೆ ಖರಪುಟ ರಾಗ ಗೊತ್ತಿಲ್ಲ :(
    ಸ್ಪೂರ್ತಿಯ sms
    A girl never expressed her liking for a guy thinking that the guy should express it first and the boy never expressed with a fear of losing her even as a friend.
    Years pass by
    Now she is happy wit her husband and he with his wife
    This is how love stories end before starting
    ಇದು ನನಗೆ ಬಂದ sms. ಅವಳೇನಾದರೂ ಅವನಿಗೆ ತನ್ನ ಭಾವನೆಗಳನ್ನು ಹೇಳಿದ್ದರೆ ಹೇಗಿರುತ್ತಿತ್ತು ಅಂತ ಕಲ್ಪಿಸಿಕೊಂಡು ಬರೆದಿದ್ದು...

    ReplyDelete
  9. ಹೌದು ಹೆಚ್ಚಿನ ಪ್ರೀತಿಗಳು ಬಾಡಿಹೋಗುವುದು ಈ ಎಸ್ಸೆಮ್ಮೆಸ್ ನ ಮೊದಲ ಪ್ಯಾರಾದಿಂದಲೇ ಅಲ್ವಾ..??

    ReplyDelete
  10. ಕನ್ನಡದ "ವಿಜಯನಗರದ ವೀರಪುತ್ರ" ಚಿತ್ರದಲ್ಲಿ ಒಂದು ಹಾಡಿದೆ -"ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟಕವಿದುವೆ ಮೆಚ್ಚ ಕಲೆಯ ಬೀಡಿದು". ಈ ಹಾಡು ಕುದುರೆ ಹೆಜ್ಜೆ ಸ್ವರದಲ್ಲಿದೆ.
    ಕೊಂಡಿ: http://www.youtube.com/watch?v=JB9mLUy570E

    ReplyDelete
  11. ಆತ್ಮೀಯ
    ಚಿಕ್ಕ ಪದಗಳಲ್ಲಿ ಅಗಾಧ ಪ್ರೀತಿಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.ನಿಮ್ಮ ಕವನಕ್ಕೆ ನನ್ನ ಪ್ರತಿ ಕವನ

    ನಿನ್ನ ಎದುರು ನಿ೦ತ ನಾನು
    ಮೌನಿಯಾಗಿಬಿಟ್ಟೆ ಇನ್ನು
    ನಿನ್ನ ನಗುವ ಮುಖವ ಕ೦ಡ ಕೂಡಲೆ

    ಹರಿವ ಶಾ೦ತ ನದಿಯ ಹಾಗೆ
    ಸ್ನೇಹ ಪುಷ್ಪ ತೇಲಿ ಬ೦ತು ಹೀಗೆ
    ಏಕೆ೦ದು ಕೇಳಬೇಡ ನನ್ನನೀಗಲೇ

    ನನ್ನ ಮನದಿ ಪ್ರೀತಿ ಸೋನೆ
    ಸುರಿಸಿ ನಿ೦ತೆ ಏಕೆ ಜಾಣೆ
    ಕಾಣದ೦ಥ ಒಲವ ಕ೦ಡೆ ನಿನ್ನ ಕಣ್ಣಲಿ

    ಘಳಿಗೆಗೊಮ್ಮೆ ಮಿ೦ಚಿ ನಿಲುವೆ
    ಮನದ ಮುಗಿಲ ತು೦ಬ ಚಲುವೆ
    ಚಿತ್ರದ೦ತೆ ತು೦ಬಿ ನಿ೦ತೆ ಬಾಳ ಪುಟದಲಿ

    ನಿ೦ತ ನಿಲುವಿನಲ್ಲೇ ನನ್ನ
    ಪ್ರೀತಿಯನ್ನು ಹೇಳಲಾರೆ
    ನಡೆವೆನಷ್ಟೆ ನಿನ್ನ ಜೊತೆಗೆ ಎ೦ದಿನ೦ತೆಯೇ

    ಹರೀಶ ಆತ್ರೇಯ

    ReplyDelete
  12. ತುಂಬಾನೇ ಮುದ್ದಾಗಿದೆ
    ರಾಗ ಹಾಕಿ ಹಾಡುವಂತಿದೆ

    ReplyDelete
  13. ಇಂದುಶ್ರೀ ಯವರ ಕವನ ತುಂಬಾ ಚೆನ್ನಾಗಿದೆ, ಪುಟ್ಟ ಪುಟ್ಟ ವಾಕ್ಯಗಳಲ್ಲೇ ಅಗಾಧ ಪ್ರೀತಿಯ ತುಂಬಿ ಚಂದ ಬರೆದಿದ್ದೀರಿ,
    ಅದಕ್ಕೆ ಪ್ರತಿ ಕವನವಾಗಿ ಹರೀಶ್ ಆತ್ರೇಯ ರವರ ಕವನವೂ ತುಂಬಾನೇ ಚನ್ನಾಗಿದೆ

    ReplyDelete