Sunday, January 1, 2012
Monday, October 31, 2011
Life
I prayed
When the tree of life is shedding its leaves
With no water to gain its green
Filling the colours to life
Bringing back the beauty of smile
Be the rain.... Oh! The gift divine
When I am plunged into caves of disappointment
Trembling with the fear of distress
Killing the frightening demons of dark
Showing the positive path of life
Be the lamp… Oh! The light of hope
When I am suffering with pains of life
Burning in the fire of sorrow
Bringing joy to life full of misery
Cooling the tensed mind
Be the gentle breeze….Oh! The boon of Lord
A voice I heard
Bestowed with gifts most precious
You pray me why?
Discover your potencies instead
The Best under the sky.
Your aim fills colours to your life
Your hard work waters it as the rain
Your will can alone be the guiding lamp
Love you feel cools you as gentle breeze
Your abilities when you realize
To great heights you would definitely rise
Tuesday, July 19, 2011
ನೆನಪೇ!
ಕ್ಷಣ ಮಾತ್ರ ಹತ್ತಿರ ಸುಳಿದು
ನಗೆಯರಳಿಸುವ ನೆನಪೇ
ನೀ ನನ್ನ ಸಖನೇ?
ನಗುವಿನಲ್ಲೂ ಅಳುವ
ಹೆಕ್ಕಿ ತೆಗೆವ ನೆನಪೇ
ನೀ ಪರಮ ಸಿನಿಕನೇ?
ಏಕಾಂತದಲಿ ಬೆಂದ ಮನಕೆ
ಸಾಂತ್ವನ ತರುವ ನೆನಪೇ
ನೀನಮೃತಸಿಂಚನವೇ?
ಭೂತದ ಗೋರಿಯ ಮೇಲೆ
ಕುಣಿ ಕುಣಿದಾಡುವ ನೆನಪೇ
ನೀ ಕಾಡುವ ಪಿಶಾಚಿಯೇ?
ಗತದ ಗೋಡೆಗೆ ಬಡಿದು
ಮರಳಿ ಬರುವ ನೆನಪೇ
ನೀ ನನ್ನಾತ್ಮಬಂಧುವೇ?
ಹೆಸರ ಹಂಗಿಲ್ಲದೆ ನನ್ನ
ಬರಸೆಳೆದು ಅಪ್ಪುವ ನೆನಪೇ
ನಮ್ಮದು ದಿವ್ಯ ಅನುಬಂಧವೇ?
Friday, June 17, 2011
ನಾನ್ಯಾಕೆ ಇಷ್ಟು ದಿನ ಬ್ಲಾಗ್ update ಮಾಡಿರಲಿಲ್ಲ ಅಂದ್ರೆ...
ನಾನು ನಿಮ್ಮಲ್ಲಿ ಕೆಲವರಿಗೆ ಹೇಳಿದ್ದೆ project ಕೆಲ್ಸ ಸ್ವಲ್ಪ ಜಾಸ್ತಿಯಿದೆ. ಸಮಯ ಸಿಗ್ತಿಲ್ಲ ಅಂತ. ಆದ್ರೆ ಈಗ ಅದೆಲ್ಲ ಸುಳ್ಳು ಅಂತ ಗೊತ್ತಾಗಿದೆ. ಅದು ನನ್ನನ್ನು ನಾನೇ ಸಮಾಧಾನ ಪಡಿಸಿಕೊಳ್ಳೋಕೆ ಕೊಟ್ಟಿದ್ದ ಉತ್ತರ ಅಷ್ಟೇ. ಯಾವಾಗಲೂ ಕ್ಲಾಸು,ಪಾಠ,ರೆಕಾರ್ಡ್ ಅಂತೆಲ್ಲ ತೊಡಗಿಸಿಕೊಂಡಿರ್ತಾ ಇದ್ದ ನನಗೆ ೭ನೇ ಸೆಮೆಸ್ಟರ್ ಮುಗಿದು ೮ನೇ ಸೆಮೆಸ್ಟರ್ ಶುರು ಆದಾಗ ಇದೆಲ್ಲಕ್ಕೂ ಕಡಿವಾಣ ಬಿತ್ತು. ನಮ್ ಕಾಲೇಜ್ ಅಲ್ಲಿ ೮ನೇ ಸೆಮೆಸ್ಟರಲ್ಲಿ ಕೇವಲ ಒಂದು project ಒಂದು seminar ಅಷ್ಟೇ. ಯಾವುದೇ theory subjects ಇಲ್ಲ. ಒಂದು ರೀತಿ ೮ನೇ ಸೆಮೆಸ್ಟರ್ ಬೋರ್ ಹೊಡೆಸುತ್ತಿತ್ತು. projectಗೆ ನಮಗಿದ್ದ weekly target ಒಂದು ಅಥವಾ ಎರಡು ದಿನಗಳಲ್ಲಿ ಮುಗಿಸಬಹುದಾಗಿತ್ತು. ಪ್ರತಿ ಬುಧವಾರ ನಮ್ಮ guideಗೆ ವಾರದಲ್ಲಿ ಏನೇನು ಮಾಡಿದ್ದೀವಿ ಅಂತ ಹೇಳ್ಬೇಕಿತ್ತು. ನಾನು ಕೆಲ್ಸ ಮಾಡ್ತಾ ಇದ್ದಿದ್ದು ಬಹುತೇಕ ಬಾರಿ ಮಂಗಳವಾರ ಮಾತ್ರ. ಬೇರೆ ದಿನಗಳಲ್ಲಿ ಏನು ಮಾಡ್ತಾ ಇದ್ದೆ ಅನ್ನೋದು ನಂಗೂ ಗೊತ್ತಿಲ್ಲ. ಆ ದಿನ ಕಳೆದು ಹೋಗಿ ಬಿಡ್ತಿತ್ತು. ದಿನೇ ದಿನೇ ಸೋಮಾರಿಯಾಗ್ತಾ ಹೋದೆ. ನನ್ನ ಕೆಲಸ ಮಾಡದಷ್ಟೇನೂ ಸೋಮಾರಿಯಾಗಿರಲಿಲ್ಲ. ನನ್ನ ಕೆಲಸ ಮುಗಿಸಿದ ಮೇಲೆ ಬೇರೆ ಏನನ್ನೂ ಮಾಡೋಕೆ ಆಸಕ್ತಿಯಿರಲಿಲ್ಲ.
Project ವಿಷಯವಾಗಿ ಏನಾದ್ರೂ ಯೋಚಿಸ್ತಾ ಇದ್ದಾಗ ಸಹಕರಿಸ್ತಾ ಇದ್ದ ಮನಸ್ಸು ಬೇರೆ ವಿಷಯಗಳ ಕಡೆ ಹೋಗೋಕೆ ಮುಷ್ಕರ ಹೂಡ್ತಾ ಇತ್ತು. "An idle mind is devil's workshop" ಅಂತಾರೆ. ಆದ್ರೆ ನನ್ನ ಮನಸ್ಸು ಎಷ್ಟು ನಿಷ್ಕ್ರಿಯವಾಗಿತ್ತಂದ್ರೆ ಕೆಟ್ಟ ವಿಷಯಗಳನ್ನೂ ಯೋಚಿಸ್ತಾ ಇರ್ಲಿಲ್ಲ. ಯಾಕೆ ಹೀಗೆ ಅಂತ ತುಂಬಾ ಸಲ ಯೋಚ್ನೆ ಮಾಡೋಕೆ ಪ್ರಯತ್ನ ಪಟ್ರೂ ಅದಕ್ಕೂ ಮನಸ್ಸಿನ ಮೌನವೇ ಉತ್ತರವಾಗಿತ್ತು. I started to think that I had stopped thinking.
ನಾವು ಯಾವಾಗಲೂ ಅಷ್ಟೇ ಒಂದು ಬದಲಾದ ಸ್ಥಿತಿಗೆ ಹೊಂದಿಕೊಳ್ಳುವಾಗ ಮೊದಲು ಹಿಂದೇಟು ಹಾಕಿದ್ರೂ ಕಾಲಕ್ರಮೇಣ ಆ ಬದಲಾದ ಸ್ಥಿತಿಗೆ ಹೊಂದಿಕೊಂಡು ಬಿಡ್ತೀವಿ. ನನ್ನ ಮನಸಿನ ಈ ಸ್ಥಿತಿ ಮುಂದುವರೆದಂತೆ ಅದಕ್ಕೆ ಮಾನಸಿಕ ಜಡತ್ವ ಅನ್ನೋ ಹೆಸರು ಕೊಟ್ಟು ನಾನು ಆ ಮನಃಸ್ಥಿತಿಯನ್ನು ಒಪ್ಪಿಕೊಳ್ಳುತ್ತಾ ಹೋದೆ. ಮನಸು ಯೋಚ್ನೆ ಮಾಡದೇ ಇರೋ ಸ್ಥಿತಿನೇ ಅದರ ನಿಜಸ್ಥಿತಿಯೇನೋ ಅನ್ನುವಷ್ಟರ ಮಟ್ಟಿಗೆ ನನ್ನ ಮನಸ್ಸು ಆಲಸಿಯಾಗಿಬಿಡ್ತು. ನಾನು ಈ ಸ್ಥಿತಿಗೆ ಏನೇನೋ ನೆಪ ಹೇಳ್ತಾ ಅದನ್ನೇ ಸಮರ್ಥಿಸುತ್ತಾ ಹೋದೆ. ಇನ್ನೇನು ನನ್ನ ಮನಸ್ಸು ಸಂಪೂರ್ಣ ನಿಷ್ಕ್ರಿಯವಾಗುತ್ತೇನೋ ಅಂತ ಅನ್ನಿಸಿದಾಗ ಮತ್ತೆ ಯೋಚಿಸಲು ಶುರು ಮಾಡಿದೆ. ನನಗೆ ಆಶ್ಚರ್ಯ ಆಯ್ತು. ನನ್ನ ಮನಸ್ಸು ನನ್ಗೆ ಸಹಕರಿಸ್ತಾ ಇತ್ತು. ಆದರೆ ಆ ಯೋಚೆನೆ ನನ್ನ ಗೊಂದಲಗಳಿಗೆ ದಾರಿಯಾಯ್ತು. ನನ್ನ - ಆಲಸಿಯಾಗಿರಲಿಲ್ಲ. ನನ್ನ projectನ ಬೆಳವಣಿಗೆಗೆ ಸಂಪೂರ್ಣವಾಗಿ ಬೆಂಬಲಿಸುತ್ತಿತ್ತು. ಹಾಗಾಗಿ ಅದು ಯೋಚನಾರಹಿತ ಸ್ಥಿತಿಗೇನೂ ಹೋಗಿರಲಿಲ್ಲ.I had not stopped thinking. ಆದ್ರೆ ನಾನ್ಯಾಕೆ ಏನನ್ನೂ ಬರೀಲಿಲ್ಲ? ಬರೆಯೋಕೆ ಆಸಕ್ತಿಯಿರಲಿಲ್ವಾ?? ಹಾಗೇನೂ ಇಲ್ಲ. ಏಷ್ಟೋ ಬಾರಿ ನನ್ನ ಬ್ಲಾಗಲ್ಲಿ ಏನಾದ್ರೂ ಬರೀಬೇಕು ಅಂತ ಅನ್ನಿಸ್ತಾ ಇತ್ತು. ಆದ್ರೆ ಯಾವುದರ ಬಗ್ಗೆ ಬರೆಯೋದು ಅಂತ ಗೊತ್ತಾಗದೇ ಸುಮ್ಮನಾಗ್ತಿದ್ದೆ.
ನನ್ನ ಪ್ರಕಾರ ಇದೊಂಥರಾ ನನ್ನ ಮತ್ತು ನನ್ನ ಮನಸ್ಸಿನ ನಡುವೆ ಆಗಿದ್ದ ಒಪ್ಪಂದ. project ವಿಷಯವಾಗಿ ಏನೇ ಬೇಕಿದ್ರೂ ತಕ್ಷಣ ಗೊತ್ತಾಗಬೇಕಾದ್ರೆ ಮನಸ್ಸಿನ ಸಂಪೂರ್ಣ bandwidth ಅದಕ್ಕೆ ಮಾತ್ರ ಮೀಸಲಿಡಬೇಕೆಂಬ ಮೂಢ ನಂಬಿಕೆ ಅದಕ್ಕೆ ಕಾರಣ. ಬಹುಶಃ project ಶುರುವಾದಾಗ ಏಳು ಸೆಮೆಸ್ಟರ್ ಗಳಲ್ಲಿ ಕಲಿಯದಂಥ ಹೊಸ ವಿಷಯ ಆಯ್ಕೆ ಮಾಡಿಕೊಂಡು ಅದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟ ಪಡ್ತಿದ್ದಾಗ ತದೇಕಚಿತ್ತದಿಂದ project ಬಗ್ಗೆ ಮಾತ್ರ ಯೋಚಿಸಿದಾಗ ಅದು ಅರ್ಥವಾಗಿರಬೇಕು. ಆಗ ಸಧ್ಯಕ್ಕೆ higher priority ಇರೋದು projectಗೆ. ಅದನ್ನು ಮೊದಲು ಮುಗಿಸಬೇಕು. ಹಾಗೆ ಮಾಡಬೇಕಂದ್ರೆ ಬೇರೆಲ್ಲ ಯೋಚನೆ ಬಿಡಬೇಕೆಂದುಕೊಂಡಿದ್ದೆ ನನ್ನ ಮಾನಸಿಕ ಜಡತ್ವಕ್ಕೆ ಕಾರಣ ಅಂತ ಗೊತ್ತಾಯ್ತು. ಅದಷ್ಟೇ ಅಲ್ಲದೆ ಯುದ್ಧಕಾಲದಲ್ಲಿ ಮಾತ್ರ ಶಸ್ತ್ರಾಭ್ಯಾಸ ಮಾಡ್ತಾ ಇದ್ದಿದ್ದರ ಫಲವಾಗಿ ಕೆಲಸ ಕಮ್ಮಿಯಿದ್ರೂ ಅದನ್ನು ಪೂರ್ಣಗೊಳಿಸದೆ ವಾರ ಪೂರ ಕೆಲಸ ಇನ್ನೂ ಮುಗಿದಿಲ್ಲ ಅನ್ನೋ ಯೋಚ್ನೆನೇ ತಲೆಯಲ್ಲಿರ್ತಿತ್ತು. ನನಗೆ ಬ್ಲಾಗಿಂಗ್ lower prirority task ಆಗಿತ್ತು. priority scheduling ಚೆನ್ನಾಗಿಯೇ ನಡೀತಿತ್ತು . ಬ್ಲಾಗ್ ಬರೀಬೇಕು ಅಂತ ಅಂದುಕೊಂಡ್ರೂ projectನ ಯೋಚನೆ ಮನಸ್ಸಿಗೆ ಬಂದಾಗ ಬ್ಲಾಗ್ ಬರೆಯೋ ಯೋಚನೆಯನ್ನು ಅದು preempt ಮಾಡ್ತಿತ್ತು. ಹಾಗಾಗಿ ನನ್ನ ಬ್ಲಾಗ್ starvationಗೆ ಗುರಿಯಾಯ್ತು.
ಈಗ project ಮುಗಿದಿದೆ. ಸಮಯ ಕೂಡ ಇದೆ. ನನ್ನ ಮನಸ್ಸಿಗೆ ಆಲಸಿಯಾಗಿರೋದು ಇಷ್ಟ ಇಲ್ಲ. ಏನಾದ್ರೂ ಮಾಡಬೇಕಲ್ಲ ಅಂತ ಯೋಚಿಸ್ತಿದ್ದಾಗ ಬ್ಲಾಗ್ ನೆನಪಾಯ್ತು. ಸರಿ ಒಂದು post ಬರೆದುಬಿಡೋಣ ಅಂತ ಬರೆದು ಬಿಟ್ಟೆ. ಮತ್ತೆ ಇನ್ನೊಂದು higher priority task ಎದುರಾಗಬಹುದು. ಮತ್ತೆ ನನ್ನ ಬ್ಲಾಗ್ starvation ಇಂದ ಸೊರಗಬಹುದು. ಏನಾಗುತ್ತೋ ಗೊತ್ತಿಲ್ಲ . ಆದ್ರೆ ಬ್ಲಾಗ್ update ಮಾಡ್ಲಿಲ್ಲ ಅಂದ್ರೆ ಏನೂ ಬರೀಲಿಲ್ಲ ಅನ್ನೋ ಕೊರಗು ಮಾತ್ರ ನನ್ನಲ್ಲಿರುತ್ತೆ.
ಈಗ ಬ್ಲಾಗ್, project ಎಲ್ಲದಕ್ಕಿಂತ ತುಂಬಾ ತುಂಬಾ ಜಾಸ್ತಿ priority ಇರೋ task......ಅಂದ್ರೆ - ನನ್ನ ಊಟ ಕರೀತಿದೆ...ಹೋಗ್ಬೇಕು.... ಮತ್ತೊಮ್ಮೆ ಸಿಗ್ತೀನಿ ಆಯ್ತಾ?
Friday, November 19, 2010
ವಿದಾಯ
Sunday, November 7, 2010
ನಿನ್ನೆ ನಾಳೆಗಳ ನಡುವೆ
ಯಾರೋ ಕಟ್ಟಿ ಬಿಟ್ಟು ಹೋದ
ಕೋಟೆಯಂತ
ಚಂಡಮಾರುತಗಳಿಗೂ ಜಗ್ಗದ
ಬಂಡೆಕಲ್ಲಿನಂತೆ
ನಾಳೆಯ ಕನಸು ಮಧುರ
ಎಲ್ಲಿಂದಲೋ ಪರಿಮಳ ಸೂಸುವ
ಸೂಜಿಮಲ್ಲೆಯಂತೆ
ಜೀವನೋತ್ಸಾಹ ತುಂಬಿ ತರುವ
ಭರವಸೆಯ ಬೆಳಕಂತೆ
ಆದರೇನು
ನೆನಪು ನೂರು ಕಾಡಲು
ಸಮಯ ಮರಳಿ ಬರುವುದೇ?
ಕನಸು ನೂರು ಕೂಡಲು
ಬಾಳ ಕೀಲಿ ಸಿಗುವುದೇ?
ನಿನ್ನೆಗಳ ಸಾಗರದೊಳಗೆ ಮುಳುಗಿ
ನಾಳೆಯ ದಂಡೆ ಸೇರುವ ಅಪೇಕ್ಷೆ
ನಿನ್ನೆಯ ಸಂಕೋಲೆಗಳೊಳಗೆ
ನಾಳೆಯ ಸ್ವಾತಂತ್ರ್ಯದ ನಿರೀಕ್ಷೆ
ಬದುಕು ಸಾಗುವುದು
ಕಳೆದು ಹೋದ ನಿನ್ನೆಯಲ್ಲೂ ಅಲ್ಲ
ಮುಂಬರುವ ನಾಳೆಯಲ್ಲೂ ಅಲ್ಲ
ನಿನ್ನೆ ನಾಳೆಗಳ ನಡುವ ಕೊಂಡಿಯಲ್ಲಿ
ಇಂದಿನ ದಿನದ ಬೆಚ್ಚಗಿನ ಗೂಡಿನಲ್ಲಿ
ನಿನ್ನೆಯ ಸೆರಗು ಸರಿಸಿ ಅರಳಿದ
ಇಂದಿನ ಸುಮವಿದು ಕಂಪ ಬೀರಲಿ
ನಿನ್ನೆಯ ಬುನಾದಿಯ ಮೇಲೆ
ನಾಳೆಯ ಮಹಲು ಕಟ್ಟುವ
ಇಂದಿನ ಕೆಲಸ ಕೈಗೂಡಲಿ
Monday, September 6, 2010
ಯೋಚಿಸಿ ಮಿಸ್ಡ್ ಕಾಲ್ ಕೊಡುವ ಮುನ್ನ
"ಬೆಳಿಗ್ಗೆ ಬೇಗ ಹೊರಡಬೇಕು. ನಾನು ಬೇಗ ಏಳೊಲ್ಲ. ನಿಂಗೆ ಎಚ್ಚರ ಆದ್ರೆ ೫ ಗಂಟೆಗೆ ಮಿಸ್ಡ್ ಕಾಲ್ ಕೊಡ್ತೀಯಾ?"
"ನಾನು ವಿಜಯನಗರಕ್ಕೆ ಬಂದಾಗ ಮಿಸ್ಡ್ ಕಾಲ್ ಕೊಡ್ತೀನಿ.ಆಗ ನೀನು ಮನೆಯಿಂದ ಹೊರಡು."
ಹೌದಲ್ಲ... ಇದು ನಾವು ಸಾಮಾನ್ಯವಾಗಿ ಹೇಳುವ ಮಾತು. ಸುಮ್ನೆ ಸಿಗ್ನಲ್ ಕೋಡೋದಕ್ಕೆಲ್ಲಾ ಯಾಕೆ ದುಡ್ಡು ದಂಡ ಮಾಡೋದು ಅಂತ. ೧ ಸೆಕೆಂಡಿಗೆ ೧ ಪೈಸೆ ಚಾರ್ಜ್ ಮಾಡಿದ್ರೂ ಅದನ್ನು ಕಳೆದುಕೊಳ್ಳೋಕೂ ನಾವು ತಯಾರಿಲ್ಲ. ಆದ್ರೆ ಒಂದು ಮಿಸ್ಡ್ ಕಾಲ್ ನಮ್ಮ ಮೊಬೈಲ್ ಇಂದ ನಮ್ಮ ಸ್ನೇಹಿತರ ಮೊಬೈಲ್ ಗೆ ಹೋಗೋದಕ್ಕೆ ಏನೆಲ್ಲಾ ಕೆಲಸಗಳು ನಡೆಯುತ್ತವೆ ಗೊತ್ತಾ?
ಮೊಬೈಲ್ ಉಪಕರಣ ರೇಡಿಯೋ ತರಂಗಗಳ ಮೂಲಕ ನಮ್ಮ ಮಾತನ್ನು ರವಾನಿಸುತ್ತದೆ ಎಂಬುದು ಬಹುತೇಕರಿಗೆ ಗೊತ್ತು. ಆದರೆ ನಮ್ಮ ಮೊಬೈಲ್ ಇಂದ ಕರೆ ಮಾಡುತ್ತಿರುವವರ ಮೊಬೈಲ್ ವರೆಗೆ ಸಂದೇಶಗಳು ಕೇವಲ ರೇಡಿಯೋ ತರಂಗಗಳ ಮೂಲಕ ಗಾಳಿಯಲ್ಲೇ ಹೋಗುತ್ತಾ? ಇದಕೆ ಉತ್ತರ "ಇಲ್ಲ". ಹಾಗಿದ್ರೆ ಮೊಬೈಲ್ ಇಂದ ಮೊಬೈಲ್ ಗೆ ಸಂಪರ್ಕ ಹೇಗೆ? ನಮ್ಮಲ್ಲನೇಕರು ಬಳಸುತ್ತಿರುವ ಜಿ.ಎಸ್.ಎಂ(Global System for Mobile communication) ತಂತ್ರಜ್ಞಾನದಲ್ಲಿ ಮೊಬೈಲ್ ದೂರಸಂಪರ್ಕ ಸೇವೆ ಲಭಿಸುವುದು ಹೀಗೆ.....
ಮೊಬೈಲ್ ಬಳಕೆ ಪ್ರಾರಂಭವಾದಾಗ ಒಂದು ಅತಿ ಶಕ್ತಿಶಾಲಿ ಆಂಟೆನಾದ ಮೂಲಕ ಸುಮಾರು ೫೦ ಕಿ.ಮೀ. ದೂರದವರೆಗೆ ಸಂದೇಶಗಳನ್ನು ಬ್ರಾಡ್ ಕಾಸ್ಟ್ ಮಾಡಲಾಗುತ್ತಿತ್ತು. ಆದರೆ ಸೆಲ್ಯುಲಾರ್ ತಂತ್ರಜ್ಞಾನದ ಅಭಿವೃದ್ಧಿಯಿಂದ ಒಂದು ಶಕ್ತಿಶಾಲಿ ಆಂಟೆನಾದ ಬದಲಿಗೆ ಅನೇಕ ಕಡಿಮೆ ಶಕ್ತಿಯ ಆಂಟೆನಾಗಳಿಂದ ವ್ಯಾಪ್ತಿ ಪ್ರದೇಶದೊಳಗಿನ ಗ್ರಾಹಕರನ್ನು ತಲುಪುವ ವ್ಯವಸ್ಥೆ ಆರಂಭವಾಯಿತು. ಇಂಥ ಒಂದು ಕಡಿಮೆ ಶಕ್ತಿಯ ಆಂಟೆನಾದಿಂದ ಸಂಪರ್ಕ ಸೇವೆ ಪಡೆಯುವ ಒಂದು ಭೌಗೋಳಿಕ ಪ್ರದೇಶಕ್ಕೆ "ಸೆಲ್" ಎಂದು ಹೆಸರು. ಹಾಗೆ ಈ ಆಂಟೆನಾ ಹಾಗೂ ಅದಕ್ಕೆ ಸಂಬಂಧಿಸಿದ ಸಿಗ್ನಲ್ ಪ್ರೊಸೆಸಿಂಗ್ ಹಾರ್ಡ್ ವೇರ್ ಗೆ ಬೇಸ್ ಟ್ರಾನ್ಸೀವರ್ ಸ್ಟೇಷನ್(BTS) ಎಂಬ ಹೆಸರು.ಒಂದು ಅಥವಾ ಅದಕ್ಕಿಂತ ಹೆಚ್ಚು BTS ಗಳನ್ನು ನಿಯಂತ್ರಿಸುವುದು ಬೇಸ್ ಸ್ಟೇಷನ್ ಕಂಟ್ರೋಲರ್ (BSC) . ಹಲವಾರು BSCಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಕರೆ ಪೂರ್ಣಗೊಳಿಸುವುದು ಮೊಬೈಲ್ ಸ್ವಿಚಿಂಗ್ ಸೆಂಟರ್ (MSC). ಇಲ್ಲಿ ಕೇವಲ BTS ಮತ್ತು ಮೊಬೈಲ್ ನಡುವೆ ಮಾತ್ರ ಗಾಳಿಯಲ್ಲಿ ತರಂಗಗಳ ಮೂಲಕ ಸಂದೇಶ ರವಾನೆಯಾಗುತ್ತದೆ.
ಗ್ರಾಹಕರಿಗೆ ಮೊಬೈಲ್ ಸೇವೆ ಒದಗಿಸುವ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ BTS, BSC ಹಾಗೂ MSCಗಳನ್ನು ಹೊಂದಿರುತ್ತದೆ. ಒಂದು ನೆಟ್ ವರ್ಕ್ ನ MSC ತನ್ನ ನೆಟ್ ವರ್ಕಿನ ಇತರೆ MSCಗಳೊಂದಿಗೆ ಹಾಗೂ ಇತರೆ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಸಂಪರ್ಕಗಳ ಎಕ್ಸ್ ಚೇಂಜ್ ಗಳೊಂದಿಗೆ ಸಂಪರ್ಕ ಸಾಧಿಸುತ್ತದೆ.ಇದಲ್ಲದೇ ಪ್ರತಿಯೊಂದು ನೆಟ್ ವರ್ಕ್ ತನ್ನದೇ ಆದ ಕೆಲವು ಮಾಹಿತಿಗಳನ್ನು ಹೋಂ ಲೊಕೇಶನ್ ರೆಜಿಸ್ಟರ್(HLR) ಹಾಗೂ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR) ನಲ್ಲಿ ಹೊಂದಿರುತ್ತವೆ.ಅನೇಕ MSCಗಳು ಕಾರ್ಯ ನಿರ್ವಹಿಸುತ್ತಿರುವ ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿನ ಎಲ್ಲಾ ಗ್ರಾಹಕರ ಮಾಹಿತಿಯನ್ನು HLR ಹೊಂದಿದ್ದರೆ, ಒಂದು MSCಯ ವ್ಯಾಪ್ತಿಗೊಳಪಡುವ ಭೌಗೋಳಿಕ ಪ್ರದೇಶದಲ್ಲಿ ಆ ಸಮಯದಲ್ಲಿರುವ ಗ್ರಾಹಕರ ಮಾಹಿತಿಯನ್ನು VLR ಹೊಂದಿರುತ್ತದೆ.ಪ್ರತಿಯೊಂದು MSCಯೊಂದಿಗೆ ಒಂದು VLR ಇರುತ್ತದೆ.ಯಾವ ಗ್ರಾಹಕ ಯಾವ MSC-VLR ಗೆ ಸೇರಿದ ಪ್ರದೇಶದಲ್ಲಿದ್ದಾನೆ ಎಂಬುದು HLR ಗೆ ತಿಳಿದಿರುತ್ತದೆ. ಗ್ರಾಹಕರಿಗೆ ಸೇವೆ ಒದಗಿಸಲು ಬೇಕಾದ ಎಲ್ಲಾ ಮಾಹಿತಿಗಳನ್ನು HLRನಿಂದ VLR ಪಡೆಯುತ್ತದೆ.
ಪ್ರತಿಯೊಂದು ಅಧಿಕೃತ ಮೊಬೈಲ್ ಹ್ಯಾಂಡ್ ಸೆಟ್ ೧೫ ಅಂಕಿಗಳ IMEI (ಇಂಟರ್ನ್ಯಾಷನಲ್ ಮೊಬೈಲ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. (ನಿಮ್ಮ ಮೊಬೈಲಿನ IMEI ನಂಬರ್ ತಿಳಿಯಲು *#೦೬# ಡಯಲ್ ಮಾಡಿ) . ಎಲ್ಲಾ ಅಧಿಕೃತ ಮೊಬೈಲ್ ಹ್ಯಾಂಡ್ಸೆಟ್ ಗಳ IMEI ನಂಬರ್ ಎಕ್ವಿಪ್ ಮೆಂಟ್ ಐಡೆಂಟಿಫಿಕೇಶನ್ ರೆಜಿಸ್ಟರಿನಲ್ಲಿ( EIR) ದಾಖಲಾಗಿರುತ್ತದೆ. ಮೊಬೈಲ್ ಗ್ರಾಹಕರನ್ನು ಗುರುತಿಸಲು ಪ್ರತಿ ಸಿಮ್ ಕಾರ್ಡ್ ೧೫ ಅಂಕಿಗಳ IMSI(ಇಂಟರ್ನ್ಯಾಷನಲ್ ಮೊಬೈಲ್ ಸುಬ್ಸ್ ಕ್ರೈಬರ್ ಐಡೇಂಟಿಫಿಕೇಶನ್) ನಂಬರ್ ಹೊಂದಿರುತ್ತದೆ. ಇದೇ ನಂಬರ್ ಅಥೆಂಟಿಕೇಶನ್ ಸೆಂಟರ್( AUC) ನಲ್ಲಿಯೂ ದಾಖಲಾಗಿರುತ್ತದೆ.
ನಾವು ಒಂದು ನೆಟ್ ವರ್ಕ್ ಇಂದ ಸೇವೆ ಪಡೆಯಲು ಅರ್ಜಿ ಸಲ್ಲಿಸಿ ಸಿಮ್ ಕಾರ್ಡ್ ಪಡೆದಾಗ ನಮ್ಮ ವಿವರಗಳು,ನಾವು ಪಡೆದಿರುವ ಸರ್ವೀಸಸ್ ನ ವಿವರಗಳು ಹಾಗೂ ನಾವು ಸಬ್ಸ್ ಕ್ರೈಬ್ ಮಾಡಿರುವ ಪ್ಲಾನ್ ಎಲ್ಲಾ ಆ ನೆಟ್ ವರ್ಕಿನ ಹೋಂ ಲೊಕೇಶನ್ ರೆಜಿಸ್ಟರಿನಲ್ಲಿ(HLR) ದಾಖಲಾಗುತ್ತದೆ. ನಮ್ಮ ಮೊಬೈಲ್ ಉಪಕರಣದೊಳಗೆ ನಾವು ಸಿಮ್ ಅಳವಡಿಸಿದಾಗ ಅದು ಎಲ್ಲಾ ನೆಟ್ ವರ್ಕ್ ಗಳಿಗೆ ಸೇರಿರುವ BTSಗಳಿಗೆ ಸಂದೇಶ ರವಾನಿಸುತ್ತದೆ.ಸಂದೇಶ ರವಾನಿಸುತ್ತಿರುವ ಸಿಮ್ ನಲ್ಲಿರುವ IMSI ನಂಬರನ್ನೂ ತನ್ನ HLR ಅಲ್ಲಿರುವ ಮಾಹಿತಿಯನ್ನೂ ಪರಿಶೀಲಿಸಿ ಅಧಿಕೃತ ನೆಟ್ ವರ್ಕ್ ತನ್ನ ಸೇವೆ ಒದಗಿಸಲು ಸಿದ್ಧವಾಗುತ್ತದೆ. ಗ್ರಾಹಕರ ಮಾಹಿತಿಯನ್ನು ಗೌಪ್ಯವಾಗಿಡಲು ಟೆಂಪೊರರಿ ಮೊಬೈಲ್ ಸಬ್ಸ್ ಕ್ರೈಬರ್ ಐಡೆಂಟಿಫಿಕೇಶನ್(TMSI) ನಂಬರ್ ಗಳನ್ನು ನೀಡಲಾಗುತ್ತದೆ.
ನಾವು ಮೊಬೈಲನ್ನು ಬಳಸದಿದ್ದಾಗಲೂ ಅದು ಆನ್ ಆಗಿದ್ದಲ್ಲಿ ಮೊಬೈಲ್ ನಿಯಮಿತವಾಗಿ BTSಗಳಿಗೆ ಸಂದೇಶ ರವಾನಿಸುತ್ತಿರುತ್ತದೆ. ನಮ್ಮ ಮೊಬೈಲ್ ತನ್ನ ಸುತ್ತಲಿನ ಗರಿಷ್ಟ ೬ BTSಗಳಿಂದ ಸಂದೇಶಗಳನ್ನು ಸ್ವೀಕರಿಸಲು ಶಕ್ತವಾಗಿರುತ್ತದೆ. ಸ್ವೀಕರಿಸಿದ ಸಿಗ್ನಲ್ ಗಳ ವಿವರವನ್ನು ಪುನಃ BTSಗಳ ಮುಖಾಂತರ BSC ಪಡೆಯುತ್ತದೆ. ಹಾಗೂ ಗರಿಷ್ಟ ಶಕ್ತಿ ಹೊಂದಿರುವ ಸಿಗ್ನಲ್ ಯಾವ BTSನಿಂದ ಮೊಬೈಲನ್ನು ತಲುಪುತ್ತಿರುತ್ತದೆಯೋ ಅದರ ಮೂಲಕ ಸೇವೆ ಒದಗಿಸುತ್ತದೆ.ನಾವು ಯಾವ BTSನಿಂದ ಸೇವೆ ಪಡೆಯುತ್ತಿದ್ದೇವೆ ಎಂಬುದರ ಆಧಾರದ ಮೇಲೆ ವಿಸಿಟರ್ ಲೊಕೇಶನ್ ರೆಜಿಸ್ಟರ್(VLR)ನಲ್ಲಿ ನಾವೀಗಿರುವ ಸ್ಥಳದ ಮಾಹಿತಿ ಅಪ್ಡೇಟ್ ಆಗುತ್ತದೆ. ಒಂದು BTS ಮುಖೇನ ಸೇವೆ ಪಡೆಯುತ್ತಿದ್ದರೂ ಮೊಬೈಲ್ ತನ್ನ ಸುತ್ತಲಿನ ಇತರೆ BTSಗಳಿಂದ ಪಡೆಯುತ್ತಿರುವ ಸಿಗ್ನಲ್ ಬಗೆಗಿನ ಮಾಹಿತಿಯನ್ನು ನಿಯಮಿತವಾಗಿ BSCಗಳಿಗೆ ರವಾನಿಸುತ್ತಿರುತ್ತದೆ. ಇದು Idle state.
ನಾವು ಕರೆ ಮಾಡಲು ಡಯಲ್ ಮಾಡಿದಾಗ ನಮ್ಮ ಮೊಬೈಲ್ ಇಂದ BSCಗೆ ಹಾಗೂ ಅಲ್ಲಿಂದ MSCಗೆ ಸಂದೇಶ ಹೋಗುತ್ತದೆ. ನಮ್ಮ ಕರೆ MSCಗೆ ತಲುಪಿದಾಗ ಕರೆ ಪೂರ್ಣಗೊಳಿಸುವ ಮೊದಲು EIR ನಲ್ಲಿ ನಮ್ಮ ಮೊಬೈಲ್ ಸೆಟ್ ನ IMEI ದಾಖಲಾಗಿದೆಯೇ ಎಂದು ಪರಿಶೀಲಿಸುತ್ತದೆ. AUCಯಲ್ಲಿರುವ ಕೆಲವು ರಾಂಡಮ್ ಸಂಕೇತಗಳನ್ನು ನಮ್ಮ ಮೊಬೈಲ್ ಗೆ ಕಳುಹಿಸುತ್ತದೆ. ಅದಕ್ಕುತ್ತರವಾಗಿ ನಮ್ಮ ಮೊಬೈಲ್ ಕಳುಹಿಸಿದ ಸಂಕೇತಗಳ ಆಧಾರದ ಮೇಲೆ ನಾವು ಅಧಿಕೃತ ಗ್ರಾಹಕರೆಂಬುದನ್ನು ದೃಢೀಕರಿಸುತ್ತದೆ.(ಗ್ರಾಹಕರ ಕರೆಗೆ ಸುರಕ್ಷತೆ ಒದಗಿಸುವುದು ಇದರ ಉದ್ದೇಶ. ಈ ಸಂಕೇತಗಳು ಒಂದು ಕರೆಯಿಂದ ಮತ್ತೊಂದಕ್ಕೆ ಬದಲಾಗುತ್ತಿರುತ್ತವೆ. ಹಾಗಾಗಿ ಒಂದು ಕರೆಯ ಸಂಕೇತಗಳು ತಿಳಿದರೂ ಪ್ರಯೋಜನವಿಲ್ಲ.) HLR ನಲ್ಲಿರುವ ಡಾಟಾಬೇಸ್ ನ ಮಾಹಿತಿಯನ್ನನುಸರಿಸಿ ನಾವು ಮಾಡುತ್ತಿರುವ ಕರೆ ನಾವು ಪಡೆದಿರುವ ಸೇವೆಯ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ಪರಿಶೀಲಿಸುತ್ತದೆ.
ಈ ಎಲ್ಲಾ ದೃಢೀಕರಣದ ನಂತರ MSC ಕರೆ ಸ್ವೀಕರಿಸಬೇಕಾದ ವ್ಯಕ್ತಿಗೆ ಸೇವೆ ಒದಗಿಸುತ್ತಿರುವ MSCಯ ಆಧಾರದ ಮೇಲೆ ಮುಂದಿನ ಕೆಲಸವನ್ನು ನಿಭಾಯಿಸುತ್ತದೆ. ಕರೆ ಸ್ವೀಕರಿಸುತ್ತಿರುವ ವ್ಯಕ್ತಿ ಕೂಡ ಅದೇ MSC VLR ಪ್ರದೇಶಕ್ಕೆ ಸೇರಿದವನಾದರೆ ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವಿಸ್ ನ ದೃಢೀಕರಣವನ್ನು ತನ್ನ AUC ,EIR, HLR VLR ನ ಮೂಲಕ ಮುಗಿಸಿ ನಂತರ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವನ್ನೇರ್ಪಡಿಸುತ್ತದೆ. ಬೇರೆ MSC ಗೆ ಸೇರಿದವನಾದರೆ ಗೇಟ್ ವೇ MSCಗೆ ಸಂದೇಶ ಹೋಗುತ್ತದೆ. ಗೇಟ್ ವೇ MSC ತನ್ನಲ್ಲಿರುವ ಮಾಹಿತಿಗನುಗುಣವಾಗಿ ಆ ವ್ಯಕ್ತಿಯ ಮೊಬೈಲ್ ಗೆ ಸೇವೆ ಒದಗಿಸುತ್ತಿರುವ MSCಗೆ ಸಂದೇಶ ರವಾನಿಸುತ್ತದೆ. ಆ ವ್ಯಕ್ತಿಯ ಮೊಬೈಲ್ ಹಾಗೂ ಸರ್ವೀಸ್ ದೃಢೀಕರಣದ ನಂತರ BTS ಮುಖೇನ ಆ ವ್ಯಕ್ತಿಯ ಮೊಬೈಲ್ ಗೆ ಸಂಪರ್ಕವೇರ್ಪಡುತ್ತದೆ. ಒಮ್ಮೆ ನಮ್ಮ ಕರೆಗೆ ಒಂದು ಸಂಪರ್ಕ ಕೊಂಡಿ ಏರ್ಪಟ್ಟ ಮೇಲೆ ಕರೆ ಸ್ವೀಕರಿಸುತ್ತಿರುವ ಮೊಬೈಲ್ ರಿಂಗಣಿಸುತ್ತದೆ. ಕರೆ ಸ್ವೀಕರಿಸಿದರೆ MSC ಕರೆಯ ಸಮಯ, ಕಾಲಾವಧಿ ಹಾಗೂ ನಮ್ಮ ಪ್ಲಾನ್ ನ ಆಧಾರದ ಮೇಲೆ ನಮ್ಮ ಕರೆಗೆ ಚಾರ್ಜ್ ಗಳನ್ನು ವಿಧಿಸುತ್ತದೆ. ಕರೆ ಸ್ವೀಕರಿಸದಿದ್ದರೆ ಅದು ಮಿಸ್ಡ್ ಕಾಲ್.
ನೋಡಿ ನಾವು ಕರೆ ಮಾಡಿದ್ರೂ ಮಿಸ್ಡ್ ಕಾಲ್ ಕೊಟ್ರೂ ಈ ಎಲ್ಲಾ ಸಿಗ್ನಲ್ಲಿಂಗ್ ನಡೆಯಲೇಬೇಕು. ಹಾಗಾಗಿ ಮುಂದೆ ನೀವು ಮಿಸ್ಡ್ ಕಾಲ್ ಕೊಡುವ ಮುನ್ನ ಒಂದು ಮಿಸ್ಡ್ ಕಾಲ್ ಗೆ ಎಷ್ಟೆಲ್ಲಾ ಸಿಗ್ನಲ್ಲಿಂಗ್ ವ್ಯರ್ಥವಾಗುತ್ತದೆಂಬುದನ್ನು ಯೋಚಿಸಿ.
ಮುಗಿಸುವ ಮುನ್ನ: ನಿಮ್ಮ ಮೊಬೈಲಿನ IMEI ನಂಬರನ್ನು ತಿಳಿದುಕೊಂಡು ಅದನ್ನು ಒಂದೆಡೆ ಜೋಪಾನವಾಗಿಟ್ಟುಕೊಳ್ಳಿ. ಅಕಸ್ಮಾತ್ ದುರದೃಷ್ಟವಶಾತ್ ನಿಮ್ಮ ಮೊಬೈಲ್ ಕಳೆದುಹೋದರೆ ಆ ನಂಬರನ್ನು ಬಳಸಿ EIR ನಲ್ಲಿ ಅದನ್ನು ಬ್ಲಾಕ್ ಲಿಸ್ಟ್ ಮಾಡಬಹುದು. ಆಗ ಕದ್ದವರೂ ನಿಮ್ಮ ಮೊಬೈಲನ್ನು ಬಳಸಲಾರರು.
Sunday, September 5, 2010
ನನ್ನ ಟೀಚರ್ಸ್
ಅಕ್ಕ, ನಾನು, ಈಗ ನನ್ನ ತಮ್ಮ ಎಲ್ರೂ ಓದಿದ್ದು ಒಂದೇ ಸ್ಕೂಲಿನಲ್ಲಿ.ವಿಜಯನಗರದ ಬಳಿ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಕಾರ್ಡಿಯಲ್ ಪ್ರೌಢಶಾಲೆಯಲ್ಲಿ. ಹನ್ನೆರಡು ವರ್ಷ ಒಂದೇ ಸ್ಕೂಲು. ಮೊದಲಿನಿಂದಲೂ ಸ್ಕೂಲಿಗೆ ಹೋಗ್ಬೇಕು ಅಂತ ಇಷ್ಟ ಇದ್ದಿದ್ರಿಂದ ನಾನ್ಯಾವತ್ತೂ ಸ್ಕೂಲಿಗೆ ಹೋಗೊಲ್ಲ ಅಂತ ಹಠ ಮಾಡಿಲ್ಲ. LKGಯಲ್ಲಿ ಸ್ಲೇಟ್ ಮೇಲೆ ತಿದ್ದಿಸಿದ್ದ ಲಕ್ಷ್ಮಿ ಮ್ಯಾಮ್, UKGಯಲ್ಲಿ ಸ್ಪೋರ್ಟ್ಸ್ ಅಲ್ಲಿ ಗೆದ್ದಾಗ ಖುಷಿಪಟ್ಟ ರಮಾಮಣಿ ಮ್ಯಾಮ್ , ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹಾಡಿಗೆ ಡಾನ್ಸ್ ಹೇಳಿಕೊಟ್ಟಿದ್ದ ರಮಾಮಣಿ , ರಮಾರಾವ್ ಮತ್ತೆ ಲಕ್ಷ್ಮಮ್ಮಮ್ಮ ಮ್ಯಾಮ್- ಎಲ್ಲರ ಮುಖಗಳು ಆ ಸನ್ನಿವೇಶಗಳು ಇನ್ನು ಅದು ಹೇಗೆ ನೆನಪಲ್ಲಿವೆ ಅನಿಸುತ್ತೆ.
ನರ್ಸರಿ ಮುಗಿಸಿ ಮೊದಲನೇ ತರಗತಿಗೆ ಹೋಗಬೇಕಾದ ಮೊದಲ ದಿನ ಇನ್ನು ಚೆನ್ನಾಗಿ ನೆನಪಿದೆ. ಮೊದಲೇ ಸ್ವಲ್ಪ ತಡವಾಗಿ ಹೋಗಿದ್ದೆ. ಅಷ್ಟು ಹೊತ್ತಿಗಾಗಲೇ ನಮ್ಮ HM ಮೇರಿ ಜಾರ್ಜ್ ಪ್ರಾರ್ಥನೆಗೆ ಅಂತ ಮೊದಲನೇ ಮಹಡಿಯಲ್ಲಿರುವ ಅವರ ಕೋಣೆಯಿಂದ ಕೆಳಗಿಳಿದು ಬಂದಿದ್ರು. ಬೆಲ್ ಇನ್ನೂ ಆಗಿರಲಿಲ್ಲ. ನಾನು ನನ್ನ ಹೊಸ ಬ್ಯಾಗ್ ಲಂಚ್ ಬ್ಯಾಗ್ ಎಲ್ಲಾ ಹಿಡಿದು ಸೀದಾ ಅವರ ಬಳಿ ಹೋಗಿ "ಮಿಸ್ ಫಸ್ಟ್ ಸ್ಟ್ಯಾಂಡರ್ಡ್ ವೇರ್?" ಅಂತ ಕೇಳಿದ್ದೆ. ಅವರೇ ಕರೆದುಕೊಂಡು ಹೋಗಿ ನನ್ನ ತರಗತಿಯಲ್ಲಿ ಬಿಟ್ಟಿದ್ರು. ಆಗ ನಮಗೆ ಕ್ಲಾಸ್ ಟೀಚರ್ ಆಗಿದ್ದು ನಳಿನಿ ಮ್ಯಾಮ್.
ಆಮೇಲೆ ಬಂದ ಗೀತಾ ಮ್ಯಾಮ್ ,ಇಂಗ್ಲೀಶ್ ಅಲ್ಲೇ ಮಾತಾಡಬೇಕು ಅಂತ ಕಟ್ಟಪ್ಪಣೆ ಮಾಡಿದ್ದ ಉಷಾ ಮ್ಯಾಮ್, ಕ್ರಾಫ್ಟ್ ಹೇಳಿಕೊಡಲಿಕ್ಕೆ ಬರ್ತಾ ಇದ್ದ ನಮ್ಮ ಸ್ಕೂಲಿನಲ್ಲಿ ಎಲ್ಲರಿಗಿಂತ ಹಿರಿಯರಾಗಿದ್ದ ಪಾರ್ವತಮ್ಮ ಮ್ಯಾಮ್ (ಅಜ್ಜಿ ಮಿಸ್) ,ಅವರೇ ಹೇಳುತ್ತಿದ್ದಂತೆ ಕೋಳಿ ಕಾಲಿನಂತಿದ್ದ ನನ್ನ ಕನ್ನಡ ಬರವಣಿಗೆಯನ್ನು ಗುಂಡಗೆ ಮಾಡಿದ ಭವಾನಿ ಭಟ್ ಮ್ಯಾಮ್, ಗಣಿತ ಪುಸ್ತಕದಲ್ಲಿ ಪ್ರತಿ ಬಾರಿಯೂ ಗುಡ್, ವೆರಿ ಗುಡ್ ಕೊಡ್ತಾ ಇದ್ದ, ಪ್ರತಿ ಬಾರಿಯೂ ಶಾಲಾ ವಾರ್ಷಿಕೋತ್ಸವಕ್ಕೆ ಸಮೂಹ ಗಾನಕ್ಕೆ ಹಾಡು ಹೇಳಿಕೊಡ್ತಾ ಇದ್ದ ಶಾಂತಲಾ ಮ್ಯಾಮ್, "ಯಾಕೋ ದಡ್ಡ" ಅಂತ ಬೈತಿದ್ದ ರತ್ನ ಮ್ಯಾಮ್ , ಹಿಂದಿ ಹೇಳಿಕೊಟ್ಟಿದ್ದ ಉಮಾ ಮಹೇಶ್ವರಿ ಮ್ಯಾಮ್, ಪ್ರೀತಿಯ ಪ್ರೇಮಾ ಮ್ಯಾಮ್, ನನ್ನ ಈಗಿನ ಇಂಕ್ ಪೆನ್ ಪ್ರೀತಿಗೆ ನಾಂದಿ ಹಾಡಿದ ಸರಸ್ವತಿ ಮ್ಯಾಮ್, "ಅಕ್ಕನ ತದ್ವಿರುದ್ಧ ನೀನು- ಚಾಟರ್ ಬಾಕ್ಸ್" ಅಂತ ಬೈತಿದ್ದ ನಿರ್ಮಲಾ ಮ್ಯಾಮ್,"ನೀನು ತುಂಬಾ ಜಾಣ, ತು.......ಸ್ಸು ಕೋಣ" ಅಂತ ಪ್ರೀತಿಯಿಂದಾನೇ ಮೂದಲಿಸ್ತಾ ಇದ್ದ ಅನ್ನಪೂರ್ಣ ಮ್ಯಾಮ್, "Stand at ease" "attention" ಅಂತಿದ್ದವರಿಗೆ ಹಿಂದಿಯಲ್ಲಿ "ಸಾವ್ ಧಾನ್", "ವಿಶ್ರಾಮ್" ಅಂತ PT ಮಾಡಿಸಿದ್ದ ಸುರೇಶ್ ಸರ್, ಆನಂತರ ಬಂದ ಜೈ ಶಂಕರ್ ಸರ್, ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾನೆಣಿಸಿದಷ್ಟು ಅಂಕ ಬರದಿದ್ದಾಗ ಸಮಾಧಾನ ಮಾಡಿದ್ದ ವನಮಾಲಾ ಮ್ಯಾಮ್, ಸಮಾಜ ಶಾಸ್ತ್ರದ ತರಗತಿಗಳಲ್ಲಿ ರಾಜರ ಕತೆಗಳನ್ನು ಹೇಳ್ತಾ ಇದ್ದ ಸುನಂದಾ ಮ್ಯಾಮ್, ಪ್ರೇಯರ್ ಹೇಳಿಕೊಟ್ಟಿದ್ದ ಸುಜಯಾ ಮ್ಯಾಮ್, ಸಂಸ್ಕೃತವನ್ನು ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದ ನಾಗವೇಣಿ ಮ್ಯಾಮ್,ಎಲ್ಲರಿಗೂ ಒಂದೊಂದು ನಿಕ್ ನೇಮ್ ಇಟ್ಟು ಕರೀತಿದ್ದ ಸುಭಾಷಿಣಿ ಮ್ಯಾಮ್, ತಮ್ಮ ಇಂಗ್ಲೀಶ್ ಮಾತನಾಡುವ ಶೈಲಿಯಿಂದ ಸ್ಕೂಲಲೆಲ್ಲಾ ಪ್ರಸಿದ್ಧರಾಗಿದ್ದ ರಂಗರಾಜು ಸರ್, ಸರಿಯಾಗಿ ತಯಾರಾಗದೇ ಬಂದು ವಿದ್ಯಾರ್ಥಿಗಳಿಂದಾನೆ ಗಣಿತದ ಸಮಸ್ಯೆಗಳನ್ನು ಬಿಡಿಸುವುದನ್ನು ಹೇಳಿಸಿಕೊಂಡಿದ್ದ ಮಂಜುನಾಥ್ ಸರ್, ನಮ್ ಮನೆ ಹತ್ರಾನೆ ಇದ್ದ ಹೆಗಡೆ ಸರ್, ಮೂರ್ತಿ ಸರ್ ಮತ್ತೆ ನರಸಯ್ಯ ಸರ್, ಡ್ರಾಮಾ ಹೇಳಿಕೊಟ್ಟಿದ್ದ ರಮೇಶ್ ಸರ್, ಮೊದಲ ಬಾರಿ ಸ್ಕೂಲ್ ಡೇಯಲ್ಲಿ ನಿರೂಪಣೆ ಮಾಡಲು ಅವಕಾಶ ಮಾಡಿಕೊಟ್ಟ ರೋಷಿಣಿ ಮ್ಯಾಮ್, CETಯಲ್ಲಿ rank ತಗೊಂಡು ಸ್ಕೂಲಿಗೆ ಹೋದಾಗ ಖುಷಿ ಪಟ್ಟ ಎಲ್ಲಾ ಟೀಚರ್ಸ್.... ಎಲ್ಲಾ ಮರೆಯಲಾಗದ ದಿನಗಳು...
ನೆನಪಿನ ಭಿತ್ತಿಯ ಮೇಲೆ ತಮ್ಮ ಹಸ್ತಾಕ್ಷರವನ್ನು ಅಚ್ಚಳಿಯದಂತೆ ಮೂಡಿಸಿರುವ ನನ್ನೆಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
Wednesday, July 28, 2010
ನಾ ಕಳೆದುಹೋದೇನು....
ಮನಸಿದು ನನ್ನದು
ಪುಟ್ಟ ಕಂದಮ್ಮನಂತೆ.
ಮುಗ್ಧತೆಯೇ ಎಲ್ಲಾ
ಇನಿತೂ ಕಪಟವಿಲ್ಲ.
ಪುಟ್ಟ ಅಂಗಳದಲ್ಲಿನ
ವಿಹಾರ ಮುಗಿದಾಯ್ತು.
ಪ್ರಪಂಚದೊಳು ಕಾಲಿಡುವ
ಸಮಯ ಬಂದಾಯ್ತು.
ಮನೆಯಿಂದಾಚೆ
ಕಾಲಿರಿಸಲೂ ಅಂಜಿಕೆ.
ಕಾಣದ ಲೋಕವಿದು
ನಾ ಎದುರಿಸಲಿ ಹೇಗೆ?
ಹೊರಗೆ ಕತ್ತಲಲ್ಲೂ ಹೊಳೆವ
ಮಿಣುಕು ದೀಪಗಳ ಮಾಯೆಯೊಳಗೆ
ನಾ ಕುರುಡಿಯಾದೇನು.
ಕ್ಷಣಕೊಂದರಂತೆ ಬದಲಾಗುವ
ಬಿನ್ನಾಣದ ಮಾತುಗಳ ನಡುವೆ
ನಾ ಮೂಕಿಯಾದೇನು.
ಪರಿಚಿತರೂ ಅಜ್ಞಾತರಂತಿರುವ
ಸ್ವಾರ್ಥ ಜನರ ನಡುವೆ
ನಾ ಕಳೆದುಹೋದೇನು.
ನಂಬಿಹೆನು ನಾನು
ಆಸರೆಯು ನೀನೆಂದು.
ಈ ಕ್ರೂರ ಲೋಕದೊಳು
ಬೆಂಗಾವಲೆನಗೆಂದು.
ಹಿಡಿಯುವೆನು ಬಿಗಿಯಾಗಿ
ನಾ ನಿನ್ನ ಕೈಯನ್ನು.
ನಡೆಯದಿರು ದೂರಾಗಿ
ಸಡಿಲಿಸಿ ಹಿಡಿತವನ್ನು.
Friday, July 16, 2010
ಇನ್ನು ತಡವೇಕೆ?
ಮಾತನಾಡದಿದ್ದರೇನು
ನಿನ್ನ ಕಣ್ಣ ಮಧುರ ಭಾಷೆ ನನಗೆ ತಿಳಿಯದೆ?
ನನ್ನ ಕಂಡ ಒಡನೆ ನಿನ್ನ
ತುಟಿಯಂಚಿನಲ್ಲಿ ಮಿಂಚಿ ಹೋದ
ನಿನ್ನ ತುಂಟ ಕಿರುನಗೆಯು ನನಗೆ ಕಾಣದೆ?
ನಾನು ಕಾಣದಿಲ್ಲದಾಗ
ರಾತ್ರಿ ಪೂರ ನಿದ್ರೆಯಿರದೆ
ನನ್ನ ನೆನೆದು ಕಂಡ ಕನಸು ಇನ್ನು ಗೌಪ್ಯವೇ?
ಹೃದಯ ಬರೆದ ಒಲವಿನೋಲೆ
ನನಗೆ ತೋರದಿದ್ದರೇನು
ನಿನ್ನ ಮನದ ಭಾವಗೀತೆ ನನಗೆ ಕೇಳದೆ?
ಸರಿಸಿಬಿಡು ಮೌನ ತೆರೆಯ
ಅರಳಲಿನ್ನು ಸುಖದ ಘಳಿಗೆ
ಕನಸು ಮನಸು ಹಂಚಿಕೊಳಲು ತಡವು ಏತಕೆ?
(ಪ್ರೇರಣೆ : ನನಗೆ ಬಂದ ಒಂದು sms )
